Homeಕರ್ನಾಟಕಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಸಾಂವಿಧಾನಿಕ ಹಕ್ಕು ಮತ್ತು ಕರ್ನಾಟಕ ಸರ್ಕಾರದ ವೈಫಲ್ಯ

- Advertisement -
- Advertisement -

ಫೆಬ್ರವರಿ 4ರಂದು ನಾವೆಲ್ಲ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾದೆವು. ಕುಂದಾಪುರದ ಸರಕಾರಿ ಕಾಲೇಜಿನ ಅಧ್ಯಾಪಕರು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತಲೆಯ ಮೇಲೆ ಹಿಜಾಬ್ ಧರಿಸಿ ಕಾಲೇಜಿನೊಳಗೆ ಬರುವುದನ್ನು ತಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಈ ಘಟನೆಯ ನಂತರ ಇದೇ ರೀತಿಯಲ್ಲಿ ವಿವೇಚನಾರಹಿತವಾಗಿ ಉಡುಪಿಯ ಸರಕಾರಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸದಂತೆ ತಡೆಯಲಾಯಿತು. ಈ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸದ ವಿವಾದ ಉಡುಪಿಯ ಸರಕಾರಿ ಕಾಲೇಜಿನಿಂದಲೇ ಪ್ರಾರಂಭವಾಗಿತ್ತು.

ಸದಾ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಯಾವುದೇ ಮುನ್ಸೂಚನೆ ನೀಡದೆ, ಅಚಾನಕ್ಕಾಗಿ ಒಂದು ದಿನ ಪ್ರವೇಶ ನಿರಾಕರಿಸಲಾಯಿತು. ಆಗ ವಿದ್ಯಾರ್ಥಿಗಳು ಹೇಳಿದ್ದು ಹೀಗೆ ವರದಿಯಾಗಿದೆ: “ನಾವು ವಿದ್ಯಾರ್ಥಿಗಳು, ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೇವೆ. ಆದರೆ ಈಗ ಮಾತ್ರ ಅದನ್ನು ಸಮಸ್ಯೆಯನ್ನಾಗಿಸಲಾಗಿದೆ”. ಹಿಜಾಬ್ ಎಂಬುದು ಇದ್ದಕ್ಕಿದ್ದಂತೆಯೇ ಒಂದು ಸಮಸ್ಯೆಯಾಗಿದ್ದು ಈಗ ಅತ್ಯಂತ ಆಳದ ಮಹತ್ವ ಪಡೆದುಕೊಂಡಿದೆ. ಇದು ಸರಕಾರ ತೆಗೆದುಕೊಂಡ ಕ್ರಮದ ಬೇಕಾಬಿಟ್ಟಿಯಾದ ವಿವೇಚನಾರಹಿತವಾದ ಸ್ವರೂಪವನ್ನು ಎತ್ತಿತೋರಿಸುತ್ತದೆ. ಸರಕಾರದ ಈ ವಿವೇಚನಾರಹಿತ ಕ್ರಮ ಪ್ರಮುಖ ಪ್ರಶ್ನೆಯಾಗಬೇಕೇ ಹೊರತು ಹಿಜಾಬ್ ಎಂಬುದು ಇಸ್ಲಾಂಗೆ ಅತ್ಯಗತ್ಯವೋ ಇಲ್ಲವೋ ಎಂಬುದಲ್ಲ. ಏಕೆಂದರೆ, ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕಿದೆ ಹಾಗೂ ಪರೀಕ್ಷೆಗೆ ಎರಡು ತಿಂಗಳ ಮುನ್ನ ತರಗತಿಗೆ ಹಾಜರಾಗದಂತೆ ಇದ್ದಕ್ಕಿದ್ದಂತೆ ಅರ್ಥರಹಿತವಾಗಿ ತಡೆಯಲು ಸಾಧ್ಯವಿಲ್ಲ.

