Homeಅಂತರಾಷ್ಟ್ರೀಯಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

- Advertisement -
- Advertisement -

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ತಾರತಮ್ಯದಿಂದ ಕೂಡಿದೆ ಎಂದಿದೆ.

ಪ್ಯಾಲೆಸ್ತೀನ್ ಅಥಾರಿಟಿ

ಪ್ಯಾಲೆಸ್ತೀನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಸ ಕಾನೂನನ್ನು ‘ಅಪಾಯಕಾರಿ ಬೆಳವಣಿಗೆ’ ಎಂದು ಬಣ್ಣಿಸಿದೆ. ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಸಚಿವಾಲಯವು, “ಆಕ್ರಮಿತ ಪ್ಯಾಲೆಸ್ತೀನ್’ ಭೂಪ್ರದೇಶದ ಮೇಲೆ ಇಸ್ರೇಲ್‌ಗೆ ಯಾವುದೇ ಸಾರ್ವಭೌಮತ್ವವಿಲ್ಲ” ಎಂದು ಒತ್ತಿ ಹೇಳಿದೆ.

“ಹೊಸ ಕಾನೂನು ಮತ್ತೊಮ್ಮೆ ಇಸ್ರೇಲಿ ವಸಾಹತುಶಾಹಿ ವ್ಯವಸ್ಥೆಯ ಮುಖವನ್ನು ಬಯಲು ಮಾಡಿದೆ. ಇದು ಶಾಸಕಾಂಗದ ರಕ್ಷಣೆಯಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ಕಾನೂನುಬದ್ಧಗೊಳಿಸಲು ಪ್ರಯತ್ನಿಸುತ್ತಿದೆ” ಎಂದಿದೆ.

ಹಮಾಸ್

ಮರಣದಂಡನೆ ಕಾನೂನಿನ ಅಂಗೀಕಾರವು ಇಸ್ರೇಲ್ ಜೈಲುಗಳಲ್ಲಿ ಬಂಧಿಯಾಗಿರುವ ಪ್ಯಾಲೆಸ್ತೀನಿಯರ ‘ಜೀವಕ್ಕೆ ಬೆದರಿಕೆ ಒಡ್ಡುವ ಅಪಾಯಕಾರಿ ಮುನ್ಸೂಚನೆ’ ಎಂದು ಗಾಝಾದ ಆಡಳಿತ ನೋಡಿಕೊಳ್ಳುತ್ತಿರುವ ಗುಂಪು ಹಮಾಸ್ ಟೀಕಿಸಿದೆ.

“ಇಸ್ರೇಲ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಕಾನೂನುಗಳ ಮೇಲೆ ಗೌರವವಿಲ್ಲ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಕಾಳಜಿಯಿಲ್ಲ ಎಂಬುವುದು ಈ ನಿರ್ಧಾರದಿಂದ ಮತ್ತೊಮ್ಮೆ ಸಾಬೀತಾಗಿದೆ” ಎಂದು ಹಮಾಸ್ ಹೇಳಿದೆ.

ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು, ಇಸ್ರೇಲ್‌ನ ಕ್ರೌರ್ಯದಿಂದ ಪ್ಯಾಲೆಸ್ತೀನ್ ಕೈದಿಗಳನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಹಮಾಸ್ ಕರೆ ನೀಡಿದೆ.

ಪ್ಯಾಲೆಸ್ತೀನ್ ನ್ಯಾಷನಲ್ ಇನಿಶಿಯೇಟಿವ್‌ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ

ಪ್ಯಾಲೆಸ್ತೀನಿಯನ್ ನ್ಯಾಷನಲ್ ಇನಿಶಿಯೇಟಿವ್‌ನ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಬರ್ಘೂತಿ ಅವರು ಈ ಶಾಸನದ ‘ಗಂಭೀರತೆ’ಯ ಬಗ್ಗೆ ಎಚ್ಚರಿಸಿದ್ದಾರೆ. ಇದು ಪ್ಯಾಲೆಸ್ತೀನ್ ರಾಜಕೀಯ ಕೈದಿಗಳು ಮತ್ತು ಹೋರಾಟಗಾರರನ್ನು ಗುರಿಯಾಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಇಸ್ರೇಲಿ ವ್ಯವಸ್ಥೆಯಲ್ಲಿ ಉಂಟಾಗಿರುವ ‘ಫ್ಯಾಸಿಸ್ಟ್ ಬದಲಾವಣೆಯ ಆಳವನ್ನು’ ಇಂತಹ ಅನ್ಯಾಯದ ಮತ್ತು ಅಮಾನವೀಯ ಕಾನೂನು ಪ್ರತಿಬಿಂಬಿಸುತ್ತದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್

