ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ‘ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ’ಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ. ಅಂಶುಮಂತ್ ಅವರು ಪ್ರಕಟಿಸಿದರು.
ಶಿವಮೊಗ್ಗದಲ್ಲಿ ಉದ್ಘಾಟನೆಗೊಂಡು ಶಿರಸಿ ಮತ್ತು ಭಟ್ಕಳದ ಮೂಲಕ ಸಂಚರಿಸಿ, ಇಂದು (ಎರಡನೇ ದಿನ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ‘ಎದ್ದೇಳು ಕರ್ನಾಟಕ’ ಮತ್ತು ‘ಎಸ್ಐಆರ್ ವಿರೋಧಿ ಒಕ್ಕೂಟ’ದ ಕಾರ್ಯಕರ್ತರ ಜನಜಾಗೃತಿ ಜಾಥಾವನ್ನು ಆತ್ಮೀಯವಾಗಿ ಸ್ವಾಗತಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅಂಶುಮಂತ್ ಬೇರೆ ಬೇರೆ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ಆತಂಕವಿದೆ. ಕರ್ನಾಟಕದಲ್ಲಿ ಇಂತಹ ಯಾವುದೇ ಲೋಪಗಳು ಮರುಕಳಿಸದಂತೆ ನಾವು ಎಚ್ಚರ ವಹಿಸಬೇಕಾಗಿದೆ, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರ (BLA) ಜವಾಬ್ದಾರಿ ಅತ್ಯಂತ ಹೆಚ್ಚಾಗಿದೆ. ಸಂವಿಧಾನ ನಮಗೆ ನೀಡಿರುವ ಪವಿತ್ರವಾದ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು.
ಭಾರತೀಯ ಚುನಾವಣಾ ಆಯೋಗವು ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಅಥವಾ ಸರ್ಕಾರದ ಪರವಾಗಿ ಕೆಲಸ ಮಾಡಬಾರದು. ಅದು ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಎಸ್ಐಆರ್ ಪ್ರಕ್ರಿಯೆ ನಡೆಯುವಾಗ ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ರಕ್ಷಿಸಬೇಕು. ಅಗತ್ಯ ದಾಖಲೆಗಳನ್ನು ಕ್ರೂಢೀಕರಿಸಿ ಸಲ್ಲಿಸಲು ಸಾರ್ವಜನಿಕರಿಗೆ ಹೆಚ್ಚಿನ ಕಾಲಾವಕಾಶವನ್ನು ಆಯೋಗ ನೀಡಬೇಕು, “ಎಸ್ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ರಾಜ್ಯದ ಯಾವೊಬ್ಬ ನಾಗರಿಕನೂ ತನ್ನ ಮತದ ಹಕ್ಕನ್ನು ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಗಾಗಿ, ಮತದಾರರ ಹಕ್ಕುಗಳ ರಕ್ಷಣೆಗಾಗಿ ನಡೆಯುವ ಈ ಹೋರಾಟದ ಪ್ರತಿ ಹಂತದಲ್ಲೂ ಕಾಂಗ್ರೆಸ್ ಪಕ್ಷವು ನಿಮ್ಮ ಜೊತೆಗೆ ದೃಢವಾಗಿ ನಿಲ್ಲಲಿದೆ.” ಎಂದು ತಿಳಿಸಿದರು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ವಕೀಲರಾದ ಸುಧೀರ್ ಕುಮಾರ್ ಮುರೊಳ್ಳಿ, “ಸ್ವಾತಂತ್ರ್ಯದ ನಂತರ ದೇಶದ ಪ್ರತಿ ಪ್ರಜೆಯೂ ಮತದಾನದಲ್ಲಿ ಭಾಗವಹಿಸಬೇಕು ಎಂಬುದು ಸಂವಿಧಾನದ ಆಶಯವಾಗಿತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆಯು ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ಅರ್ಹರನ್ನು ಮತಪಟ್ಟಿಯಿಂದ ಹೊರಗಿಟ್ಟು, ಅವರನ್ನು ‘ಅನುಮಾನಾಸ್ಪದ ಮತದಾರರು’ ಎಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಭಾರತೀಯನಾದ ನಾನು ಭಾರತೀಯನೇ ಎಂದು ಸಾಬೀತುಪಡಿಸಿಕೊಳ್ಳಬೇಕಾದ ದುಸ್ಥಿತಿಗೆ ನಾಗರಿಕರನ್ನು ತಳ್ಳಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಕಾರ್ಯವೈಖರಿ ನಿಸ್ಪಕ್ಷಪಾತವಾಗಿಲ್ಲ ಎಂಬ ಆರೋಪಗಳು ನಾಗರಿಕ ಸಮಾಜದಿಂದ ಕೇಳಿಬರುತ್ತಿವೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಎಸ್ಐಆರ್ (SIR) ಎಂಬುದು ಜನತಂತ್ರದ ಮೇಲಿನ ದಾಳಿಯಾಗಿದ್ದು, ಇದನ್ನು ಪಕ್ಷ, ಸಂಘಟನೆಗಳ ಭೇದ ಮರೆತು ವಿರೋಧಿಸಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ಈ ಜಾಥಾದ ಉದ್ದೇಶವು ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸುವುದೇ ಆಗಿದೆ” ಎಂದು ಕರೆ ನೀಡಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿಂದ ಇದ್ದ ಹಲವು ಸರ್ಕಾರಗಳು ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಲಭ್ಯವಾಗಬೇಕು ಆ ಮುಖೇನ ಹೆಚ್ಚೆಚ್ಚು ಮತದಾನದ ಮೂಲಕ ಒಂದು ಚುನಾಯಿತ ಸರ್ಕಾರ ಆಯ್ಕೆಯಾಗಬೇಕು ಎಂದು ಹೇಳುತ್ತಿದ್ದವು. ಆದರೆ ಈಗಿನ ಸರ್ಕಾರ ಯಾರು ಮತದಾರರಾಗಿ ಇರಬೇಕು ಎಂದು ನಿರ್ಧರಿಸಿ ಸರ್ಕಾರ ಮತದಾರರನ್ನ ಆಯ್ಕೆ ಮಾಡುತ್ತಿದೆ. ಈ SIR ಪ್ರಕ್ರಿಯೆಯಲ್ಲಿ ಮತದಾರರು ಹಲವು ರೀತಿಯ ದಾಖಲೆಗಳನ್ನು ನೀಡಬೇಕು ಎಂದು ಹೇಳುತ್ತಿದೆ ಆದರೆ ಈ ಬಡವರು ಅಲ್ಪಸಂಖ್ಯಾತರು, ಆದಿವಾಸಿಗಳ ಬಳಿ ಇವರು ಹೇಳುವ ಯಾವ ದಾಖಲೆಗಳು ಇರತ್ತೆ? ಆಗ ಇವರನ್ನು ಮತದಾನ ದಿಂದ ಹೊರಗಿಟ್ಟು ಇವರ ಪರವಾದವರು ಮಾತ್ರ ಈ ಹಕ್ಕಿನಲ್ಲಿ ಉಳಿಯುವಂತೆ ಮಾಡುತ್ತಾರೆ ಇದು ಅಕ್ಷಮ್ಯ ಮತ್ತು ಅಸಂವಿಧಾನಿಕ ಹಾಗಾಗಿ SIR ಅನ್ನು ಜಾರಿ ಮಾಡಲು ಬಿಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಪ್ರಗತಿಪರ ಚಿಂತಕ ಎಲ್ದೊ ಹೊನ್ನಕೂಡಿಗೆ ಕೇಂದ್ರ ಚುನಾವಣಾ ಆಯೋಗದ ನಡೆಯನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ‘ಎದ್ದೇಳು ಕರ್ನಾಟಕ’ ಮತ್ತು ‘ಎಸ್ಐಆರ್ ವಿರೋಧಿ ಒಕ್ಕೂಟ’ದ ಪ್ರಮುಖ ಪದಾಧಿಕಾರಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಜಾಥಾದ ನೇತೃತ್ವವನ್ನು ಸುರೇಶ್ ನಾಯ್ಕ್ ಮುನ್ನ ಕಡೂರು, ರಾಮು ಕೌಳಿ, ಸಂದೀಪ್ ಸುಮಂತ್ ರಾಜೀವ್ ಸರೋಜ ಮತ್ತು ಪವಿತ್ರ ವಹಿಸಿದ್ದರು.


