Homeಅಂತರಾಷ್ಟ್ರೀಯಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

- Advertisement -
- Advertisement -

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ತಾರತಮ್ಯದಿಂದ ಕೂಡಿದೆ ಎಂದಿದೆ.

ಪ್ಯಾಲೆಸ್ತೀನ್ ಅಥಾರಿಟಿ

ಪ್ಯಾಲೆಸ್ತೀನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸ ಕಾನೂನನ್ನು ‘ಅಪಾಯಕಾರಿ ಬೆಳವಣಿಗೆ’ ಎಂದು ಬಣ್ಣಿಸಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಚಿವಾಲಯವು, “ಆಕ್ರಮಿತ ಪ್ಯಾಲೆಸ್ತೀನ್’ ಭೂಪ್ರದೇಶದ ಮೇಲೆ ಇಸ್ರೇಲ್‌ಗೆ ಯಾವುದೇ ಸಾರ್ವಭೌಮತ್ವವಿಲ್ಲ” ಎಂದು ಒತ್ತಿ ಹೇಳಿದೆ.

“ಹೊಸ ಕಾನೂನು ಮತ್ತೊಮ್ಮೆ ಇಸ್ರೇಲಿ ವಸಾಹತುಶಾಹಿ ವ್ಯವಸ್ಥೆಯ ಮುಖವನ್ನು ಬಯಲು ಮಾಡಿದೆ. ಇದು ಶಾಸಕಾಂಗದ ರಕ್ಷಣೆಯಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆ” ಎಂದಿದೆ.

ಹಮಾಸ್

ಮರಣದಂಡನೆ ಕಾನೂನಿನ ಅಂಗೀಕಾರವು ಇಸ್ರೇಲ್ ಜೈಲುಗಳಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನಿಯರ ‘ಜೀವಕ್ಕೆ ಬೆದರಿಕೆ ಒಡ್ಡುವ ಅಪಾಯಕಾರಿ ಮುನ್ಸೂಚನೆ’ ಎಂದು ಗಾಝಾದ ಆಡಳಿತ ನೋಡಿಕೊಳ್ಳುತ್ತಿರುವ ಗುಂಪು ಹಮಾಸ್ ಟೀಕಿಸಿದೆ.

“ಇಸ್ರೇಲ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಕಾನೂನುಗಳ ಮೇಲೆ ಗೌರವವಿಲ್ಲ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿಯಿಲ್ಲ ಎಂಬುವುದು ಈ ನಿರ್ಧಾರದಿಂದ ಮತ್ತೊಮ್ಮೆ ಸಾಬೀತಾಗಿದೆ” ಎಂದು ಹಮಾಸ್ ಹೇಳಿದೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು, ಇಸ್ರೇಲ್‌ನ ಕ್ರೌರ್ಯದಿಂದ ಪ್ಯಾಲೆಸ್ತೀನ್ ಕೈದಿಗಳನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಹಮಾಸ್ ಕರೆ ನೀಡಿದೆ.

ಪ್ಯಾಲೆಸ್ತೀನ್ ನ್ಯಾಷನಲ್ ಇನಿಶಿಯೇಟಿವ್‌ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ

ಪ್ಯಾಲೆಸ್ತೀನಿಯನ್ ನ್ಯಾಷನಲ್ ಇನಿಶಿಯೇಟಿವ್‌ನ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ ಅವರು ಈ ಶಾಸನದ ‘ಗಂಭೀರತೆ’ಯ ಬಗ್ಗೆ ಎಚ್ಚರಿಸಿದ್ದಾರೆ. ಇದು ಪ್ಯಾಲೆಸ್ತೀನ್ ರಾಜಕೀಯ ಕೈದಿಗಳು ಮತ್ತು ಹೋರಾಟಗಾರರನ್ನು ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿ ವ್ಯವಸ್ಥೆಯಲ್ಲಿ ಉಂಟಾಗಿರುವ ‘ಫ್ಯಾಸಿಸ್ಟ್ ಬದಲಾವಣೆಯ ಆಳವನ್ನು’ ಇಂತಹ ಅನ್ಯಾಯದ ಮತ್ತು ಅಮಾನವೀಯ ಕಾನೂನು ಪ್ರತಿಬಿಂಬಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್

ಗಾಝಾ ಮೂಲದ ಮಾನವ ಹಕ್ಕುಗಳ ಸಂಸ್ಥೆ ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ (ಪಿಸಿಹೆಚ್‌ಆರ್) ಹೊಸ ಕಾನೂನನ್ನು ‘ಕಠಿಣ ಪದಗಳಲ್ಲಿ’ ಖಂಡಿಸಿದೆ.

