Homeಮುಖಪುಟ`ಬಡಿದು ಕೊಲ್ಲುವ’ ಸಂಸ್ಕøತಿಗೆ ಮುಖಾಮುಖಿಯಾಗಲು ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ, ಜಾಣಜಾಣೆಯರು!

`ಬಡಿದು ಕೊಲ್ಲುವ’ ಸಂಸ್ಕøತಿಗೆ ಮುಖಾಮುಖಿಯಾಗಲು ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ, ಜಾಣಜಾಣೆಯರು!

- Advertisement -
- Advertisement -

ನಾವು ಬಲು ಜಾಣರು. ದಡ್ಡರಂತೆ ನಟಿಸುವುದೂ ನಮ್ಮ ಆ ಜಾಣತನಗಳಲ್ಲಿ ಒಂದು. ದುರಂತ ಅಂದ್ರೆ, ಸದ್ಯದ ಸಂಕಟಗಳಿಂದ ಪಾರಾಗುವ ಇಂತಹ ನಿರಂತರ ನಟನೆಯಿಂದಾಗಿ ನಮ್ಮ ಜಾಣತನದ ಮಿತಿ ಹೆಡ್ಡತನದ ಚೌಕಟ್ಟಿಗೆ ಕುಸಿದು ಕುಳಿತಿದೆ. ವಿಚಾರಗಳನ್ನು ಅವುಗಳ ಆಕೃತಿ ಮೀರಿ, ದೂರಗಣ್ಣು ನೆಟ್ಟು ಕಾಣುವ ಕಲೆಯನ್ನು ಕಳೆದುಕೊಂಡಿದ್ದೇವೆ. ಯಾರಾದರು ಹೇ, ಎಂದರೆ ಓ ಎಂದು ಓಡುವುದೇ ನಮ್ಮ ಪರಂಪರೆಯಾಗುತ್ತಿದೆ. ಟೀಕೆ, ವಿಮರ್ಶೆ, ಒಳನೋಟ, ಊಹ್ಞೂಂ… ನಮ್ಮೊಳಗೆ ಯಾವುದೂ ಉಳಿದಿಲ್ಲ.
ಮೊನ್ನೆ ಬಹಳಷ್ಟು ದಿನಪತ್ರಿಕೆಗಳ ಸಮಗ್ರ ಒಂದು ಪುಟ ಆವರಿಸಿದ್ದ ಜಾಹೀರಾತು ಹೀಗೆ ಆಲೋಚಿಸುವಂತೆ ಮಾಡಿತು. ಅಷ್ಟಕ್ಕೂ ವಾಟ್ಸ್‍ಆಪ್ ಎಂಬ ಸೋಶಿಯಲ್ ಮೀಡಿಯಾ ಕೊಟ್ಟಿದ್ದ ಜಾಹೀರಾತಲ್ಲಿ ಇದ್ದದ್ದು, ತನ್ಮೂಲಕ ಕೆಲವರು ಹರಡಿಸುತ್ತಿರುವ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಜಾಗೃತರಾಗಿ ಅಂತ ಜನರಿಗೆ ಮಾಡಿಕೊಂಡಿದ್ದ ಮನವಿ. ಲಾಭವನ್ನಷ್ಟೆ ಅಡಿಪಾಯ ಆಗಿಸಿಕೊಂಡ ಇಂಥ ಸಂಸ್ಥೆಗಳ ಕಾಳಜಿ, ಕಳಕಳಿಗಳಲ್ಲಿ ಹೆಚ್ಚೇನು ಪ್ರಾಮಾಣಿಕತೆ ಇರದು. ಇದು ಗೊತ್ತಿರುವ ಸಂಗತಿ. ಈಗ ಆ ದಿಕ್ಕಿನತ್ತ ಚರ್ಚೆ ಅನಗತ್ಯ. ಆದರೆ ಆ ಸಂಸ್ಥೆ ಹೀಗೊಂದು ಜಾಹಿರಾತು ನೀಡುವುದು ಅನಿವಾರ್ಯವಾಗುವಂತೆ ಮಾಡಿದ ಸಂದರ್ಭ ಹಾಗೂ ಅದನ್ನು ನಾವು ಗ್ರಹಿಸಿ, ಪ್ರತಿಕ್ರಿಯಿಸುತ್ತಿರುವ ರೀತಿಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳಬೇಕಿದೆ.
