Homeಕರ್ನಾಟಕಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

ಪಕ್ಷಾಂತರಗಳು: ಕಾಂಗ್ರೆಸ್ ಪಕ್ಷದವರಲ್ಲಿ ಪರಿಹಾರವಿದೆಯೇ?

- Advertisement -
- Advertisement -

ಉಡುಪಿಯ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದರು. ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಏಕೆಂದರೆ ಅವರು ಬಿಜೆಪಿ ಸೇರುತ್ತಾರೆಂಬ ಮಾತು ಈಗಿನದ್ದಲ್ಲ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ ಅವರು, ಬಿಜೆಪಿಗೆ ಸೇರಿ 2018ರ ಚುನಾವಣೆಯಲ್ಲಿ ಆ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತಿತ್ತು. ಆ ವಿಚಾರ ಚರ್ಚೆಗೆ ಬಂದಾಗ ಪ್ರಮೋದ್ ಅಷ್ಟು ಗಟ್ಟಿಯಾಗಿ ಎಂದೂ ನಿರಾಕರಿಸಿರಲಿಲ್ಲ. ಅಂತಿಮವಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಸೋತರು. 2019ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ನ ಪ್ರಮೋದ್ ಜೆಡಿಎಸ್‌ಗೆ ಹೋಗಿ, ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದರು; ಸೋತರು. ಆಗಲೂ ಚುನಾವಣೆ ಮುಗಿದ ನಂತರ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದಿದ್ದರು. ಕಾಂಗ್ರೆಸ್‌ನಲ್ಲೇ ’ಇದ್ದರು’. ಆ ನಂತರವೂ ’ಮುಂದಿನ ಚುನಾವಣೆಗೆ ಮುಂಚೆ ಬಿಜೆಪಿಗೆ ಹೋಗುತ್ತಾರೆ; ಈ ಸಾರಿ ಕಾಪುವಿನಿಂದ ಸ್ಪರ್ಧೆಯಂತೆ; ಲೋಕಸಭೆಗೆ ಅವರೇ ಸ್ಪರ್ಧಿಯಂತೆ ಇತ್ಯಾದಿ’ ಮಾತುಗಳು ಕೇಳಿಬರುತ್ತಲೇ ಇದ್ದವು. ಅಷ್ಟರಮಟ್ಟಿಗೆ ಅವರ ಕಾಂಗ್ರೆಸ್ ನಿಷ್ಠೆ ಎಂದೂ ಸಂಶಯಾತೀತ ಆಗಿರಲಿಲ್ಲ. ಇದೇ ಪ್ರಮೋದ್ 2018ರ ಚುನಾವಣೆಯಲ್ಲಿ ಉಡುಪಿಯಲ್ಲಿ ಪ್ರಚಾರಕ್ಕೆ ತನ್ನ ಜೊತೆ ಬರಬೇಡಿರಿ ಎಂದು ಮುಸ್ಲಿಮರಿಗೆ
ಹೇಳಿದ್ದರೆನ್ನಲಾದ ಮಾತು ಸುದ್ದಿಯಾಗಿತ್ತು.

ಕಾಂಗ್ರೆಸ್ ಸಂಘಟನೆಗೆ ಅಥವಾ ಸಿದ್ಧಾಂತಕ್ಕೆ ಅವರು ನಿಷ್ಠರಾಗಿದ್ದರೆನ್ನಲು ಯಾವ ಆಧಾರಗಳೂ ಇರಲಿಲ್ಲ.
ಕಾಂಗ್ರೆಸ್‌ಗೆ ಅಂತಹ ಸಿದ್ಧಾಂತ ಇದೆಯಾ ಎಂದು ಯಾರಾದರೂ ಕೇಳಬಹುದು. ಏಕೆಂದರೆ ಮೇಲೆ ಹೇಳಿದ ಅಷ್ಟೆಲ್ಲಾ ನಡೆದರೂ ಪ್ರಮೋದ್ ಮಧ್ವರಾಜ್‌ರು ತಾವಾಗಿಯೇ ಹೋಗುವತನಕ ಕಾಂಗ್ರೆಸ್ ಪಕ್ಷವು ಅವರ ಮೇಲೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಶಿಸ್ತು ಕ್ರಮ ಹೋಗಲಿ, ಅವರಿಗೆ ಪರ್ಯಾಯವಾಗಿ ಕ್ಷೇತ್ರದಲ್ಲಿ ಇನ್ನೊಬ್ಬ ಅಭ್ಯರ್ಥಿಯನ್ನು ಮುಂದೆ ತರುವುದನ್ನೂ ಮಾಡಲಿಲ್ಲ. ಮೊದಲಿಗೆ ಕ್ಷೇತ್ರಕ್ಕೊಬ್ಬರು ಗೆಲ್ಲುವ ಅಭ್ಯರ್ಥಿಯನ್ನು ಹುಟ್ಟಿ ಹಾಕುವ ಯೋಜನೆಯೂ ಕಾಂಗ್ರೆಸ್‌ಗೆ ಇರುವುದಿಲ್ಲ; ಎರಡನೆಯದಾಗಿ, ಆ ಕ್ಷೇತ್ರದಲ್ಲಿರುವ ಹಾಲಿ ನಾಯಕ ಎಷ್ಟೇ ಪಕ್ಷ ವಿರೋಧಿಯಾಗಿದ್ದರೂ ಅಲ್ಲಿ ಬದಲಿ ಪ್ರಯತ್ನಕ್ಕೆ ಆಸ್ಪದ ಕೊಟ್ಟರೆ ಈತ ಕೋಪಿಸಿಕೊಂಡು ಪಕ್ಷ ಬಿಟ್ಟುಬಿಡಬಹುದು ಎಂಬ ಆತಂಕವನ್ನೂ ನಿವಾರಿಸಿಕೊಳ್ಳುವುದಿಲ್ಲ.

ಇದು ಕಾಂಗ್ರೆಸ್ ಪಕ್ಷಕ್ಕೆ ಅಂಟಿರುವ ರೋಗದ ಒಂದು ಲಕ್ಷಣ ಅಷ್ಟೇ. ಇಲ್ಲದಿದ್ದರೆ ಸಾಲುಸಾಲಾಗಿ ಆ ಪಕ್ಷದಿಂದ ಹತ್ತಾರು ಶಾಸಕರು (ಅವರಲ್ಲಿ ಹಾಲಿ ಸಚಿವರಾಗಿದ್ದ ಎಂ.ಟಿ.ಬಿ.ನಾಗರಾಜ್ ಸಹಾ ಇದ್ದರು) ಬಿಜೆಪಿಗೆ ಹೋಗುತ್ತಿರಲಿಲ್ಲ. ಇನ್ನೂ ತಮಾಷೆಯೆಂದರೆ ರಾಜೀನಾಮೆ ಕೊಡಲು ರಾಜಭವನಕ್ಕೆ ಹೋಗಿದ್ದವರಲ್ಲಿ ಒಬ್ಬರಾದ ರಾಮಲಿಂಗಾರೆಡ್ಡಿಯವರು ಈಗ ಕಾಂಗ್ರೆಸ್‌ನ ರಾಜ್ಯ ಕಾರ್ಯಾಧ್ಯಕ್ಷರಲ್ಲಿ ಒಬ್ಬರು!

