Homeಕರ್ನಾಟಕಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

ಕರಾವಳಿ ಕಾಂಗ್ರೆಸ್‌ನಲ್ಲಿ ’ಪ್ರಮೋದ್ ಮಧ್ವರಾಜ್ ಮನಸ್ಥಿತಿ’ ದಂಡು!

- Advertisement -
- Advertisement -

ಸಂಘ ಪರಿವಾರದ ’ದೂರನಿಯಂತ್ರಿತ ಆಡಳಿತ’ ದೇಶದಲ್ಲಿ ಶುರುವಾದ ಬಳಿಕ ಅಪ್ಪಟ ಸಮಯಸಾಧಕತನವೆ ರಾಜಕೀಯ ಸಿದ್ಧಾಂತ ಎಂಬಂತಾಗಿಬಿಟ್ಟಿದೆ. ಹಿಂದುತ್ವದ ಹೆಸರಲ್ಲಿ ಅವಕಾಶವಾದಿ ರಾಜಕಾರಣ ಪೋಷಿಸುತ್ತಿರುವ ಬಿಜೆಪಿ ಸೈಕಲಾಜಿಕಲ್ ವಾರ್‌ಅನ್ನು ಸದ್ದಿಲ್ಲದೆ ಶುರುಹಚ್ಚಿಕೊಂಡಂತಿದೆ. ದೇಶದಲ್ಲಿ ವಿರೋಧ ಪಕ್ಷಗಳು ಖಾಲಿಯಾಗುತ್ತಿವೆ; ಬಿಜೆಪಿ ಸೇರಿದರೆ ಅಧಿಕಾರದ ಸ್ಥಾನ-ಮಾನಪಡೆಯಬಹುದು; ಐಟಿ ರೇಡು ತಪ್ಪಿಸಿಕೊಂಡು ನಿರಾತಂಕವಾಗಿ ಮುನ್ನಡೆಯಬಹುದು; ಇಲ್ಲದಿದ್ದರೆ ಉದ್ಯೋಗ-ಉದ್ಯಮ ನಷ್ಟವಾಗಿ ಜೈಲು ಸೇರಬೇಕಾಗುತ್ತದೆ ಎಂಬಂಥ ಭಯಾನಕ ರಾಜಕೀಯ ಸಂದೇಶಗಳು ಬಿತ್ತರಗೊಳ್ಳುತ್ತಿವೆ.

ಸಂಘಪರಿವಾರದ ಹಿಂದುತ್ವ ತಂತ್ರಗಾರಿಕೆಗೆ ಪೂರಕವಾದ ಪರಿಸ್ಥಿತಿ ಕಾಂಗ್ರೆಸ್, ಜನತಾದಳ ಮತ್ತಿತರ ಪಕ್ಷದಲ್ಲಿದೆ. ವಿರೋಧ ಪಕ್ಷದಲ್ಲಿದ್ದು ಅಧಿಕಾರ, ಅಂತಸ್ತು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಹಿಡನ್ ಹಿಂದುತ್ವ ಸಿದ್ಧಾಂತಿಗಳು ಬಿಜೆಪಿ ಬೆಳೆಯಲು ಸಹಕರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ ಉಡುಪಿಯ ’ದೊಡ್ಡ’ ರಾಜಕಾರಣಿ ಪ್ರಮೋದ್ ಮಧ್ವರಾಜ್ ಅವಶ್ಯಕತೆ ಬಿಜೆಪಿಗಿತ್ತಾ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಸ್ವಜಾತಿ (ಮೊಗವೀರ) ಮತಗಳನ್ನೇ ಪಡೆಯಲಾಗದ ಪ್ರಮೋದ್‌ರಿಂದ ಬಿಜೆಪಿಗೆ ಪ್ರಯೋಜನ ಇಲ್ಲವೆಂಬುದು ಸಂಘ ಸೂತ್ರಧಾರರಿಗೆ ಗೊತ್ತಿಲ್ಲದ ಸಂಗತಿಯೆ? ಪ್ರಮೋದ್ ಅವರು ಸೇರಿರುವ ಮೊಗವೀರ ಸಮುದಾಯದ ಮುಕ್ಕಾಲು ಪಾಲು ಓಟುಗಳು ಬಿಜೆಪಿಗೆ ಬೀಳುತ್ತಿರುವಾಗ ಅವರನ್ನು ನಾಲ್ಕು ವರ್ಷಗಳ ಕಾಲ ಬಿಜೆಪಿಯ ಮಂತ್ರಿ-ಶಾಸಕರ ಮತ್ತು ಕರಾವಳಿಯ ಸರ್ವೋಚ್ಚ ನಾಯಕನ ಮನೆ ಬಾಗಿಲು ಕಾಯುವಂತೆ ಮಾಡಿ ಸತಾಯಿಸಿ ಪಾರ್ಟಿಗೆ ಸೇರಿಸಿಕೊಂಡ ಸಂಘದ ಉದ್ದೇಶವಾದರೂ ಏನಿರಬಹುದು?

