ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯ ಶಾಲೆಯಲ್ಲಿ ಮತಾಂತರ ನಡೆಯುತ್ತಿದೆ ಎಂದು ಪ್ರತಿಪಾದಿಸಿ ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಯಾದ ಬಜರಂಗದಳದ ಕಾರ್ಯಕರ್ತರು ಶಾಲೆಗೆ ನುಗ್ಗಿ ಕಟ್ಟಡದ ಮೇಲೆ ಕಲ್ಲು ಎಸೆದು ಹಿಂಸಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಈ ಹಿಂಸಾಚಾರದ ವೇಳೆ 12ನೇ ತರಗತಿಯ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆಯುತ್ತಿದ್ದರು ಎಂದು ವರದಿಯಾಗಿದೆ.
ಜಿಲ್ಲೆಯ ಗಂಜ್ ಬಸೋಡಾ ಪಟ್ಟಣದಲ್ಲಿರುವ ಸೇಂಟ್ ಜೋಸೆಫ್ ಶಾಲೆಯ ಆಡಳಿತ ಮಂಡಳಿಯು ಎಂಟು ವಿದ್ಯಾರ್ಥಿಗಳನ್ನು ಮತಾಂತರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿತ್ತು. ಇದರ ನಂತರ ಬಜರಂಗದಳ ಶಾಲೆಯನ್ನು ಗುರಿಯಾಗಿಸಿದೆ. ಜಾಲತಾಣದಲ್ಲಿ ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ ಕಟ್ಟಡದ ಹೊರಗೆ ಭಾರಿ ಜನಸಮೂಹ ಸೇರಿರುವುದು ಕಂಡುಬಂದಿದೆ. ಇವರು ಶಾಲೆಯ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಜನರನ್ನು ಪೊಲೀಸರು ಚದುರಿಸಲು ಯತ್ನಿಸುತ್ತಿರುವುದು ಕೂಡಾ ಕಂಡು ಬಂದಿದೆ. ಅಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ
ಜನಸಮೂಹವು ಗಾಜಿನ ಕಿಟಕಿಗಳ ಮೇಲೆ ಕಲ್ಲುಗಳನ್ನು ಎಸೆದಿದ್ದರಿಂದ ಭಯಭೀತರಾದ ವಿದ್ಯಾರ್ಥಿಯೊಬ್ಬ, “ಪರೀಕ್ಷೆ ನಡೆಯುತ್ತಿದ್ದಾಗ ದಾಳಿ ನಡೆದಿದ್ದರಿಂದ ನಮಗೆ ಏಕಾಗ್ರತೆ ಇಲ್ಲದಾಗಿದೆ. ಆದ್ದರಿಂದ ಪರೀಕ್ಷೆಯನ್ನು ಮತ್ತೆ ನಡೆಸಬೇಕೆಂದು ಬಯಸುತ್ತಿದ್ದೇವೆ” ಎಂದು ಹೇಳಿದ್ದಾರೆ. ಶಾಲೆಯ ಮೇಲೆ ದಾಳಿ ನಡೆಯುತ್ತದೆ ಎಂದು ಸ್ಥಳೀಯ ಮಾಧ್ಯಮಗಳ ಮೂಲಕ ಶಾಲೆಯ ಮ್ಯಾನೇಜರ್ ಆಗಿರುವ ಬ್ರದರ್ ಆಂಟನಿ ಅವರಿಗೆ ಒಂದು ದಿನದ ಮುಂಚೆಯೆ ಮಾಹಿತಿ ದೊರಕಿತ್ತು. ಹೀಗಾಗಿ ಅವರು ಪೊಲೀಸರಿಗೆ ಮತ್ತು ರಾಜ್ಯದ ಆಡಳಿತವನ್ನು ಎಚ್ಚರಿಸಿದ್ದರು. ಆದರೆ, ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ ಎಂದು ಆರೋಪಿಸಿದ್ದಾರೆ.
ಶಾಲೆಯಲ್ಲಿ ಧಾರ್ಮಿಕ ಮತಾಂತರ ನಡೆದಿದೆ ಎಂಬ ಪ್ರತಿಪಾದನೆಯನ್ನು ಅವರು ನಿರಾಕರಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಯಾವುದೇ ಹೆಸರುಗಳು ಯಾವುದೇ ವಿದ್ಯಾರ್ಥಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಪ್ರದೇಶದ ಇತರ ಮಿಷನರಿ ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆಪಾದಿತ ಧಾರ್ಮಿಕ ಮತಾಂತರದ ಬಗ್ಗೆ ತನಿಖೆ ಆರಂಭವಾಗಿದ್ದು, ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲಾಗುವುದು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರೋಶನ್ ರೈ ಹೇಳಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಹಿಂದೆ ವಿದಿಶಾ ಜಿಲ್ಲಾಧಿಕಾರಿಗೆ ಪತ್ರ ಬರೆದು ಶಾಲೆಯ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿತ್ತು.
ಇದನ್ನೂ ಓದಿ:ಫ್ಯಾಕ್ಟ್ಚೆಕ್: ಪಂಜಾಬ್ ಮುಖ್ಯಮಂತ್ರಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ?