Homeಮುಖಪುಟಸಂವಿಧಾನದ ಆಶಯಕ್ಕೆ ವಿರುದ್ಧವಾದ ಮತಾಂತರದ ಚರ್ಚೆಗಳು: ಡಾ.ಹೆಚ್.ಸಿ ಮಹದೇವಪ್ಪ

ಸಂವಿಧಾನದ ಆಶಯಕ್ಕೆ ವಿರುದ್ಧವಾದ ಮತಾಂತರದ ಚರ್ಚೆಗಳು: ಡಾ.ಹೆಚ್.ಸಿ ಮಹದೇವಪ್ಪ

“ಧಾರ್ಮಿಕ ಮತ್ತು ಸಾಮಾಜಿಕ ಘನತೆಯನ್ನು ಬಯಸಿ ಆಗುವ ಮತಾಂತರವನ್ನು ಯಾರಾದರೂ ಕೂಡಾ ಅಣಕಿಸಿದರೆ ಅಂತಹ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆಯಿರಿ” ಎಂದು ಬಾಬಾ ಸಾಹೇಬರು ಹೇಳುತ್ತಾರೆ.

- Advertisement -
- Advertisement -

ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸುವ ಕುರಿತಂತೆ ರಾಜ್ಯ ಸರ್ಕಾರದ ಸಚಿವರು ಮಾತನಾಡಲು ಆರಂಭಿಸಿರುವ ಬೆನ್ನಲ್ಲೇ ಮತಾಂತರದ ಕುರಿತಂತೆ ಚರ್ಚೆಗಳು ಮುನ್ನಲೆಗೆ ಬಂದಿವೆ. ಭಾರತೀಯ ಸಂವಿಧಾನದಲ್ಲಿ 25 -28 ನೇ ವಿಧಿಯ ಅನುಸಾರ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಸ್ವಾತಂತ್ರ್ಯದ ಹಕ್ಕು ಕೂಡಾ ಒಂದು. ನಮ್ಮಲ್ಲಿನ ಧಾರ್ಮಿಕ, ಭೌಗೋಳಿಕ ಹಾಗೂ ಜನಾಂಗೀಯ ಹಾಗೂ ಇನ್ನಿತರೆ ವೈವಿಧ್ಯತೆಯ ಕಾರಣದಿಂದಾಗಿಯೇ 1976 ರಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿ ತಿದ್ದುಪಡಿ ತಂದು ಭಾರತವನ್ನು ಜಾತ್ಯಾತೀತ ದೇಶವೆಂದು ಕರೆಯಲಾಗಿದೆ.

ಇನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತದ ಯಾವುದೇ ಪ್ರಜೆಯೂ ಕೂಡಾ ಶಾಂತಿಯುತವಾಗಿ ಸಂವಿಧಾನದ ಚೌಕಟ್ಟಿನಲ್ಲಿ ತಾನು ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರಚಾರ ಮಾಡಬಹುದಾಗಿದೆ. ಆದರೆ ಧಾರ್ಮಿಕ ಸಾಮರಸ್ಯವನ್ನು ಮೂಡಿಸುವ ಉದ್ದೇಶದಿಂದ ಸಂವಿಧಾನದಲ್ಲಿ ನೀಡಿದ ಈ ಅವಕಾಶವನ್ನು ಅರ್ಥ ಮಾಡಿಕೊಳ್ಳದೇ ಬಹಳಷ್ಟು ಮಂದಿ ಎಡವಿದ್ದಾರೆ. ಹಾಗಾಗಿಯೇ ಧಾರ್ಮಿಕ ಅಸಹನೆ ಉಂಟಾಗಿ ಕೋಮು ಗಲಭೆಗಳು ಉಂಟಾಗಿದ್ದು 1984 ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ಖರ ಹತ್ಯೆ, 1990 ರಲ್ಲಿ ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ನಡೆದ ಹಿಂದೂ ವಿರೋಧಿ ಕಲಹಗಳು, 2002 ರ ಗುಜರಾತ್ ಹತ್ಯಾಕಾಂಡ ಹಾಗೂ 2008 ರಲ್ಲಿ ಓರಿಸ್ಸಾದಲ್ಲಿ ನಡೆದ ಕ್ರೈಸ್ತರ ಕಲಹಗಳನ್ನು ನಾವು ಕಾಣಬಹುದು.