ಇದಕ್ಕೆಲ್ಲ ಸರಳ ಉತ್ತರಗಳು ರಾಜಕೀಯ ವಲಯದಲ್ಲಿದೆ. ಕಾಂಗ್ರೆಸ್ ಹೈರಾಣಾಗುತ್ತಿದೆ; ಬಿಜೆಪಿ ಕಡೆ ಹೋಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಬಿಂಬಿಸಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿ ದೀರ್ಘಕಾಲದವರೆಗೆ ಪ್ರಮೋದ್ ಬಿಜೆಪಿ ಗೇಟಿನ ಮುಂದೆ ನಿಲ್ಲುವಂತೆ ಮಾಡಲಾಗಿತ್ತಂತೆ.
ಉಡುಪಿಯಲ್ಲಿರುವ ಮತ್ತೊಂದು ಸುದ್ದಿಯ ಪ್ರಕಾರ ಪ್ರಮೋದ್ ಮಧ್ವರಾಜ್ ನಡೆಸುತ್ತಿರುವ ಕೋಟ್ಯಂತರ ರುಪಾಯಿ ವಹಿವಾಟಿನ ಫಿಶ್ ಮಿಲ್‌ನಿಂದ ಮಲ್ಪೆಯಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಆ ಫ್ಯಾಕ್ಟರಿ ಬಂದ್ ಮಾಡಿಸುವ ಬೆದರಿಕೆಗೆ ಕಂಗಾಲಾಗಿರುವ ಪ್ರಮೋದ್ ಬಿಜೆಪಿ ಸೇರಬೇಕಾಗಿ ಬಂತೆನ್ನಲಾಗಿದೆ. ಮತ್ತೊಂದು ತರ್ಕದ ಪ್ರಕಾರ, ಬಿಜೆಪಿ ಸೇರಿದರೆ ಕೇಂದ್ರ ರಕ್ಷಣಾ ಮಂತ್ರಿ, ರಾಜ್ಯದ ಮುಖ್ಯಮಂತ್ರಿ ಆಗುವ ಯೋಗ ಖುಲಾಯಿಸಲಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಿಂದ ಪ್ರಮೋದ್ ಅತ್ತೂ ಕರೆದು ಬಿಜೆಪಿ ಸೇರ್ಪಡೆಯಾಗಿದ್ದಾರಂತೆ!

ಇದು ರಾಜಕೀಯ ಮತ್ತು ಔದ್ಯೋಗಿಕ ವಿಶ್ಲೇಷಣೆಯಾದರೆ, ಮೂಲಭೂತವಾಗಿ ಪ್ರಮೋದ್ ಸಂಘ ತತ್ವಾದರ್ಶದ ರಾಜಕಾರಣಿಯೆಂಬ ವ್ಯಾಖ್ಯಾನಗಳೂ ಬರಲಾರಂಭಿಸಿವೆ. ಸಿದ್ದರಾಮಯ್ಯ ಸರಕಾರದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಪ್ರಮೋದ್ ಬುದ್ಧಿಪೂರ್ವಕವಾಗೆ ಟಿಪ್ಪು ಜಯಂತಿಗೆ ಚಕ್ಕರ್ ಹಾಕಿದ್ದರೆಂದು ಅಂದು ಸುದ್ದಿಯಾಗಿತ್ತು. ಮಾಜಿ ಶಾಸಕನಾಗಿ ಸಂಘ ಶ್ರೇಷ್ಠರ ಮನ ಒಲಿಸುವ ಪ್ರಯತ್ನದಲ್ಲಿದ್ದ ಪ್ರಮೋದ್ ಕಾರ್ಯಕ್ರಮ ಒಂದರಲ್ಲಿ ತಾನು ಟಿಪ್ಪು ಜಯಂತಿಗೆ ಹೋಗದಂಥ ’ಸುಸಂದರ್ಭ’ ಒದಗಿಬಂದುದನ್ನು ವಿವರಿಸಿ ತನ್ನ ಅಸಹಿಷ್ಣು ರೀತಿ-ನೀತಿ ಬಹಿರಂಗ ಮಾಡಿಕೊಂಡಿದ್ದರು. ಅಷ್ಟ ಮಠದ ಕಾರ್ಯಕ್ರಮದಲ್ಲಿ- ’ಉಡುಪಿಯ ಕೃಷ್ಣ ದೇವಾಲಯವನ್ನು ಸಿದ್ದರಾಮಯ್ಯ ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಿಎಂಗೆ ಫೋನ್ ಮಾಡಿ ತಡೆಯೊಡ್ಡಿದ್ದೆ’ ಎಂದು ಹೇಳಿದ್ದರು. ಅಲ್ಲಿಗೆ ಪ್ರಮೋದ್ ತಾವಿದ್ದ ಪಕ್ಷದ ಸಿದ್ಧಾಂತಕ್ಕೆ ಯಾವದೇ ನಿಷ್ಠೆ-ನಿಯತ್ತುಗಳಿಲ್ಲದೆ ಕೇವಲ ಅಧಿಕಾರ ಲಾಲಸೆಗಾಗಿ ಮಾತ್ರ ಕಾಂಗ್ರೆಸ್‌ನಲ್ಲಿದ್ದ ಸಂಘ ಪರಿವಾರ ಮನಸ್ಥಿತಿಯವರು ಎಂದು ಸ್ವಯಂ ಸಾಬೀತುಪಡಿಸಿಕೊಂಡಿದ್ದರೆನ್ನಲಾಗಿದೆ.

