Homeಮುಖಪುಟಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ

ಮತಾಂತರ ನಿಷೇಧ ಎಂಬ ಅಸಂವಿಧಾನಾತ್ಮಕ ಮಸೂದೆ

- Advertisement -
- Advertisement -

“ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು.”


ಮತಾಂತರ ಎನ್ನುವುದು ಸ್ವಾತಂತ್ರ್ಯಾ ನಂತರದಿಂದಲೂ ಕೋಮುವಾದಿ ಶಕ್ತಿಗಳಿಗೆ ಸಮಾಜವನ್ನು ಒಡೆಯುವ ತಂತ್ರಗಳಲ್ಲೊಂದಾಗಿರುವುದು ಗುಟ್ಟಾಗೇನೂ ಉಳಿದಿಲ್ಲ. ಪ್ರಕೃತಿ ವಿಕೋಪದಂತೆ ಆಗಿದ್ದಾಂಗೆ, ವಿಶೇಷವಾಗಿ ಚುನಾವಣೆಯ ಸಂದರ್ಭಗಳಲ್ಲಿ ಅಥವಾ ಸಮಾಜದಲ್ಲಿ ತಮ್ಮ ವಿರೋಧದ ವಾತಾವರಣ ಮಡುಗಟ್ಟಿದಾಗ, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನದ ಭಾಗವಾಗಿ ಮತಾಂತರ ಎಂಬ ಸವಕಲು ಅಸ್ತ್ರವನ್ನು ಬಳಸಿ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆ. ಅದೇ ರೀತಿ, ಸಮಾನತೆಯನ್ನು ಇಡೀ ಜಗತ್ತಿಗೆ ಸಾರಿದ ಸಾಮರಸ್ಯದ ಬೀಡಾದ ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರದ ಕೃಪಾಕಟಾಕ್ಷ ಇರುವ ಈ ಶಕ್ತಿಗಳು ಮತಾಂತರದ ವಿಷಯವನ್ನು ಮುನ್ನಲೆಗೆ ತಂದಿದ್ದಾರೆ. ಮುಂಬರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನೂ ಸರ್ಕಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮತಾಂತರ ಎಂಬ ವಿಷಯದಲ್ಲಿ ನಮ್ಮ ಸಂವಿಧಾನ ಏನು ಹೇಳುತ್ತದೆ? ಇಂತಹ ಪ್ರಕರಣಗಳಲ್ಲಿ ಈ ದೇಶದ ಘನ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಏನು? ಎಂಬುದನ್ನು ಈ ಲೇಖನದಲ್ಲಿ ವಿಶ್ಲೇಷಿಸುತ್ತಿದ್ದೇನೆ.

ಸಂವಿಧಾನ ಮತ್ತು ಮತಾಂತರ

ಭಾರತದ ಸಂವಿಧಾನವು ಅನುಚ್ಛೇದ 25ರಲ್ಲಿ ಈ ದೇಶದ ಪ್ರತಿ ಪ್ರಜೆಗೂ ಸಹ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಅದಲ್ಲದೆ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಪ್ರಚಾರಮಾಡಬಹುದು ಎಂದೂ ಸಹ ಹೇಳಿದೆ. ಈ ಕುರಿತು ಇದೇ ವರ್ಷ ಏಪ್ರಿಲ್ 2021ರಲ್ಲಿ ಭಾರತದ ಸುಪ್ರೀಂ ಕೋರ್ಟ್ ನಡೆಸಿದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ)ಯ ವಿಚಾರಣೆಯನ್ನು ಗಮನಿಸಬಹುದು. ಅಡ್ವೊಕೇಟ್ ಅಶ್ವಿನಿ ಕುಮಾರ್ ಉಪಾಧ್ಯಾಯ್ ಅವರು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಮತಾಂತರಗಳು ಆಗುತ್ತಿವೆ ಎಂದು ಆರೋಪಿಸಿ, ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟೀಸ್ ರೋಹಿಂಟನ್ ಎಫ್ ನಾರಿಮನ್ “18 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಯು ಯಾಕೆ ಬೇರೆ ಧರ್ಮವನ್ನು ಆರಿಸಿಕೊಳ್ಳಬಾರದು? ಇದ್ಯಾವ ರೀತಿಯ ಅರ್ಜಿ” ಎಂದು ಅರ್ಜಿದಾರರನ್ನು ಪ್ರಶ್ನಿಸಿ, ಈ ರೀತಿಯ ಅಸಂಬದ್ಧ ಅರ್ಜಿಗಳನ್ನು ಹಾಕಿದರೆ ನಿಮ್ಮ ಮೇಲೆ ದೊಡ್ಡ ಮಟ್ಟದ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. “ಮೊದಲು ಈ ಅರ್ಜಿ ಹಿಂತೆಗೆದುಕೊಳ್ಳಿ ಅಥವಾ ಇದರ ಪರ ವಾದಿಸಿ, ಮುಂದೆ ಬರುವ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿರಿ” ಎಂದದ್ದಲ್ಲದೆ, ಮುಂದುವರೆದು ಸಂವಿಧಾನದ 25ನೇ ಅನುಚ್ಛೇದ ಕುರಿತು ತಿಳಿಹೇಳಿದರು. ಈ ದೇಶದ ಯಾವುದೇ ವ್ಯಕ್ತಿ ತನಗಿಷ್ಟವಾದ ಧರ್ಮವನ್ನು ಆಚರಿಸಲು, ಹಾಗೂ ಪ್ರಚಾರಮಾಡಲು ಸ್ವತಂತ್ರನಾಗಿದ್ದಾನೆ ಎಂದು ಸಂವಿಧಾನವೇ ಹೇಳಿರುವಾಗ ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತದೆ ಸುಪ್ರೀಂ ಕೋರ್ಟ್.

ಇನ್ನು ಇದೇ ವರ್ಷ, “ಪಿ. ಮುನೀಶ್ವರಿ ವರ್ಸಸ್ ದಿ ಸೆಕ್ರೆಟರಿ ಟು ತಮಿಳುನಾಡು ಗವರ್ನಮೆಂಟ್ ಆಂಡ್ ಅದರ್ಸ್” ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠವು ಕೇವಲ ಚರ್ಚಿಗೆ ಹೋಗುವುದರಿಂದ ಅಥವಾ ಶಿಲುಬೆಯನ್ನು ಮತ್ತು ಫೋಟೊಗಳನ್ನು ಮನೆಯಲ್ಲಿ ತೂಗುಹಾಕುವುದರಿಂದ ಅಥವಾ ಕೊರಳಲ್ಲಿ ಧರಿಸುವುದರಿಂದ ಒಬ್ಬ ವ್ಯಕ್ತಿ ಆ ಧರ್ಮಕ್ಕೆ ಮತಾಂತರವಾಗಿದ್ದಾನೆ ಎಂದು ಭಾವಿಸಲಾಗದು ಎಂಬ ವಿಶೇಷ ತೀರ್ಪನ್ನು ನೀಡಿದೆ. ಇನ್ನೂ ಹತ್ತೂ ಹಲವು ಮತಾಂತರ ಪ್ರಕರಣಗಳಲ್ಲಿ ಈ ದೇಶದ ಘನತೆವೆತ್ತ ನ್ಯಾಯಾಲಯಗಳು ಮತಾಂತರಕ್ಕೆ ಸಂವಿಧಾನದಲ್ಲಿ ಅವಕಾಶ ಇವೆ ಎನ್ನುತ್ತಾ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದಿವೆ.

ಮತಾಂತರ ನಿಷೇಧ ಕಾಯ್ದೆ

ಸಂವಿಧಾನದ 25ನೇ ಅನುಚ್ಛೇದದಲ್ಲಿರುವ “ಪ್ರಚಾರ” (ಧರ್ಮವನ್ನು ಪ್ರಚಾರಮಾಡುವುದು) ಎಂಬ ಪದವು ಸಂವಿಧಾನ ರಚನಾ ಸಮಿತಿಯಲ್ಲಿ ಸಾಕಷ್ಟು ಚರ್ಚೆಗೊಳಪಟ್ಟಿದೆ. ಸಂವಿಧಾನದ ಇತರೆಲ್ಲಾ ವಿಷಯಸೂಚಿಗಳಿಗಿಂತ ಈ ಪದವೇ ಅತಿ ಹೆಚ್ಚು ಕಾಲ ಚರ್ಚೆಗೊಳಗಾಗಿದ್ದು ಎನ್ನುತ್ತಾರೆ ಸಂವಿಧಾನ ತಜ್ಞರು. ನಂತರ ಸಾಕಷ್ಟು ಚರ್ಚೆ ಮತ್ತು ಸಂವಾದಗಳ ನಂತರ ಈ ಪದವನ್ನು ಸಂವಿಧಾನದಲ್ಲಿ ಆಳವಡಿಸಲಾಯಿತು. ಇದು ಭಾರತದಲ್ಲಿ ಯಾವುದೇ ವ್ಯಕ್ತಿಯು ತನ್ನ ಧರ್ಮವನ್ನು ಪ್ರಚಾರ ಮಾಡಲು ಸ್ವತಂತ್ರನಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಪ್ರಸ್ತುತ ದೇಶದಲ್ಲಿ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಗಳು ಜಾರಿಯಲ್ಲಿವೆ. ಈಗ ಜಾರ್ಖಂಡ್ ಹಾಗೂ ಕರ್ನಾಟಕ ರಾಜ್ಯಗಳೂ ಸಹ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿವೆ.

ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕವೇ?

ರಾಜ್ಯಗಳು ಜಾರಿಗೊಳಿಸುವ ಮತಾಂತರ ನಿಷೇಧ ಕಾಯ್ದೆಗಳು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿವೆಯಲ್ಲದೆ, ಅವು ಸಂವಿಧಾನ ವಿರೋಧಿಯಾಗಿವೆ ಎನ್ನುತ್ತಾರೆ ಹಿರಿಯ ನ್ಯಾಯವಾದಿ ಹಾಗೂ ಸಿಕ್ಕಿಂ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿರುವ ಜಸ್ಟೀಸ್ ಪೆರ್ಮೊದ್ ಕೊಹ್ಲಿ. “ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಈಗಾಗಲೇ ಸಂವಿಧಾನವು ಹಲವು ಕ್ರಮಗಳನ್ನು ಉಲ್ಲೇಖಿಸಿರುವಾಗ, ಮತ್ತೆ ಮತಾಂತರ ನಿಷೇಧ ಕಾಯ್ದೆಯನ್ನು ತರುವುದು ಅದನ್ನು ಪುನರಾವರ್ತಿಸಿದಂತಾಗುತ್ತದೆ. ರಾಜ್ಯಗಳಲ್ಲಿ ಮತಾಂತರವನ್ನೇ ನಿಷೇದಿಸುವುದು ಸಂವಿಧಾನದ 25ನೇ ಅನುಚ್ಛೇದದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅದರ ಬದಲು ಬಲವಂತದ ಹಾಗೂ ಆಮಿಷಗಳನ್ನು ನೀಡಿ ಮಾಡುವ ಮತಾಂತರದ ಕುರಿತು ಮಾತ್ರ ಕಾನೂನುಗಳನ್ನು ತರುವುದು ಒಳಿತು” ಎಂದು ಜಸ್ಟಿಸ್ ಕೊಹ್ಲಿ ಅಭಿಪ್ರಾಯ ಪಡುತ್ತಾರೆ.