ಜಾತ್ಯಾತೀತ ತತ್ವಗಳ ನಮ್ಮ ದೇಶದಲ್ಲಿ ಆಯಾ ರಾಜ್ಯಗಳಲ್ಲಿ ನಿರ್ದಿಷ್ಟವಾದ ಧಾರ್ಮಿಕ ಆಚರಣೆಗಳಿವೆ. ಉದಾಹರಣೆಗೆ ಮುಸ್ಲೀಮರು ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ಇಸ್ಲಾಂ ಧರ್ಮದ ಆಚರಣೆಗಳು ಹೆಚ್ಚಾಗಿದ್ದರೆ, ಸಿಖ್ಖರು ಹೆಚ್ಚಾಗಿರುವ ಪಂಜಾಬಿನಲ್ಲಿ ಸಿಖ್ ಧರ್ಮದ ಆಚರಣೆಗಳು ಹೆಚ್ಚಾಗಿವೆ. ಇನ್ನು ಕ್ರೈಸ್ತ ಸಮುದಾಯದ ಜನರು ಹೆಚ್ಚಾಗಿರುವ ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ಆ ಧರ್ಮದ ಆಚರಣೆಗಳು ಜನ ಸಾಮಾನ್ಯರ ಸಹಜ ಸಂಪ್ರದಾಯಗಳಂತಿವೆ. ಇನ್ನು ಸಿಕ್ಕಿಂ, ಲಡಾಕ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ಡಾರ್ಜಿಲಿಂಗ್ ನಲ್ಲಿ ಬೌದ್ಧರ ಜನಸಂಖ್ಯೆಯು ಗಣನೀಯವಾಗಿದೆ. ಸಿಖ್, ಬೌದ್ಧ, ಜೈನ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮಗಳು ಭಾರತದ ಪ್ರಾದೇಶಿಕ ಅಸ್ಮಿತೆಯ ಭಾಗವಾಗಿದ್ದು ಮುಸ್ಲೀಮರು ಅಲ್ಪಸಂಖ್ಯಾತರ ವಿಭಾಗದಲ್ಲಿ ಹೆಚ್ಚಿನ ಜನರನ್ನು ಹೊಂದಿದ ಸಮುದಾಯವಾಗಿದ್ದಾರೆ. ಹೀಗಿರುವಾಗಿ ಇಲ್ಲಿನ ಧಾರ್ಮಿಕ ವೈವಿಧ್ಯತೆಗಳನ್ನು ಅರ್ಥ ಮಾಡಿಕೊಳ್ಳದೇ ಕಲಹಗಳನ್ನು ಉಂಟು ಮಾಡಬಲ್ಲಂತಹ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿರುವುದು ಅರ್ಥಹೀನ

ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸ್ಥಾಪಕರಾದ ರಜನಿ ಕೊಠಾರಿ ಅವರು “ಭಾರತವು ಮೂಲತಃ ಸಹಿಷ್ಣುತೆಯ ತತ್ವದ ಮೇಲೆ ನಿರ್ಮಿಸಲ್ಪಟ್ಟ ನಾಗರೀಕ ದೇಶವಾಗಿದೆ” ಎಂದು ಅಭಿಪ್ರಾಯ ಪಡುತ್ತಾರೆ. ಅದು ವಾಸ್ತವವೂ ಕೂಡಾ.

ಆದರೆ ಸಂವಿಧಾನದ ಆಶಯಗಳ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಸಂವಿಧಾನದ ಕುರಿತು ಗೌರವ ಇಲ್ಲದ ಬಿಜೆಪಿಗರು ಧಾರ್ಮಿಕ ಅಸಹಿಷ್ಣುತೆಯನ್ನು ಹಬ್ಬುವ ಮೂಲಕ ಭಾರತದ ಸಾಮರಸ್ಯವನ್ನು ಹಾಳು ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಕರೋನಾ ಮತ್ತು ಒಮೈಕ್ರಾನ್ ವೈರಸ್ ನ ತೊಂದರೆ ಇರುವ ಮತ್ತು ಜನ ಸಾಮಾನ್ಯರು ಬೆಲೆ ಏರಿಕೆ ಹಾಗೂ ಸರ್ಕಾರದ ದುರಾಡಳಿತದಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಧಾರ್ಮಿಕ ಕಲಹವನ್ನು ಸೃಷ್ಟಿಸಲು ಮುಂದಾಗಿರುವ ಇವರು ಅಸಂವಿಧಾನಿಕವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ನಿಜಕ್ಕೂ ಜನ ಸಾಮಾನ್ಯರ ಸಂಕಷ್ಟಗಳ ನಡುವೆ ಇವರು ಮಾಡುತ್ತಿರುವ ಕಪಿಚೇಷ್ಟೆಗಳು ತೀರಾ ಅಮಾನವೀಯವಾಗಿರುವಂತಹವು.