ಎಲ್ಲಾ ಸೆಕ್ಯುಲರ್ ಮತಗಳೂ ಕಾಂಗ್ರೆಸ್‌ಗೆ ಹೋಗಬೇಕು; ತಪ್ಪಬಾರದು ಎಂದು ಹಲವರು (ಕಾಂಗ್ರೆಸ್‌ನಲ್ಲಿ ಎಂದೂ ಇರದವರೂ ಸೇರಿ) ಬಲವಾಗಿ ಪ್ರತಿಪಾದಿಸುತ್ತಾರೆ. ಅವರ ಮಟ್ಟಿಗೆ ಅದು ಜೀವನ್ಮರಣದ ಪ್ರಶ್ನೆ. ಆದರೆ ಈ ಕಾಂಗ್ರೆಸ್‌ಗೆ ಹಾಕಿದ ’ಸೆಕ್ಯುಲರ್ ಮತ’ವು (ಅಂಥದ್ದೊಂದು ಇದೆಯಾ ಎಂಬ ಅನುಮಾನವಿದೆ) ’ಸೆಕ್ಯುಲರ್’ ಶಾಸಕನನ್ನೇ ಆಯ್ಕೆ ಮಾಡುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಹೀಗೇಕೆ? ಹೀಗಿದ್ದೂ ಕಾಂಗ್ರೆಸ್ ಪಕ್ಷವು ತನ್ನ ಸಿದ್ಧಾಂತವೆಂದು ಹೇಳಿಕೊಳ್ಳುವ ವಿಚಾರಗಳಿಗೆ ಬದ್ಧವಾಗಿರುವವರನ್ನು ಏಕೆ ಗುರುತಿಸಿ ಬೆಳೆಸುವುದಿಲ್ಲ? ಏಕೆಂದರೆ ಆ ಸಿದ್ಧಾಂತದ ಕುರಿತು ನಾಯಕತ್ವ ವಹಿಸಿರುವ ಹೆಚ್ಚಿನವರಿಗೆ ಸಂಪೂರ್ಣ ವಿಶ್ವಾಸವಿಲ್ಲ. ಒಂದು ವೇಳೆ ಇದ್ದರೂ, ಇದು ಈ ಹೊತ್ತಿನಲ್ಲಿ ಬಲ ಹೊಂದಿಲ್ಲ ಎಂಬ ಭಯ ಅವರಿಗಿದೆ. ಅಷ್ಟೇ ಅಲ್ಲದೇ, ಕೋಮುವಾದಿ ಧ್ರುವೀಕರಣಕ್ಕೆ ಕೊಡಬೇಕಾದ ಪ್ರತಿಮದ್ದು ಯಾವುದು ಎಂಬುದರ ಕುರಿತು ಅವರಿಗೆ ಗೊತ್ತೇ ಇದ್ದಂತಿಲ್ಲ. ಹಾಗಿದ್ದರೂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ರಂತಹವರು ತಮ್ಮ ಕರ್ತವ್ಯವೆಂದು ಭಾವಿಸಿ, ಮುಂದೊಂದು ದಿನ ’ಜನರೇ ಅರ್ಥ ಮಾಡಿಕೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿ ಗಟ್ಟಿದನಿಯಲ್ಲಿ ಮತೀಯ ರಾಜಕಾರಣದ ವಿರುದ್ಧ ಮಾತಾಡುತ್ತಿದ್ದಾರೆಂಬುದು ನಿಜ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಅದನ್ನು – ಅಂದರೆ ಸೆಕ್ಯುಲರ್ ರಾಜಕಾರಣವನ್ನು – ಗೆಲ್ಲಿಸಲು ರಾಜ್ಯದ ಎಲ್ಲೆಡೆಯೂ ಸಲ್ಲಬಹುದಾದ ವೈಚಾರಿಕ, ಸಂಘಟನಾತ್ಮಕ ಹಾಗೂ ರಾಜಕೀಯ ಪ್ರತಿರೋಧವನ್ನು ಕಟ್ಟುವ ಪ್ರಯತ್ನ ಇಲ್ಲ. ಯಾವ ಪಕ್ಷವು ತಾನು ಸೋತ 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರಿಗಿಂತ ಹೆಚ್ಚು – ಶೇ.35ಕ್ಕಿಂತ ಹೆಚ್ಚು – ಮತಗಳನ್ನು ಪಡೆದುಕೊಂಡಿತ್ತೋ, ಆ ಪಕ್ಷದ ಸ್ಥಿತಿ ಇದು. ಅಂದರೆ ಈ ರಾಜ್ಯದ ಜನರು ಕಾಂಗ್ರೆಸ್‌ಅನ್ನು ಪೂರ್ಣವಾಗಿ ತಿರಸ್ಕರಿಸಿಲ್ಲ. ಯಾವ ದಕ್ಷಿಣ ಕನ್ನಡದಲ್ಲಿ ಅತ್ಯಂತ ಹೆಚ್ಚು ಮತೀಯ ಧ್ರುವೀಕರಣ ಇದೆಯೆಂದು ಹೇಳಲಾಗುತ್ತಿದೆಯೋ, ಅಲ್ಲೇ 2013ರಲ್ಲಿ ಒಂದು ಕ್ಷೇತ್ರ ಬಿಟ್ಟರೆ (ಅದೂ ಕಡಿಮೆ ಅಂತರದಲ್ಲಿ ಸೋತಿದ್ದು) ಮಿಕ್ಕೆಲ್ಲಾ ಕಡೆ ಗೆದ್ದಿದ್ದ ಪಕ್ಷವಿದು. ಅದು ಹೇಗೆ ಸಾಧ್ಯವಾಯಿತು? ಕರ್ನಾಟಕದ ಇತರ ಭಾಗಗಳಲ್ಲಾದರೂ ಕೆಜೆಪಿ ಅಥವಾ ಬಿಎಸ್‌ಆರ್ ಪಕ್ಷಗಳು ಬಿಜೆಪಿಯ ಮತಗಳನ್ನು ಒಡೆದವು ಎಂದು ಹೇಳಬಹುದು. ಕರಾವಳಿಯಲ್ಲಿ ಅದೂ ಆಗಿರಲಿಲ್ಲ.