ಹಿರಿಯ ನ್ಯಾಯವಾದಿ ಹಾಗೂ ಪ್ರಖ್ಯಾತ ಸಂವಿಧಾನ ತಜ್ಞರು ಆಗಿರುವ ಆರ್ ಎಸ್ ಚೀಮಾ ಮತಾಂತರ ನಿಷೇಧ ಕಾಯ್ದೆಯ ಕುರಿತು ಮಾತನಾಡುತ್ತಾ “ಸಂಪೂರ್ಣ ಮತಾಂತರ ನಿಷೇಧವನ್ನು ಮಾಡುವುದು ಸಾಧ್ಯವಿಲ್ಲ. ಹಾಗೆ ಒಂದು ವೇಳೆ ನಿಷೇಧಿಸಬೇಕೆಂಬ ಕಾನೂನುಗಳನ್ನು ತಂದರೆ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ಸಂವಿಧಾನ ರಚನೆಯ ವೇಳೆ ಮತಾಂತರ ವಿಷಯದ ಕುರಿತು ಸಾಕಷ್ಟು ಅವಲೋಕಿಸಿಯೇ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಗೂ ಧರ್ಮವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನಮ್ಮ ಪೂರ್ವಸೂರಿಗಳು ನೀಡಿದ್ದಾರೆ.” ಎಂದು ಹೇಳುತ್ತಾರೆ. ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಗೊಂಡರೆ ಆ ಕಾಯ್ದೆಯ ಮೂಲ ಉದ್ದೇಶ ಮರೆಯಾಗಿ ಅದನ್ನು ಕಿಡಿಗೇಡಿಗಳು ಅಲ್ಪಸಂಖ್ಯಾತರನ್ನು ಹಿಂಸಿಸಲು, ಅವರಿಗೆ ಸಮಸ್ಯೆ ಸೃಷ್ಟಿಸಲು ಉಪಯೋಗಿಸಿಕೊಳ್ಳುತ್ತಾರೆ ಎಂದೂ ಸಹ ಅನೇಕ ನ್ಯಾಯವಾದಿಗಳು ಅಭಿಪ್ರಾಯ ಪಡುತ್ತಾರೆ.

ಉತ್ತರ ಪ್ರದೇಶ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಅನೇಕ ನ್ಯಾಯಾಧೀಶರು, ವಕೀಲರು ಹಾಗೂ ಸಂವಿಧಾನ ತಜ್ಞರು ಅದು ಸಂವಿಧಾನ ವಿರೋಧಿ ಕಾನೂನಾಗಿದೆ ಎಂದು ಹೇಳಿದ್ದಾರೆ. ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಹಾಗೂ ರಾಷ್ಟ್ರೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರು ಆಗಿರುವ ಜಸ್ಟೀಸ್ ಎ ಪಿ ಷಾ “ಮತಾಂತರ ನಿಷೇಧ ಕಾಯ್ದೆ ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳಾದ ಜೀವಿಸುವ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಕಸಿದುಕೊಳ್ಳುವಂತಿದೆ. ಕೂಡಲೇ ಈ ಕಾಯ್ದೆಯನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸುತ್ತಾರೆ. ಇನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಾದಂತಹ ಜಸ್ಟೀಸ್ ಮದನ್ ಬಿ ಲೋಕೂರ್ “ಈ ಕಾಯ್ದೆಯು ಸಾಂವಿಧಾನಿಕವಾಗಿ ಸಿಂಧುವಾಗಬೇಕೆಂದರೆ ಒಂದು ದೊಡ್ಡ ಪವಾಡವೇ ನಡೆಯಬೇಕು. ಮೂಲತಃ ಇದು ಸಂವಿಧಾನದ ಮೂಲಭೂತ ಹಕ್ಕನ್ನೇ ಪ್ರಶ್ನಿಸಿರುವುದರಿಂದ, ಇದರ ಸಾಂವಿಧಾನಿಕ ಸಿಂಧುತ್ವಕ್ಕೆ ಅವಕಾಶವೇ ಇಲ್ಲ ಎಂದು ದೃಢವಾಗಿ ಹೇಳುತ್ತಾರೆ.