ಮತಾಂತರ ಎಂಬುದು ಸಂವಿಧಾನವು ವ್ಯಕ್ತಿಯೊಬ್ಬನಿಗೆ ನೀಡಿದ ಆಯ್ಕೆ. ಇಂತಹ ಸಂವಿಧಾನಿಕ ಆಯ್ಕೆಯನ್ನೇ ನಿಷೇಧಿಸಲು ಹೊರಟಿರುವ ಬಿಜೆಪಿಗರಿಗೆ ಸಂವಿಧಾನ ಎಂದರೇನು ಎಂದು ಇನ್ನೂ ಅರ್ಥವಾದಂತೆ ತೋರುತ್ತಿಲ್ಲ. ಕೇವಲ ಆರ್ ಎಸ್ ಎಸ್ ನ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ರಾಜ್ಯವನ್ನು ಕಲಹದ ಕೇಂದ್ರವಾಗಿ ಮಾರ್ಪಡಿಸಲು ಹೊರಟಿರುವ ಮತ್ತು ಸಂವಿಧಾನದ ಮೂಲ ಆಶಯವನ್ನೇ ಅರಿಯದೇ ಅಜ್ಞಾನದಿಂದ ವರ್ತಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು ಅಸಂವಿಧಾನಿಕವಾಗಿ ವರ್ತಿಸುತ್ತಿದ್ದು ತಾವು ಮುಖ್ಯಮಂತ್ರಿ ಆಗಿರುವುದು ಸಂವಿಧಾನದ ಬಲದಿಂದ ಎಂಬುದನ್ನು ಮರೆತು ವರ್ತಿಸುತ್ತಿರುವುದು ದುರಂತ!

ಸಂವಿಧಾನಿಕ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಸೇವೆಗಾಗಿ ಆಯ್ಕೆಯಾಗಿರುವ ಬಿಜೆಪಿಯ ಜನ ಪ್ರತಿನಿಧಿಗಳು ಧರ್ಮದ ಹೆಸರಲ್ಲಿ ಜನ ಸಾಮಾನ್ಯರ ಹಿತಕ್ಕೆ ವಿರುದ್ಧವಾದ ಮೌಢ್ಯದ ಪ್ರತಿಪಾದಕರಾಗಿ ಬದಲಾಗಿರುವುದು ಅವರ ದುರ್ಬಲ ಮನಸ್ಥಿತಿಯ ಮತ್ತು ಅತಿ ಅಜ್ಞಾನದ ಪ್ರತೀಕವಾಗಿದೆ.

ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಆಗುವುದು ಹಿಂದೂ ಧರ್ಮದ ಉಳಿವಿಗೆ ಉಂಟಾಗುವ ಅಪಾಯವಾಗಿರುವುದರಿಂದ ಅದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಬಿಜೆಪಿಗರು ತಮ್ಮದು ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಶೋಷಣೆಯನ್ನು ವಿಜೃಂಭಿಸುವ ಧರ್ಮ ಎಂಬುದನ್ನು ಮರೆಯಬಾರದು

