Homeಕರೋನಾ ತಲ್ಲಣಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಕೃಷಿಕರ ಮೂಲೋತ್ಪಾಟನೆಗೆ ಸರ್ಕಾರ ಸಂಚು ಹೂಡಿದೆ: ಚಂಸು ಪಾಟೀಲ

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿ ಮೇಲೂ ಪರಿಣಾಮ ಬೀರುತ್ತಿದ್ದು, ಕೃಷಿ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಆದರೆ ಆದಾಯವೆಂಬುದು ಮರೀಚಿಕೆಯಾಗಿದೆ.

- Advertisement -
- Advertisement -

ಹಳ್ಳಕ್ಕೆ ಬಿದ್ದ ಗೂಳಿಗೆ ಆಳಿಗೊಂದು ಕಲ್ಲು ಎಂಬ ಗಾದೆ ಇದೆ‌. ಕೊರೊನಾ ಸಾಂಕ್ರಾಮಿಕ ರೋಗದ ಈ ಕಾಲಘಟ್ಟದಲ್ಲಿ ಇದು ರೈತರ ಪರಿಸ್ಥಿತಿ‌ಗೆ ಸರಿಯಾಗಿ ಅನ್ವಯಿಸುತ್ತದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಉತ್ಪಾದನಾ ಚಟುವಟಿಕೆಗಳು ಸ್ತಬ್ಧ‌ಗೊಂಡಿದ್ದರೂ ಕೃಷಿ ಕ್ಷೇತ್ರ ಇದಕ್ಕೆ ಹೊರತಾಗಿದೆ. ಕೃಷಿಕರು ಎಂದಿನಂತೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಲಾಕ್‌ಡೌನ್ ಅವರ ಪಾಲಿಗೆ ಹೆಚ್ಚು ಅನಾನುಕೂಲತೆಗಳನ್ನು ತಂದೊಡ್ಡಿದೆ. ಈ ಸಂಕಷ್ಟದ ಸಮಯದಲ್ಲೂ ದೃತಿಗೆಡದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದರೂ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸ‌ವೇ ಸರಿ.

