Homeಚಳವಳಿಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

ಕೈರುನ್ನಿಸಾ ಬಾಬಯ್ಯ ; ಸೆಕ್ಯುಲರಿಸಂನ ನೈಜ ಸಂಕೇತ

- Advertisement -
- Advertisement -

ಈ ತಿಂಗಳು ಜುಲೈ ಎರಡನೇ ತಾರೀಕು ಕೈರುನ್ನಿಸಾ ತೀರಿಕೊಂಡರು. ಅವರ ಬಗ್ಗೆ ಹೊರಗಿನ ಪಪಂಚಕ್ಕ್ರೆ ಹೆಚ್ಚಿಗೆ ಗೊತ್ತಿಲ್ಲದಿರಬಹುದು. ಆದರೆ ಆಕೆಗೆ ಈ ಪ್ರಪಂಚದ ಬಗ್ಗೆ ಸ್ಪಷ್ಟ ದೃಷ್ಟಿಕೋನವಿತ್ತು. ಸೆಕ್ಯುಲರ್ ಜೀವನ ವಿಧಾನದಿಂದ ಹಿಡಿದು ಕ್ರಾಂತಿಕಾರಿ ರಾಜಕೀಯದವರೆಗೆ ಆಕೆ ವಿಶಾಲ ಮೈದಾನವನ್ನು ಕಂಡಿದ್ದರು. ಆ ಮೈದಾನದಲ್ಲಿ ಒಂದಷ್ಟು ದೂರ ಸಾಗಿದ್ದರು.
ಕೈರುನ್ನಿಸಾ ಆಂಧ್ರದ ರಾಯಲಸೀಮಾ ಪ್ರದೇಶದಲ್ಲಿ ಹುಟ್ಟಿ ಬೆಳೆದವರು. ರಾಯಲಸೀಮ ಫ್ಯಾಕ್ಷನಿಸಂ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ, ನಡೆಯುತ್ತಿದೆ. ಆದರೆ ದೇಶಾದ್ಯಂತ ಕೋಮುವಾದಿ ಗಲಭೆಗಳು ನಡೆಯುತ್ತಿದ್ದರೂ ರಾಯಲಸೀಮದಲ್ಲಿ ಈ ಪಿಡುಗಿನ ಪ್ರಭಾವ ಬಹಳ ಕಡಿಮೆ. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರ ನಡುವೆ ನೆಲೆಸಿರುವ ಸಾಮಾಜಿಕ ಸಾಮರಸ್ಯ ಬಹಳ ವಿಶೇಷವಾದುದು. ಕೋಮುವಾದಿ ಗಲಭೆಗಳ ಕೊಚ್ಚಿ ಹೋಗುತ್ತಿರುವ ನಮ್ಮ ದೇಶಕ್ಕೆ ರಾಯಲಸೀಮೆಯ ಅನುಭವದಲ್ಲಿ ಒಂದಷ್ಟು ಪರಿಹಾರ ಕಾಣಬಹುದು. ಕೈರುನ್ನೀಸಾ ಅವರ ವ್ಯಕ್ತಿತ್ವದ ಮೇಲೆ ಈ ಸೀಮೆಯ ಧಾರ್ಮಿಕ ಸಾಮರಸ್ಯದ ಪ್ರಭಾವ ಗಾಡವಾಗಿತ್ತು.
ಆಕೆಯ ತಮ್ಮ ಹೇಳುವ ಪ್ರಕಾರ ಆಕೆ ಚಿಕ್ಕಂದಿನಿಂದಲೂ ರೆಬೆಲ್ ಮನಸ್ಥಿತಿಯ ಹುಡುಗಿ. ತಾನು ಇತರರ ಆಸರೆಯಿಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆಕೆಯದು. ತನ್ನ ಕೌಟುಂಬಿಕ ಪರಿಸರ ಓದಿನ ಬಗ್ಗೆ ವಿಶೇಷ ಆಸಕ್ತಿ ತಾಳಿದ ಅವರು ವಿಶಾಖಪಟ್ಟಣದಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ, ಬೆಂಗಳೂರಿನ ಎಚ್‍ಎಎಲ್‍ನ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದರು. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕೆಂಬುದು ಆಕೆಯ ದೃಡವಾದ ನಿಲುವಾಗಿತ್ತು. ಆಕೆ ನರ್ಸಿಂಗ್ ಕೋರ್ಸ್‍ನಲ್ಲಿದ್ದಾಗಲೇ ಬಾಬಯ್ಯನವರ ಸ್ನೇಹವಾಗಿ, ನಂತರ ಅವರ ಬಾಳ ಸಂಗಾತಿಯೂ ಆದರು. ಬಾಬಯ್ಯನವರಿಗೆ ಚಿಕ್ಕಂದಿನಲ್ಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದಾಗಿ ಕೆಲವು ವರ್ಷಗಳು ಅವರ ಜೀವನ ದಾರವಿಲ್ಲದ ಗಾಳಿಪಟದಂತಾಗಿತ್ತು. ಆದರೆ ಕೈರುನ್ನಿಸಾ ಅವರ ಪರಿಚಯವಾಗಿದ್ದು, ಆಗಲೇ ಆಕೆ ಉದ್ಯೋಗ ಮಾಡುತ್ತಿದ್ದುದರಿಂದ ಬಾಬಯ್ಯನವರ ಉನ್ನತ ವ್ಯಾಸಂಗಕ್ಕೆ ಆಕೆ ಬೆಂಬಲವಾಗಿ ನಿಂತರು.
ಬಾಬಯ್ಯನವರ ಬಾಲ್ಯದ ಬಗ್ಗೆ ಕೇಳಿದರೆ ಮಕ್ಸಿಂಗಾರ್ಕಿಯವರ ಬಾಲ್ಯ ನೆನಪಾಗುತ್ತದೆ. ಬಹಳ ಸಣ್ಣ ವಯಸ್ಸಿನಲ್ಲೇ ಯಾರದೋ ಮನೆಯಲ್ಲಿ ಏನೇನೋ ಚಾಕರಿ ಮಾಡುತ್ತಾ ಬೆಳೆದರೂ ಗಾರ್ಕಿಯಂತೆಯೇ ಜೀವನವನ್ನು ತೀಕ್ಷ್ಣವಾಗಿ ಅವಲೋಕಿಸುತ್ತಾ ಅವರಲ್ಲಿ ಮಾನವೀಯ ಗುಣಗಳು ಮೈದುಂಬಿವೆ. ಮಾನವೀಯ ಸಂಬಂಧಗಳಿಗೆ ಅಡ್ಡಗೋಡೆಯಾಗಿರುವ ಜಾತಿ, ಧರ್ಮ, ವರ್ಗಗಳನ್ನು ಮೀರುವ ಹಾದಿಯಲ್ಲಿ ಕೈರುನ್ನಿಸಾ ಅವರನ್ನು ವಿವಾಹವಾಗಿದ್ದು ಅತ್ಯಂತ ಸಹಜವಾಗಿತ್ತು. ಇವರದು ಅಂತರ್‍ಧರ್ಮೀಯ ಸೆಕ್ಯುಲರ್ ಮದುವೆ. ಕೈರುನ್ನಿಸಾ ಅವರ ರೆಬೆಲ್ ಸ್ವಭಾವಕ್ಕೂ ಬಾಬಯ್ಯನವರ ಮಾನವೀಯ ಸ್ವಭಾವಕ್ಕೂ ಮಧ್ಯೆ ಏರ್ಪಟ್ಟ ಅನುಬಂಧ ಇದು.
ಈ ಇಬ್ಬರ ದೃಡ ನಿರ್ಧಾರದ ಈ ಮದುವೆ ಅರ್ಧ ಶತಮಾನದ ಹಿಂದೆ ಯಾವುದೇ ವಿವಾದವಿಲ್ಲದೆ, ನಿರಾಡಂಬರವಾಗಿ ನಡೆಯಿತು. ಆಗ ದೇಶದ ಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಜಾತಿ ಧರ್ಮಗಳು ಹುಟ್ಟುವ ಮುಂಚಿನಿಂದಲೂ ನಾವೆಲ್ಲರೂ ಮನುಷ್ಯರು ಎಂಬ ಸತ್ಯವನ್ನು ಮನುಷ್ಯರು ಮರೆಯುತ್ತಿದ್ದಾರೆ. ಧರ್ಮ ಎಂಬುದು ಒಂದು ವ್ಯಕ್ತಿಗತ ನಂಬಿಕೆ, ಅದನ್ನು ಮೀರಿ ಧರ್ಮ ಮನುಷ್ಯ ಸಂಬಂಧಗಳ ನಡುವೆ ವಿಷಸರ್ಪವಾಗಿ ಬದಲಾಗಬಾರದು. ಈ ಇಬ್ಬರ ಮದುವೆ ಇಂದಿನ ಸಮಾಜಕ್ಕೆ ಒಂದು ಮಾದರಿಯಾಗಿ, ಸ್ಪೂರ್ತಿಯಾಗಿ ನಿಲ್ಲಬೇಕು.