ದೇಶ ಭಯಾತಂಕದ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಕಾಲಘಟ್ಟದಲ್ಲಿ ಜಾತಿ, ಧರ್ಮ, ಭಾಷೆ, ಕೊನೆಗೆ ತಿನ್ನುವ ಆಹಾರವನ್ನೂ ನೆಪ ಮಾಡಿಕೊಂಡು ಅಮಾಯಕರನ್ನು ಬಡಿದು ಕೊಲ್ಲುವುದು ಸಹಜವಾಗುತ್ತಿದೆ. ಈ ಬಗೆಯ ಉನ್ಮಾದಗಳು ಹರಡುವಲ್ಲಿ ವ್ಯಾಟ್ಸಪ್‍ನಂತಹ ಸೋಶಿಯಲ್ ಮೀಡಿಯಾಗಳ ಪಾಲು ದೊಡ್ಡದು. ಅಂತವುಗಳ ವೈಪರೀತ್ಯ ಎನ್ನುವಂತೆ ಇತ್ತೀಚೆಗೆ `ಮಕ್ಕಳ ಕಳ್ಳರು’ ಎಂಬ ಕಲ್ಪನೆಯಲ್ಲಿ ಭಿಕ್ಷುಕರನ್ನೋ, ಮಾನಸಿಕ ವಿಕಲರನ್ನೊ, ಅಲೆಮಾರಿ ಬಡಪಾಯಿಗಳನ್ನೋ ಬಡಿದು ಕೊಲ್ಲುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅವುಗಳಿಗೆ ಕಾರಣವಾದದ್ದು ವ್ಯಾಟ್ಸಪ್‍ನಲ್ಲಿ ಹರಿದಾಡಿದ್ದ ಸುಳ್ಳು ಸಂದೇಶಗಳು. ಇಂತಿಂಥ ರೂಪದಲ್ಲಿ ನಿಮ್ಮ ಮನೆಮುಂದೆ ಅಥವಾ ಊರಿನಲ್ಲಿ ಅಪರಿಚಿತರು ಸುಳಿದಾಡಿದರೆ, ಅವರು ಮಕ್ಕಳು ಕಳ್ಳರಾಗಿರುತ್ತಾರೆ, ಅವರನ್ನು ಹಿಡಿದು ತದುಕಿ, ಅದ್ಯಾವುದೊ ಊರಿನ ಜನ ಹೀಗೇ ಮಾಡಿದ್ದಾರೆ… ಹೀಗೆ ಒಂದಷ್ಟು ಸಂದೇಶಗಳು ಜನರ ಅಂಗೈಯೊಳಗೆ ಸರಿದಾಡಿದ ನಂತರವೇ ದೇಶದಲ್ಲಿ ಈ ಬಗೆಯ ಅಮಾನವೀಯ ಕೃತ್ಯಗಳು ಕಾಣಿಸಿಕೊಂಡವು.
ಆಗ ನಮ್ಮ ಮನುಷ್ಯತ್ವ ಜಾಗೃತವಾಯ್ತು. ವ್ಯಾಟ್ಸಪ್ ಮೆಸೇಜುಗಳನ್ನು ಬಳಸಿಕೊಂಡೇ ವ್ಯಾಟ್ಸಪ್ ವಿರುದ್ಧ ಅಭಿಯಾನ ಶುರು ಮಾಡಿದೆವು. ಇದರಲ್ಲಿ ಬರುವ ಸಂದೇಶಗಳೆಲ್ಲ ನಿಜವಲ್ಲ, ಸತ್ಯಾಸತ್ಯತೆಯನ್ನು ಪರೀಕ್ಷಿಸಿ, ಅಂತೆಲ್ಲ ಜಾಗೃತಿಗಳನ್ನು ವೈರಲ್ ಮಾಡಿದೆವು. ಫೇಸ್‍ಬುಕ್ ಒಡೆತನದ ಈ ವ್ಯಾಟ್ಸ್‍ಪ್ ಸಂಸ್ಥೆಗೆ ಎಲ್ಲೋ ಒಂದು ಕಡೆ ತನಗೆ ಸುಳ್ಳುಗಾರನ ಪಟ್ಟವನ್ನು ಕಟ್ಟಲಾಗುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ ಮೇಲೆ ತಿಳಿಸಿದ ಹಾಗೆ ಒಂದು ಪುಟ ಜಾಹಿರಾತು ಕೊಟ್ಟು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು.