ಡಿಸೇಲ್, ಪೆಟ್ರೋಲ್ ದರಗಳ ನಿರಂತರ ಏರಿಕೆ ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ಕೃಷಿ ಕ್ಷೇತ್ರ ಯಾಂತ್ರೀಕರಣಗೊಳ್ಳುತ್ತಲೇ ಇದೆ. ಟ್ರ್ಯಾಕ್ಟರ್‌ಗಳ ಬಳಕೆ, ಒಕ್ಕಣೆ ಯಂತ್ರಗಳ ಬಳಕೆ ಅನಿವಾರ್ಯ‌ವಾಗಿವೆ. ಇಂಧನ ಬೆಲೆಗಳ ಏರಿಕೆ ಸಹಜವಾಗಿ ಕೃಷಿಯ ಖರ್ಚನ್ನೂ ಹೆಚ್ಚಿಸುತ್ತಿವೆ. ಬಹುಪಾಲು ಮಧ್ಯಮವರ್ಗದ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರು ಉಳುಮೆಗೆ ಬಾಡಿಗೆ ಟ್ರ್ಯಾಕ್ಟರ್‌ಗಳನ್ನು ಅವಲಂಬಿಸಿದ್ದರೆ, ದೊಡ್ಡ ಹಿಡುವಳಿ ಹೊಂದಿರುವ ರೈತರು ಸ್ವಂತ ಟ್ರ್ಯಾಕ್ಟರ್ ಹೊಂದಿರುತ್ತಾರೆ. ಶೇಂಗಾ, ಭತ್ತ, ಜೋಳ, ಗೋವಿನ ಜೋಳ, ಸೂರ್ಯಪಾನ ಮೊದಲಾದ ಪ್ರಮುಖ ಬೆಳೆಗಳ ಕೊಯ್ಲು ಮತ್ತು ಒಕ್ಕಣೆ ಈಗ ಯಂತ್ರಗಳಿಂದಲೇ ನಡೆಯುತ್ತಿದೆ. ಇಲ್ಲೂ ಸಣ್ಣ ಹಿಡುವಳಿಯ ರೈತರು ಬಾಡಿಗೆ ಯಂತ್ರಗಳನ್ನೇ ಅವಲಂಬಿಸಿರುತ್ತಾರೆ. ಹೀಗೆ ಕೃಷಿ ಚಟುವಟಿಕೆಗಾಗಿನ ಖರ್ಚಿನ ಪ್ರಮಾಣ ಒಂದು ಕಡೆ ಹೆಚ್ಚಾಗುತ್ತಲೇ ಸಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಆದಾಯ ಹೆಚ್ಚದಿರುವುದು ಅವರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಂತೂ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದೇ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಒಮ್ಮೆ ಗೋವಿನಜೋಳದ ಬೆಲೆ ಕ್ವಿಂಟಾಲ್‌ಗೆ  2400 ರವರೆಗೆ ಏರಿತ್ತು ಮಾರನೇ ವರ್ಷವೇ ಅದು 1200 ಕ್ಕೆ ಬಂದಿತ್ತು. ಲಾಕ್‌ಡೌನ್‌ನಲ್ಲಿ ರೈಲುಸಂಚಾರ ಸ್ಥಗಿತಗೊಂಡು, ವ್ಯಾಗನ್‌ಗಳಲ್ಲಿ  ಸಾಗಾಣಿಕೆಯಾಗುತ್ತಿದ್ಧ ಗೋವಿನಜೋಳ ಸ್ಥಳೀಯ ಮಾರುಕಟ್ಟೆಗಳನ್ನು ತುಂಬಿ ಅಲ್ಲಿ ಮಾರಾಟವಾಗದೇ ಒಮ್ಮೆಲೆ ಬೆಲೆಕುಸಿತ ಉಂಟಾಗಿತ್ತು. ಇದ್ಯಾವುದನ್ನೂ ಊಹಿಸಿರದ ರೈತ ತಾನು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗದೇ ಹೋದಾಗ ಹತಾಶನಾಗುವುದೂ ಸಹಜ. ಯಾವ ಬೆಳೆ ಬೆಳೆದರೆ ಒಳ್ಳೆಯ ಬೆಲೆ ಸಿಕ್ಕೀತು ಎಂಬ ಗೊಂದಲದಲ್ಲಿ ಎಲ್ಲ ಬೆಳೆಗಳದೂ ಇದೇ ಸ್ಥಿತಿಯಾದಾಗ ಯಾವ ಬೆಳೆ ಬೆಳೆಯಬೇಕೆಂಬುದೇ ಅವನಿಗೆ ತೋಚದಂತಾಗುತ್ತದೆ. ಬೆಲೆಗಳ ಅಸ್ಥಿರತೆ ರೈತರ ಬದುಕನ್ನು ನರಕಸದೃಶವಾಗಿಸುತ್ತಿದೆ.  ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಏಳು ತಿಂಗಳಿನಿಂದ ಸತ್ಯಾಗ್ರಹ ನಿರತರಾಗಿರುವ ರೈತರು ಬೆಂಬಲಬೆಲೆಯನ್ನು ಕಾನೂನುಬದ್ದಗೊಳಿಸಬೇಕೆಂದು ಆಗ್ರಹಿಸುತ್ತಿರುವುದೂ ಇದೇ ಕಾರಣಕ್ಕಾಗಿ ಎಂಬುದು ಸ್ವಯಂವೇದ್ಯ.

