ಶಾಲಾ ಪಠ್ಯ ಪುಸ್ತಕಗಳಲ್ಲಿನ ಇತಿಹಾಸದ ಪಾಠಗಳನ್ನು ಬಲಾಯಿಸುವ ಕಾರ್ಯ ರಾಷ್ಟ್ರಮಟ್ಟದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಸರ್ಕಾರಗಳು ಬದಲಾದಾಗ ತಮಗೆ ಸರಿ ಎನಿಸಿದ ಇತಿಹಾಸವನ್ನು ಪಠ್ಯಗಳಲ್ಲಿ ಸೇರಿಸುತ್ತ ಬರುವುದು, ಬೇಡವಾದದ್ದನ್ನು ಕೈಬಿಡುವುದು ವಾಡಿಕೆಯ ಸಂಗತಿ. ಈಗ ದೇಶದ ಇತಿಹಾಸದ ಪಠ್ಯವನ್ನು ಸಮಗ್ರವಾಗಿ ಬದಲಾಯಿಸುವ ಅಗತ್ಯವಿದೆಯೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಪಾಶ್ಚಿಮಾತ್ಯ ದೃಷ್ಟಿಕೋನದ ಇತಿಹಾಸವನ್ನು ಸ್ವದೇಶಿಕರಣಗೊಳಿಸುವ ಪ್ರಯತ್ನದಲ್ಲಿ ತೊಡಗಿರುವುದಾಗಿ ನಿನ್ನೆ ಪಠ್ಯ ಪುಸ್ತಕ ಪರಿಷ್ಕರಿಸುತ್ತಿರುವ ಸಂಸದೀಯ ಸಮಿತಿ ತಿಳಿಸಿದೆ.
“ಇತಿಹಾಸಗಳ ಪಠ್ಯ ರೂಪಿಸುವ ಪ್ರಕ್ರಿಯೆಯಲ್ಲಿ ಸರಿಯಾದ ಇತಿಹಾಸವನ್ನು ಸೇರಿಸುವ ಮತ್ತು ತಪ್ಪಾದ ಇತಿಹಾಸವನ್ನು ತೆಗೆಯುವ ಕೆಲಸವೂ ಒಳಗೊಂಡಿದೆ. ಬಿಟ್ಟು ಹೋದ ಅನೇಕ ಇತಿಹಾಸದ ಘಟನೆಗಳಿಂದ ಮಕ್ಕಳು ವಂಚಿತರಾಗಿದ್ದಾರೆ. ಕೆಲವು ರಾಷ್ಟ್ರೀಯವಾದಿ ನಾಯಕರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಪಠ್ಯದಿಂದ ಬಿಟ್ಟುಹೋಗಿದೆ” ಎಂದು ಸಂಸದೀಯ ಸಮಿತಿಯ ಅಧ್ಯಕ್ಷ ವಿನಯ್ ಸಹಸ್ರಬುದ್ದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಳೆಯ ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ಮತ್ತು ರಾಷ್ಟ್ರೀಯವಾದಿ ಚಿಂತನೆಗಳನ್ನು ಬೆಳೆಸುವ ಅಗತ್ಯವಿದ್ದು ಆ ಸಂಬಂಧ ಪ್ರೇರಣೆಯನ್ನು ನೀಡುವಂತೆ ಇತಿಹಾಸದ ಪಠ್ಯವನ್ನು ರೂಪಿಸಲಾಗುತ್ತಿದೆ. ಮಹಿಳಾ ಹೋರಾಟಗಾರರು ಮತ್ತು ಸ್ವದೇಶಿ ಚಿಂತನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೊಸ ಪಠ್ಯಕ್ರಮಗಳ ಕುರಿತಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
1975ರ ಎಮರ್ಜೆನ್ಸಿ ಮತ್ತು 1998ರ ಫೋಖ್ರಾನ್ ಪರಮಾಣು ಸಂಶೋಧನೆಯನ್ನು ಇತಿಹಾಸದ ಪಠ್ಯದಲ್ಲಿ ಸೇರಿಸುವ ಅಗತ್ಯವಿದೆ ಎಂದು ಬಿಜೆಪಿ ಸಂಸದ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ತಿಳಿಸಿದ್ದಾರೆ.
ಸಂಸದೀಯ ಸಮಿತಿಯು ಶಿಕ್ಷಣ ತಜ್ಞರು, ಇತಿಹಾಸಕಾರರು, ಶಿಕ್ಷಕರು, ಮಕ್ಕಳು ಮತ್ತು ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಆಹ್ವಾನಿಸಿದೆ. ಜೂನ್ 30 ಸಲಹೆ ಸೂಚನೆಗಳನ್ನು ನೀಡಲು ಕೊನೆಯ ದಿನವಾಗಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದ ಅನೇಕ ತಜ್ಞರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈ ಅವಧಿಯನ್ನು ಜುಲೈ 15 ರ ವರೆಗೆ ವಿಸ್ತರಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮಾನವ ಮತ್ತು ವನ್ಯಜೀವಿ ಸಂಘರ್ಷ ನಮ್ಮ ಅಭಿವೃದ್ಧಿ ನೀತಿಗಳ ಫಲ
ಸಂಸದೀಯ ಸಮಿತಿಯ ವರದಿಯು ಈಗಾಗಲೇ ಅಂತಿಮಗೊಂಡಿದ್ದು ಕೆಲವು ತಜ್ಞರು ತಮ್ಮ ಸಲಹೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದ್ದರಿಂದ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ರಾಜ್ಯಸಭೆ ಕಾರ್ಯಾಲಯವು ಈ ಹಿಂದೆ ಒಂದು ಪ್ರಕಟಣೆಯನ್ನು ಹೊರಡಿಸಿ ಪಠ್ಯ ಪುಸ್ತಕದ ಪರಿಷ್ಕರಣೆಯಲ್ಲಿ ಕೆಲವು ಚಾರಿತ್ರಿಕವಲ್ಲದ ಘಟನೆಗಳನ್ನು ಕೈಬಿಡುವುದು, ದೇಶದ ರಾಷ್ಟ್ರೀಯ ಚಿಂತಕರ ಮತ್ತು ನಾಯಕರ ಕುರಿತಾದ ಆಕ್ಷೇಪಿತ ವಿಷಯಗಳನ್ನು ಕೈಬಿಡುವುದನ್ನು ಒಳಗೊಂಡಿರಲಿದೆ ಎಂದು ಹೇಳಿತ್ತು. ಎಲ್ಲಾ ಕಾಲಘಟ್ಟದ ಇತಿಹಾಸಕ್ಕೆ ಸಮಾನ ಪ್ರಾಧಾನ್ಯತೆಯನ್ನು ನೀಡುವುದು ಮತ್ತು ಚಾರಿತ್ರಿಕ ಅಲ್ಲವೆಂದು ಇದುವರೆಗೆ ಪರಿಗಣಿಸಿದ್ದ ಚಾರಿತ್ರಿಕ ಘಟನೆಗಳನ್ನು ಇತಿಹಾಸದ ಪಠ್ಯದಲ್ಲಿ ಸೇರಿಸುವುದೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ನಡೆಯಲಿದೆ. ಗಾರ್ಗಿ, ಮೈತ್ರೇಯಿ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ರಾಣಿ ಚನ್ನಮ್ಮ, ಚಾಂದ್ ಬೀಬಿ, ಜಲ್ಕಾರಿ ಬಾಯಿ ಮುಂತಾದ ಮಹಿಳಾ ಹೋರಾಟಗಾರರ ವಿಷಯವನ್ನು ಪಠ್ಯಕ್ಕೆ ಸೇರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಸಲಾಗಿತ್ತು.
ಕೆಲವು ಇತಿಹಾಸಕಾರರ ಏಕಪಕ್ಷೀಯ ವಿಚಾರಧಾರೆಗಳಿಂದ ದೇಶದ ಇತಿಹಾಸದ ಪಠ್ಯಗಳು ತುಂಬಿ ಹೋಗಿವೆ. ನಿಜವಾದ ಇತಿಹಾಸವನ್ನು ಮರೆ ಮಾಚಲಾಗಿದ್ದು ಒಂದು ವರ್ಗದ ಇತಿಹಾಸವನ್ನು ವಿಜ್ರಂಭಿಸಿದ ಪಠ್ಯವನ್ನು ಮಕ್ಕಳು ಓದುತ್ತಿದ್ದಾರೆ. ಇದನ್ನು ಸುಧಾರಿಸುವ ಕ್ರಮವಾಗಿ ಇತಿಹಾಸದ ಪಠ್ಯಕ್ರಮದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲಾಗುವುದು ಎಂದು ಪಠ್ಯ ಪುಸ್ತಕ ರೂಪಿಸುತ್ತಿರುವ ಸಂಸದೀಯ ಸಮಿತಿ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ಪಡೆದವರಿಗೆ ಯುರೋಪಿನ 9 ರಾಷ್ಟ್ರಗಳಲ್ಲಿ ಪ್ರವೇಶಕ್ಕೆ ಅನುಮತಿ