ತಾನು ತನ್ನದೆಂದು ಹೇಳಿಕೊಳ್ಳುವ ಸೆಕ್ಯುಲರ್ ರಾಜಕಾರಣದ ಕುರಿತು (ಒಂದಷ್ಟು ಜನರಿಗೆ ನಿಷ್ಠೆಯಿದೆ ಎನ್ನುವುದು ಹೌದಾದರೂ) ತನಗೇ ಖಚಿತ ಭರವಸೆಯಿರದ ಪಕ್ಷವು ಕನಿಷ್ಠ ಅಂಕಿ-ಅಂಶ ಅಥವಾ ಹಿಂದಿನ ಉದಾಹರಣೆಗಳನ್ನೂ ಗಮನಿಸಿಯಾದರೂ ಧೈರ್ಯ ತಂದುಕೊಳ್ಳುವುದಿಲ್ಲ. ಅದನ್ನು ಹೊರತುಪಡಿಸಿ ಪಕ್ಷದ ಗೆಲುವಿನಲ್ಲೇ ತಮ್ಮ ಗೆಲುವೂ ಇದೆ ಎಂಬ ಸ್ವಾರ್ಥದಿಂದಲಾದರೂ ಏನಾದರೂ ಮಾಡಬೇಕಲ್ಲವೇ? ಏಕೆಂದರೆ ಈ ಸದ್ಯ ಯಾರು ಮುಂದಿನ ಸಿಎಂ ಅಭ್ಯರ್ಥಿ ಎಂಬ ಘೋಷಣೆ (ಅಥವಾ ಕನಿಷ್ಠ ಕಾಂಗ್ರೆಸ್ ಹೈಕಮಾಂಡ್‌ನಿಂದ ಕಿವಿಯಲ್ಲಿ ಉಸುರುವಿಕೆ) ಆಗುತ್ತದೆ ಎಂಬುದರ ಮೇಲೆಯೇ ಕೆಲಸ ಮಾಡಬೇಕೇ ಇಲ್ಲವೇ ಎಂಬುದನ್ನು ತೀರ್ಮಾನಿಸುತ್ತೇವೆ ಅಥವಾ ತೀರ್ಮಾನವಾಗುತ್ತದೆ ಎಂದು ಕಾಂಗ್ರೆಸ್‌ನ ಶೇ.75 ಭಾಗದಷ್ಟು ನಾಯಕರು ಭಾವಿಸಿಕೊಂಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಕರ್ನಾಟಕ ವಿಧಾನಸಭೆಯ ಚುನಾವಣೆಯಿದೆ. ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಬಹಳ ಕಷ್ಟ ಮತ್ತು ಅಲ್ಲಿ ತಮಗೆ ಸೂಕ್ತ ಅಭ್ಯರ್ಥಿಯೇ ಇಲ್ಲ ಎಂದು ಕಾಂಗ್ರೆಸ್‌ನ ಬಹುತೇಕ ದೊಡ್ಡ ನಾಯಕರು ಖಾಸಗಿಯಾಗಿ ಹೇಳುತ್ತಾರೆ. ಗೆಲ್ಲುವ ಸಾಧ್ಯತೆಯಿರುವ 125 ಕ್ಷೇತ್ರಗಳಲ್ಲಿ ಗಂಭೀರ ಪ್ರಯತ್ನ ಪಡುವುದರ ಜೊತೆಗೆ, ಉಳಿದ ಕ್ಷೇತ್ರಗಳಲ್ಲಿ ಗಂಭೀರ ಪ್ರತಿರೋಧ ಒಡ್ಡಬೇಕು; ರಾಜ್ಯಮಟ್ಟದಲ್ಲಿ ಜನರಿಗೆ ಅಹುದಹುದೆನಿಸುವ ರೀತಿಯ ರಾಜಕೀಯ ಒಲವು ಬೆಳೆಸಬೇಕು. ಆಗ ಮಾತ್ರ ಅದು ಗೆಲ್ಲಲು ಸಾಧ್ಯ. ಆ ರಾಜಕೀಯ ಕಥನ ಕಟ್ಟಲು ಸೂಕ್ತವಾದ ತರ್ಕ ಹಾಗೂ ರಾಜಕೀಯ ಮಥನದ ಅಗತ್ಯವಿದೆ.

