Homeಅಂಕಣಗಳುಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

- Advertisement -
- Advertisement -

ಅಕ್ಟೋಬರ್ 31ರಿಂದ ನವೆಂಬರ್ 12ರವರೆಗೆ COP-26 ಸಮಾವೇಶ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಿಗದಿಯಾಗಿದೆ. ಹವಾಮಾನ ಬದಲಾವಣೆಯ ಬಗ್ಗೆ ಸೂಕ್ತ ಮತ್ತು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಪ್ರತಿ ವರ್ಷ ಸಭೆ ಸೇರಿ ಚರ್ಚೆ ಮಾಡಿ ನಿರ್ಣಯಗಳನ್ನು ತೆಗೆದುಕೊಳ್ಳಲು ಆಯೋಜಿಸಲಾಗುವ, ವಿಶ್ವದ ಬಹುತೇಕ ಎಲ್ಲ ದೇಶಗಳ ಈ ’ಕಾನ್ಫರೆನ್ಸ್ ಆಫ್ ಪಾರ್ಟೀಸ್; COP-26’ ಸಮಾವೇಶ ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ COP-21ರ ಸಮಾವೇಶದ ನಂತರ ನವೆಂಬರ್ 2016ರಲ್ಲಿ ಸುಮಾರು 196 ದೇಶಗಳು ಹವಾಮಾನ ಬದಲಾವಣೆಯ ಬಗ್ಗೆ ಒಮ್ಮತಕ್ಕೆ ಬಂದು ಅಂತಾರಾಷ್ಟ್ರೀಯ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರಲ್ಲಿ ಈ ಒಪ್ಪಂದದಿಂದ ಹಿಂದೆ ಸರಿದಿದ್ದರು. ನಂತರ ಆಯ್ಕೆಯಾದ ಅಮೆರಿಕ ಅಧ್ಯಕ್ಷರಾದ ಜೋ ಬೈಡೆನ್ ತಮ್ಮ ಅಧ್ಯಕ್ಷೀಯ ಅಧಿಕಾರ ಬಳಸಿ ಮತ್ತೆ ಈ ಒಪ್ಪಂದದ ಭಾಗವಾಗಿ ಮುಂದುವರೆಯಲು ಕಾನೂನು ಬದಲಾವಣೆ ತಂದಿದ್ದರು. ಪ್ಯಾರಿಸ್ ಒಪ್ಪಂದದ ಮುಖ್ಯ ಕ್ರಮಗಳಲ್ಲಿ ಒಂದು ಜಾಗತಿಕ ತಾಪಮಾನ ಏರಿಕೆ 2 ಡಿಗ್ರೀ ಸೆಲ್ಷಿಯಸ್‌ಗಿಂತಲೂ ಕಡಿಮೆ ಇರುವಂತೆ ನೋಡಿಕೊಳ್ಳುವುದಕ್ಕೆ ದೇಶಗಳು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿದೆ.

2018ರಲ್ಲಿ ಹಲವು ವಿಜ್ಞಾನಿಗಳು ಅಧ್ಯಯನ ಮಾಡಿ ಯುಎನ್ ಇಂಟರ್‌ಗವರ್‍ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಬಿಡುಗಡೆ ಮಾಡಿದ್ದ ವರದಿಯಲ್ಲಿ ಜಗತ್ತು ಹವಾಮಾನ ಬದಲಾವಣೆಯಿಂದ ಎದುರಿಸುತ್ತಿರುವ ಮತ್ತು ಮುಂದೆ ಬರಲಿರುವ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಜಾಗತಿಕ ತಾಪಮಾನವನ್ನು ಕೈಗಾರಿಕಾ ಯುಗದ ಪೂರ್ವ ಮಟ್ಟಕ್ಕಿಂತ 1.5 ಡಿಗ್ರೀ ಸೆಲ್ಷಿಯಸ್‌ಗಿಂತ ಹೆಚ್ಚಳವಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು ಎನ್ನುತ್ತದೆ ಆ ವರದಿ. ಕಳೆದ ಸುಮಾರು ಎರಡು ಮೂರು ದಶಕಗಳಿಂದ ಹವಾಮಾನ ಬದಲಾವಣೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿದ್ದರೂ ಅದರ ಗಂಭೀರತೆಗೆ ಅನುಗುಣವಾಗಿ ಬಹುಮಾಧ್ಯಮಗಳಲ್ಲಿ ಅಗತ್ಯ ಮಟ್ಟದ ಜಾಗ ಅದು ಪಡೆದಿಲ್ಲ ಎಂಬುದು ಕೂಡ ಆತಂಕಕಾರಿ ಸಂಗತಿಯೇ ಆಗಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಆಗುತ್ತಿರುವ/ಆಗಲಿರುವ ಅನಾಹುತಗಳನ್ನು ಪ್ರಮಾಣಿಸುವುದರಲ್ಲಿ ಇರುವ ಸವಾಲುಗಳು ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಹಿಂದೆಂದಿಗಿಂತಲೂ ಹೆಚ್ಚುತ್ತಿರುವ ಪ್ರವಾಹಗಳು, ಬರಗಳು, ಕುಡಿಯುವ ನೀರಿನ ಸಮಸ್ಯೆ, ಸಮುದ್ರ ಮಟ್ಟದ ಏರಿಕೆ, ಚಂಡಮಾರುತದ ಅಪಾಯಗಳು, ಋತುಗಳಲ್ಲಿ ಆಗುತ್ತಿರುವ ಬದಲಾವಣೆ ಹೀಗೆ ಸಮಸ್ಯೆಗಳು ಎದ್ದಾಗ ಹವಾಮಾನ ಬದಲಾವಣೆಯ ಬಗ್ಗೆ ಚರ್ಚೆ ಮರುಕಳಿಸುತ್ತದಾದರೂ, ಇವೆಲ್ಲವೂ ಹಿಂದಿನಿಂದಲೂ ಇದ್ದವೇ ಎಂಬಂತೆ ಮೈಮರೆಯುವ ವಿದ್ಯಮಾನ ಸಾಮಾನ್ಯವಾಗಿದೆ. ಮಾಧ್ಯಮಗಳು ಬಹುತೇಕ ಇಂದು ದೊಡ್ಡ ಉದ್ದಿಮೆದಾರರ ಹಿಡಿತದಲ್ಲಿ ಇರುವುದರಿಂದ, ಹವಾಮಾನ ಬಿಕ್ಕಟ್ಟಿಗೆ ಕಾರಣವಾಗಿರುವ ಸಂಗತಿಗಳು, ಅವರ ಉದ್ದಿಮೆಗಳಿಗೆ ನೇರ ಸಂಬಂಧ ಹೊಂದಿರುವುದರಿಂದ ಹವಾಮಾನ ವಿಜ್ಞಾನಿಗಳ ಎಚ್ಚರಿಕೆಗಳು ಚರ್ಚೆಯಾಗಬೇಕಿರುವ ಮಟ್ಟದಲ್ಲಿ ಬಿತ್ತರವಾಗುವುದಿಲ್ಲ.