ಲಾಕ್‌ಡೌನ್ ಮಧ್ಯೆಯೂ ಕೃಷಿ ಕ್ಷೇತ್ರ ಕ್ರಿಯಾಶೀಲವಾಗಿದೆ‌. ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಲೇ ಇದ್ದಾರೆ. ಹೀಗೆ ಬೆಳೆದ ಬೆಳೆಗೆ ಅಗತ್ಯ ಮಾರುಕಟ್ಟೆ, ಸೂಕ್ತ ಬೆಲೆ ಸಿಗದೇ ರೈತರು
ಬೆಳೆ ಬೆಳೆಯದೇ ಇರಲಿಕ್ಕೂ ಆಗದೇ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ, ಇತ್ತ ದರಿ ಅತ್ತ ಪುಲಿ ಎಂಬಂತೆ ಏನು ಮಾಡಬೇಕೆಂಬುದು ತಿಳಿಯದೇ ನಿಟ್ಟುಸಿರು ಬಿಡುವಂತಾಗಿದೆ.

ಕಿಲೋಗೆ 25/30 ರೂ. ಮಾರುತಿದ್ದ ಕ್ಯಾಬೀಜ ಈ ಸಂದರ್ಭದಲ್ಲಿ ಹತ್ತರೊಳಗೇ ಮಾರಾಟವಾಗುತ್ತದೆ. ಎಲ್ಲ ತರಕಾರಿ ಬೆಳೆಗಳ ಸ್ಥಿತಿಯೂ ಹೀಗೆ ಇದೆ. ರೈತರಿಂದ ಅಗ್ಗದ ಬೆಲೆಗೆ ಕೊಳ್ಳುವ ವ್ಯಾಪಾರಸ್ಥರು ಅತ್ತ ಗ್ರಾಹಕರನ್ನೂ ಸುಲಿಗೆ ಮಾಡುತ್ತಿರುತ್ತಾರೆ. ಆದರೆ, ಅದನ್ನು ಕಷ್ಟಪಟ್ಟು ಬೆಳೆದ ರೈತ ಮಾತ್ರ ಅದಕ್ಕೆ ಹಾಕಿದ ಶ್ರಮ, ಸಮಯ, ಬಂಡವಾಳ ಎಲ್ಲವನ್ನೂ ಕಳೆದುಕೊಂಡು ಸಾಲಗಾರನಾಗುವ ಸ್ಥಿತಿ ನಿರ್ಮಾಣವಾಗಿದೆ. ಇದು ಇನ್ನೂ ಎಷ್ಟು ದಿನ? ರೈತ ಬೆಳೆದ ಬೆಳೆಗೆ ಖಚಿತ ಬೆಲೆ, ಖಚಿತ ಆದಾಯ ಸಿಗುವುದೇ? ಎಂಬುದು ಸಧ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬ ಆಗ್ರಹ ಬಹುದಿನಗಳಿಂದಲೂ ಇದ್ದೇ ಇದೆ‌. ಆದರೆ, ಸರ್ಕಾರವೇ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ಬೆಳೆಗಳಿಗೆ ಬೆಂಬಲಬೆಲೆ ಘೋಷಿಸುತಿತ್ತು. ವಾಸ್ತವದಲ್ಲಿ ಆ ಬೆಲೆ ರೈತರಿಗೆ ಸಿಕ್ಕಿದ್ದೇ ಇಲ್ಲ. ಶೇಂಗಾದ ಬೆಂಬಲ ಬೆಲೆ 5200 ಇದ್ದರೆ, ಎಪಿಎಂಸಿಗಳಲ್ಲಿ ಅದು ಮಾರೋದು 3000/ 5000 ರೂ. ಒಳಗೇ. ಗೋವಿನ ಜೋಳಕ್ಕೆ ಬೆಂಬಲಬೆಲೆ 1700 ಇದ್ದರೂ ಅದು ಮಾರುತ್ತಿರುವುದು 1000/1500ರೊಳಗೇ. ಹತ್ತಿಯ ಬೆಂಬಲ ಬೆಲೆ 6000 ಇದ್ದರೂ ಅದು ಮಾರುವುದು 3000/5500ರ ಒಳಗೇ. ಹೀಗೆ ಬೆಂಬಲ ಬೆಲೆಗೂ ವಾಸ್ತವ ಬೆಲೆಗೂ ಇಷ್ಟೊಂದು ವ್ಯತ್ಯಾಸ ಇರುವಾಗ ಈ ಬೆಂಬಲ ಬೆಲೆ ಘೋಷಿಸುವುದಾದರೂ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.  ಇದೇ ಕಾರಣಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ದೆಹಲಿಯ ಹೊರ ವಲಯದಲ್ಲಿ ರೈತರು ಐತಿಹಾಸಿಕ ದೀರ್ಘಕಾಲಿಕ ಹೋರಾಟ ಕೈಗೊಂಡಿದ್ದಾರೆ‌. ಸರ್ಕಾರ ಘೋಷಿಸುವ ಬೆಂಬಲಬೆಲೆಗಳನ್ನೇ ಕಾನೂನುಬದ್ದಗೊಳಿಸಿ ಎಂಬುದು ಅವರ ಹಕ್ಕೊತ್ತಾಯವಾಗಿದೆ. ವೈಜ್ಞಾನಿಕ ಬೆಲೆ ಅಲ್ಲದಿದ್ದರೂ ಬೆಂಬಲಬೆಲೆಗಳೆ ವಾಸ್ತವದಲ್ಲಿ ರೈತರ ಬೆಳೆಗಳಿಗೆ ಸಿಕ್ಕರೆ ಅದರಿಂದ ಅವರಿಗೆ ಎಷ್ಟೋ ಆಸರೆ ದೊರೆತಂತಾಗುತ್ತದೆ. ಆದರೆ, ಒಕ್ಕೂಟ ಸರ್ಕಾರ ಈ ಕುರಿತು ಸರಿಯಾಗಿ ಸ್ಪಂದಿಸದೇ ಇರುವುದು ಕೃಷಿಪ್ರಧಾನ ದೇಶವೊಂದರ ದೊಡ್ಡ ದುರಂತವೇ ಸರಿ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಅಮೆರಿಕಾದ ಕೃಷಿಕರು, ತಜ್ಞರು ಮತ್ತು ರಾಜಕಾರಣಿಗಳು