ಕೈರುನ್ನಿಸಾ ವೈಯುಕ್ತಿಕವಾಗಿ ತನ್ನ ಧಾರ್ಮಿಕ ನಂಬಿಕೆಯನ್ನು ತೊರೆದುಕೊಳ್ಳಲಿಲ್ಲ. ಪ್ರತಿನಿತ್ಯ ಮನೆಯಲ್ಲೇ ನಮಾಜು ಮಾಡುತ್ತಿದ್ದರು. ತನ್ನ ಉಳಿತಾಯದ ಹಣದಿಂದ ಒಂದು ಮಸೀದಿಗೆ ದೇಣಿಗೆಯನ್ನೂ ಕೊಟ್ಟಿದ್ದರು. ಹಾಗೆಂದು ತನ್ನ ಧಾರ್ಮಿಕ ನಂಬಿಕೆಯನ್ನು ತನ್ನ ಗಂಡನ ಮೇಲಾಗಲಿ, ತನ್ನ ಮೂವರು ಮಕ್ಕಳ ಮೇಲಾಗಲಿ ಹೇರಿಕೆ ಮಾಡುವ ಆಲೋಚನೆ ಎಂದಿಗೂ ಆಕೆಗೆ ಬರಲಿಲ್ಲ. ಒಂದು ಸಂದರ್ಭದಲ್ಲಿ ಆಕೆ ತನ್ನ ಹೆಸರನ್ನು ರಾಧ ಎಂದು ಬದಲಾಯಿಸಿಕೊಳ್ಳಬೇಕು ಅಂದುಕೊಂಡರು. ಆಗಾಗ ಹಣೆ ಮೇಲೆ ಬೊಟ್ಟನ್ನೂ ಇಡುತ್ತಿದ್ದರು. ಆ ಬೊಟ್ಟು ಅಲಂಕಾರಿಕವಾಗಿತ್ತೆ ಹೊರತು ಹಿಂದು ಧಾರ್ಮಿಕ ಸಂಕೇತವೆಂದು ಆಕೆಗೆ ಅನಿಸಲಿಲ್ಲ.
ಬಾಬಯ್ಯ ಕೈರುನ್ನಿಸಾ ಮಧ್ಯೆ ಸ್ನೇಹಭಾವವಿತ್ತು ಅಂದರೆ ಭೀನ್ನಾಭಿಪ್ರಾಯಗಳಿರಲಿಲ್ಲ ಎಂದರ್ಥವಲ್ಲ. ಬಾಬಯ್ಯನವರ ಚಳವಳಿಗಳ ಒಡನಾಟದ ಪರಿಣಾಮವಾಗಿ,
ಅದೆಷ್ಟೋ ಕ್ರಾಂತಿಕಾರಿಗಳು ಬಾಬಯ್ಯ ಕೈರುನ್ನಿಸಾ ಕುಟುಂಬದ ಆಸರೆಯನ್ನು ಪಡೆದುಕೊಂಡಿದ್ದಾರೆ. ಆದರೆ ಈ ಕ್ರಾಂತಿಕಾರಿ ರಾಜಕೀಯದ ಸಹವಾಸ ಕೈರುನ್ನಿಸಾ ಅವರಲ್ಲಿ ಸ್ವಲ್ಪಮಟ್ಟಿನ ಅಭದ್ರತೆಯ ಭಾವಕ್ಕೆ ಕಾರಣವಾಗಿತ್ತು. ಇದು ಅವರ ವ್ಯಕ್ತಿಗತ ಸಮಸ್ಯೆಯಾಗಿರಲಿಲ್ಲ; ಸಾಮಾಜಿಕ ಬದಲಾವಣೆಗಾಗಿ ನಡೆಯುವ ರಾಜಿರಹಿತ ಹೋರಾಟಕ್ಕೂ ಕುಟುಂಬ ಸಂಬಂಧಗಳಿಗೂ ನಡುವೆ ಸದಾಕಾಲ ತಿಕ್ಕಾಟ ಇದ್ದೇ ಇರುತ್ತದೆ. ಇಂಥಾ ಸಾಮಾಜಿಕ ವ್ಯವಸ್ಥಾಗತ ಸಮಸ್ಯೆಗಳನ್ನು ಒಂದಲ್ಲಾ ಒಂದು ಕುಟುಂಬ ಎದುರಿಸಲೇಬೇಕಾಗುತ್ತೆ. ಕೈರುನ್ನಿಸಾ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಲೇ ನಮ್ಮೆಲ್ಲರನ್ನೂ ಗೌರವಿಸುತ್ತಿದ್ದರು. ಆಂಧ್ರದ ಪ್ರಸಿದ್ಧ ಮಾನವಹಕ್ಕು ಹೋರಾಟಗಾರ ಪ್ರೊ.