ಇಂಥ ಕನಿಷ್ಟ ಬದ್ಧತೆಯಿಲ್ಲದ ದೊಡ್ಡ ದಂಡೇ ಕರಾವಳಿ ಕಾಂಗ್ರೆಸ್ ಪಕ್ಷದಲ್ಲಿದೆ. ಕಾರವಾರದ ಮಾಜಿ ಶಾಸಕ-ಗಣಿ ಹಗರಣದಲ್ಲಿ ಜೈಲಿಗೆ ಹೋಗಿಬಂದಿರುವ ಸತೀಶ್ ಸೈಲ್ ಮತ್ತು ಜನತಾ ದಳದ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಬಿಜೆಪಿ ಪ್ರವೇಶಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್-ಜನತಾದಳದ ಅಭ್ಯರ್ಥಿಯಾಗಿದ್ದ ಆನಂದ ಅಸ್ನೋಟಿಕರ್ ತಮ್ಮ ಬಿಜೆಪಿ-ಸಂಘಪರಿವಾರದ ಎದುರಾಳಿ, ಶೂದ್ರ ವಿರೋಧಿ ಅನಂತಕುಮಾರ್ ಹೆಗಡೆ ಮತಾಂಧ ಮಸಲತ್ತುಗಾರನೆಂದು ನೇರಾನೇರ ಟೀಕಿಸಿದ್ದರು. ಆದರೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿದ ಮೊಟ್ಟಮೊದಲ ತಂಡದಲ್ಲಿದ್ದ ಆನಂದ ಅಲ್ಲಿ ಮಂತ್ರಿಯಾಗಿ, ಶಾಸಕ ಸ್ಥಾನದಿಂದಲೆ ಅನರ್ಹನಾಗಿ ಆ ಪಾರ್ಟಿಯಿಂದ ಹೊರಬಂದಿದ್ದರು. ಕಾಂಗ್ರೆಸ್ ಸೇರಲು ಆರ್.ವಿ.ದೇಶಪಾಂಡೆ ಬಿಡದಿದ್ದಾಗ ಜನತಾ ದಳಕ್ಕೆ ಹೋಗಿದ್ದರು. ಈಗ ಮತ್ತೆ ಬಿಜೆಪಿ ಸೇರಲು ಹವಣಿಸುತ್ತಿರುವ ಅಸ್ನೋಟಿಕರ್ ಬದ್ಧತೆಯೆ ಪ್ರಶ್ನಾರ್ಹವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

ಸತೀಶ್ ಸೈಲ್

ಮಾಜಿ ಶಾಸಕ ಸತೀಶ್ ಸೈಲ್ ದೈಹಿಕವಾಗಿ ಕಾಂಗ್ರೆಸ್‌ನಲ್ಲಿದ್ದರೂ ಮಾನಸಿಕವಾಗಿ ಬಿಜೆಪಿಯಲ್ಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್‌ರಿಗೆ ಟಿಕೆಟ್ ತಪ್ಪಿಸಿ ತಾನೆ ಬಿಜೆಪಿ ಶಾಸಕನಾಗುವ ಆಸೆಯಲ್ಲಿದ್ದಾರೆನ್ನಲಾಗಿದೆ. 2018ರ ಅಸೆಂಬ್ಲಿ ಚುನಾವಣಾ ಸಂದರ್ಭದಿಂದ ಗಣಿ ಲಾಬಿ ಮುಖಾಂತರ ಬಿಜೆಪಿ ಪ್ರವೇಶಿಸುವ ಎಲ್ಲ ತಂತ್ರಗಾರಿಕೆಯನ್ನೂ ಪ್ರಯೋಗಿಸುತ್ತಿದ್ದಾರೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಕೃಪಾಶೀರ್ವಾದದ ರೂಪಾಲಿ ನಾಯ್ಕ್ ಅಡ್ಡಗಾಲು ಹಾಕಿರುವುದು ಕಾರವಾರದಲ್ಲಿ ಬಹಿರಂಗ ರಹಸ್ಯ. ಬ್ರಾಹ್ಮಣರಿಗೂ ಮೀಸಲಾತಿ ಬೇಕೆನ್ನುವ ಮಂತ್ರಿ ಶಿವರಾಮ ಹೆಬ್ಬಾರ್, ಕಾಂಗ್ರೆಸ್‌ನಲ್ಲಿದ್ದಾಗ ಸಂಘ ತತ್ವ ಪರಿಪಾಲಕರಾಗಿದ್ದರು.

