2012 ರಲ್ಲಿ ನಕ್ಸಲ್ ನಿಗ್ರಹ ದಳದಿಂದ ಬಂಧಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯರನ್ನು, ಮೂರನೇ ಹೆಚ್ಚುವರಿ ನ್ಯಾಯಾಲಯವು ಗುರುವಾರ ನಿರ್ದೋಷಿ ಎಂದು ತೀರ್ಪು ನೀಡಿದೆ. ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದಲ್ಲಿ ವಿಠಲ ಮಲೆಕುಡಿಯ ಬಂಧನಕ್ಕೆ ಒಳಗಾಗುವ ವೇಳೆ ಅವರು ಮಂಗಳೂರು ವಿಶ್ವವಿದ್ಯಾನಿಯಲದ ಪತ್ರಿಕೋಧ್ಯಮದ ವಿದ್ಯಾರ್ಥಿಯಾಗಿದ್ದರು. ಜೈಲಿನಲ್ಲಿದ್ದಾಗ ಅವರು ಕಾಲೇಜಿಗೆ ಪರೀಕ್ಷೆ ಬರೆಯಲು ಕೈಯ್ಯಲ್ಲಿ ಬೇಡಿ ಹಾಕಿಕೊಂಡೆ ಬಂದಿದ್ದರು. ಇದರ ವಿರುದ್ದ ದೇಶದಾದ್ಯಂತ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.
ವಿಠಲ ಮಲೆಕುಡಿಯ ನಕ್ಸಲ್ ಚಟುವಟಿಕೆ ಮಾಡುತ್ತಿದ್ದರು ಎಂದು ಆರೋಪಿಸಿ ಅವರ ವಿರುದ್ದ ದೇಶದ್ರೋಹದ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಸಮಯದಲ್ಲಿ ವಿಠಲ ಅವರು ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವ ಜಿಲ್ಲಾಡಳಿತದ ಕ್ರಮದ ವಿರುದ್ದ ಹೋರಾಟ ನಡೆಸುತ್ತಿದ್ದರು. ಬಂಧನಕ್ಕೆ ಒಳಗಾಗಿ ಮೂರು ತಿಂಗಳ ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು.
ಇದನ್ನೂ ಓದಿ: ಧರ್ಮಸ್ಥಳ: ನಾಪತ್ತೆಯಾಗಿದ್ದ ಮಲೆಕುಡಿಯ ಆದಿವಾಸಿ ಯುವತಿಯ ಶವ ಕಾಡಿನಲ್ಲಿ ಪತ್ತೆ
ನಕ್ಸಲ್ ನಿಗ್ರಹ ದಳವು ಅವರನ್ನು ಬಂಧಿಸಿದಾಗ ಅವರು ತನ್ನ ಮನೆಯಲ್ಲಿ ಭಗತ್ ಸಿಂಗ್ ಪುಸ್ತಕ ಹೊಂದಿದ್ದರು ಎಂದು ಮುಖ್ಯವಾಗಿ ಆರೋಪಿಸಿದ್ದರು. ಆದರೆ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಭಗತ್ ಸಿಂಗ್ ಸಾಹಿತ್ಯ ಓದುವುದು ಅಪರಾಧ ಅಲ್ಲ ಎಂದು ಒಪ್ಪಿಕೊಂಡಿದ್ದರು.
ಈ ಬಗ್ಗೆ ತನ್ನ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಅಂತಿಮವಾಗಿ ನ್ಯಾಯಾಲಯ ನ್ಯಾಯ ಒದಗಿಸಿದೆ. ಸರಕಾರಕ್ಕೆ ಮುಖಭಂಗವಾಗಿದೆ. ವಕೀಲ ದಿನೇಶ್ ಹೆಗ್ಡೆ ನ್ಯಾಯಾಲಯದಲ್ಲಿ ಉಚಿತವಾಗಿ ವಾದ ಮಂಡಿಸಿದ್ದರು. ಮಾಧ್ಯಮಗಳು ಅಂದು ನಮ್ಮ ಜೊತೆ ನಿಂತಿದ್ದವು. ಎಲ್ಲರಿಗೂ ಡಿವೈಎಫ್ಐ ರಾಜ್ಯ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ. ಕುಲದೀಪ್ ನಯ್ಯರ್ ಬರೆದ ಭಗತ್ ಸಿಂಗ್ ಪುಸ್ತಕ, ಧರ್ಮಸ್ಥಳದ ಜಾತ್ರೆಯಲ್ಲಿ ಖರೀದಿಸಿದ್ದ ಆಟಿಕೆ ಬೈನಾಕುಲರ್, ನೂರು ಗ್ರಾಂ ಕಾಮತ್ ಕಾಫಿ ಪುಡಿ, ಕಾಲು ಕೆ ಜಿ ಸಕ್ಕರೆ, ಎರಡು ಸ್ಟೀಲ್ ತಟ್ಟೆಯನ್ನು ಇಟ್ಟು ಯುಎಪಿಎ ಕಾಯ್ದೆಯಡಿ ಆದಿವಾಸಿ ವಿದ್ಯಾರ್ಥಿಯ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ ಸರಕಾರಕ್ಕೆ ಈಗ ನಾಚಿಕೆ ಆಗಬೇಕು” ಎಂದು ಕಿಡಿ ಕಾಡಿದ್ದಾರೆ.
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಘಟನಾ ಸಮಿತಿಯು “ಇದು ನ್ಯಾಯಯುತ ಹೋರಾಟಕ್ಕೆ, ಸತ್ಯಕ್ಕೆ ಸಂದ ಜಯ. ಈ ತೀರ್ಪು ಆಳುವ ಸರ್ಕಾರ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕುತಂತ್ರವನ್ನು ಬಯಲಿಗೆಳೆದಿದೆ” ಎಂದು ತಿಳಿಸಿದೆ.
ಒಂಬತ್ತು ವರ್ಷಗಳ ಹಿಂದೆ ವಿಠಲ ಮತ್ತು ಅವರ ತಂದೆಯನ್ನು ನಕ್ಸಲೈಟ್ ಎಂದು ಆರೋಪಿಸಿ ಬಂಧಿಸಿದ್ದಾಗ ಡಿವೈಎಫ್ಐ ಸಂಘಟನೆ ಅವರ ಪರವಾಗಿ ಬೃಹತ್ ಹೋರಾಟಗಳನ್ನು ಸಂಘಟಿಸಿತ್ತು. ಅವರ ಹೋರಾಟವನ್ನು ಬೆಂಬಲಿಸಿ ಪ್ರಸ್ತುತ ಕೇರಳ ವಿಧಾನಸಭೆಯ ಸ್ಪೀಕರ್ ಆಗಿರುವ ಆಗ ಸಿಪಿಎಂ ಲೋಕಸಭಾ ಸದಸ್ಯರಾಗಿದ್ದ ಎಂಬಿ ರಾಜೇಶ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಜೈಲಿಗೆ ಭೇಟಿ ನೀಡಿ ವಿಠಲ ಮಲೆಕುಡಿಯ ಮತ್ತು ಅವರ ತಂದೆ ನಿಂಗಣ್ಣ ಮಲೆಕುಡಿಯರಿಗೆ ಧೈರ್ಯ ತುಂಬಿದ್ದರು.
ಇದನ್ನೂ ಓದಿ: ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!