ಬಾಲಗೋಪಾಲ್ ಕಾನೂನು ಶಿಕ್ಷಣವನ್ನು ಈ ಮನೆಯಲ್ಲಿದ್ದುಕೊಂಡೇ ಪಡೆದುಕೊಂಡರು. ಹಾಗೆ ನೋಡಿದರೆ ತೆಲುಗುನಾಡಿನ ಬಹುತೇಕ ಖ್ಯಾತನಾಮರಿಗೆ, ಅವರ ಕುಟುಂಬಗಳಿಗೆ ಈ ಮನೆ ಆತ್ಮೀಯ ತಾಣವಾಗಿತ್ತು.
ಅವರ ಮೂರೂ ಮಕ್ಕಳು ಇಂದು ಉನ್ನತ ವಿದ್ಯಾಭ್ಯಾಸ ಮಾಡಿ, ಘನತೆಯ ಜೀವನವನ್ನು ರೂಪಿಸಿಕೊಳ್ಳುವುದರಲ್ಲಿ ಕೈರುನ್ನಿಸಾ ಅವರ ಅಪಾರ ಶ್ರಮವಿದೆ. ಹಿರಿ ಮಗಳು ಪ್ರಣವ ದೆಹಲಿಯಲ್ಲಿ ಅಧ್ಯಾಪಕಿಯಾಗಿದ್ದಾಳೆ, ಕಿರಿ ಮಗಳು ಜಗತಿ ವೈದ್ಯೆಯಾಗಿದ್ದು ಹೈದರಾಬಾದ್‍ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿರುವ ಮಗ ಭಾನುತೇಜ್ ಪತ್ರಕರ್ತರಾಗಿ ಹೆಸರು ಗಳಿಸಿದ್ದಾರೆ. ಇಲ್ಲಿ ಒಂದು ವಿಶೇಷವನ್ನು ಹೇಳಲೇಬೇಕು. ಈ ಮೂವರೂ ಮಕ್ಕಳು ಅಂತರ್‍ಜಾತೀಯ ಮದುವೆಯಾಗಿದ್ದಾರೆ. ಹೀಗೆ ಈ ಕುಟುಂಬ ನಮ್ಮನ್ನು ಆವರಿಸಿರುವ ಜಾತಿ ಧರ್ಮಗಳ ಗೋಡೆಯನ್ನು ಕೆಡವಿಹಾಕಿದೆ.
ಕೈರುನ್ನಿಸಾ ಸೆಕ್ಯುಲರ್ ದೃಷ್ಟಿಕೋನದ ಕಾರಣಕ್ಕಾಗಿಯೇ ಇರಬಹುದು, ತಮ್ಮ ಮಗ ಮತ್ತು ಹೆಣ್ಣು ಮಕ್ಕಳಲ್ಲಿ ಯಾವುದೇ ಬೇಧವಿಲ್ಲದಂತೆ ಸಮಾನವಾಗಿ ನೋಡಿಕೊಂಡರು. ತನ್ನ ಉಳಿತಾಯದ ಹಣವನ್ನು ಮೂವರಿಗೂ ಸಮಾನವಾಗಿ ಹಂಚಿದ್ದರು. ‘ಅಣ್ಣಾ, ನನಗೆ ಹೆಣ್ಣು ಮಕ್ಕಳಾದರೂ, ಗಂಡು ಮಕ್ಕಳಾದರೂ ಒಂದೇ, ಅದಕ್ಕೆ ಎಲ್ಲರಿಗೂ ಸಮಾನವಾಗಿ ಹಂಚಿದ್ದೇನೆ’ ಅಂತ ಬಹಳ ಹೆಮ್ಮೆಯಿಂದ ಹೇಳಿದ್ದರು. ಆಕೆಯ ಕೊನೆಗಾಲದಲ್ಲಿ ಉಳಿದ ಆಸ್ತಿಪಾಸ್ತಿಯನ್ನು ತಮ್ಮ ಮೊಮ್ಮಕ್ಕಳಿಗೆ ಹಂಚಬೇಕೆಂದು ತೀರ್ಮಾನಿಸಿದ್ದರು. ಇದು ಅವರ ದೂರದೃಷ್ಟಿ ಕೂಡ.