ಈ ಹೊತ್ತಿಗೂ ಹಿಂದೂ ಧರ್ಮದ ಪರಿಧಿಯ ಒಳಗೆ ಜಾತಿಯ ಅಸಮಾನತೆಯ ಕಾರಣಕ್ಕೆ ದೌರ್ಜನ್ಯ ಅನುಭವಿಸುತ್ತಿರುವ ಮತ್ತು ಅನಗತ್ಯವಾಗಿ ಕೀಳರಿಮೆಯನ್ನು ಅನುಭವಿಸುತ್ತಿರುವ ಜನ ಸಮುದಾಯಕ್ಕೆ ಎಂದಿಗೂ ಕೂಡಾ ಹಿಂದೂ ಧರ್ಮ ಪ್ರೀತಿ ತೋರಿಸುವ ಮತ್ತು ಘನತೆಯಿಂದ ನಿಯಂತ್ರಿಸುವ ಪ್ರಯತ್ನವನ್ನು ಮಾಡಿಲ್ಲ. ಯಾವಾಗಲೋ ಒಮ್ಮೆ ಸಾರ್ವಜನಿಕವಾಗಿ ನೆನಪಾದಾಗ ಬರೀ ಬಾಯಿ ಮಾತಲ್ಲಿ ಆದರ್ಶ ಸಮಾಜದ ಬಗ್ಗೆ ಪ್ರವಚನ ನೀಡುವ ಮಂದಿ, ಅಂತರಂಗದಲ್ಲಿ ಅಸಮಾನತೆಯನ್ನು ಆರಾಧಿಸುವವರಾಗಿದ್ದಾರೆ. ದುರ್ದೈವ ಎಂದರೆ ಇದೇ ನೀಚ ಮನಸ್ಥಿತಿಗಳೇ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿರುವ ಮೀಸಲಾತಿ ಹಾಗೂ ಇನ್ನಿತರೆ ಜನಪರ ಯೋಜನೆಗಳ ಜಾರಿಯ ವಿರೋಧಿಗಳಾಗಿದ್ದಾರೆ. ಇವರ ಬಾಯಿಂದ ಯಾವತ್ತೂ ಕೂಡಾ ಶೋಷಣೆಯ ವಿರುದ್ಧ ಪ್ರತಿರೋಧದ ದನಿ ಹೊರಡುವುದಿಲ್ಲ, ಸಮಾನತೆಗಾಗಿ ಹೋರಾಟವಂತೂ ಇಲ್ಲವೇ ಇಲ್ಲ. ದಿನ ಬೆಳಗಾದರೆ ಶೋಷಣೆಯನ್ನೇ ಅಸ್ತ್ರ ಮಾಡಿಕೊಂಡು ನಮ್ಮ ಧರ್ಮ ಬಿಟ್ಟು ಹೋಗಬೇಡಿ ಎಂದರೆ ಅದಕ್ಕೆ ನಗದೆ ಇನ್ನೇನು ಮಾಡಬೇಕು?

ಹಿಂದೂ ಧರ್ಮದ ಒಳಗೆ ಪ್ರಜ್ಞಾ ಪೂರ್ವಕವಾಗಿಯೇ ಆಚರಿಸುತ್ತಿರುವ ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯಂತಹ ಅಮೇದ್ಯದ ವಿರುದ್ಧ ನಿರಂತರ ಹೋರಾಟ ನಡೆಸಿ, ಸಮಾಜದಲ್ಲಿ ಸಮಾನತೆ ಎಂಬುದು ಒಂದು ದೇಶದ ಆರೋಗ್ಯಕರ ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಎಷ್ಟು ಮುಖ್ಯ ಎಂಬ ಸಂಗತಿಯನ್ನು ಮನ ಮುಟ್ಟುವಂತೆ ಪ್ರತಿಪಾದಿಸಿದರೂ ಹಿಂದೂ ಧರ್ಮ ಸುಧಾರಣೆ ಮಾಡುವಲ್ಲಿ ಬಾಬಾ ಸಾಹೇಬರು ಯಶಸ್ಸು ಕಾಣಲಿಲ್ಲ. ಹೀಗಾಗಿಯೇ ಬೇಸರಗೊಂಡ ಅವರು ಹಿಂದೂ ಧರ್ಮವನ್ನು ತೊರೆಯುವಂತಹ ಪರಿಸ್ಥಿತಿ ಉಂಟಾಯಿತು.

ತನ್ನ ಸಹಜೀವಿಗಳೆಲ್ಲಾ ಘನತೆಯಿಂದ ಇರಬೇಕೆಂದು ಬಯಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಂತಹ ಮಹಾನ್ ವ್ಯಕ್ತಿಯನ್ನೇ ಸಂಕಟದಲ್ಲಿ ಮುಳುಗಿಸಿದ ಇವರ ಧರ್ಮದ ಕಲ್ಪನೆಯಲ್ಲಿ ಯಾವುದೇ ಪ್ರಾಮಾಣಿಕತೆ ಉಳಿದಿಲ್ಲ ಎಂಬುದನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ವಿಷಯದಲ್ಲಿ ಮತಾಂತರ ಎಂಬುದು ಬೇರೊಂದು ಧರ್ಮದ ಆಕರ್ಷಣೆಗೆ ಒಳಗಾಗಿ ಹೋದ ಸಂಗತಿಯಾಗಿರಲಿಲ್ಲ, ಬದಲಿಗೆ ಹಿಂದೂ ಧರ್ಮದ ಒಳಗೇ ಘನತೆ ಮತ್ತು ಮಾನಸಿಕ ನೆಮ್ಮದಿಯಿಂದ ಬದುಕಲು ಸಾಧ್ಯವಾಗದೇ ಮಾಡಿಕೊಂಡ ಅನಿವಾರ್ಯವಾದ ಆಯ್ಕೆಯಾಗಿತ್ತು. ಹೀಗಾಗಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಹಿಂದೂ ಧರ್ಮದಿಂದ ಉಂಟಾಗುವ ಮತಾಂತರದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ.