ಜಾಗತಿಕ ತಾಪಮಾನಕ್ಕೆ ಮುಖ್ಯಕಾರಣ ಇಂಗಾಲ ಡೈ ಆಕ್ಸೈಡ್ ಅನಿಲ (ಕಾರ್ಬನ್ ಡೈ ಆಕ್ಸೈಡ್) ವಾತಾವರಣದಲ್ಲಿ ವಿಪರೀತವಾಗಿ ಏರಿ ಅದು ಸೂರ್ಯನ ಕಿರಣಗಳ ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಎಂದು ಗುರುತಿಸಿ ಹಲವು ದಶಕಗಳೇ ಕಳೆದಿವೆ. ಕಾರ್ಬನ್ ಡೈ ಆಕ್ಸೈಡ್ ಏರಿಕೆಗೆ ಮುಖ್ಯ ಕಾರಣ ಕಲ್ಲಿದ್ದಲು, ಪೆಟ್ರೋಲಿಯಂನತಹ ಇಂಧನ ಉರಿಸುವುದು ಮತ್ತು ಕೈಗಾರಿಕೆಗಳು ಹೊರಸೂಸುವ ಅನಿಲಗಳು. 2020ರಲ್ಲಿಯೇ ಸುಮಾರು 34.07 ಬಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಈ ಮೂಲಗಳಿಂದ ಭೂಮಿಯ ವಾತಾವರಣಕ್ಕೆ ಸೇರ್ಪಡೆಯಾಗಿದೆ. ಇದನ್ನು ತಗ್ಗಿಸುವ ಜವಾಬ್ದಾರಿ ಎಲ್ಲ ದೇಶಗಳ ಮೇಲಿದೆ. ಆದರೆ ಬಹಳ ಹಿಂದಿನಿಂದಲೂ ಈ ಇಂಧನಗಳ ಅತಿ ಹೆಚ್ಚು ಬಳಕೆ ಮತ್ತು ಅತಿ ಕೈಗಾರಿಕೀಕರಣದಿಂದ ವಾತಾವರಣಕ್ಕೆ ಅಪಾಯ ಒಡ್ಡಿರುವ ಮುಂದುವರೆದ ದೇಶಗಳು ಇಂದು ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಹೆಚ್ಚು ಜವಾಬ್ದಾರಿಯನ್ನು ಹೊರಬೇಕು ಎನ್ನುವುದು ಮುಂದುವರೆಯುತ್ತಿರುವ ದೇಶಗಳ ಅಹವಾಲು. ಇಂತಹ ಸಮಯದಲ್ಲಿ, ಡೊನಾಲ್ಡ್ ಟ್ರಂಪ್‌ನಂತಹ ರಾಜಕಾರಣಿಗಳು ಇಡೀ ಕ್ಲೈಮೇಟ್ ಚೇಂಜ್‌ಅನ್ನೇ ’ಮಹಾ ಸುಳ್ಳು’ ಎಂದು ಬಗೆದು, ಅಂತಾರಾಷ್ಟ್ರೀಯ ಒಪ್ಪಂದದಿಂದ ಹಿಂದೆಹೋಗಲು ತೆಗೆದುಕೊಂಡ ನಿರ್ಣಯ, ಹವಾಮಾನ ಬಿಕ್ಕಟ್ಟನ್ನು ಬಗೆಹರಿಸುವ ಸವಾಲುಗಳಿಗೆ ಸಂಕೇತದಂತೆ ಕಾಣುತ್ತದೆ.

