Homeಕರೋನಾ ತಲ್ಲಣಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿ ಮೇಲೂ ಪರಿಣಾಮ ಬೀರುತ್ತಿದ್ದು, ಕೃಷಿ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಆದರೆ ಆದಾಯವೆಂಬುದು ಮರೀಚಿಕೆಯಾಗಿದೆ.

- Advertisement -
- Advertisement -

ಹಳ್ಳಕ್ಕೆ ಬಿದ್ದ ಗೂಳಿಗೆ ಆಳಿಗೊಂದು ಕಲ್ಲು ಎಂಬ ಗಾದೆ ಇದೆ‌. ಕೊರೊನಾ ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಇದು ರೈತರ ಪರಿಸ್ಥಿತಿ‌ಗೆ ಸರಿಯಾಗಿ ಅನ್ವಯಿಸುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಉತ್ಪಾದನಾ ಚಟುವಟಿಕೆಗಳು ಸ್ತಬ್ಧ‌ಗೊಂಡಿದ್ದರೂ ಕೃಷಿ ಕ್ಷೇತ್ರ ಇದಕ್ಕೆ ಹೊರತಾಗಿದೆ. ಕೃಷಿಕರು ಎಂದಿನಂತೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್ ಅವರ ಪಾಲಿಗೆ ಹೆಚ್ಚು ಅನಾನುಕೂಲತೆಗಳನ್ನು ತಂದೊಡ್ಡಿದೆ. ಈ ಸಂಕಷ್ಟದ ಸಮಯದಲ್ಲೂ ದೃತಿಗೆಡದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರೂ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸ‌ವೇ ಸರಿ.

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ಕೃಷಿ ಕ್ಷೇತ್ರ ಯಾಂತ್ರೀಕರಣಗೊಳ್ಳುತ್ತಲೇ ಇದೆ. ಟ್ರ್ಯಾಕ್ಟರ್‌ಗಳ ಬಳಕೆ, ಒಕ್ಕಣೆ ಯಂತ್ರಗಳ ಬಳಕೆ ಅನಿವಾರ್ಯ‌ವಾಗಿವೆ. ಇಂಧನ ಬೆಲೆಗಳ ಏರಿಕೆ ಸಹಜವಾಗಿ ಕೃಷಿಯ ಖರ್ಚನ್ನೂ ಹೆಚ್ಚಿಸುತ್ತಿವೆ. ಬಹುಪಾಲು ಮಧ್ಯಮವರ್ಗದ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರು ಉಳುಮೆಗೆ ಬಾಡಿಗೆ ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಿದ್ದರೆ, ದೊಡ್ಡ ಹಿಡುವಳಿ ಹೊಂದಿರುವ ರೈತರು ಸ್ವಂತ ಟ್ರ್ಯಾಕ್ಟರ್ ಹೊಂದಿರುತ್ತಾರೆ. ಶೇಂಗಾ, ಭತ್ತ, ಜೋಳ, ಗೋವಿನ ಜೋಳ, ಸೂರ್ಯಪಾನ ಮೊದಲಾದ ಪ್ರಮುಖ ಬೆಳೆಗಳ ಕೊಯ್ಲು ಮತ್ತು ಒಕ್ಕಣೆ ಈಗ ಯಂತ್ರಗಳಿಂದಲೇ ನಡೆಯುತ್ತಿದೆ. ಇಲ್ಲೂ ಸಣ್ಣ ಹಿಡುವಳಿಯ ರೈತರು ಬಾಡಿಗೆ ಯಂತ್ರಗಳನ್ನೇ ಅವಲಂಬಿಸಿರುತ್ತಾರೆ. ಹೀಗೆ ಕೃಷಿ ಚಟುವಟಿಕೆಗಾಗಿನ ಖರ್ಚಿನ ಪ್ರಮಾಣ ಒಂದು ಕಡೆ ಹೆಚ್ಚಾಗುತ್ತಲೇ ಸಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಆದಾಯ ಹೆಚ್ಚದಿರುವುದು ಅವರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಂತೂ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದೇ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಒಮ್ಮೆ ಗೋವಿನಜೋಳದ ಬೆಲೆ ಕ್ವಿಂಟಾಲ್‌ಗೆ  2400 ರವರೆಗೆ ಏರಿತ್ತು ಮಾರನೇ ವರ್ಷವೇ ಅದು 1200 ಕ್ಕೆ ಬಂದಿತ್ತು. ಲಾಕ್‌ಡೌನ್‌ನಲ್ಲಿ ರೈಲುಸಂಚಾರ ಸ್ಥಗಿತಗೊಂಡು, ವ್ಯಾಗನ್‌ಗಳಲ್ಲಿ  ಸಾಗಾಣಿಕೆಯಾಗುತ್ತಿದ್ಧ ಗೋವಿನಜೋಳ ಸ್ಥಳೀಯ ಮಾರುಕಟ್ಟೆಗಳನ್ನು ತುಂಬಿ ಅಲ್ಲಿ ಮಾರಾಟವಾಗದೇ ಒಮ್ಮೆಲೆ ಬೆಲೆಕುಸಿತ ಉಂಟಾಗಿತ್ತು. ಇದ್ಯಾವುದನ್ನೂ ಊಹಿಸಿರದ ರೈತ ತಾನು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗದೇ ಹೋದಾಗ ಹತಾಶನಾಗುವುದೂ ಸಹಜ. ಯಾವ ಬೆಳೆ ಬೆಳೆದರೆ ಒಳ್ಳೆಯ ಬೆಲೆ ಸಿಕ್ಕೀತು ಎಂಬ ಗೊಂದಲದಲ್ಲಿ ಎಲ್ಲ ಬೆಳೆಗಳದೂ ಇದೇ ಸ್ಥಿತಿಯಾದಾಗ ಯಾವ ಬೆಳೆ ಬೆಳೆಯಬೇಕೆಂಬುದೇ ಅವನಿಗೆ ತೋಚದಂತಾಗುತ್ತದೆ. ಬೆಲೆಗಳ ಅಸ್ಥಿರತೆ ರೈತರ ಬದುಕನ್ನು ನರಕಸದೃಶವಾಗಿಸುತ್ತಿದೆ.  ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಏಳು ತಿಂಗಳಿನಿಂದ ಸತ್ಯಾಗ್ರಹ ನಿರತರಾಗಿರುವ ರೈತರು ಬೆಂಬಲಬೆಲೆಯನ್ನು ಕಾನೂನುಬದ್ದಗೊಳಿಸಬೇಕೆಂದು ಆಗ್ರಹಿಸುತ್ತಿರುವುದೂ ಇದೇ ಕಾರಣಕ್ಕಾಗಿ ಎಂಬುದು ಸ್ವಯಂವೇದ್ಯ.