ಈ ಕಾನೂನು ಪ್ಯಾಲೆಸ್ತೀನಿಯರನ್ನು ಗುರಿಯಾಗಿಸಿಕೊಂಡಿದೆ ಮತ್ತು ಕಾನೂನಿನ ಮುಖವಾಡದ ಅಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ನಡೆಸುವ ಇಸ್ರೇಲ್‌ನ ಸುದೀರ್ಘ ನೀತಿಯನ್ನು ಗಟ್ಟಿಗೊಳಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಸಿಹೆಚ್‌ಆರ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಯುಎನ್‌ ಹ್ಯೂಮನ್ ರೈಟ್ಸ್ ಆಫಿಸ್

ಪ್ಯಾಲೆಸ್ತೀನ್‌ನಲ್ಲಿರುವ ಯುಎನ್‌ ಮಾನವ ಹಕ್ಕುಗಳ ಕಚೇರಿ ತಾರತಮ್ಯದಿಂದ ಕೂಡಿದ ಈ ಮರಣದಂಡನೆ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ ಇಸ್ರೇಲ್‌ಗೆ ಒತ್ತಾಯಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇಸ್ರೇಲ್ ಹೊಂದಿರುವ ಬದ್ಧತೆಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯು ಎಲ್ಲಾ ಸಂದರ್ಭಗಳಲ್ಲೂ ಮರಣದಂಡನೆಯನ್ನು ವಿರೋಧಿಸುತ್ತದೆ. ಈ ಹೊಸ ಕಾನೂನಿನ ಜಾರಿಯು ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯನ್ನು ನಿಷೇಧಿಸುವ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.

ಮುಂದುವರಿದು, ಈ ಕಾನೂನು ಜನಾಂಗೀಯ ಪ್ರತ್ಯೇಕತೆ ಮತ್ತು ವರ್ಣಭೇದ ನೀತಿಯ ನಿಷೇಧದ ಮೇಲಿನ ಇಸ್ರೇಲ್‌ನ ಉಲ್ಲಂಘನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಏಕೆಂದರೆ, ಇದು ಕೇವಲ ಆಕ್ರಮಿತ ಪಶ್ಚಿಮ ದಂಡೆ ಮತ್ತು ಇಸ್ರೇಲ್‌ನಲ್ಲಿರುವ ಪ್ಯಾಲೆಸ್ತೀನ್‌ನಿಯರಿಗೆ ಮಾತ್ರ ಅನ್ವಯಿಸುತ್ತದೆ, ಇವರಿಗೆ ಹೆಚ್ಚಾಗಿ ಅನ್ಯಾಯದ ವಿಚಾರಣೆಗಳ ನಂತರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್

ಇಸ್ರೇಲ್ ಹೊಸ ಕಾನೂನನ್ನು ರದ್ದುಗೊಳಿಸಬೇಕು ಎಂದು ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಒತ್ತಾಯಿಸಿದೆ. “ಇದು ‘ಕ್ರೌರ್ಯ, ತಾರತಮ್ಯ ಮತ್ತು ಮಾನವ ಹಕ್ಕುಗಳ ಬಗೆಗಿನ ಸಂಪೂರ್ಣ ತಿರಸ್ಕಾರದ ಸಾರ್ವಜನಿಕ ಪ್ರದರ್ಶನ” ಎಂದು ಬಣ್ಣಿಸಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸಂಶೋಧನೆ, ವಕಾಲತ್ತು, ನೀತಿ ಮತ್ತು ಪ್ರಚಾರಗಳ ಹಿರಿಯ ನಿರ್ದೇಶಕಿ ಎರಿಕಾ ಗುವೆರಾ-ರೋಸಾಸ್ ಅವರು, ಪ್ಯಾಲೆಸ್ತೀನ್ ಕೈದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಸೈನಿಕರ ಮೇಲಿನ ಎಲ್ಲಾ ಆರೋಪಗಳನ್ನು ಇಸ್ರೇಲ್ ಕೈಬಿಟ್ಟ ಕೆಲವೇ ವಾರಗಳಲ್ಲಿ ಈ ಕಾನೂನು ಅಂಗೀಕಾರವಾಗಿದೆ ಎಂದಿದ್ದಾರೆ.