ಬಲವಂತದ, ಆಮಿಷವೊಡ್ಡಿ ಮಾಡುವ ಮತಾಂತರ vs ಸ್ವಇಚ್ಛೆಯ ಮತಾಂತರ

ಬಲವಂತವಾಗಿ ಒಬ್ಬರನ್ನು ಮತಾಂತರ ಮಾಡುವುದು ಅಥವಾ ಆಮಿಷಗಳನ್ನು ನೀಡಿ ಮತಾಂತರ ಮಾಡುವುದು ನಿಸ್ಸಂದೇಹವಾಗಿ ತಪ್ಪು. ಕಥೋಲಿಕ್ ಚರ್ಚು ಸಹ ಇದೇ ಅಭಿಪ್ರಾಯವನ್ನು ಹೊಂದಿದೆ. ನನಗನಿಸಿದಂತೆ ಬಲವಂತದ ಮತಾಂತರ ಪ್ರಕರಣಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಣಸಿಗುವುದು ಬಹಳ ಕಡಿಮೆ. ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರವಂತೂ ಬಲವಂತದ ಮತಾಂತರಗಳು ಬಹುತೇಕ ಇಲ್ಲವಾಗಿದೆ. ಇನ್ನು ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದೂ ಸಹ ತಪ್ಪಾದರೂ ಇಂತಹ ಪ್ರಕರಣಗಳಿಗೆ ಒಂದು ನಿರ್ದಿಷ್ಟ ಪರಿಹಾರಾತ್ಮಕ ಚೌಕಟ್ಟು ಇಲ್ಲ ಎನ್ನಬಹುದು. ಆಮಿಷ ಪಡೆದುಕೊಂಡವರು ಯಾರೂ ತಮ್ಮನ್ನು ಆಮಿಷದ ಮೂಲಕ ಮತಾಂತರ ಮಾಡುತ್ತಿದ್ದಾರೆ ಎಂದು ದೂರು ನೀಡುವುದಿಲ್ಲ. ಆಮಿಷದ ಮೂಲಕ ಮತಾಂತರ ಮಾಡಿದರೂ ಸಹ ಫಲಾನುಭವಿಗಳಿಗೆ ತಾವು ಇತರೆ ಧರ್ಮಕ್ಕೆ ಮತಾಂತರವಾಗುತ್ತಿದ್ದೇವೆ ಎಂಬ ಸ್ಪಷ್ಟ ಅರಿವು ಇರುತ್ತದೆ.

ಇನ್ನು ಮೇಲೆ ಹೆಸರಿಸಲಾದ ಐದು ರಾಜ್ಯಗಳಲ್ಲಿ ಜಾರಿಯಾಗಿರುವ ಮತಾಂತರ ನಿಷೇಧ ಕಾಯ್ದೆಯ ಸಾರಾಂಶವನ್ನು ನೋಡಿದರೆ ಇಲ್ಲಿ ಸಾಕ್ಷಿಗಳನ್ನು ಪ್ರಸ್ತುತಪಡಿಸಬೇಕಾದ ಹೊಣೆಗಾರಿಕೆಯನ್ನು ಆರೋಪಿಗಳ ಮೇಲೆ ಹೊರಿಸಲಾಗಿದೆ. ಸಂವಿಧಾನಾತ್ಮಕವಾಗಿ ಯಾವುದೇ ಒಂದು ಬಲವಂತದ ಮತಾಂತರ ಕಂಡು ಬಂದರೆ ಅದನ್ನು ನಿರೂಪಿಸಲು ಅಭಿಯೋಗ (ಪ್ರಾಸಿಕ್ಯೂಷನ್) ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಬೇಕು. ಆದರೆ, ಈ ಹೊಸ
ಕಾಯ್ದೆಗಳ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದ ಹೊಣೆಗಾರಿಕೆ ಆರೋಪಿಯ ಮೇಲೆ ಬೀಳುತ್ತದೆ. ಅಂದರೆ ಯಾರೇ ಆರೋಪ ಮಾಡಲಿ ಆ ಆರೋಪಗಳಿಗೆಲ್ಲ ಆರೋಪಿಯೇ ಸಾಕ್ಷಿಗಳನ್ನು ಹುಡುಕುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಹೀಗಿರುವಾಗ ಈ ಕಾಯ್ದೆಯ ಸ್ಪಷ್ಟ ಉದ್ದೇಶ ಅಲ್ಪಸಂಖ್ಯಾತರನ್ನು ಹಣಿಯುವುದೇ ಆಗಿದೆ. ಒಂದುವೇಳೆ ಈ ಕಾಯ್ದೆ ಜಾರಿಯಾದರೆ ಖಂಡಿತವಾಗಿಯೂ ಇದನ್ನು ಕೋಮುವಾದಿ ಶಕ್ತಿಗಳು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವ ಆಯುಧವನ್ನಾಗಿ ಮಾಡಿಕೊಳ್ಳುತ್ತಾರೆ.

