ಉಪಚುನಾವಣೆ ಗೆಲ್ಲಲು ಬಿಜೆಪಿಯು ಅಕ್ರಮ ಮಾರ್ಗಗಳನ್ನು ಹಿಡಿದಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಹಣ ಚೆಲ್ಲುತ್ತಿದೆ. ಹುಣಸೂರು, ಕೆ.ಆರ್ ಪೇಟೆಗೆ ಪ್ರಚಾರಕ್ಕೆ ಬಂದ ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿಯವರ ಕಾರಿನಲ್ಲಿ ಯಥೆಚ್ಚ ಹಣವಿತ್ತು ಎಂಬ ಶಂಕೆಯಿದೆ. ಆದರೂ ತಪಾಸಣೆ ಮಾಡಲಿಲ್ಲ ಏಕೆ? ಎಂದು ಕಾಂಗ್ರೆಸ್ ಪಕ್ಷವು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ರವರಿಗೆ ದೂರು ನೀಡಿದೆ.
ವಿಡಿಯೋ ನೋಡಿ:
ಎಲ್ಲಾ ಅಕ್ರಮ ಅನ್ಯಾಯಗಳನ್ನು ಬಿಜೆಪಿ ಮಾಡುತ್ತಿದ್ದು ಆರೋಪ ಮಾತ್ರ ಕಾಂಗ್ರೆಸ್ ಮೇಲೆ ಹೊರಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಪ್ರಕಾಶ್ ರಾಥೋಡ್ ದೂರು ನೀಡಿದ್ದಾರೆ. ಗೃಹ ಸಚಿವರು ವಾಹನ ತಪಾಸಣೆಗೆ ಅವಕಾಶಕೊಡದೇ ಹಾಗೆಯೇ ತೆರಳುತ್ತಿದ್ದಾರೆ. ಇದರಿಂದ ನಮಗೆ ಹಣ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ನಮಗೆ ಅನುಮಾನಬಂದಿದೆ. ಒಂದು ವೇಳೆ ಅವರು ಹಣ ಸಾಗಾಣಿಕೆ ಮಾಡುತ್ತಿಲ್ಲವೆಂದರೆ ತಪಾಸಣೆಗೆ ಎದುರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಹುಣಸೂರು, ಕೆ.ಆರ್ ಪೇಟೆ ಎರಡು ಚೆಕ್ ಪೋಸ್ಟ್ಗಳಲ್ಲಿ ಬಸವರಾಜ ಬೊಮ್ಮಾಯಿಯವರು ತಪಾಸಣೆ ನಿರಾಕರಿಸಿ ಹಾಗೆ ತೆರಳಿದ್ದಾರೆ. ಇದು ಮಾದರಿ ನೀತಿ ಸಂಹಿತಿ ಉಲ್ಲಂಘಿಸಿದ್ದಲ್ಲವೇ ಎಂದು ಕಾಂಗ್ರೆಸ್ ದೂರಿದೆ.
ಕಾನೂನು ಪಾಲಿಸಬೇಕಾದ ಗೃಹಸಚಿವರಿಗೆ ಕಾನೂನು ಗೊತ್ತಿಲ್ಲವೇ? ಗೃಹ ಸಚಿವರೆ ಈ ರೀತಿ ಮಾಡಿದರೆ ಉಳಿದವರ ಕಥೆ ಏನು? ಇದು ಅಧಿಕಾರದ ದುರುಪಯೋಗವಲ್ಲವೇ ಎಂದು ಕಾಂಗ್ರೆಸ್ ಆರೋಪಿಸಿದೆ.