ಕರ್ನಾಟಕ ಸರಕಾರವು ಶಿಕ್ಷಣದ ಹಕ್ಕು ಮತ್ತು ತಾರತಮ್ಯರಹಿತ ಜೀವನದ ಹಕ್ಕು (ಇವುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಹೊಣೆ ಹೊಂದಿದೆ), ಇವೆರಡರ ಉಲ್ಲಂಘನೆ ಆಗಿರುವುದನ್ನು ಉಪೇಕ್ಷಿಸಿದೆ. ಹಾಗೂ ಅದರ ಬದಲಿಗೆ ಒಂದು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದ ಕಿತಾಪತಿಯ ಆದೇಶವನ್ನು ಹೊರಡಿಸಿತು. ಅದರಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹಿಂದಿನ ಆದೇಶಗಳು ’ತಲೆಯ ಮೇಲೆ ಹೊದ್ದುಕೊಳ್ಳುವ ಸ್ಕಾರ್ಫ್ ಅಥವಾ ಬಟ್ಟೆಯನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತಪ್ಪಾಗಿ ಉಲ್ಲೇಖಿಸಿದೆ. ಇದು ಹಿಂದೆ ಬಂದ ಆದೇಶಗಳ ತಪ್ಪು ಗ್ರಹಿಕೆಯಾಗಿದೆ. ಆ ಆದೇಶಗಳು ವಾಸ್ತವದಲ್ಲಿ ಹಿಜಾಬ್ ಧರಿಸುವ ಹಕ್ಕು ವರ್ಸಸ್ ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ತಡೆಯಲು ಕಾಲೇಜುಗಳಿಗೆ ಇರುವ ಹಕ್ಕುಗಳ ಬಗ್ಗೆ ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿಪಡಿಸುವ ಹಕ್ಕುಗಳು ವರ್ಸಸ್ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಇರುವ ಹಕ್ಕುಗಳನ್ನು ಬ್ಯಾಲೆನ್ಸ್ ಮಾಡುವ ಪ್ರಕರಣಗಳಲ್ಲಿ ಬಂದಿದ್ದ ಆದೇಶಗಳಾಗಿವೆ.

ಈ ಅಧಿಸೂಚನೆಯಲ್ಲಿ ’ತಲೆಯನ್ನು ಮರೆಮಾಚುವ ಬಟ್ಟೆ ಅಥವಾ ಹೆಡ್‌ಸ್ಕಾರ್ಫ್‌ಅನ್ನು ನಿಷೇಧಿಸುವುದು ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಆಗುವುದಿಲ್ಲ’ ಎಂದು ತೀರ್ಮಾನಿಸುತ್ತದೆ. ಹಾಗೂ ಸರಕಾರಿ ಕಾಲೇಜುಗಳಲ್ಲಿ ಯಾವುದೇ ಸಮವಸ್ತ್ರ ನಿಗದಿಪಡಿಸದೇ ಇದ್ದಲ್ಲಿ, ಧರಿಸುವ ಬಟ್ಟೆಗಳು ’ಏಕತೆ, ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ’ಯ ಹಿತಾಸಕ್ತಿಗಳ ಮೇರೆಗೆ ಇರಬೇಕು ಎಂದು ಹೇಳುತ್ತದೆ. ಇದು ಕಾಲೇಜಿನ ಅಭಿವೃದ್ಧಿ ಸಮಿತಿಗಳಿಗೆ ಯಾವ ಸಮವಸ್ತ್ರ ಇರಬೇಕು ಎಂದು ನಿರ್ಣಯಿಸಲು ಅಧಿಕಾರ ನೀಡುತ್ತದೆ.