ವರ್ಷಗಳಿಂದ ಪ್ಯಾಲೆಸ್ತೀನಿಯರ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ಕಾನೂನು ಬಾಹಿರkNf ಹತ್ಯೆ ಸೇರಿದಂತೆ ಇತರ ಆತಂಕಕಾರಿ ದಮನ ಕ್ರಮಗಳನ್ನು ನೋಡುತ್ತಿದ್ದೇವೆ. ಇವುಗಳನ್ನು ಎಸಗುವವರು ಯಾವುದೇ ಶಿಕ್ಷೆಯಿಲ್ಲದೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವೇ ನಡೆಸುವ ಈ ಮರಣದಂಡನೆಗಳಿಗೆ ಅವಕಾಶ ನೀಡುವ ಹೊಸ ಕಾನೂನು ಅಂತಹ ನೀತಿಗಳ ಪರಮಾವಧಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೌನ್ಸಿಲ್ ಆಫ್ ಯುರೋಪ್

ಯುರೋಪ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಲೈನ್ ಬರ್ಸೆಟ್ ಅವರು, ಇಸ್ರೇಲ್‌ನ ಹೊಸ ಕಾನೂನಿನ ಅಂಗೀಕಾರವನ್ನು ‘ಗಂಭೀರ ಹಿನ್ನಡೆ’ ಎಂದು ಖಂಡಿಸಿದ್ದಾರೆ.

“ಮರಣದಂಡನೆಯು ಸಮಕಾಲೀನ ಮಾನವ ಹಕ್ಕುಗಳ ಮಾನದಂಡಗಳಿಗೆ ಹೊಂದಿಕೆಯಾಗದ ಒಂದು ಹಳೆಯ ಕಾಲದ ಕಾನೂನು ಪದ್ಧತಿಯಾಗಿದೆ. ಅಷ್ಟೇ ಅಲ್ಲದೆ, ತಾರತಮ್ಯದಿಂದ ಕೂಡಿದ ಯಾವುದೇ ರೀತಿಯ ಮರಣದಂಡನೆಯ ಅನ್ವಯವು ಕಾನೂನಿನ ಆಡಳಿತವಿರುವ ದೇಶದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಬರ್ಸೆಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ದೇಶವು ಯುರೋಪ್ ಕೌನ್ಸಿಲ್‌ನ ಹಲವಾರು ಒಪ್ಪಂದಗಳಿಗೆ ಬದ್ಧವಾಗಿದೆ ಮತ್ತು ಅದರ ವಿವಿಧ ಸಹಕಾರ ಕಾರ್ಯವಿಧಾನಗಳಲ್ಲಿ ಭಾಗವಹಿಸುತ್ತದೆ ಎಂಬ ಅಂಶವನ್ನೂ ಅವರು ನೆನಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಈ ಕಾನೂನಿಗೆ ಸಂಬಂಧಿಸಿದ ಮುಂಬರುವ ಬೆಳವಣಿಗೆಗಳನ್ನು ಯುರೋಪ್ ಕೌನ್ಸಿಲ್ ಸೂಕ್ಷ್ಮವಾಗಿ ಗಮನಿಸಲಿದೆ. ಇಸ್ರೇಲ್ ಸಹಿ ಮಾಡಿರುವ ಯುರೋಪ್ ಕೌನ್ಸಿಲ್ ಒಪ್ಪಂದಗಳ ಮೇಲೆ ಮತ್ತು ಅದು ಭಾಗವಹಿಸುವ ಸಹಕಾರ ಕಾರ್ಯವಿಧಾನಗಳ ಮೇಲೆ ಈ ಕಾನೂನು ಬೀರುವ ಪರಿಣಾಮಗಳನ್ನು ಕೌನ್ಸಿಲ್ ಪರಿಶೀಲಿಸಲಿದೆ ಎಂದು ಬರ್ಸೆಟ್ ಹೇಳಿದ್ದಾರೆ.

ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ

ಐರಿಶ್ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯು ಹೊರಡಿಸಿದ ಹೇಳಿಕೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ ಇಸ್ರೇಲ್‌ನ ಹೊಸ ಕಾನೂನನ್ನು ಖಂಡಿಸಿದ್ದಾರೆ. “ಈ ಹೊಸ ಕಾನೂನು ಪ್ಯಾಲೆಸ್ತೀನಿಯರಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ತಾರತಮ್ಯದ ಸ್ವರೂಪವನ್ನು ಹೊಂದಿರುವುದು ನನಗೆ ವಿಶೇಷವಾಗಿ ಕಳವಳ ಉಂಟುಮಾಡಿದೆ” ಎಂದು ಅವರು ಹೇಳಿದ್ದಾರೆ.

“ಬದುಕುವ ಹಕ್ಕು ಮೂಲಭೂತ ಮಾನವ ಹಕ್ಕು. ಐರ್ಲೆಂಡ್ ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಮರಣದಂಡನೆಯ ಬಳಕೆಯನ್ನು ಸತತವಾಗಿ ಮತ್ತು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳಿರುವ ಅವರು, ಈ ಕಾನೂನನ್ನು ಜಾರಿಗೆ ತರದಂತೆ ಇಸ್ರೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ

ಇಟಲಿಯ ವಿದೇಶಾಂಗ ಸಚಿವ ತಾಜಾನಿ ಅವರು ಈ ಕಾನೂನು ಅಧಿಕೃತವಾಗಿ ಅಂಗೀಕಾರವಾಗುವ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಹೊಸ ಮಸೂದೆಯನ್ನು ಹಿಂಪಡೆಯುವಂತೆ ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಇಸ್ರೇಲ್ ಸರ್ಕಾರಕ್ಕೆ ವಿನಂತಿಸಿವೆ ಎಂದು ತಾಜಾನಿ ತಿಳಿಸಿದ್ದಾರೆ.

ವಿಶೇಷವಾಗಿ ವಿಶ್ವಸಂಸ್ಥೆಯಲ್ಲಿ ಮತದಾನದ ಮೂಲಕ ಅಂಗೀಕರಿಸಲಾದ ನಿರ್ಣಯಗಳ ಪ್ರಕಾರ, ಮರಣದಂಡನೆಯ ಮೇಲಿನ ತಡೆಯಾಜ್ಞೆಗೆ ಬದ್ಧರಾಗಿರಬೇಕು. ಈ ಬದ್ಧತೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಾಜಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

“ನಮ್ಮ ಪಾಲಿಗೆ, ಜೀವನವು ಒಂದು ಸಂಪೂರ್ಣ ಮೌಲ್ಯವಾಗಿದೆ; ಶಿಕ್ಷೆಯನ್ನು ವಿಧಿಸುವ ಸಲುವಾಗಿ ಅದನ್ನು ಕಸಿದುಕೊಳ್ಳುವ ಹಕ್ಕನ್ನು ತನ್ನದಾಗಿಸಿಕೊಳ್ಳುವುದು ಮಾನವೀಯವಲ್ಲದ ಕ್ರಮವಾಗಿದೆ ಮತ್ತು ಇದು ವ್ಯಕ್ತಿಯ ಘನತೆಯನ್ನು ಉಲ್ಲಂಘಿಸುತ್ತದೆ” ಎಂದು ಅವರು ಹೇಳಿದ್ದಾರೆ.









 











ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...