ಈ ಮಧ್ಯೆ ರಾಸಾಯನಿಕ ಗೊಬ್ಬರಗಳ ಬೆಲೆಗಳನ್ನೂ ಏರಿಸಿ ಮತ್ತೆ ಇಳಿಸಲಾಗಿದೆ. ಈ ತರದ ರೈತರ ಸಹನೆಯ ಪರೀಕ್ಷೆಗಳು ನಡದೇ ಇರುತ್ತವೆ. ಮೊದಲು ಸಹಾಯಧನದ ರೂಪದಲ್ಲಿ ವಿನಾಯ್ತಿಯಲ್ಲಿ ಸಿಗುತಿದ್ದ ಗೊಬ್ಬರಗಳನ್ನು ರೈತರು ಇಂದು ಪೂರ್ಣಬೆಲೆ ತೆತ್ತು ಕೊಳ್ಳುವ ಸ್ಥಿತಿ ಎದುರಾಗಿದೆ. ಒಂದು ವೇಳೆ ನಿರೀಕ್ಷಿತ ಮಳೆ ಬಾರದೆಯೋ, ಹವಾಮಾನ ವೈಪರೀತ್ಯದಿಂದಲೋ ಆ ಬೆಳೆ ಕೈಗೆ ಸಿಗದಿದ್ದರೆ ರೈತನ ಪರಿಸ್ಥಿತಿ ಏನಾದೀತು ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ಬೆಂಬಲಬೆಲೆಯ ಹಾಗೆಯೇ ಬೆಳೆವಿಮೆ ಯೋಜನೆ ಇದೆ ಆದರೂ ಪ್ರತಿವರ್ಷ ಪ್ರಿಮಿಯಂ ಕಟ್ಟುತಿದ್ದರೂ.. ಯಾವುದೋ ವರ್ಷದ ವಿಮೆ ಬರುತ್ತದೆ. ಅದು ಬಂದಾಗ ಇದು ಯಾವ ವರ್ಷದ್ದು, ಯಾವ ಬೆಳೆಗೆ ಬಂದದ್ದು ಎಂಬುದು ರೈತನಿಗೆ ತಿಳಿಯದಷ್ಟು ಸಂಕೀರ್ಣ ಯೋಜನೆ ಇದಾಗಿದೆ. ಆದಕಾರಣ ಬೆಳೆವಿಮೆ ಯೋಜನೆ ಒಳ್ಳೆಯ ಯೋಜನೆ ಆದರೂ ಅದರ ಪ್ರಯೋಜನ ಪ್ರತಿವರ್ಷವೂ, ಪ್ರತಿಬೆಳೆಗೂ ರೈತನಿಗೆ ದೊರೆಯಬೇಕಾದರೆ ಅದಿನ್ನೂ ಹೆಚ್ಚು ಕ್ರಮಬದ್ದವೂ ಪಾರದರ್ಶಕವೂ ಆಗಬೇಕಿದೆ.

