ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು ಹಾಗೂ ಕಾರ್ಯಕರ್ತರು, ಸಂಸದರ ಸಭೆಯಲ್ಲೇ ಎಸ್ಐಆರ್ ವಿರೋಧಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಅವರ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಹೋರಾಟಗಾರರು, ಎಸ್ಐಆರ್ ನೀತಿಯಿಂದ ದೇಶದ ನಾಗರಿಕರ ಮತದಾನದ ಹಕ್ಕಿಗೆ ಎದುರಾಗಿರುವ ಭೀತಿಯನ್ನು ಬಿಂಬಿಸುವ ಬ್ಯಾನರ್ಗಳನ್ನು ಪ್ರದರ್ಶಿಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದರು ಹಾಗೂ ಜಾಥಾದ ಬ್ಯಾನರ್ಗಳನ್ನು ಪ್ರದರ್ಶಿಸದಂತೆ ಬಿಗಿ ಬಂದೋಬಸ್ತ್ ಮಾಡಲು ಮುಂದಾದರು.
ಸರಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಸಭೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಎಸ್ಐಆರ್ನ ವಿರುದ್ಧ ಜಾಗೃತಿ ಕರಪತ್ರಗಳನ್ನು ಹಂಚಿದರು.
ಕೇಂದ್ರದ ಬಿಜೆಪಿ ಸರಕಾರವು ಚುನಾವಣಾ ಆಯೋಗವನ್ನು ಬಳಸಿಕೊಂಡು ಮತದಾರರ ಪಟ್ಟಿಯಿಂದ ಜೀವಂತವಾಗಿರುವ ಸಾರ್ವಜನಿಕರ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ ಮತ್ತು ಇದು ಬಿಜೆಪಿಗೆ ರಾಜಕೀಯ ಲಾಭ ಮಾಡಿಕೊಡುವ ತಂತ್ರ ಎಂದು ಹೋರಾಟಗಾರರು ಸಂಸದರ ಸಭೆಯಲ್ಲೇ ಸಾರ್ವಜನಿಕರ ಗಮನಕ್ಕೆ ತಂದರು.
ʼಯಾವುದೇ ಅಧಿಕಾರದ ಬಲ ಅಥವಾ ಪೊಲೀಸ್ ದಬ್ಬಾಳಿಕೆಯಿಂದ ನಮ್ಮ ಪ್ರಜಾಪ್ರಭುತ್ವದ ರಕ್ಷಣೆಯ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸಂಸದರ ಸಭೆಯಲ್ಲೇ ನಾವು ಕರಪತ್ರ ಹಂಚಿರುವುದು ಕೇವಲ ಮುನ್ಸೂಚನೆ ಅಷ್ಟೇ. ನಮ್ಮ ಹಕ್ಕನ್ನು ಕಸಿಯಲು ಬಂದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆʼ ಎಂದು ಕೆಎಲ್ ಅಶೋಕ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಶಿವಮೊಗ್ಗದ ಅಂಬೇಟ್ಕರ್ ಪ್ರತಿಮೆ ಬಳಿಯಿಂದ ಉದ್ಘಾಟನೆಗೊಂಡ ಜಾಥಾ ತ್ರಿವರ್ಣ ಧ್ವಜಗಳನ್ನು ಹಿಡಿದ ಕಾರ್ಯಕರ್ತರ ತಂಡದೊಂದಿಗೆ ಪ್ರಾರಂಭವಾಯಿತು 5ಜಿಲ್ಲೆಗಳಲ್ಲಿ ಸಂಚರಿಸಿ 20 ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ


