ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥನೆ ಮಾಡಿ, ಭಾವನಾತ್ಮಕ ವಿಚಾರಗಳು ಮತ್ತು ನೈತಿಕತೆಯ ಬಗ್ಗೆ ಉಲ್ಲೇಖ ಮಾಡಿದ್ದರು. ಅದಾಗಿ ಒಂದರೆಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಮತ್ತು ಉಡುಪಿ ಜಿಲ್ಲೆಯ ಮಲ್ಪೆ, ಕುಂದಾಪುರದಲ್ಲಿ, ಬಿಜೆಪಿ ಬೆಂಬಲಿತ ಸಂಘಟನೆಗಳಾದ ಬಜರಂಗದಳ ಮತ್ತು ವಿಎಚ್ಪಿ ಯುವಕ-ಯುವತಿಯರ ಕೈಗೆ ತ್ರಿಶೂಲದಂತಹ ಶಸ್ತ್ರಗಳನ್ನು ಹಂಚಿದೆ.
ನವರಾತ್ರಿಯ ಪೂಜೆಯ ದಿನದಂದು ‘ತ್ರಿಶೂಲ ದೀಕ್ಷೆ’ ಹೆಸರಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ಮಾರಕ ಶಸ್ತ್ರಗಳನ್ನು ಹಂಚಿದೆ. ಇದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ‘ಕೇಶವ ಕೃಪಾ’ದ ಗುಲಾಮ: ಮಾವಳ್ಳಿ ಶಂಕರ್ ಆಕ್ರೋಶ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕದ್ರಿ ವಿಹೆಚ್ಪಿ ಕಚೇರಿಯಲ್ಲಿ, ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ, ಸಂಘಟನೆಯ ನಾಯಕ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಜೊತೆಗೆ ಜಿಲ್ಲೆಯ ಪುತ್ತೂರಿನಲ್ಲೂ ಇದು ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇಷ್ಟೇ ಅಲ್ಲದೆ, ಉಡುಪಿಯ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಕೂಡಾ ತ್ರಿಶೂಲ ದೀಕ್ಷೆ ನಡೆದಿದೆ. ಅಲ್ಲದೆ ಜಿಲ್ಲೆಯ ಕುಂದಾಪುರದಲ್ಲೂ ಮಹಿಳೆಯಗೆ ತ್ರಿಶೂಲ ದೀಕ್ಷೆ ನೀಡಲಾಗಿದೆ.
ವಿಶ್ವ ಹಿಂದು ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಶಸ್ತ್ರ ಪೂಜೆ ಮತ್ತು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಲ್ಪೆ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ಜರಗಿತು pic.twitter.com/7UAXEIV5CE
— Jayaprakash Prabhu (@jpshirva) October 14, 2021
ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ಹಿಂದೂಗಳ ಆತ್ಮ ರಕ್ಷಣೆ, ಗೋಹತ್ಯೆ, ಭಯೋತ್ಪಾದನೆ, ಮತಾಂತರ, ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ವಿರುದ್ದ ಹೋರಾಟ ಮಾಡಲು ತ್ರಿಶೂಲ ದೀಕ್ಷೆಯನ್ನು ಮಾಡಲಾಗಿದೆ ಎಂದು ಸಂಘಟನೆಗಳು ಹೇಳಿಕೊಂಡಿದ್ದು, ಯುವಕರಿಗೆ ಶಪಥವನ್ನು ಮಾಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥನೆ ಮಾಡಿದ್ದರು. ಅದಾಗಿ ಒಂದರೆಡು ದಿನಗಳಲ್ಲಿ ಕರಾವಳಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೊಶ ಹೆಚ್ಚಿದೆ. ಹಲವಾರು ಜನರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ದ.ಕ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, “ಇಂತಹ ಸಂಘಟನೆಗಳಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ, ಅವರಿಂದ ಇದು ಸಾಮಾನ್ಯ. ಬಿಜೆಪಿಯ ಮುಖ್ಯಮಂತ್ರಿ, ಸಂಸದರು, ಸಚಿವರು ಮತ್ತು ಸೇರಿದಂತೆ ಕೊಲೆ ಮಾಡಲು, ಸಂವಿದಾನ ಬದಲಾವಣೆ ಮಾಡುವ ಬಗ್ಗೆ ಹೇಳಿಕೆ ನೀಡುತ್ತಲೆ ಇದ್ದಾರೆ. ಗಾಂಧೀ ಕೊಂದವರನ್ನು ಇವರು ವಿಜ್ರಂಭಿಸುತ್ತಾರೆ. ಇದು ಅವರ ಹುಟ್ಟು ಗುಣ, ಇಂತಹ ಘಟನೆಗಳು ಅನಿರೀಕ್ಷಿತ ಅಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?