ಗೋಹತ್ಯೆ ನಿಷೇಧದಂತಹ ಕಾನೂನುಗಳ ಜಾರಿ ನಂತರ ರೈತರು ಪಶುಸಂಗೋಪಣೆಯಿಂದಲೇ ವಿಮುಖರಾಗುವಂಥ ಸ್ಥಿತಿ ನಿರ್ಮಾಣವಾಗಿದೆ. ಹೇಗೆಂದರೆ, ಈ ಮೊದಲು ರೈತರು ವಯಸಾದ ದನಕರುಗಳನ್ನು ಅವು ಇನ್ನೂ ಆರೋಗ್ಯಪೂರ್ಣವಾಗಿರುವಾಗಲೇ ಮಾರಾಟ ಮಾಡಿ ಅದೇ ಹಣಕ್ಕೆ ಮತ್ತೆ ಒಂದಿಷ್ಟು ಹಣ ಸೇರಿಸಿ ಹೊಸ ಎತ್ತು, ದನಕರು ಕೊಳ್ಳುತಿದ್ದರು. ಎತ್ತುಗಳನ್ನು ಉಳುಮೆಗೆ, ದನಕರುಗಳನ್ನು ಹೈನುಗಾರಿಕೆಗೆ ಸಾಕುತ್ತಿದ್ದರು. ಗೋಹತ್ಯೆ ನಿಷೇಧದ ನಂತರ ಅವರು ಬಂಜೆದನಗಳನ್ನೂ ಸಾಕಲೇಬೇಕಾದಂತಹ ಅನಿವಾರ್ಯ‌ತೆ ಸೃಷ್ಠಿಯಾಗಿದೆ. ವಯಸ್ಸಾದ ದನಗಳ ಮಾರಾಟ ಕ್ಲಿಷ್ಟದಾಯಕವಾಗಿ ಅವುಗಳ ಚಿಕಿತ್ಸೆ‌ಗೆ ತಗಲುವ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾಗಿದೆ. ಒಂದು ವೇಳೆ ಅವು ಮನೆಯಲ್ಲೆ ಅಸುನೀಗಿದರೆ ಅವುಗಳ ವಿಲೇವಾರಿ ಮಾಡುವುದೆ ಕಷ್ಟಕರವಾಗಿ ತಲೆಮೇಲೆ ಕೈಹೊತ್ತು ಕೂಡುವಂತಾಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಂತೂ ದನದ ಮಾರುಕಟ್ಟೆಗಳು ಬಂದ್ ಆಗಿ ತಮಗೆ ಬೇಕಾದ ಎತ್ತುಗಳನ್ನು ಸಮಯಕ್ಕೆ ಸರಿಯಾಗಿ ಕೊಳ್ಳುವುದೇ ದುಸ್ತರವಾಗಿದೆ. ಈ ಕಾರಣಕ್ಕೆ ಎತ್ತುಗಳ ಬೆಲೆಗಳೂ ಈಗ ಸಿಕ್ಕಾಪಟ್ಟೆ ದುಬಾರಿಯಾಗಿವೆ. ಮೊದಲೆಲ್ಲ ಮೂವತ್ತು ನಲವತ್ತು ಸಾವಿರ ರೂ.ಗಳಿಗೆ ಸಿಗುತ್ತಿದ್ದ ಜೋಡಿ ಎತ್ತುಗಳಿಗೆ ಈಗ ಎಪ್ಪತ್ತು ಎಂಭತ್ತು ಸಾವಿರ ರೂ. ತೆರುವ ಪರಿಸ್ಥಿತಿ ಎದುರಾಗಿದೆ. ಕೃಷಿಗೆ ಎತ್ತುಗಳು ಅನಿವಾರ್ಯ‌ವಾದ ಕಾರಣ ಸಾಲಸೋಲ ಮಾಡಿ ಎತ್ತು ಕೊಳ್ಳುವ ರೈತರು, ಬೀಜ, ಗೊಬ್ಬರ, ಔಷಧಿ ಎಂದು ಸಾಲ ಮಾಡಲೇಬೇಕಾಗುತ್ತದೆ. ಉತ್ತಮ ಬೆಳೆ ಬಂದರೆ ಉತ್ತಮ ಬೆಲೆ ಇಲ್ಲ, ಉತ್ತಮ ಬೆಲೆ ಇರುವ ಬೆಳೆ ಉತ್ತಮ ಇಳುವರಿ ಬರಲಿಲ್ಲ ಎಂದರೆ ರೈತನಿಗೆ ನಷ್ಟ ಕಟ್ಟಿಟ್ಟ ಬುತ್ತಿ.