1935 ರಲ್ಲಿ ಹಿಂದೂ ಧರ್ಮ ತೊರೆಯುವಾಗ ಬಾಬಾ ಸಾಹೇಬರು “ಧಾರ್ಮಿಕ ಮತ್ತು ಸಾಮಾಜಿಕ ಘನತೆಯನ್ನು ಬಯಸಿ ಆಗುವ ಮತಾಂತರವನ್ನು ಯಾರಾದರೂ ಕೂಡಾ ಅಣಕಿಸಿದರೆ ಅಂತಹ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆಯಿರಿ” ಎಂದು ಹೇಳುತ್ತಾರೆ.

ಈ ನಿಟ್ಟಿನಲ್ಲಿ ಧಾರ್ಮಿಕತೆ ಎಂಬುದು ಸಂವಿಧಾನಿಕವಾದ ಸ್ವತಂತ್ರ ಆಯ್ಕೆಯೇ ವಿನಃ ಯಾರದ್ದೋ ಮತಿಗೆಟ್ಟ ಮೌಢ್ಯದ ಜನರ ಆಜ್ಞೆಗೆ ತಲೆ ಬಾಗಿ ಮಾಡುವ ಆಚರಣೆ ಅಲ್ಲ. ಈ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು.

ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಬಿಜೆಪಿಯ ಕೋಮು ಶಕ್ತಿಗಳು ಸನಾತನ ಧರ್ಮ, ಹಿಂದುತ್ವ, ವರ್ಣಾಶ್ರಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ವಾತಾವರಣವನ್ನೇ ಮುಂದುವರೆಸುತ್ತಾ ಸಾಗಿದರೆ ಈ ದೇಶದ ಎಲ್ಲಾ ಶೋಷಿತ ಜನರೂ ಕೂಡಾ ಬಾಬಾ ಸಾಹೇಬರಂತೆಯೇ ಮತ್ತೊಮ್ಮೆ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಬೌದ್ಧ ಧರ್ಮದ ಮಾನವೀಯ ತತ್ವಗಳ ಆಧಾರದ ಮೇಲೆ ಸಾಮಾಜಿಕತೆಯನ್ನು ಅಧಿಕೃತವಾಗಿ ರೂಪಿಸಿಕೊಂಡು ಅದರ ಆಧಾರದ ಮೇಲೆಯೇ ರಾಜಕೀಯ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಸಲು ಬಯಸುತ್ತೇನೆ.

ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿರುವ ಬಿಜೆಪಿಗರೇ,

“ಯಾವುದೇ ಧರ್ಮದ ಆಚರಣೆಯನ್ನು ಮಾಡುತ್ತಿರುವ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧ ಬಲವಂತವಾಗಿ ಇಲ್ಲವೇ ಮೋಸದ ತಂತ್ರಗಳ ಮೂಲಕ ಮತಾಂತರ ಮಾಡಲು ಯತ್ನಿಸುವುದು ಸಂವಿಧಾನ ಬಾಹಿರವಾದ ಕೃತ್ಯ” ಎಂಬುದು ಸಾಮಾನ್ಯ ತಿಳುವಳಿಕೆ ಆಗಿದೆ. ಇನ್ನು ಐಚ್ಛಿಕ ಮತಾಂತರವನ್ನು ತಡೆಯುವುದೂ ಕೂಡಾ ಸಂವಿಧಾನ ಬಾಹಿರ ಎಂಬ ಬೇಗ ಅರಿತುಕೊಂಡು, ಇಂತಹ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ರೈತರು, ಯುವಕರು ಹಾಗೂ ಸದಾ ಶ್ರಮ ವಹಿಸಿ ದುಡಿಯುತ್ತಿರುವ ಜನ ಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡಬೇಕೆಂದು ಈ ಮೂಲಕ ನಾನು ಆಗ್ರಹಿಸುತ್ತೇನೆ!

(ಡಾ.ಹೆಚ್.ಸಿ ಮಹದೇವಪ್ಪನವರು ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರು.)


ಇದನ್ನೂ ಓದಿ: ಮತಾಂತರ ಆರೋಪ: ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳದಿಂದ ಶಾಲೆ ಮೇಲೆ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಗುಲಾಮರಿಗೆ ಮತಾಂತರ ಮಾಡಲು ಕಷ್ಟ ಅನ್ನುವ ಅಳಲು

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...