ಆದರೆ, ಹೀಗೆ ಹಾಡುಹಗಲೇ `ಬಡಿದು ಕೊಲ್ಲುವ’ ಅಪಾಯವನ್ನು ನಾವು ಎದುರುಗೊಳ್ಳಬೇಕಿರೋದು ಈ ಶೈಲಿಯಲ್ಲಿಯೇ? ಅದನ್ನು ಅರ್ಥ ಮಾಡಿಕೊಳ್ಳೋದು ವ್ಯಾಟ್ಸಪ್ ಎಂಬ ಮಾಹಿತಿ ಮಾಧ್ಯಮದ ಮೂಲಕವೇ? ವಾಟ್ಸ್‍ಆಪ್‍ಗೆ ಅಪರಾಧದ ಹಣೆಪಟ್ಟಿ ಅಂಟಿಸಿಬಿಟ್ಟರೆ ಸಮಸ್ಯೆ ಬಗೆಹರಿದುಬಿಡುತ್ತಾ? ಮಾಧ್ಯಮಗಳು ಸಂಪೂರ್ಣವಾಗಿ ಆಳುವವರ ಕೈಗೊಂಬೆಗಳಾಗಿರುವಾಗ ಜನರ ದನಿಯಾಗುವ ಸಾಧ್ಯತೆಯನ್ನು ಉಳಿಸಿಕೊಂಡಿರುವ ಸೋಶಿಯಲ್ ಮೀಡಿಯಾಗಳನ್ನು ಹೀಗೆ ಸಾರಾಸಗಟಾಗಿ `ಅವಿಶ್ವಾಸ’ದ ಕೂಪಕ್ಕೆ ತಳ್ಳಿದರೆ, ಮುಂದಿನ ಪರಿಣಾಮ ಏನಾಗಬಹುದು? ಸುಳ್ಳುಗಳನ್ನು ಬಳಸಿಕೊಂಡು, ಜನ ಸತ್ಯವನ್ನೂ ನಂಬದಂತೆ ಮಾಡುವ ಹುನ್ನಾರವೇನಾದರು ಇದೆಯಾ?…..
ಇಂತಹ ಪ್ರಶ್ನೆಗಳನ್ನು ಮುನ್ನೆಲೆಗೆ ತೆಗೆದುಕೊಳ್ಳದೆ, ಏಕಾಏಕಿ ವ್ಯಾಟ್ಸಪ್ ಅನ್ನು ಕ್ರಿಮಿನಲೈಸ್ ಮಾಡಲು ಮುಂದಾದದ್ದು ನಮ್ಮ ಜಾಣತನ! ಯಾವ ವಿಚಾರಣೆಯೂ ಇಲ್ಲದೆ, ತಕ್ಕ ಪುರಾವೆಗಳೂ ಇಲ್ಲದೆ ಅನುಮಾನದ ಮೇಲೆ ಅಸಹಾಯಕ ಮನುಷ್ಯರ ಮೇಲೆ ಹಲ್ಲೆ ನಡೆಸುವ, ಬಡಿದು ಕೊಲ್ಲುವ ದೃಶ್ಯಗಳು ನಮ್ಮ ಕಣ್ಣಿಗೆ ಬಿದ್ದಾಗ ನಾವು ಮೊದಲು ಆಲೋಚಿಸಬೇಕಾದ್ದು ಆ ದೃಶ್ಯಗಳನ್ನು ಬಿತ್ತರಿಸಿದ, ಅಥವಾ ಅದಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಮಾಧ್ಯಮದ ಅಪರಾಧದ ಕುರಿತಲ್ಲ, ಅಂತಹ ಕೃತ್ಯಗಳನ್ನು ತಡೆಗಟ್ಟಲು ಸೋಲುತ್ತಿರುವ ಸರ್ಕಾರ, ಪೊಲೀಸರು ಮತ್ತು ನಮ್ಮ ಕಾನೂನು ತಿದ್ದುಪಡಿಗಳ ಬಗ್ಗೆ. ಇವತ್ತಿಗೂ ನಮ್ಮ ದೇಶದಲ್ಲಿ, ಜನರ ಗುಂಪು ವ್ಯಕ್ತಿಯೊಬ್ಬನನ್ನು ಬಡಿದು ಸಾಯಿಸುವುದನ್ನು `ಕೊಲೆ’ ಎಂದು ಪರಿಗಣಿಸಿ ಶಿಕ್ಷಿಸುವ ಕಾನೂನುಗಳಿಲ್ಲ. ವಿಪರ್ಯಾಸವೆಂದರೆ, ಬಹಳಷ್ಟು ಪ್ರಕರಣಗಳಲ್ಲಿ ಹೀಗೆ ಕೊಲೆ ಮಾಡಿದವರ ಮೇಲೆ ಕೇಸು ದಾಖಲಿಸಿಕೊಳ್ಳುವುದಕ್ಕಿಂತ ಹಲ್ಲೆಗೀಡಾದ ವ್ಯಕ್ತಿ ಅಥವಾ ಕೊಲೆಯಾದ ವ್ಯಕ್ತಿಯ ಕುಟುಂಬದ ಮೇಲೆ, ಯಾವ ಆಪಾದನೆ ಮೇಲೆ ಹಲ್ಲೆ ನಡೆಸಲಾಗಿರುತ್ತೊ, ಆ ಆರೋಪವನ್ನೇ ಹೊರಿಸಿ ದೂರು ದಾಖಲಿಸಿಕೊಳ್ಳಲಾಗಿರುತ್ತೆ. ಇವತ್ತಿಗೂ ದಾದ್ರಿಯಲ್ಲಿ ಹತ್ಯೆಗೀಡಾದ ಅಖ್ಲಾಕ್‍ನ ಕುಟುಂಬಸ್ಥರು ಅಕ್ರಮವಾಗಿ ದನದ ಮಾಂಸ ಸಂಗ್ರಹಿಸಿಟ್ಟಿದ್ದ ದೂರು ಎದುರಿಸುತ್ತಿದ್ದಾರೆಯೇ ವಿನಾಃ, ಕೊಲೆ ಮಾಡಿದವರು ಕೇಸಿಗ ಹಂಗಿಲ್ಲದೆ ಆರಾಮಾಗಿದ್ದಾರೆ!
ಎಷ್ಟೋ ಪ್ರಕರಣಗಳಲ್ಲಿ `ಸಿಟ್ಟಿಗೆದ್ದ ಜನರ ಗುಂಪಿನ ಮುಂದೆ ನಾವು ಅಸಹಾಯಕರಾಗಿದ್ದೆವು’ ಎಂದು ನೆಪ ನೀಡುವ ಪೊಲೀಸರ ಸಮ್ಮುಖದಲ್ಲೇ ಕೊಲೆಗಳು ನಡೆದಿರುತ್ತವೆ. `ಸಾರ್ವಜನಿಕ ಬಡಿದು ಕೊಲ್ಲುವ’ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ವ್ಯವಸ್ಥೆಯೇ ನಮ್ಮ ನ್ಯಾಶನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೊ ಬಳಿ ಇಲ್ಲ. ಅಂತಹ ಇರಾದೆಯೂ ಸರ್ಕಾರಕ್ಕಿಲ್ಲವಂತೆ. ಅಂದರೆ ಸರ್ಕಾರಗಳು ಇಂತವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದಾಯ್ತು. ಈ ನಮ್ಮ ಕಾನೂನು ವ್ಯವಸ್ಥೆ ಮೊದಲು ಬದಲಾಗಬೇಕು. ಆ ದಿಕ್ಕಿನತ್ತ ನಮ್ಮ ಆಕ್ರೋಶಗಳಿರಬೇಕು.
ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ, ಮುಸ್ಲೀಮರ ಮೇಲೆ ಈ ಬಗೆಯ ಹಲ್ಲೆಗಳು ಹೆಚ್ಚಾದ ನಂತರ ಇವುಗಳನ್ನು ನಿಗ್ರಹಿಸಲು `ಮಾನವ ಸುರಕ್ಷಾ ಕಾನೂನು’ ಹೆಸರಿನಲ್ಲಿ ಕಾಯ್ದೆ ಜಾರಿಗೆ ತರಬೇಕೆಂದು ಕೆಲ ಹೋರಾಟಗಾರರು ಅಭಿಯಾನ ನಡೆಸಿದ್ದರು. ಆಗ ಕೇಂದ್ರ ಸರ್ಕಾರ ಅಂತಹ ಕಾನೂನು ತರುವ ಪ್ರಸ್ತಾಪವನ್ನೇ ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿತ್ತು. ಅಲ್ಲಿಗೆ ಸರ್ಕಾರವೇ ಇವುಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರೋದು ಸಾಬೀತಾಗುತ್ತದೆ. ನಾವೀಗ ತುರ್ತಾಗಿ ಮಾನವ ಸುರಕ್ಷಾ ಕಾನೂನಿನ ಕೂಗುಗಳಿಗೆ ದನಿಗೂಡಿಸಿ, ಅದನ್ನು ಚಳವಳಿಯಾಗಿಸಬೇಕಿದೆ. ಯಾಕೆಂದರೆ ಸಾಂವಿಧಾನಿಕ ಕಾನೂನುಗಳು ಮಾತ್ರ ಇವುಗಳಿಗೆ ನಿರ್ಬಂಧ ಹೇರಬಲ್ಲವೇ ವಿನಾಃ ತತ್ಕಾಲಿಕ ಆಕ್ರೋಶಗಳು ಸಮಸ್ಯೆಯನ್ನು ಹೋಗಲಾಡಿಸಲಾರವು.
ಇಂತಹ ಪ್ರಕರಣಗಳಲ್ಲಿ ಹಲ್ಲೆಗೊಳಗಾದ ಸಂತ್ರಸ್ತರ ಹಿನ್ನೆಲೆಯ ಗಮನಿಸಿದಾಗ, ಅವರು ದಲಿತರೋ, ಅಲ್ಪಸಂಖ್ಯಾತರೊ, ಅಲೆಮಾರಿ ಬುಡಕಟ್ಟಿನವರೋ ಅಥವಾ ಅಸಹಾಯಕ ಭಿಕ್ಷುಕ, ಮಾನಸಿಕ ಅಸ್ವಸ್ಥರೋ ಆಗಿರುತ್ತಾರೆ. ದಾದ್ರಿ, ಊನಾ ಅಥವಾ ಮಂಗಳೂರಿನ ಹುಸೈನಬ್ಬ ಪ್ರಕರಣಗಳು ಇದನ್ನು ಸಾಬೀತು ಮಾಡುತ್ತವೆ. ಅಷ್ಟೇ ಯಾಕೆ, ಇತ್ತೀಚೆಗೆ ಮಕ್ಕಳು ಕಳ್ಳರೆಂದು ಹತ್ಯೆಗೊಳಗಾದವರಲ್ಲಿ ಬಹುತೇಕರು ಭಿಕ್ಷುಕರು ಮತ್ತು ಅಲೆಮಾರಿ ಬುಡಕಟ್ಟು ಜನರು. ಅಂದರೆ ಈ `ಬಡಿದು ಕೊಲ್ಲುವ’ ಪಿಡುಗುಗಳು ಒಂದು `ಸೋಶಿಯಲ್ ಪ್ಯಾಟರ್ನ್’ ಅನುಸರಿಸುತ್ತಿವೆ ಎನ್ನಬಹುದು. ಬೇರೆಬೇರೆ ಕಾಲಘಟ್ಟದಲ್ಲಿ ಬೇರೆಬೇರೆ ರೂಪದಲ್ಲಿ ಈ ಸಮುದಾಯಗಳ ಮೇಲೆ ಅಸಹನೆ ಕಾರುತ್ತಾ ಬಂದಿರುವ ಕೂಟಗಳ ಹುನ್ನಾರವನ್ನು ಇದರೊಟ್ಟಿಗೆ ನಾವು ಸಮೀಕರಿಸಿದ್ದೇ ಆದಲ್ಲಿ, ನಾವು ತುರ್ತಾಗಿ ನಮ್ಮ ಆಕ್ರೋಶವನ್ನು ಎತ್ತ ತಿರುಗಿಸಬೇಕಿದೆ ಎಂಬುದು ಮನದಟ್ಟಾಗುತ್ತದೆ.