2018ರಲ್ಲಿ ಬಿಡುಗಡೆಯಾದ ಐಪಿಸಿಸಿ ವರದಿ ಇನ್ನು ಮುಂದಿನ 12 ವರ್ಷಗಳಲ್ಲಿ ಇಂಧನಗಳನ್ನು ಸುಡುವುದರಿಂದ ಹೊರಸೂಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣದಲ್ಲಿ ಕನಿಷ್ಟ 38.2 ಬಿಲಿಯನ್ ಟನ್‌ನಷ್ಟು ತಗ್ಗಿಸಬೇಕು. ಆಗಷ್ಟೇ ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರೀ ಸೆಲ್ಷಿಯಸ್‌ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಲು ಸಾಧ್ಯ. ಇದನ್ನು ಸಾಧಿಸಲು ನಾವು ಸೋತರೆ, ಚಂಡಮಾರುತಗಳು, ಪ್ರವಾಹಗಳು ಮತ್ತು ಬರಗಳು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಜಗತ್ತಿಗೆ ಅಪಾಯವನ್ನು ಒಡ್ಡಲಿವೆ. ಸಾವಿರಾರು ಮಿಲಿಯನ್ ಜನರು ಬಡತನಕ್ಕೆ ತಳ್ಳಲ್ಪಡುತ್ತಾರೆ ಮತ್ತು ಸಾವಿರಾರು ಜೀವ ಪ್ರಬೇಧಗಳು ಅಳಿಯಲಿವೆ ಎಂದು ಎಚ್ಚರಿಸಿತ್ತು. ಆದರೆ ಇದರ ಗಂಭೀರತೆ ಹಲವು ದೇಶಗಳ ಸರ್ಕಾರಗಳಿಗೆ, ಅವುಗಳ ಮುಖಂಡರಿಗೆ ಯಾವುದೇ ರೀತಿಯಲ್ಲಿ ಕಾಡಿಲ್ಲ ಎಂಬ ಸತ್ಯ ನಮ್ಮ ಈ ಗ್ರಹದಲ್ಲಿ ಮುಂದಿನ ಹಲವು ಪೀಳಿಗೆಗಳು ಅನುಭವಿಸಬೇಕಾದ ಕಷ್ಟಕೋಟಲೆಗಳಿಗೆ ಮುನ್ನುಡಿಯಂತಿದೆ.

ನವ ಉದಾರೀಕರಣದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಜನರ ಕೈಲಿ ಬಂಡವಾಳ ಶೇಖರಣೆಯಾಗಿರುವುದು, ಅವರು ಲಾಭಕ್ಕಾಗಿ ಕಾಡುಗಳು, ಜೀವವೈವಿಧ್ಯತೆ ಹೀಗೆ ಪರಿಸರ ಸಮತೋಲನದ ಎಲ್ಲ ಸಂಗತಿಗಳನ್ನೂ ಪಣಕ್ಕಿಟ್ಟು ಮುನ್ನುಗ್ಗುವ ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದೆ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಸರಿಪಡಿಸಲು ಸಾಧ್ಯವಾಗದ ಪರಿಸ್ಥಿತಿಗೆ ನಾವು ತಲುಪುತ್ತೇವೆ ಎಂಬ ಎಚ್ಚರಿಕೆಯನ್ನು ನಯೋಮಿ ಕ್ಲೀನ್ ಸೇರಿದಂತೆ ಹಲವು ಪರಿಸರ ಕಾರ್ಯಕರ್ತರು-ಚಿಂತಕರು ಎಚ್ಚರಿಸುತ್ತಾ ಬಂದಿದ್ದಾರೆ. ಅಂತಹ ಆರ್ಥಿಕ ವ್ಯವಸ್ಥೆಗಳ ಬಗ್ಗೆ ಅಥವಾ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿಯೇ ಅಗತ್ಯವಿರುವ ಭಾರಿ ಸುಧಾರಣೆಗಳ ಬಗ್ಗೆ ಹಲವು ಆರ್ಥಿಕ ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದರೂ ಸುಧಾರಣೆಗೆ ಒಡ್ಡಿಕೊಳ್ಳುವ ದೃಷ್ಟಿಯಲ್ಲಿ ಅವುಗಳು ಜನಪ್ರಿಯತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಅಪಾಯದ ತೂಗುಕತ್ತಿ ಮಾತ್ರ ದಿನದಿಂದ ದಿನಕ್ಕೆ ವೇಗವಾಗಿ ಬೀಸುತ್ತಲೇ ಇದೆ.