ಹೀಗೆ ಹತ್ತು ಹಲವು ಸಮಸ್ಯೆ‌ಗಳ ಸುಳಿಯಲ್ಲಿ ಸಿಲುಕಿರುವ ರೈತ ಒಂದೆಡೆ ತನ್ನ ಬದುಕಿಗೆ ಭದ್ರತೆಯೆ ಇಲ್ಲದ ಕಾರಣಕ್ಕೆ ಹತಾಶನಾಗಿ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ನಿತ್ಯ ನಿರಂತರ ಘಟಿಸುತ್ತಲೇ ಇವೆ. ಇನ್ನೊಂದೆಡೆ ದಿನದಿನಕ್ಕೂ ಕಗ್ಗಂಟಾಗುತ್ತಿರುವ ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ತೋರುತ್ತಿರುವ ನಿರಾಸಕ್ತಿ ಕೃಷಿ ಹಾಗೂ ಕೃಷಿಕರ ಮೂಲೋತ್ಪಾಟನೆಗೆ ಹೂಡಿರುವ ಸಂಚಿನಂತೆ ಭಾಸವಾಗುತ್ತಿದೆ.

  • ಚಂಸು ಪಾಟೀಲ
    ಕೂನಬೇವು
    ತಾ. ರಾಣೇಬೆನ್ನೂರು
    ಜಿ. ಹಾವೇರಿ

(ಕೃಷಿಕರಾದ ಚಂಸು ಪಾಟೀಲರವರು ಲೇಖಕರೂ ಹೌದು. ಬೇಸಾಯದ ಕತಿ ಎಂಬ ಪುಸ್ತಕ ಬರೆದಿರುವ ಇವರು ಸಮಾಜದ ಆಗುಹೋಗುಗಳಿಗೆ ಸದಾ ಪ್ರತಿಕ್ರಿಯಿಸುತ್ತಿರುತ್ತಾರೆ)


ಇದನ್ನೂ ಓದಿ; ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...