ಮತಾಂತರ ಎನ್ನುವುದು ಅಪರಾಧವಲ್ಲ. ಅದೊಂದು ಬಿಡುಗಡೆಯ ಅಸ್ತ್ರ. ಎಲ್ಲಿ ಸಮಾನತೆ ಇಲ್ಲವೋ ಅಲ್ಲಿಂದ ಹೊರನಡೆದು ನಮಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಅಧಿಕಾರವನ್ನು ಈ ನೆಲದ ಸಂವಿಧಾನ ನಮಗೆ ನೀಡಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಮತಾಂತರವಾದರು. ಆ ಮೂಲಕ ಶೋಷಿತ ವರ್ಗಗಳು, ಸಮಾನತೆಯ ತವಕದಲ್ಲಿರುವ ಎಲ್ಲರೂ ಸಹ ತಮಗಿಷ್ಟ ಬಂದ ಧರ್ಮವನ್ನು ಆರಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟರು. ಬಲವಂತದ ಪ್ರಕರಣಗಳು ನಡೆದಿದ್ದು ಆ ಕುರಿತು ಯಾರಾದರು ದೂರು ನೀಡಿದರೆ ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರವು ಕ್ರಮ ಕೈಗೊಳ್ಳಲಿ. ಆದರೆ ಒಂದೆರಡು ಪ್ರಕರಣಗಳನ್ನು ಮುಂದಿಟ್ಟುಕೊಂಡು ಇಡೀ ಸಮುದಾಯಕ್ಕೆ ಮಾರಕವಾಗುವಂತಹ ಅಸಂವಿಧಾನಿಕ ಕಾನೂನನ್ನು ತರುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. 2018ರಲ್ಲಿ ನಡೆದಂತಹ ಚರ್ಚ್ ದಾಳಿಗಳಂತಹ ಅನೇಕ ಪ್ರಕರಣಗಳು ಮತಾಂತರದ ಹೆಸರಿನಲ್ಲಿ ಪುನರಾವರ್ತಿಸುವ ಸಂಭವಗಳನ್ನೂ ಸಹ ತಳ್ಳಿಹಾಕುವಂತಿಲ್ಲ.

ಅಜಯ್ ರಾಜ್

ಅಜಯ್ ರಾಜ್
ಬೆಂಗಳೂರಿನ ಭೈರತಿಯವರಾದ ಅಜಯ್ ಪ್ರಸ್ತುತ ಅಮೆರಿಕನ್ ವಿಶ್ವವಿದ್ಯಾಲಯದ ಆಂಟಿ ರೇಸಿಸಮ್ ರಿಸರ್ಚ್ ಅಂಡ್ ಪಾಲಿಸಿ ಸೆಂಟರ್‌ನಲ್ಲಿ ಅನುವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ  ಮತಾಂತರ ನಿಷೇಧ ಕಾನೂನು: ಬಸವರಾಜ ಬೊಮ್ಮಾಯಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...