ಈ ಅಪಾಯಕಾರಿ ಅಧಿಸೂಚನೆಯೊಂದಿಗೆ ಕರ್ನಾಟಕ ಸರಕಾರವು ತಾನು ನೇರವಾಗಿ ಮಾಡಲು ಹಿಂಜರಿದ ಕೆಲಸವನ್ನು ಸುತ್ತುಬಳಸಿ ಮಾಡುತ್ತಿರುವುದು ತಿಳಿಯುತ್ತದೆ. ಸಮಾಜದಲ್ಲಿ ಜನರು ಅದನ್ನು ಮಾಡಬಾರದು, ಇದನ್ನು ಮಾಡಬಾರದು ಎಂದು ಹೇಳುವ ವಿಜಿಲಾಂಟೆ ಶಕ್ತಿಗಳಿಗೆ (ಸ್ವಘೋಷಿತ ನೈತಿಕ ಪೊಲೀಸರ) ಮತ್ತು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ರಹಸ್ಯವಾದ ಸಂದೇಶ ನೀಡಿದಂತೆ ಕಾಣುವ ಸರಕಾರವು ಅವರಿಗೆ ಹೇಳುತ್ತಿರುವುದೇನೆಂದರೆ, ಹಿಜಾಬ್ ಧರಿಸುವುದನ್ನು ಸಂವಿಧಾನ 25ನೇ ವಿಧಿಯಲ್ಲಿ ರಕ್ಷಣೆ ನೀಡಲಾಗಿಲ್ಲ ಹಾಗೂ ಈ ಶಕ್ತಿಗಳು ತಮಗಿಷ್ಟ ಬಂದಂತೆ ಮುಂದುವರೆದು ಹಿಜಾಬ್‌ಅನ್ನು ನಿಷೇಧಿಸಿ ಎಂದಿದೆ. ಈಗ ಈ ವಿಜಿಲಾಂಟೆ ಶಕ್ತಿಗಳಿಗೆ ಸಂದೇಶ ತಲುಪಿದೆ ಹಾಗೂ ಅವರುಗಳು ಸರಕಾರದ ನಿಜವಾದ ಆದರೆ ಗುಪ್ತವಾದ ಉದ್ದೇಶವನ್ನು ನೆರವೇರಿಸಲು ಹೊರಟಿದ್ದಾರೆ. ಫೆಬ್ರವರಿ 8ರಂದು, ಕೇಸರಿ ಶಾಲನ್ನು ಹೊದ್ದ ಕಿಡಿಗೇಡಿಗಳು ಜೈ ಶ್ರೀರಾಮ ಘೋಷಣೆ ಕೂಗುತ್ತ, ಕಾಲೇಜಿಗೆ ಹೋಗುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ಹೆದರಿಸಿ, ಕಿರುಕುಳ ನೀಡಿದರು. ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಸ್ಲಿಂ ಯುವತಿಯರು ತಮ್ಮ ಶಿಕ್ಷಣದ ಹಕ್ಕನ್ನು ಪಡೆಯುವುದನ್ನು ತಡೆಯಲಾಯಿತು. ಇಷ್ಟೆಲ್ಲ ಆದರೂ ಕರ್ನಾಟಕ ಸರಕಾರ ಮೂಕ ಪ್ರೇಕ್ಷಕನಾಗಿಯೇ ಇತ್ತು.

ಈ ಅಧಿಸೂಚನೆಯ ಮೂಲಕ ಕರ್ನಾಟಕ ಸರಕಾರ ಹೇಳುತ್ತಿರುವುದೇನೆಂದರೆ, ಮುಸ್ಲಿಂ ಬಾಲಕಿಯರ ಶಿಕ್ಷಣದ ಹಕ್ಕನ್ನು ರಕ್ಷಿಸುವ ಯಾವ ಜವಾಬ್ದಾರಿಯೂ ತಮಗಿಲ್ಲ ಎಂದು ಹಾಗೂ ಹಿಜಾಬ್ ಧರಿಸುವ ಮುಸ್ಲಿಂ ಬಾಲಕಿಯರನ್ನು ನಿಷೇಧಿಸುವ, ಅವಮಾನಿಸುವ, ಅವರನ್ನು ಹೊರಗಿಡುವುದು ಮುಂತಾದೆಲ್ಲವುಗಳಿಗೆ ಅನುವು ಮಾಡಿಕೊಡಲಾಗಿದೆ ಎಂದು. ಇದು ಒಂದು ಸಂವಿಧಾನಾತ್ಮಕವಾಗಿ ಚುನಾಯಿತ ಸರಕಾರಕ್ಕೆ ಸಂಬಂಧಪಟ್ಟಂತೆ, ತನ್ನ ಜವಾಬ್ದಾರಿಯನ್ನು ಕಳಚಿಕೊಳ್ಳುವ ಅತ್ಯಂತ ಆಘಾತಕಾರಿಯಾದ ನಡೆಯಾಗಿದೆ.