ಈ ವಿದ್ಯಮಾನವನ್ನು ವಿಶ್ಲೇಷಿಸುತ್ತಾ ನ್ಯೂಸ್‍ಕ್ಲಿಕ್ ಆನ್‍ಲೈನ್ ಪತ್ರಿಕೆ ಒಂದು ಅದ್ಭುತ ಮಾತು ಹೇಳಿದೆ, `ಸುಳ್ಳು ಸುದ್ದಿಗಳು ಎಲ್ಲಾ ಕಾಲದಲ್ಲಿಯೂ ಪ್ರಚಲಿತದಲ್ಲಿರುತ್ತವೆ. ಆಗೆಲ್ಲ ಅವು ನಮ್ಮನ್ನು ತತ್‍ಕ್ಷಣಕ್ಕೆ ಭೀತಿಗೊಳಿಸುವುದಕ್ಕಷ್ಟೇ ಸೀಮಿತವಾಗಿರುತ್ತವೆ. ಆದರೆ ಯಾವಾಗ, ಅವುಗಳಿಗೆ ಪೂರಕವಾಗಿ ಸಮಾಜದಲ್ಲಿ ಮೊದಲೇ ಸಾಮರಸ್ಯ ಕದಡಿದ ಒಡಕು ಮೂಡಿದ್ದು, ಒಂದು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿರುತ್ತೋ ಆಗ ಮಾತ್ರ ಅವು ಹೀಗೆ ಜೀವಘಾತಕ ರೂಪ ಪಡೆದು ಆತಂಕವನ್ನು ಉಂಟು ಮಾಡುತ್ತವೆ’. 2014ರ ನಂತರ ದೇಶ ಈಡಾಗಿರುವ ಪ್ರಕ್ಷಬ್ಧುತೆ ಮತ್ತು ಅಧಿಕಗೊಳ್ಳುತ್ತಿರುವ ಇಂತಹ ಪ್ರಕರಣಗಳ ನಡುವಿನ ಬಾಂಧವ್ಯವನ್ನು ಇದು ಬಿಚ್ಚಿಡುತ್ತಿದೆ.
ಯಾವ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಕೋಮುವಾದದ ಉನ್ಮಾದವನ್ನು ಜನರ ತಲೆಗೆ ತುಂಬಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದಿದ್ದರೋ, ಅದೇ ಸೋಶಿಯಲ್ ಮೀಡಿಯಾಗಳ ಮೂಲಕ ಅವರ ಬಂಡವಾಳವನ್ನು ಬಯಲುಗೊಳಿಸುತ್ತಿರುವ ಪ್ರಯತ್ನಗಳು ಚುರುಕು ಪಡೆಯುತ್ತಿರುವ ಹೊತ್ತಿನಲ್ಲೇ, ಜನರು ಸಾರಾಸಗಟಾಗಿ ಸೋಶಿಯಲ್ ಮೀಡಿಯಾಗಳ ಸಂದೇಶಗಳನ್ನೇ ನಂಬದಿರುವಂತೆ ವಾತಾವರಣ ಸೃಷ್ಟಿಯಾಗುತ್ತಿರುವುದರ ಹಿಂದಿರಬಹುದಾದ ಹುನ್ನಾರವನ್ನೂ ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಈ ವಿಚಾರವನ್ನು ನಾವು ಹೀಗೆ ಆಲೋಚಿಸಬೇಕಾದ್ದು ಜಾಣತನ. ಅಂತಹ ಜಾಣಜಾಣೆಯರು ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಮಾಜಕ್ಕೆ ತುರ್ತಾಗಿ ಬೇಕಾಗಿದ್ದಾರೆ.

– ಸಂಪಾದಕ ಮಂಡಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...