ಇನ್ನು ಕಾರ್ಬನ್ ಡೈ ಆಕ್ಸೈಡ್‌ಅನ್ನು ವಾತಾವರಣದಿಂದ ತಗ್ಗಿಸುವ ತಂತ್ರಜ್ಞಾನ ಕ್ರಮಗಳು ಕೂಡ ಚರ್ಚೆಯಲ್ಲಿವೆ. ಕಾರ್ಬನ್ ಡೈ ಆಕ್ಸೈಡ್‌ಅನ್ನು ವಾತಾವರಣದಿಂದ ಹೀರಿ ಅದನ್ನು ಬೇರೆ ರಾಸಾಯನಿಕವಾಗಿ ಪರಿವರ್ತಿಸುವ ತಂತ್ರಜ್ಞಾನದ ಪ್ರಯೋಗ ನಡೆದಿದ್ದರೂ ಅದರ ಭಾರಿ ವೆಚ್ಚದ ಕಾರಣಕ್ಕೆ ಅದು ಯಶಸ್ವಿಯಾಗುವುದರ ಬಗ್ಗೆ ಹಲವು ವಿಜ್ಞಾನಿಗಳ ನಡುವೆಯೇ ಸಂಶಯ ಇದೆ. ಇದೇ ರೀತಿಯಲ್ಲಿ ವಾತಾವರಣದ ಸ್ಟ್ರಾಟೋಸ್ಪಿಯರ್‌ನಲ್ಲಿ ಸಲ್ಫೇಟ್ ಕಣಗಳ ಏರೋಸಾಲ್‌ಗಳನ್ನು ಏರೋಪ್ಲೇನ್ ಮೂಲಕ ಸಿಂಪಡಿಸಿ ಸೂರ್ಯನ ಕಿರಣಗಳನ್ನು ಹಿಂದಕ್ಕೆ ಪ್ರತಿಫಲಿಸುವಂತೆ ಮಾಡುವ ತಂತ್ರಜ್ಞಾನದಿಂದಲೂ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು ಎಂಬುದು ಮತ್ತೊಂದು ತಂತ್ರಜ್ಞಾನ ಆಧಾರಿತ ಪ್ರಯೋಗವಾಗಿದೆ.

ಆದರೆ ಈ ತಂತ್ರಜ್ಞಾನ ಮುಂದೆ ಒಡ್ಡಬಹುದಾದ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಿಂದ ಮೊದಲುಗೊಂಡು, ಕಾರ್ಬನ್ ಡೈ ಆಕ್ಸೈಡ್‌ಅನ್ನು ಸೂಸುವ ಇಂಧನಗಳನ್ನು ಉರಿಸದೆ ಬದಲಿ ಶಕ್ತಿಯ ಮೂಲಗಳನ್ನು ಹುಡುಕಿಕೊಳ್ಳುವುದೇ ಈ ಸದ್ಯಕ್ಕೆ ಜಗತ್ತಿನ ಮುಂದಿರುವ ಸುಸ್ಥಿರ ಪರಿಹಾರವಾಗಿದೆ. ಇದಲ್ಲದೆ ವೈಯಕ್ತಿಕ ನೆಲೆಯಲ್ಲಿ ಜನರು ತಮ್ಮ ಬಳಕೆಯ ಬಗ್ಗೆ, ಕನ್ಸಂಪ್ಷನ್ ಬಗ್ಗೆ ಸುಸ್ಥಿರತೆಯೆಡೆಗೆ ಹೆಜ್ಜೆ ಹಾಕುವುದನ್ನೂ ಅಭ್ಯಾಸ ಮಾಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಿದೆ. ಬರಿದಾಗಿರುವ ಕಾಡುಗಳನ್ನು ಮತ್ತೆ ಚಿಗುರಿಸುವ ಸಲುವಾಗಿ ಅಪಾರ ಮರಗಳನ್ನು ನೆಡುವುದು ದೀರ್ಘಕಾಲಿಕ ಯೋಜನೆಯಾದರೂ ಅದು ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ತಗ್ಗಿಸುವ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಬಲ್ಲದಾಗಿದೆ. ಇದಕ್ಕೆಲ್ಲಾ ಆದಿಯಾಗಿ, ಸಾರ್ವಜನಿಕರಿಗೆ ಸಮಾನವಾಗಿ ಸಲ್ಲುವ ಆಸ್ತಿಗಳಾದ ನದಿ, ಕೆರೆ, ಹಳ್ಳಕೊಳ್ಳ, ಗೋಮಾಳ, ಕಾಡು ಮುಂತಾದವುಗಳ ಬಗ್ಗೆ ನಮ್ಮೆಲ್ಲರ ಸಹಭಾಗಿತ್ವದ ಒಡೆತನದ ಕಲ್ಪನೆಯನ್ನು ಜಾಗೃತಗೊಳಿಸಿ, ಅವುಗಳನ್ನು ಉಳಿಸಿಕೊಂಡು, ಸಂರಕ್ಷಿಸುವತ್ತ ಜನಸಾಮಾನ್ಯರು ಇಂದು ಚಿಂತಿಸಬೇಕಿದೆ. ಸಹಭಾಗಿತ್ವದ ಒಡೆತನದ ಆಸ್ತಿಗಳನ್ನು ಖಾಸಗಿಯವರ ಪಾಲಾಗದಂತೆ ತಡೆಯಲು ಸರ್ಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ.