ಯಾವಾಗ ಒಂದು ಸರಕಾರ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗುತ್ತದೆಯೋ, ಆಗ ಆ ಜವಾಬ್ದಾರಿ ಅದರ ನಾಗರಿಕರ ಮೇಲೆ ಬೀಳುತ್ತದೆ. ಬಿ.ಕಾಂ ಓದುತ್ತಿರುವ ಒಬ್ಬ ಮುಸ್ಲಿಂ ಯುವತಿ ಮುಸ್ಕಾನ್ ಕಾಲೇಜಿನ ಕ್ಯಾಂಪಸ್ಸಿನಲ್ಲಿ ತನ್ನ ವಾಹನದಲ್ಲಿ ಬಂದು, ಕೇಸರಿ ಶಾಲನ್ನು ಹೊದ್ದು ಪೀಡಿಸುತ್ತಿದ್ದ ಹೇಡಿಗಳನ್ನು ಧೈರ್ಯದಿಂದ ಎದುರಿಸಿದ್ದನ್ನು ಇಡೀ ಜಗತ್ತೇ ನೋಡಿತು. ಅವಳ ಧೈರ್ಯ, ಅವಳ ಆತ್ಮಸ್ಥೈರ್ಯ ಹಾಗೂ ತನ್ನ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು, ಶಿಕ್ಷಣದ ಹಕ್ಕು ಮತ್ತು ತಾರತಮ್ಯಕ್ಕೆ ಒಳಗಾಗದೇ ಇರುವ ಹಕ್ಕನ್ನು ಅವಳು ನಿರ್ಭೀತಿಯಿಂದ ಮತ್ತು ಘನತೆಯಿಂದ ಪ್ರತಿಪಾದಿಸಿದ್ದು, ಸಂವಿಧಾನದ ತತ್ವಗಳಾದ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ನಿಜ ಅರ್ಥದ ಪ್ರದರ್ಶನವಾಗಿತ್ತು.

