ರಾಜಧಾನಿ ಪಣಜಿಯ ವಿ. ಎಂ. ಸಲ್ಗೋಕರ್ ಕಾನೂನು ಕಾಲೇಜ್ನ ಉಪನ್ಯಾಸಕಿ ಪ್ರೊ. ಶಿಲ್ಪಾ ಸಿಂಗ್ ನಿರ್ದಿಷ್ಟ ಧರ್ಮದ ಬಗ್ಗೆ ದ್ವೇಷ ಬಿತ್ತುತ್ತಿದ್ದಾರೆ, ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿ ABVP ಸಲ್ಲಿಸಿದ್ದ ದೂರಿಗೆ ಕಾಲೇಜು ಖಡಕ್ ಪ್ರತ್ಯುತ್ತರ ನೀಡಿದ್ದು, “ABVP ಗೆ ಇಂತಹ ಆಕ್ಷೇಪಣೆಗಳನ್ನೆತ್ತಲು ಯಾವುದೇ ಹಕ್ಕಿಲ್ಲ ಹಾಗೂ ಉಪನ್ಯಾಸಕಿಯನ್ನು ಸೇವೆಯಿಂದ ಕಿತ್ತು ಹಾಕುವುದಿಲ್ಲ” ಎಂದು ಹೇಳಿದೆ.
ಕಾಲೇಜಿನ ಆಡಳಿತ ಮಂಡಳಿಯ ಪ್ರತಿಕ್ರಿಯೆಯನ್ನು ABVP ಗೆ ಶನಿವಾರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ರವಾನಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶಬೀರ್ ಅಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಇದು ಕಾನೂನು ಕಾಲೇಜು ಆಗಿದ್ದು, ನಿಯಮಗಳ ಪಾಲನೆಯ ಜವಾಬ್ದಾರಿ ನಮಗಿದೆ. ಕಾನೂನಾತ್ಮಕವಾಗಿಯೂ ಅವರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮುಸುಕುಧಾರಿ ಹುಡುಗಿ ಎಬಿವಿಪಿ ಸದಸ್ಯೆ ಕೋಮಲ್ ಶರ್ಮಾ ಎಂದು ದೃಢಪಡಿಸಿದ ದೆಹಲಿ ಪೊಲೀಸರು
ಕಳೆದ ತಿಂಗಳು ABVP ಕಾಲೇಜಿನ ಉಪನ್ಯಾಸಕಿ ಪ್ರೊ. ಶಿಲ್ಪಾ ಸಿಂಗ್ ವಿರುದ್ಧ ದೂರು ನೀಡಿ, “ಅವರು ಒಂದು ನಿರ್ದಿಷ್ಟ ಧರ್ಮ, ಸಮುದಾಯ ಹಾಗೂ ಜನರ ಗುಂಪಿನ ವಿರುದ್ಧ ಸಾಮಾಜಿಕವಾಗಿ ದ್ವೇಷ ಬಿತ್ತುತ್ತಿದ್ದಾರೆ” ಎಂದು ಆರೋಪಿಸಿತ್ತು. 24 ಗಂಟೆಗಳೊಳಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಸೇವೆಯಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿತ್ತು.
ದೂರಿನ ವಿಚಾರಣೆಯನ್ನು ಕಾಲೇಜಿನ ತ್ರಿಸದಸ್ಯ ಆಂತರಿಕ ಸಮಿತಿ ನಡೆಸಿದ್ದು, “ಉಪನ್ಯಾಸಕಿಯ ವಿರುದ್ಧ ಮಾಡಿರುವ ಆಪಾದನೆಗೆ ಯಾವುದೇ ಸಾಕ್ಷ್ಯವನ್ನು ದೂರುದಾರರು ನೀಡಿಲ್ಲ ಹಾಗೂ ಯಾವುದೇ ಸಾಕ್ಷ್ಯ ಪ್ರಸ್ತುತ ಪಡಿಸದೆ ಇರುವುದರಿಂದ ಕೇವಲ ಆಪಾದನೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ” ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಪ್ರೊ. ಶಿಲ್ಪಾ ಸಿಂಗ್ ಅತ್ಯುತ್ತಮ ಉಪನ್ಯಾಸಕಿಯಾಗಿದ್ದು, ವಿದ್ಯಾರ್ಥಿಗಳು ಅವರು ಪಾಠ ಮಾಡುವ ವಿಧಾನದಿಂದ ಖುಷಿಯಾಗಿದ್ದಾರೆ. ABVP ನೀಡಿದ್ದ ದೂರಿನ ಅರ್ಜಿಯಲ್ಲಿ ಅದರ ಕೊಂಕಣ ಘಟಕದ ಜಂಟಿ ಕಾರ್ಯದರ್ಶಿ ಪ್ರಭಾ ನಾಯ್ಕ್ ಸಹಿ ಹಾಕಿದ್ದು ಅವರು ಕಾಲೇಜಿನ ವಿದ್ಯಾರ್ಥಿನಿಯಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಪ್ರೊ. ಶಿಲ್ಪಾ ಸಿಂಗ್ ತನ್ನ ಉಪನ್ಯಾಸದ ಸಮಯದಲ್ಲಿ ಮನುಸ್ಮೃತಿ ಸೇರಿದಂತೆ, ರೋಹಿತ್ ವೆಮುಲಾ, ಎಂ.ಎಂ. ಕಲ್ಬುರ್ಗಿ, ದಾಭೋಲ್ಕರ್ ಮುಂತಾದವರ ಕುರಿತು ಮಾತನಾಡುತ್ತಾರೆ ಎಂದು ABVP ತನ್ನ ದೂರಿನಲ್ಲಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಎಬಿವಿಪಿ ಪಾಪಿಗಳ ಅತ್ಯಾಚಾರ