ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು.
ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್ನಿಂದ ಪ್ರಾರಂಭವಾದ ಜಾಥಾ ಮುನ್ಸಿಪಾಲಿಟಿ ಸರ್ಕಲ್, ಎಲ್ಐಸಿ ಸರ್ಕಲ್, ಅಂಬೇಡ್ಕರ್ ಭವನ, ವಾಂಬೆ ಕಾಲೋನಿ, ಇಲ್ಯಾಸ್ ಮಸೀದಿ ಏರಿಯಾಗಳಲ್ಲಿ ಸಾಗಿ ಪಂಕಾ ಮಸೀದಿ ಬಳಿ ಸಮಾಪ್ತಿಯಾಯಿತು.

ಮುನ್ಸಿಪಾಲಿಟಿ ಸರ್ಕಲ್ನಲ್ಲಿ ವಿವಿಧ ಜನಸಂಘಟನೆಗಳು, ವೆಲ್ಫೇರ್ ಪಕ್ಷ, ಕಾಂಗ್ರೆಸ್ ಪಕ್ಷಗಳ ಸಹಯೋಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಪಾಲ್ಗೊಂಡು ಜಾಥಾಗೆ ಶುಭ ಕೋರಿದರು. ಎಸ್ಐಆರ್ ಕುತಂತ್ರದ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ಕಾಂಗ್ರೆಸ್ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯಮಠ ಅವರು ಮಾತನಾಡಿ, ಎಸ್ಐಆರ್ ಮೂಲಕ ಜನರ ಮತಕಡಿತಗೊಳಿಸಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದರು. ನೊಬೆಲ್ ಪುರಸ್ಕೃತ ಅಮರ್ತ್ಯಸೇನ್ ಅವರ ಮತದಾನದ ಹಕ್ಕು ಕಿತ್ತುಕೊಳ್ಳಲು ನೋಡಿದರು. ದೇಶಕ್ಕಾಗಿ ಸೇವೆ ಸಲ್ಲಿಸಿರುವ ಯೋಧನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ ಎಂದರು.
ಜನರು ಎಸ್ಐಆರ್ ಬಗ್ಗೆ ಎಚ್ಚರಗೊಂಡು ಮತ ಹಕ್ಕು ಉಳಿಸಿಕೊಳ್ಳಿ. ಕಾರ್ಯಕರ್ಯರು, ಮುಖಂಡರು ಬೀದಿಗಿಳಿದು ಜನರ ಹಕ್ಕು ಉಳಿಸಲು ಪ್ರಯತ್ನಿಸಿ. ಎಸ್ಐಆರ್ ಮೂಲಕ ಅಂಬೇಡ್ಕರ್ ಅವರು ಕೊಟ್ಟ ಸಾಂವಿಧಾನಿಕ ಹಕ್ಕು ಮೊಟಕುಗೊಳಿಸುವುದು ಬಿಜೆಪಿಯ ಕುತಂತ್ರವಾಗಿದೆ. ನಮ್ಮರಾಜ್ಯದಲ್ಲಿ 91 ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಾಂಪ್ರಾದಯಿಕ ಮತ ಕಡಿಯಲು ತಂತ್ರ ರೂಪಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರ ಹೆಚ್ಎನ್ ನೀಲ್ ನಾಯಕ, ಎದ್ದೇಳು ಕರ್ನಾಟಕದ ಪವಿತ್ರಾ ಜಕ್ಕಪ್ಪನವರ್, ಬಿಎಸ್ ಬಾಬಾ ಖಾನ್, ಸ್ಥಳೀಯ ನಾಯಕ ಹಾಜಿ ಸಾಬ್ ದಂಡಿನ್, ವೆಲ್ಫೇರ್ ಪಾರ್ಟಿ ಮತ್ತು ಕಾಂಗ್ರೆಸ್ ಪಾರ್ಟಿಯ ಸ್ಥಳೀಯ ಮುಖಂಡರು ಹಾಗೂ ನೂರಾರು ಮಂದಿ ಸಾರ್ವಜನಿಕರು ಇದ್ದರು.
ಮುನ್ಸಿಪಾಲಿಟಿ ಸರ್ಕಲ್ನಲ್ಲಿ ಸಭಾ ಕಾರ್ಯಕ್ರಮದ ಬಳಿಕ, ಎಸ್ಐಆರ್ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜಾಥಾದಲ್ಲಿ ಪಾಲ್ಗೊಂಡರು. ಚುನಾವಣಾ ಆಯೋಗ, ಎಸ್ಐಆರ್ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಾಂಬೆ ಕಾಲೋನಿ, ಇಲ್ಯಾಸ್ ಮಸೀದಿ ಮತ್ತು ಪಂಕಾ ಮಸೀದಿ ಪ್ರದೇಶಗಳಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟದ ಪ್ರಮುಖರಾದ ಜಮಾಅತೆ ಇಸ್ಲಾಮಿ ಹಿಂದ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಯೂಸುಫ್ ಕನ್ನಿ, ಆರಿಫುಲ್ಲಾ ಖಾನ್, ಸರೋವರ್ ಬೆಂಕಿಕೆರೆ ಜಾಗೃತಿ ಭಾಷಣಗಳನ್ನು ಮಾಡಿದರು. ಜನರಲ್ಲಿ ಎಸ್ಐಆರ್ ಕುರಿತು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಕರಪತ್ರಗಳನ್ನು ಹಂಚಲಾಯಿತು.

ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ವಿಎಸ್ ಉಗ್ರಪ್ಪ ಅವರನ್ನು ಭೇಟಿಯಾದ ಜಾಥಾ ತಂಡ ಮಾತುಕತೆ ನಡೆಸಿತು.