ಬಾಂಬೈ ಬಾಯ್ಸ್‌ಗೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡುವುದಿಲ್ಲ ಎನ್ನಲಾಗಿರುವ ಹಿನ್ನೆಲೆಯಲ್ಲಿ ಹೆಬ್ಬಾರ್ ಚಿತ್ತ ಕಾಂಗ್ರೆಸ್‌ನತ್ತ ಹರಿದಿದೆ ಎನ್ನಲಾಗುತ್ತಿದೆ. ಹೆಬ್ಬಾರ್ ಕಾಂಗ್ರೆಸ್‌ಗೆ ಬಂದರೆ ಬಿಜೆಪಿಗೇ ಲಾಭವೆಂದು ನಿಷ್ಠಾವಂತ ಕಾಂಗ್ರೆಸ್ಸಿಗರು ಹೇಳುತ್ತಾರೆ. ಪಕ್ಷಾಂತರ ಮತ್ತು ಎಂಟಿ ಇನ್‌ಕಂಬೆನ್ಸ್‌ನಿಂದ ಜನರ ತಾತ್ಸಾರಕ್ಕೆ ತುತ್ತಾಗಿರುವ ಹೆಬ್ಬಾರ್‌ಗೆ ಆನಂದ್ ಅಸ್ನೋಟಿಕರ್ ಪರಿಸ್ಥಿತಿ ಬಂದರೆ ಅಚ್ಚರಿ ಇಲ್ಲವೆನ್ನಲಾಗುತ್ತಿದೆ. ಹಳಿಯಾಳದ ಮಾಜಿ ಎಮ್ಮೆಲ್ಸಿ ಶ್ರೀಕಾಂತ ಘೋಟನೇಕರ್ ಬಿಜೆಪಿ ಮೇಲೆ ಕಣ್ಣಿಟ್ಟು ’ಶಿವಾಜಿ ಮಹಾರಾಜ್ ಕಿ ಜೈ’ ಎನ್ನುತ್ತಿದ್ದಾರೆ. ಮರಾಠರು ಹೆಚ್ಚಿರುವ ಹಳಿಯಾಳದಲ್ಲಿ ಕೇಸರಿ ಹವಾ ಬೀಸುತ್ತಿರುವುದನ್ನು ಅರಿತಿರುವ ಘೋಟನೇಕರ್ ಪರೋಕ್ಷವಾಗಿ ಕೇಸರಿ ಅಭಿಯಾನಕ್ಕೆ ಅನುವು ಮಾಡಿ ಕೊಡುತ್ತ ಮುಂದೊಂದು ದಿನ ಅದರ ಲಾಭ ತನಗೆ ಅಥವಾ ತನ್ನ ಮಗನಿಗೆ ದಕ್ಕುವ ದೂ(ದು)ರಾಲೋಚನೆ ನಡೆಸಿದ್ದಾರೆಂಬ ಚರ್ಚೆಗಳು ನಡೆದಿದೆ.

ಒಂದು ಗಮನಾರ್ಹ ಅಂಶವೆಂದರೆ ಬಿಜೆಪಿಗೆ ಹೋಗುವವರು ರಸಭರಿತ ಕಬ್ಬಾಗಿ ಹೋಗುತ್ತಾರೆ; ರಸ ಹಿಂಡಿದ ಜಲ್ಲೆಯಾಗಿ ಹೊರಬರುತ್ತಿದ್ದಾರೆ. ಬಿಜೆಪಿಯಲ್ಲಿ ಇರುವಷ್ಟು ದಿನ ಸಂಘ ಸೂತ್ರಧಾರರ ಆಜ್ಞಾನುಧಾರಿಗಳಾಗಿ ತಮ್ಮದೇ ಅಸ್ತಿತ್ವಕ್ಕೆ ಮುಳುವಾಗುವಷ್ಟು ಹಿಂದುತ್ವ ಮತ್ತು ಮತೋನ್ಮತ್ತ ಮಸಲತ್ತು ಮಾಡುತ್ತ ಭಸ್ಮಾಸುರರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸಮಾಜದ ನೆಮ್ಮದಿಗೂ ಭಂಗ ತರುತ್ತಿರುವುದು ದುರಂತವೆಂದು ಪ್ರಜ್ಞಾವಂತರು ಕಳವಳ ಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...