ಇದು ಜೀವಪ್ರಬೇಧಗಳು ಅತಿ ವೇಗದಲ್ಲಿ ಅಳಿಯುತ್ತಿರುವ ಯುಗವಾಗಿದೆ ಮತ್ತು ಇದಕ್ಕೆ ಕಾರಣಗಳು ಸ್ವಾಭಾವಿಕವಾಗಿರದೆ ಮನುಷ್ಯನೇ ಆಗಿದ್ದಾನೆ. ಜೀವವೈವಿಧ್ಯಗಳನ್ನು ಉಳಿಸಿಕೊಳ್ಳುವ ಜೊತೆಗೆ ಸಮತೋಲನವನ್ನು ಕಾಪಾಡಿಕೊಳ್ಳುವತ್ತಲೂ ಜನಪರ ಆಂದೋಲನಗಳು ಸೃಷ್ಟಿಯಾಗಬೇಕಾದ ಜರೂರತ್ತಿದೆ. ಈ ನಿಟ್ಟಿನಲ್ಲಿ ಚೀನಾದ ಕುನ್‌ಮಿಂಗ್‌ನಲ್ಲಿ ಜಾರಿಯಲ್ಲಿರುವ ವಿಶ್ವಸಂಸ್ಥೆಯ ಜೀವವೈವಿಧ್ಯದ ಬಗೆಗಿನ COP-15 ಸಮಾವೇಶ ಅಗತ್ಯ ಕ್ರಮಗಳಿಗಾಗಿ ನಿರ್ಣಯಗಳನ್ನು ಕೈಗೊಳ್ಳಲಿ ಎಂಬುದು ಆಶಯ ನಮ್ಮದು.

2021ರ ಭೌತಶಾಸ್ತ್ರಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನು ಮೂವರು ಹವಾಮಾನ ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಇದು ಇಂದು ಜಗತ್ತು ಎದುರಿಸುತ್ತಿರುವ ಹವಾಮಾನ ವೈಪರೀತ್ಯಗಳ ಬಗೆಗೆ ಪರಿಹಾರ ಹುಡುಕುವ ದಿಕ್ಕಿನಲ್ಲಿ ಹೆಚ್ಚು ತಿಳಿವಳಿಕೆ ನೀಡಲು ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಎದುರುಗೊಳ್ಳಲು ಸಹಕಾರಿಯಾದೀತು.


ಇದನ್ನೂ ಓದಿ: 2021ರ ಫಿಸಿಕ್ಸ್ ನೊಬೆಲ್; Butterfly Effect ಮತ್ತು ಹವಾಮಾನ ಬದಲಾವಣೆ

ಇದನ್ನೂ ಓದಿ: ಜಗತ್ತಿನ ಹಲವೆಡೆ ಪ್ರವಾಹದ ಹಾವಳಿ; ಎಲ್ಲವೂ ಕೊಚ್ಚಿಕೊಂಡು ಹೋಗುವ ದಿನ ಬರುವ ಮುನ್ನ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...