“ಈ ರೀತಿಯಾಗಿ ಭಯ ಹುಟ್ಟಿಸುವಂತದ್ದು, ದೇವರ ಹೆಸರನ್ನು ಬಳಸಿ ಹಿಂದೂಗಳನ್ನು ಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯುವಂತಹದ್ದು, ಇದೆಲ್ಲಾ ಅವರಿಗೆ ಕರಗತವಾಗಿ ಬಂದಿದೆ. ಅವರಿಗೆ ದೇಶದ ಬಗ್ಗೆ ಚಿಂತೆಯಿಲ್ಲ, ಆಡಳಿತ ಮತ್ತು ದುಡ್ಡಷ್ಟೇ ಅವರ ಉದ್ದೇಶ. ಮುಂದೆ ಚುನಾವಣೆ ಬರುತ್ತಿದೆ ಅದಕ್ಕಾಗಿ ಅವರು ತಯಾರಿ ಮಾಡುತ್ತಿದ್ದಾರೆ. ಆದರೆ ಬೆಲೆ ಏರಿಕೆ, ಉದ್ಯೋಗ ನಷ್ಟ, ಕೊರನಾದಿಂದ ಜನರ ಸಂಕಷ್ಟಪಡುತ್ತಿದ್ದಾರೆ ಆದರೆ ಇವುಗಳನ್ನು ಕೇಳುವವರಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾಂಗ್ರೆಸ್ಗೆ ಮತ ನೀಡಿದರೆ ಶಾಲೆಗೆ ಹೊರಟ ನಿಮ್ಮ ಮಕ್ಕಳು ಮನೆಗೆ ವಾಪಾಸು ಬರಲು ಸಾಧ್ಯವಿಲ್ಲ ಎಂದು ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಸುರತ್ಕಲ್ನಲ್ಲಿ ಕಾಲೇಜ್ನ ಮಕ್ಕಳನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಇವರು ಹಿಂದೂ ಧರ್ಮವನ್ನು ಬಳಸಿಕೊಳ್ಳುತ್ತಾರೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ದ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡುತ್ತಿದೆ. ಈ ಘಟನೆಯ ಬಗ್ಗೆಯು ಕಾನೂನಾತ್ಮಕವಾಗಿಯು ಹೋರಾಟ ಮಾಡುತ್ತದೆ” ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, “ಇದು ವ್ಯವಸ್ಥಿತ ಕಾರ್ಯಸೂಚಿಯ ಭಾಗ. ಮುಂಬರುವ ಚುನಾನಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದೆಲ್ಲ ನಡೆಯುತ್ತಿದೆ. ಕರಾವಳಿಯಲ್ಲಿ ನಿರುದ್ಯೋಗ, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳಿಂದ ಜನ ದಿಕ್ಕೆಟ್ಟಿದ್ದಾರೆ. ಸಹಜವಾಗಿಯೇ ಇದು ಸರಕಾರದ ವಿರುದ್ದ ಅತೃಪ್ತಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಇದರ ಅಪಾಯವನ್ನು ಮನಗಂಡಿರುವ ಬಿಜೆಪಿ ಮತೀಯ ಧ್ರುವೀಕರಣದ ತನ್ನ ಹಳೆಯ ಅಜೆಂಡಾವನ್ನು ಮುನ್ನಲೆಗೆ ತಂದು ಆಡಳಿತ ವಿರೋಧಿ ಅಲೆಯಿಂದ ಪಾರಾಗುವುದು, ಮುಂಬರುವ ಚುನಾವಣೆಯನ್ನು ಗೆಲ್ಲುವುದು ಗುರಿಯಾಗಿ ಇರಿಸಿಕೊಂಡಿದೆ” ಎಂದು ಹೇಳಿದ್ದಾರೆ.
“ಈ ಎಲ್ಲಾ ವಿಚಾರಕ್ಕಾಗಿ ಸಂಘ ಪರಿವಾರದ ಸಂಘಟನೆಗಳಿಂದ ವಿವಿಧ ರೀತಿಯ ಪ್ರಚೋದಕ ಕಾರ್ಯಗಳು ನಡೆಯುತ್ತಿವೆ. ಅನೈತಿಕ ಪೊಲೀಸ್ ಗಿರಿ, ದ್ವೇಷ ಭಾಷಣ, ಮುಖ್ಯಮಂತ್ರಿಯ ಕ್ರಿಯೆ, ಪ್ರತಿಕ್ರಿಯೆ ಹೇಳಿಕೆ ಎಲ್ಲವೂ ಯೋಜಿತ ರೀತಿಯಲ್ಲಿ ನಡೆಯುತ್ತಿದೆ. ಈಗ ಆಯುಧ ಪೂಜೆಯ ದಿನ ನಡೆದಿರುವ ತ್ರಿಶೂಲ ಧೀಕ್ಷೆ ಅದರ ಒಂದು ಭಾಗ. ಸರಕಾರ ನಡೆಸುತ್ತಿರುವ ಪಕ್ಷ ಸ್ವತಹ ಇಂತಹ ಸಂವಿಧಾನ ವಿರೋಧಿ, ಕಾನೂನು ವಿರೋಧಿ ಕೃತ್ಯಗಳನ್ನು ಹಮ್ಮಿಕೊಳ್ಳುತ್ತಿರುವುದರ ಹಿಂದಿನ ಹುನ್ನಾರಗಳನ್ನು ಜನ ಅರ್ಥ ಮಾಡಿಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರು ಕಮಿಷನರ್ ಶಶಿಕುಮಾರ್ ಅವರಿಗೆ ನಾನುಗೌರಿ.ಕಾಂ ಕರೆ ಮಾಡಿದ್ದು ಅವರು ಕರೆಯನ್ನು ಸ್ವೀಕರಿಸಿಲ್ಲ. ಅವರು ಪ್ರತಿಕ್ರಿಯೆ ನೀಡಿದ ಕೂಡಲೇ ಸುದ್ದಿಯನ್ನು ಅಪ್ಡೇಟ್ ಮಾಡಲಾಗುವುದು.
ಇದನ್ನೂ ಓದಿ: ನೈತಿಕತೆ ಮತ್ತು ಪೊಲೀಸ್ಗಿರಿ ಕೂಡಿಕೊಂಡರೆ ಅದು ಅನೈತಿಕ ಮನಸ್ಥಿತಿಗಳ ವಿಕೃತಿ