ಇಂತಹ ಯಾವುದೂ ನಡೆಯದ ಪಕ್ಷದಲ್ಲಿ ಅವಕಾಶವಾದಿಗಳು, ಪಕ್ಷಾಂತರ ಪ್ರವೀಣರು, ಕಡುಭ್ರಷ್ಟರು, ಹೇಗೋ ಮಾಡಿ ಗೆಲ್ಲುವವರು, ಪಕ್ಷ ಮುಳುಗುತ್ತಿರುವ ಸಂದರ್ಭದಲ್ಲೂ ಕತ್ತು ಕೊಯ್ಯಬಲ್ಲವರು ಇಂಥವರೆಲ್ಲರೂ ಇರುತ್ತಾರೆ. ಕಡೆಯ ಘಳಿಗೆಯಲ್ಲಿ ಅಂಥವರಲ್ಲಿ ಯಾರಿಗೋ ಟಿಕೆಟ್ ಸಹಾ ಕೊಡುತ್ತಾರೆ. ಏಕೆಂದರೆ
ಅಂಥವರಿಗೇ ಗೆಲುವಿನ ಸಾಧ್ಯತೆ (Winnability) ಹೆಚ್ಚು ಎಂಬ ಅತಾರ್ಕಿಕ ನಂಬುಗೆ ರಾಜಕಾರಣದಲ್ಲಿದೆ. ಸಿದ್ಧಾಂತ ಹಾಳಾಗಲಿ, ಪಕ್ಷಕ್ಕಾಗಿ ದುಡಿಯುವವರಿಗೆ ಟಿಕೆಟ್ ಎಂಬ ನಿಯಮವೂ ಇಲ್ಲದಾದಾಗ ಬೇರೆ ಪಕ್ಷಗಳಿಂದ ಬರುವವರಿಗೂ ಸಲೀಸಾಗಿ ಟಿಕೆಟ್ ನೀಡಲಾಗುತ್ತದೆ. ಹೀಗಿದ್ದಾಗ ಪಕ್ಷ ಸಂಘಟನೆ ಬಲವಾಗುವುದಾಗಲೀ, ಕರ್ನಾಟಕದ ಜನರು ಇಂದೂ ತಿರಸ್ಕರಿಸದ ಸೆಕ್ಯುಲರ್ ರಾಜಕಾರಣವನ್ನು ಗಟ್ಟಿಗೊಳಿಸುವುದಾಗಲೀ ಹೇಗೆ ಸಾಧ್ಯ? ಇದು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ. ಜೆಡಿಎಸ್‌ನಲ್ಲಿ ಕುಟುಂಬದ ಪಾರುಪತ್ಯದ ಜೊತೆಗೆ ಇಂತಹುದೇ ರಾಜಕಾರಣ ನಡೆಯುತ್ತದೆ.