ಗಾಝಾ ಮೂಲದ ಮಾನವ ಹಕ್ಕುಗಳ ಸಂಸ್ಥೆ ಪ್ಯಾಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ (ಪಿಸಿಹೆಚ್‌ಆರ್) ಹೊಸ ಕಾನೂನನ್ನು ‘ಕಠಿಣ ಪದಗಳಲ್ಲಿ’ ಖಂಡಿಸಿದೆ.

ಈ ಕಾನೂನು ಪ್ಯಾಲೆಸ್ತೀನಿಯರನ್ನು ಗುರಿಯಾಗಿಸಿಕೊಂಡಿದೆ ಮತ್ತು ಕಾನೂನಿನ ಮುಖವಾಡದ ಅಡಿಯಲ್ಲಿ ಕಾನೂನು ಬಾಹಿರ ಹತ್ಯೆಗಳನ್ನು ನಡೆಸುವ ಇಸ್ರೇಲ್‌ನ ಸುದೀರ್ಘ ನೀತಿಯನ್ನು ಗಟ್ಟಿಗೊಳಿಸುತ್ತದೆ. ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಸಿಹೆಚ್‌ಆರ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಯುಎನ್‌ ಹ್ಯೂಮನ್ ರೈಟ್ಸ್ ಆಫಿಸ್

ಪ್ಯಾಲೆಸ್ತೀನ್‌ನಲ್ಲಿರುವ ಯುಎನ್‌ ಮಾನವ ಹಕ್ಕುಗಳ ಕಚೇರಿ ತಾರತಮ್ಯದಿಂದ ಕೂಡಿದ ಈ ಮರಣದಂಡನೆ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ ಇಸ್ರೇಲ್‌ಗೆ ಒತ್ತಾಯಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಇಸ್ರೇಲ್ ಹೊಂದಿರುವ ಬದ್ಧತೆಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ವಿಶ್ವಸಂಸ್ಥೆಯು ಎಲ್ಲಾ ಸಂದರ್ಭಗಳಲ್ಲೂ ಮರಣದಂಡನೆಯನ್ನು ವಿರೋಧಿಸುತ್ತದೆ. ಈ ಹೊಸ ಕಾನೂನಿನ ಜಾರಿಯು ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯನ್ನು ನಿಷೇಧಿಸುವ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಕಚೇರಿ ಎಕ್ಸ್‌ನಲ್ಲಿ ತಿಳಿಸಿದೆ.

ಮುಂದುವರಿದು, ಈ ಕಾನೂನು ಜನಾಂಗೀಯ ಪ್ರತ್ಯೇಕತೆ ಮತ್ತು ವರ್ಣಭೇದ ನೀತಿಯ ನಿಷೇಧದ ಮೇಲಿನ ಇಸ್ರೇಲ್‌ನ ಉಲ್ಲಂಘನೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಏಕೆಂದರೆ, ಇದು ಕೇವಲ ಆಕ್ರಮಿತ ಪಶ್ಚಿಮ ದಂಡೆ ಮತ್ತು ಇಸ್ರೇಲ್‌ನಲ್ಲಿರುವ ಪ್ಯಾಲೆಸ್ತೀನ್‌ನಿಯರಿಗೆ ಮಾತ್ರ ಅನ್ವಯಿಸುತ್ತದೆ, ಇವರಿಗೆ ಹೆಚ್ಚಾಗಿ ಅನ್ಯಾಯದ ವಿಚಾರಣೆಗಳ ನಂತರ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್