ಲಾಕ್‌ಡೌನ್ ಮಧ್ಯೆಯೂ ಕೃಷಿ ಕ್ಷೇತ್ರ ಕ್ರಿಯಾಶೀಲವಾಗಿದೆ‌. ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಲೇ ಇದ್ದಾರೆ. ಹೀಗೆ ಬೆಳೆದ ಬೆಳೆಗೆ ಅಗತ್ಯ ಮಾರುಕಟ್ಟೆ, ಸೂಕ್ತ ಬೆಲೆ ಸಿಗದೇ ರೈತರು
ಬೆಳೆ ಬೆಳೆಯದೇ ಇರಲಿಕ್ಕೂ ಆಗದೇ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ, ಇತ್ತ ದರಿ ಅತ್ತ ಪುಲಿ ಎಂಬಂತೆ ಏನು ಮಾಡಬೇಕೆಂಬುದು ತಿಳಿಯದೇ ನಿಟ್ಟುಸಿರು ಬಿಡುವಂತಾಗಿದೆ.

ಕಿಲೋಗೆ 25/30 ರೂ. ಮಾರುತಿದ್ದ ಕ್ಯಾಬೀಜ ಈ ಸಂದರ್ಭದಲ್ಲಿ ಹತ್ತರೊಳಗೇ ಮಾರಾಟವಾಗುತ್ತದೆ. ಎಲ್ಲ ತರಕಾರಿ ಬೆಳೆಗಳ ಸ್ಥಿತಿಯೂ ಹೀಗೆ ಇದೆ. ರೈತರಿಂದ ಅಗ್ಗದ ಬೆಲೆಗೆ ಕೊಳ್ಳುವ ವ್ಯಾಪಾರಸ್ಥರು ಅತ್ತ ಗ್ರಾಹಕರನ್ನೂ ಸುಲಿಗೆ ಮಾಡುತ್ತಿರುತ್ತಾರೆ. ಆದರೆ, ಅದನ್ನು ಕಷ್ಟಪಟ್ಟು ಬೆಳೆದ ರೈತ ಮಾತ್ರ ಅದಕ್ಕೆ ಹಾಕಿದ ಶ್ರಮ, ಸಮಯ, ಬಂಡವಾಳ ಎಲ್ಲವನ್ನೂ ಕಳೆದುಕೊಂಡು ಸಾಲಗಾರನಾಗುವ ಸ್ಥಿತಿ ನಿರ್ಮಾಣವಾಗಿದೆ. ಇದು ಇನ್ನೂ ಎಷ್ಟು ದಿನ? ರೈತ ಬೆಳೆದ ಬೆಳೆಗೆ ಖಚಿತ ಬೆಲೆ, ಖಚಿತ ಆದಾಯ ಸಿಗುವುದೇ? ಎಂಬುದು ಸಧ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಆಗ್ರಹ ಬಹುದಿನಗಳಿಂದಲೂ ಇದ್ದೇ ಇದೆ‌. ಆದರೆ, ಸರ್ಕಾರವೇ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಬೆಳೆಗಳಿಗೆ ಬೆಂಬಲಬೆಲೆ ಘೋಷಿಸುತಿತ್ತು. ವಾಸ್ತವದಲ್ಲಿ ಆ ಬೆಲೆ ರೈತರಿಗೆ ಸಿಕ್ಕಿದ್ದೇ ಇಲ್ಲ. ಶೇಂಗಾದ ಬೆಂಬಲ ಬೆಲೆ 5200 ಇದ್ದರೆ, ಎಪಿಎಂಸಿಗಳಲ್ಲಿ ಅದು ಮಾರೋದು 3000/ 5000 ರೂ. ಒಳಗೇ. ಗೋವಿನ ಜೋಳಕ್ಕೆ ಬೆಂಬಲಬೆಲೆ 1700 ಇದ್ದರೂ ಅದು ಮಾರುತ್ತಿರುವುದು 1000/1500ರೊಳಗೇ. ಹತ್ತಿಯ ಬೆಂಬಲ ಬೆಲೆ 6000 ಇದ್ದರೂ ಅದು ಮಾರುವುದು 3000/5500ರ ಒಳಗೇ. ಹೀಗೆ ಬೆಂಬಲ ಬೆಲೆಗೂ ವಾಸ್ತವ ಬೆಲೆಗೂ ಇಷ್ಟೊಂದು ವ್ಯತ್ಯಾಸ ಇರುವಾಗ ಈ ಬೆಂಬಲ ಬೆಲೆ ಘೋಷಿಸುವುದಾದರೂ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  ಇದೇ ಕಾರಣಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ದೆಹಲಿಯ ಹೊರ ವಲಯದಲ್ಲಿ ರೈತರು ಐತಿಹಾಸಿಕ ದೀರ್ಘಕಾಲಿಕ ಹೋರಾಟ ಕೈಗೊಂಡಿದ್ದಾರೆ‌. ಸರ್ಕಾರ ಘೋಷಿಸುವ ಬೆಂಬಲಬೆಲೆಗಳನ್ನೇ ಕಾನೂನುಬದ್ದಗೊಳಿಸಿ ಎಂಬುದು ಅವರ ಹಕ್ಕೊತ್ತಾಯವಾಗಿದೆ. ವೈಜ್ಞಾನಿಕ ಬೆಲೆ ಅಲ್ಲದಿದ್ದರೂ ಬೆಂಬಲಬೆಲೆಗಳೆ ವಾಸ್ತವದಲ್ಲಿ ರೈತರ ಬೆಳೆಗಳಿಗೆ ಸಿಕ್ಕರೆ ಅದರಿಂದ ಅವರಿಗೆ ಎಷ್ಟೋ ಆಸರೆ ದೊರೆತಂತಾಗುತ್ತದೆ. ಆದರೆ, ಒಕ್ಕೂಟ ಸರ್ಕಾರ ಈ ಕುರಿತು ಸರಿಯಾಗಿ ಸ್ಪಂದಿಸದೇ ಇರುವುದು ಕೃಷಿಪ್ರಧಾನ ದೇಶವೊಂದರ ದೊಡ್ಡ ದುರಂತವೇ ಸರಿ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು

ಈ ಮಧ್ಯೆ ರಾಸಾಯನಿಕ ಗೊಬ್ಬರಗಳ ಬೆಲೆಗಳನ್ನೂ ಏರಿಸಿ ಮತ್ತೆ ಇಳಿಸಲಾಗಿದೆ. ಈ ತರದ ರೈತರ ಸಹನೆಯ ಪರೀಕ್ಷೆಗಳು ನಡದೇ ಇರುತ್ತವೆ. ಮೊದಲು ಸಹಾಯಧನದ ರೂಪದಲ್ಲಿ ವಿನಾಯ್ತಿಯಲ್ಲಿ ಸಿಗುತಿದ್ದ ಗೊಬ್ಬರಗಳನ್ನು ರೈತರು ಇಂದು ಪೂರ್ಣಬೆಲೆ ತೆತ್ತು ಕೊಳ್ಳುವ ಸ್ಥಿತಿ ಎದುರಾಗಿದೆ. ಒಂದು ವೇಳೆ ನಿರೀಕ್ಷಿತ ಮಳೆ ಬಾರದೆಯೋ, ಹವಾಮಾನ ವೈಪರೀತ್ಯದಿಂದಲೋ ಆ ಬೆಳೆ ಕೈಗೆ ಸಿಗದಿದ್ದರೆ ರೈತನ ಪರಿಸ್ಥಿತಿ ಏನಾದೀತು ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಬೆಂಬಲಬೆಲೆಯ ಹಾಗೆಯೇ ಬೆಳೆವಿಮೆ ಯೋಜನೆ ಇದೆ ಆದರೂ ಪ್ರತಿವರ್ಷ ಪ್ರಿಮಿಯಂ ಕಟ್ಟುತಿದ್ದರೂ.. ಯಾವುದೋ ವರ್ಷದ ವಿಮೆ ಬರುತ್ತದೆ. ಅದು ಬಂದಾಗ ಇದು ಯಾವ ವರ್ಷದ್ದು, ಯಾವ ಬೆಳೆಗೆ ಬಂದದ್ದು ಎಂಬುದು ರೈತನಿಗೆ ತಿಳಿಯದಷ್ಟು ಸಂಕೀರ್ಣ ಯೋಜನೆ ಇದಾಗಿದೆ. ಆದಕಾರಣ ಬೆಳೆವಿಮೆ ಯೋಜನೆ ಒಳ್ಳೆಯ ಯೋಜನೆ ಆದರೂ ಅದರ ಪ್ರಯೋಜನ ಪ್ರತಿವರ್ಷವೂ, ಪ್ರತಿಬೆಳೆಗೂ ರೈತನಿಗೆ ದೊರೆಯಬೇಕಾದರೆ ಅದಿನ್ನೂ ಹೆಚ್ಚು ಕ್ರಮಬದ್ದವೂ ಪಾರದರ್ಶಕವೂ ಆಗಬೇಕಿದೆ.