ಇನ್ನು ಅತ್ಯಂತ ಕಡುಭ್ರಷ್ಟರು ಇರುವ ಪಕ್ಷವಾದ ಬಿಜೆಪಿಯು ದುಷ್ಟ ಸಿದ್ಧಾಂತವೊಂದನ್ನು ಹೊಂದಿದ್ದು ಅದಕ್ಕೆ ನಿಷ್ಠವಾಗಿದೆ. ಅದೊಂದಕ್ಕೆ ಪರಮ ನೀಚರು, ಲಂಪಟರು, ಭ್ರಷ್ಟಾತಿಭ್ರಷ್ಟರು ಯಾರೇ ಬಂದರೂ ಅಲ್ಲಿ ಸ್ವಾಗತವಿರುತ್ತದೆ. ಯಾವ ಸಿದ್ಧಾಂತವೂ ಇಲ್ಲದ, ಹಣ ಮಾಡುವುದು ಮತ್ತು ರಾಜ್ಯವನ್ನು ಎಲ್ಲಾ ರೀತಿಯಲ್ಲೂ ಕಲುಷಿತಗೊಳಿಸುವುದರಲ್ಲಿ ಪರಿಣಿತಿ ಸಾಧಿಸಿರುವ ಯಾರೇ ಇದ್ದರೂ, ಮತೀಯ ರಾಜಕಾರಣದ ಅಜೆಂಡಾಕ್ಕೆ ವಿರೋಧ ವ್ಯಕ್ತಪಡಿಸದೇ ಇದ್ದರೆ ಸಾಕು; ಗೆಲ್ಲುವ ಸಾಧ್ಯತೆ ಇದ್ದರೆ ಕರೆದುಕೊಳ್ಳುತ್ತಾರೆ. ಹೀಗಾಗಿ ಪ್ರಮೋದ್ ಮಧ್ವರಾಜ್‌ರಂತಹವರ ಪಕ್ಷಾಂತರವು ಯಾವ ರೀತಿಯಲ್ಲೂ ಆಶ್ಚರ್ಯಕರವಲ್ಲ. ಪ್ರಶ್ನೆಯಿರುವುದು ಕರ್ನಾಟಕದ ಪ್ರಜ್ಞಾವಂತ ಮತದಾರರು ಈ ಪರಿಸ್ಥಿತಿಯನ್ನು ನಿಭಾಯಿಸಲು ಯಾವ ದಾರಿಯನ್ನು ಹುಡುಕಿಕೊಳ್ಳಬೇಕೆಂಬುದರಲ್ಲಿ.

ಅಂತಿಮವಾಗಿ ಷರಾ ಹೀಗೆ ಬರೆಯಬಹುದೇನೋ: ಈ ಪ್ರಜಾತಂತ್ರವು ಬಿಜೆಪಿಯ ಕಾರಣಕ್ಕೆ ಅಪಾಯದಲ್ಲಿದೆ; ಆದರೆ ಕಾಂಗ್ರೆಸ್ ಒಂದೇ ಅದನ್ನು ರಕ್ಷಿಸಲಾರದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕರಾಳ ದೇಶದ್ರೋಹ ಕಾನೂನು ಕೊನೆಗೊಳ್ಳಬಹುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪ್ಪಿನಂಗಡಿ: ಸೂರ್ಯ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಚಿಕಿತ್ಸೆಗೆಂದು ತೆರಳಿ ಶವವಾಗಿ ಮರಳಿದ ಬೀದಿಬದಿ ವ್ಯಾಪಾರಿ!

ಖಾಸಗಿ ಆಸ್ಪತ್ರೆಗಳ ಹಣದ ದಾಹ ಮತ್ತು ವೈದ್ಯಕೀಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯಕ್ಕೆ ಮತ್ತೊಂದು ಬಡ ಜೀವ ಬಲಿಯಾಗಿದೆ. ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮೊಹಮ್ಮದ್ ಶರೀಫ್ (35) ಎಂಬ ಬೀದಿ ಬದಿ...

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...