ಯಾವಾಗ ಎಲ್ಲಾ ಸಂಸ್ಥೆಗಳ ಹೊಣೆಗಾರಿಕೆ ವಿಫಲವಾಗುತ್ತದೋ, ಆಗ ಹೊಣೆಗಾರಿಕೆಯನ್ನು
ಖಾತ್ರಿಪಡಿಸುವ ಜವಾಬ್ದಾರಿ ಅಂತಿಮವಾಗಿ ನ್ಯಾಯಾಂಗದ ಮೇಲೆ ಬೀಳುತ್ತದೆ. ದುರದೃಷ್ಟವಶಾತ್, ಕರ್ನಾಟಕ ಉಚ್ಚ ನ್ಯಾಯಾಲಯ ಏಕ ಸದಸ್ಯ ಪೀಠವು ಮುಸ್ಲಿಂ ಯುವತಿಯರಿಗೆ ತಾತ್ಕಾಲಿಕ/ಮಧ್ಯಂತರ ಪರಿಹಾರ ನೀಡಬೇಕು ಹಾಗೂ ಎರಡು ತಿಂಗಳ ನಂತರ ನಡೆಯಲಿರುವ ಪರೀಕ್ಷೆಯ ತನಕ, ಅವರಿಗೆ ತಾವು ಮುಂಚೆ ಧರಿಸಿದಂತೆ ಬಟ್ಟೆ ಧರಿಸಿ ಬರಲು ಅವಕಾಶ ಮಾಡಿಕೊಡಬೇಕು ಎಂಬ ಅರ್ಜಿದಾರರ ಮನವಿಗೆ ಕದಲಲಿಲ್ಲ. ಹಿಜಾಬ್ ಧರಿಸಿ ಪರೀಕ್ಷೆಗಳಲ್ಲಿ ಹಾಜರಾಗಲು ಅನುಮತಿ ನೀಡಲು, ಮಧ್ಯಂತರ ಪರಿಹಾರಕ್ಕಾಗಿ ಸಲ್ಲಿಸಿದ ಮನವಿಯನ್ನು ವಿರೋಧಿಸಿ ಕರ್ನಾಟಕ ಸರಕಾರವು ತನ್ನ ಕ್ರೌರ್ಯವನ್ನು ಮೆರೆಯಿತು. ವಿಷಯವು ಕರ್ನಾಟಕ ಉಚ್ಚ ನ್ಯಾಯಾಲಯದ ಪೂರ್ಣ ಪೀಠಕ್ಕೆ ತಲುಪಿದಾಗ, ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಚಾರಣೆಯ ಮುಂದಿನ ದಿನಾಂಕದ ತನಕ ಕಾಲೇಜಿನ ಅಭಿವೃದ್ಧಿ ಸಮಿತಿಗಳು ಆದೇಶಿಸಿದಲ್ಲಿ ಹಿಜಾಬ್‌ಗಳನ್ನು ಧರಿಸುವ ಹಕ್ಕನ್ನು ನಿರಾಕರಿಸುವುದನ್ನು ಕಾನೂನುಬದ್ಧಗೊಳಿಸಿತು. ಅಂದರೆ ಉಚ್ಚ ನ್ಯಾಯಾಲಯ ಮಾಡಿದ್ದೇನೆಂದರೆ, ಸರಕಾರದ ಬೇಜವಾಬ್ದಾರಿತನ ಹಾಗೂ ಕಾನೂನಿನ ವಿರುದ್ಧದ ಕ್ರಮಗಳಿಗೆ ಒಂದು ರೀತಿಯ ಲೈಸನ್ಸ್ ಕೊಟ್ಟಿದ್ದು. ಉಚ್ಚ ನ್ಯಾಯಾಲಯವು ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಅಂಶವೇ ಎಂಬ ಪ್ರಶ್ನೆಗೆ ಗಮನ ಹರಿಸುವುದರೊಂದಿಗೆ, ಅದಕ್ಕೂ ಮುಖ್ಯವಾದ ವಿಷಯವನ್ನು ನಿರ್ಲಕ್ಷಿಸಿದೆ; ಅದೇನೆಂದರೆ ಕೇವಲ ಹಿಜಾಬ್ ಧರಿಸಿದ್ದರೆಂದು ಮುಸ್ಲಿಂ ಯುವತಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವುದರ ಪ್ರಶ್ನೆ. ಇಂದಿನಿಂದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿದ ಕಾರಣಕ್ಕೆ ಅವರಿಗೆ ಕಾಲೇಜಿನಲ್ಲಿ ಮತ್ತು ಶಾಲೆಗಳಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ನಿಜ ಆತ್ಮಸಾಕ್ಷಿಯೊಂದಿಗೆ ಅಂದರೆ ಸಕಾರಣಗಳೊಂದಿಗೆ ಹೇಳಬಲ್ಲದೇ? ಇದೇ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಬೇಕಿತ್ತು ಆದರೆ ದುರದೃಷ್ಟವಷಾತ್ ಹಾಗಾಗಲಿಲ್ಲ.

ಮುಸ್ಕಾನ್

ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ವೈಫಲ್ಯದ ಸಮಯದಲ್ಲಿ ನಾಗರಿಕ ಸಮಾಜದ ಧ್ವನಿ ಮತ್ತು ಮಾಧ್ಯಮಗಳು ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ. ಎಲ್ಲಿಯವರೆಗೆ ಸಂವಿಧಾನಿಕ ಅಂತಸ್ಸಾಕ್ಷಿ ಎಚ್ಚರಗೊಳ್ಳುವುದಿಲ್ಲವೋ ಹಾಗೂ ಕರ್ನಾಟಕ ಸರಕಾರ ಸಂವಿಧಾನದ ಅನುಗುಣವಾಗಿ ಕೆಲಸ ಮಾಡುವುದಿಲ್ಲವೋ, ಅಲ್ಲಿಯವರೆಗೆ ಮಾಧ್ಯಮ ಮತ್ತು ನಾಗರಿಕ ಸಮಾಜ ಈ ಜವಾಬ್ದಾರಿಯನ್ನು ಹೊರಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ನ ರಾಜ್ಯಾಧ್ಯಕ್ಷರು


ಇದನ್ನೂ ಓದಿ: ಹಿಜಾಬ್‌-ಕೇಸರಿ ಶಾಲು ವಿವಾದ: ಸಾಮರಸ್ಯಕ್ಕೆ ಧರ್ಮಗುರುಗಳ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...