ಕೈರುನ್ನಿಸಾ ಜಾತಿ ಮತ ಬೇಧಗಳನ್ನು ವಿರೋಧಿಸಿದ್ದರೆಂಬುದು ಮಾತ್ರವಲ್ಲ; ಲಿಂಗ ತಾರತಮ್ಯವನ್ನೂ ವಿರೋಧಿಸುತ್ತಿದ್ದರು. ಅದು ಬಾಯಿಮಾತಿನಲ್ಲಿ ಮಾತ್ರವಲ್ಲ. ತಮ್ಮ ನಿಜ ಜೀವನದ ಉದಾಹರಣೆ ಮೂಲಕ. ಮನುಷ್ಯರು ಮನುಷ್ಯರಾಗಿ ಬದಲಾದರೆ ಎಷ್ಟೋ ಸಂಕುಚಿತ ಸಂಬಂಧಗಳನ್ನು ಮೀರಬಹುದೆಂಬ ಸತ್ಯವನ್ನು ಕೈರುನ್ನಿಸಾ ನೋಡಿ ಕಲಿಯಬಹುದು. ತನ್ನ ಅಂತ್ಯಸಂಸ್ಕಾರದ ಬಗ್ಗೆ ಆಕೆ ಕೈಗೊಂಡ ತೀರ್ಮಾನ ಇವೆಲ್ಲವನ್ನೂ ಮೀರಿದ್ದು. ಅವರು ಸ್ವಲ್ಪವೂ ಹಿಂಜರಿಕೆಯಿಲ್ಲದೆ, ತನ್ನ ದೇಹವನ್ನು ತನ್ನದೇ ವೃತ್ತಿಯಾದ ವೈದ್ಯಕೀಯ ಸಂಶೋಧನೆಗಾಗಿ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದರು. ಇದು ಆಕೆಯ ಸೆಕ್ಯುಲರ್ ಪ್ರಪಂಚ ದೃಷ್ಟಿಯ ಪರಾಕಾಷ್ಠೆ.
ಬಾಬಯ್ಯ ಕೈರುನ್ನಿಸಾ ಕುಟಂಬ ಇಂದಿನ ಕೋಮುವಾದಿ ಕಲುಷಿತ ವಾತಾವರಣಕ್ಕೆ ಒಂದು ದಿಟ್ಟ ಪರಿಹಾರ. ಆನರೇ ಚರಿತ್ರೆಯ ನಿರ್ಮಾಪಕರು ಎಂದು ಮಾಕ್ರ್ಸ್ ಹೇಳಿದಂತೆ, ಚರಿತ್ರೆ ನಿರ್ಮಾಣದಲ್ಲಿ ಯಾವುದೇ ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಪಾಲಿಸುವ ಜೀವನದ ಆಚರಣೆಗಳೇ ಸಾಮಾಜಿಕ ಬದಲಾವಣೆಗೆ ಮಾರ್ಗದರ್ಶಿ ಸೂತ್ರಗಳಂತೆ ಕೆಲಸ ಮಾಡುತ್ತವೆ. ಸಾಮಾನ್ಯ ಮನುಷ್ಯರಲ್ಲಿ ಕೆಲವರು ಅಸಾಮಾನ್ಯವಾಗಿ ಜೀವಿಸುತ್ತಾರೆ ಎಂದರೆ ಇದೇ ಅನಿಸುತ್ತೆ.

– ಪ್ರೊ.ಹರಗೋಪಾಲ್
ಕನ್ನಡಕ್ಕೆ : ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...