ಇಸ್ರೇಲ್ ಹೊಸ ಕಾನೂನನ್ನು ರದ್ದುಗೊಳಿಸಬೇಕು ಎಂದು ಜಾಗತಿಕ ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಒತ್ತಾಯಿಸಿದೆ. “ಇದು ‘ಕ್ರೌರ್ಯ, ತಾರತಮ್ಯ ಮತ್ತು ಮಾನವ ಹಕ್ಕುಗಳ ಬಗೆಗಿನ ಸಂಪೂರ್ಣ ತಿರಸ್ಕಾರದ ಸಾರ್ವಜನಿಕ ಪ್ರದರ್ಶನ” ಎಂದು ಬಣ್ಣಿಸಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸಂಶೋಧನೆ, ವಕಾಲತ್ತು, ನೀತಿ ಮತ್ತು ಪ್ರಚಾರಗಳ ಹಿರಿಯ ನಿರ್ದೇಶಕಿ ಎರಿಕಾ ಗುವೆರಾ-ರೋಸಾಸ್ ಅವರು, ಪ್ಯಾಲೆಸ್ತೀನ್ ಕೈದಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಸೈನಿಕರ ಮೇಲಿನ ಎಲ್ಲಾ ಆರೋಪಗಳನ್ನು ಇಸ್ರೇಲ್ ಕೈಬಿಟ್ಟ ಕೆಲವೇ ವಾರಗಳಲ್ಲಿ ಈ ಕಾನೂನು ಅಂಗೀಕಾರವಾಗಿದೆ ಎಂದಿದ್ದಾರೆ.

ವರ್ಷಗಳಿಂದ ಪ್ಯಾಲೆಸ್ತೀನಿಯರ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ಕಾನೂನು ಬಾಹಿರkNf ಹತ್ಯೆ ಸೇರಿದಂತೆ ಇತರ ಆತಂಕಕಾರಿ ದಮನ ಕ್ರಮಗಳನ್ನು ನೋಡುತ್ತಿದ್ದೇವೆ. ಇವುಗಳನ್ನು ಎಸಗುವವರು ಯಾವುದೇ ಶಿಕ್ಷೆಯಿಲ್ಲದೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವೇ ನಡೆಸುವ ಈ ಮರಣದಂಡನೆಗಳಿಗೆ ಅವಕಾಶ ನೀಡುವ ಹೊಸ ಕಾನೂನು ಅಂತಹ ನೀತಿಗಳ ಪರಮಾವಧಿಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೌನ್ಸಿಲ್ ಆಫ್ ಯುರೋಪ್

ಯುರೋಪ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಲೈನ್ ಬರ್ಸೆಟ್ ಅವರು, ಇಸ್ರೇಲ್‌ನ ಹೊಸ ಕಾನೂನಿನ ಅಂಗೀಕಾರವನ್ನು ‘ಗಂಭೀರ ಹಿನ್ನಡೆ’ ಎಂದು ಖಂಡಿಸಿದ್ದಾರೆ.

“ಮರಣದಂಡನೆಯು ಸಮಕಾಲೀನ ಮಾನವ ಹಕ್ಕುಗಳ ಮಾನದಂಡಗಳಿಗೆ ಹೊಂದಿಕೆಯಾಗದ ಒಂದು ಹಳೆಯ ಕಾಲದ ಕಾನೂನು ಪದ್ಧತಿಯಾಗಿದೆ. ಅಷ್ಟೇ ಅಲ್ಲದೆ, ತಾರತಮ್ಯದಿಂದ ಕೂಡಿದ ಯಾವುದೇ ರೀತಿಯ ಮರಣದಂಡನೆಯ ಅನ್ವಯವು ಕಾನೂನಿನ ಆಡಳಿತವಿರುವ ದೇಶದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಬರ್ಸೆಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ದೇಶವು ಯುರೋಪ್ ಕೌನ್ಸಿಲ್‌ನ ಹಲವಾರು ಒಪ್ಪಂದಗಳಿಗೆ ಬದ್ಧವಾಗಿದೆ ಮತ್ತು ಅದರ ವಿವಿಧ ಸಹಕಾರ ಕಾರ್ಯವಿಧಾನಗಳಲ್ಲಿ ಭಾಗವಹಿಸುತ್ತದೆ ಎಂಬ ಅಂಶವನ್ನೂ ಅವರು ನೆನಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಈ ಕಾನೂನಿಗೆ ಸಂಬಂಧಿಸಿದ ಮುಂಬರುವ ಬೆಳವಣಿಗೆಗಳನ್ನು ಯುರೋಪ್ ಕೌನ್ಸಿಲ್ ಸೂಕ್ಷ್ಮವಾಗಿ ಗಮನಿಸಲಿದೆ. ಇಸ್ರೇಲ್ ಸಹಿ ಮಾಡಿರುವ ಯುರೋಪ್ ಕೌನ್ಸಿಲ್ ಒಪ್ಪಂದಗಳ ಮೇಲೆ ಮತ್ತು ಅದು ಭಾಗವಹಿಸುವ ಸಹಕಾರ ಕಾರ್ಯವಿಧಾನಗಳ ಮೇಲೆ ಈ ಕಾನೂನು ಬೀರುವ ಪರಿಣಾಮಗಳನ್ನು ಕೌನ್ಸಿಲ್ ಪರಿಶೀಲಿಸಲಿದೆ ಎಂದು ಬರ್ಸೆಟ್ ಹೇಳಿದ್ದಾರೆ.

ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ

ಐರಿಶ್ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯು ಹೊರಡಿಸಿದ ಹೇಳಿಕೆಯಲ್ಲಿ ಐರ್ಲೆಂಡ್ ವಿದೇಶಾಂಗ ಸಚಿವೆ ಹೆಲೆನ್ ಮೆಕ್‌ಎಂಟೀ ಇಸ್ರೇಲ್‌ನ ಹೊಸ ಕಾನೂನನ್ನು ಖಂಡಿಸಿದ್ದಾರೆ. “ಈ ಹೊಸ ಕಾನೂನು ಪ್ಯಾಲೆಸ್ತೀನಿಯರಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ತಾರತಮ್ಯದ ಸ್ವರೂಪವನ್ನು ಹೊಂದಿರುವುದು ನನಗೆ ವಿಶೇಷವಾಗಿ ಕಳವಳ ಉಂಟುಮಾಡಿದೆ” ಎಂದು ಅವರು ಹೇಳಿದ್ದಾರೆ.

“ಬದುಕುವ ಹಕ್ಕು ಮೂಲಭೂತ ಮಾನವ ಹಕ್ಕು. ಐರ್ಲೆಂಡ್ ಎಲ್ಲಾ ಸಂದರ್ಭಗಳಲ್ಲಿ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ಮರಣದಂಡನೆಯ ಬಳಕೆಯನ್ನು ಸತತವಾಗಿ ಮತ್ತು ಬಲವಾಗಿ ವಿರೋಧಿಸುತ್ತದೆ” ಎಂದು ಹೇಳಿರುವ ಅವರು, ಈ ಕಾನೂನನ್ನು ಜಾರಿಗೆ ತರದಂತೆ ಇಸ್ರೇಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಟಲಿ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ

ಇಟಲಿಯ ವಿದೇಶಾಂಗ ಸಚಿವ ತಾಜಾನಿ ಅವರು ಈ ಕಾನೂನು ಅಧಿಕೃತವಾಗಿ ಅಂಗೀಕಾರವಾಗುವ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಹೊಸ ಮಸೂದೆಯನ್ನು ಹಿಂಪಡೆಯುವಂತೆ ಇಟಲಿ, ಜರ್ಮನಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ದೇಶಗಳು ಇಸ್ರೇಲ್ ಸರ್ಕಾರಕ್ಕೆ ವಿನಂತಿಸಿವೆ ಎಂದು ತಾಜಾನಿ ತಿಳಿಸಿದ್ದಾರೆ.

ವಿಶೇಷವಾಗಿ ವಿಶ್ವಸಂಸ್ಥೆಯಲ್ಲಿ ಮತದಾನದ ಮೂಲಕ ಅಂಗೀಕರಿಸಲಾದ ನಿರ್ಣಯಗಳ ಪ್ರಕಾರ, ಮರಣದಂಡನೆಯ ಮೇಲಿನ ತಡೆಯಾಜ್ಞೆಗೆ ಬದ್ಧರಾಗಿರಬೇಕು. ಈ ಬದ್ಧತೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಾಜಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿದ್ದಾರೆ.

“ನಮ್ಮ ಪಾಲಿಗೆ, ಜೀವನವು ಒಂದು ಸಂಪೂರ್ಣ ಮೌಲ್ಯವಾಗಿದೆ; ಶಿಕ್ಷೆಯನ್ನು ವಿಧಿಸುವ ಸಲುವಾಗಿ ಅದನ್ನು ಕಸಿದುಕೊಳ್ಳುವ ಹಕ್ಕನ್ನು ತನ್ನದಾಗಿಸಿಕೊಳ್ಳುವುದು ಮಾನವೀಯವಲ್ಲದ ಕ್ರಮವಾಗಿದೆ ಮತ್ತು ಇದು ವ್ಯಕ್ತಿಯ ಘನತೆಯನ್ನು ಉಲ್ಲಂಘಿಸುತ್ತದೆ” ಎಂದು ಅವರು ಹೇಳಿದ್ದಾರೆ.









 











ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...