ಗೋಹತ್ಯೆ ನಿಷೇಧದಂತಹ ಕಾನೂನುಗಳ ಜಾರಿ ನಂತರ ರೈತರು ಪಶುಸಂಗೋಪಣೆಯಿಂದಲೇ ವಿಮುಖರಾಗುವಂಥ ಸ್ಥಿತಿ ನಿರ್ಮಾಣವಾಗಿದೆ. ಹೇಗೆಂದರೆ, ಈ ಮೊದಲು ರೈತರು ವಯಸಾದ ದನಕರುಗಳನ್ನು ಅವು ಇನ್ನೂ ಆರೋಗ್ಯಪೂರ್ಣವಾಗಿರುವಾಗಲೇ ಮಾರಾಟ ಮಾಡಿ ಅದೇ ಹಣಕ್ಕೆ ಮತ್ತೆ ಒಂದಿಷ್ಟು ಹಣ ಸೇರಿಸಿ ಹೊಸ ಎತ್ತು, ದನಕರು ಕೊಳ್ಳುತಿದ್ದರು. ಎತ್ತುಗಳನ್ನು ಉಳುಮೆಗೆ, ದನಕರುಗಳನ್ನು ಹೈನುಗಾರಿಕೆಗೆ ಸಾಕುತ್ತಿದ್ದರು. ಗೋಹತ್ಯೆ ನಿಷೇಧದ ನಂತರ ಅವರು ಬಂಜೆದನಗಳನ್ನೂ ಸಾಕಲೇಬೇಕಾದಂತಹ ಅನಿವಾರ್ಯ‌ತೆ ಸೃಷ್ಠಿಯಾಗಿದೆ. ವಯಸ್ಸಾದ ದನಗಳ ಮಾರಾಟ ಕ್ಲಿಷ್ಟದಾಯಕವಾಗಿ ಅವುಗಳ ಚಿಕಿತ್ಸೆ‌ಗೆ ತಗಲುವ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾಗಿದೆ. ಒಂದು ವೇಳೆ ಅವು ಮನೆಯಲ್ಲೆ ಅಸುನೀಗಿದರೆ ಅವುಗಳ ವಿಲೇವಾರಿ ಮಾಡುವುದೆ ಕಷ್ಟಕರವಾಗಿ ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಂತೂ ದನದ ಮಾರುಕಟ್ಟೆಗಳು ಬಂದ್ ಆಗಿ ತಮಗೆ ಬೇಕಾದ ಎತ್ತುಗಳನ್ನು ಸಮಯಕ್ಕೆ ಸರಿಯಾಗಿ ಕೊಳ್ಳುವುದೇ ದುಸ್ತರವಾಗಿದೆ. ಈ ಕಾರಣಕ್ಕೆ ಎತ್ತುಗಳ ಬೆಲೆಗಳೂ ಈಗ ಸಿಕ್ಕಾಪಟ್ಟೆ ದುಬಾರಿಯಾಗಿವೆ. ಮೊದಲೆಲ್ಲ ಮೂವತ್ತು ನಲವತ್ತು ಸಾವಿರ ರೂ.ಗಳಿಗೆ ಸಿಗುತ್ತಿದ್ದ ಜೋಡಿ ಎತ್ತುಗಳಿಗೆ ಈಗ ಎಪ್ಪತ್ತು ಎಂಭತ್ತು ಸಾವಿರ ರೂ. ತೆರುವ ಪರಿಸ್ಥಿತಿ ಎದುರಾಗಿದೆ. ಕೃಷಿಗೆ ಎತ್ತುಗಳು ಅನಿವಾರ್ಯ‌ವಾದ ಕಾರಣ ಸಾಲಸೋಲ ಮಾಡಿ ಎತ್ತು ಕೊಳ್ಳುವ ರೈತರು, ಬೀಜ, ಗೊಬ್ಬರ, ಔಷಧಿ ಎಂದು ಸಾಲ ಮಾಡಲೇಬೇಕಾಗುತ್ತದೆ. ಉತ್ತಮ ಬೆಳೆ ಬಂದರೆ ಉತ್ತಮ ಬೆಲೆ ಇಲ್ಲ, ಉತ್ತಮ ಬೆಲೆ ಇರುವ ಬೆಳೆ ಉತ್ತಮ ಇಳುವರಿ ಬರಲಿಲ್ಲ ಎಂದರೆ ರೈತನಿಗೆ ನಷ್ಟ ಕಟ್ಟಿಟ್ಟ ಬುತ್ತಿ.

ಹೀಗೆ ಹತ್ತು ಹಲವು ಸಮಸ್ಯೆ‌ಗಳ ಸುಳಿಯಲ್ಲಿ ಸಿಲುಕಿರುವ ರೈತ ಒಂದೆಡೆ ತನ್ನ ಬದುಕಿಗೆ ಭದ್ರತೆಯೆ ಇಲ್ಲದ ಕಾರಣಕ್ಕೆ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ನಿತ್ಯ ನಿರಂತರ ಘಟಿಸುತ್ತಲೇ ಇವೆ. ಇನ್ನೊಂದೆಡೆ ದಿನದಿನಕ್ಕೂ ಕಗ್ಗಂಟಾಗುತ್ತಿರುವ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ತೋರುತ್ತಿರುವ ನಿರಾಸಕ್ತಿ ಕೃಷಿ ಹಾಗೂ ಕೃಷಿಕರ ಮೂಲೋತ್ಪಾಟನೆಗೆ ಹೂಡಿರುವ ಸಂಚಿನಂತೆ ಭಾಸವಾಗುತ್ತಿದೆ.

  • ಚಂಸು ಪಾಟೀಲ
    ಕೂನಬೇವು
    ತಾ. ರಾಣೇಬೆನ್ನೂರು
    ಜಿ. ಹಾವೇರಿ

(ಕೃಷಿಕರಾದ ಚಂಸು ಪಾಟೀಲರವರು ಲೇಖಕರೂ ಹೌದು. ಬೇಸಾಯದ ಕತಿ ಎಂಬ ಪುಸ್ತಕ ಬರೆದಿರುವ ಇವರು ಸಮಾಜದ ಆಗುಹೋಗುಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ)


ಇದನ್ನೂ ಓದಿ; ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...