ನಾಗೇಶ್ರವರನ್ನು ನಾಗ್ಪುರದ RSS ದಾರಿ ತಪ್ಪಿಸಿದೆಯೇ ಎಂದು ಪ್ರಶ್ನಿಸಬೇಕಿದೆ. ಅಧಿಕಾರ ಅವರನ್ನು ಕುರುಡಾಗಿಸಿದೆ. ಹಾಗಾಗಿ ಎಲ್ಲಿಗೆ ಬೇಕಾದರೂ ಡಿಕ್ಕಿ ಹೊಡೆಯುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವರವರು ಅಭಿಪ್ರಾಯಪಟ್ಟಿದ್ದಾರೆ.
ಪಠ್ಯ ವಿವಾದದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಪಾಠ ಸೇರಿಸಲು ಅನುಮತಿ ನೀಡಿಲ್ಲ ಎಂದು ಹೇಳಿದ್ದೇನೆ. ಪಠ್ಯ ಪ್ರಿಂಟ್ ಆಗಿರುವುದು ನನಗೆ ಗೊತ್ತಿಲ್ಲ. ಆಗೊಂದು ವೇಳೆ ಪ್ರಿಂಟ್ ಆಗಿದ್ದರೂ ಬೋದಿಸುವುದು ಬೇಡ ಎಂದು ಸರ್ಕಾರ ಬರೆಯಲಿ” ಎಂದರು.
ನಿಮಗೆ ಕಾಂಗ್ರೆಸ್ನವರು ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, “ನನಗೆ ನನ್ನ ಕುಮ್ಮಕ್ಕನ್ನೆ ತಡೆದುಕೊಳ್ಳುತ್ತಿಲ್ಲ ಆಗುತ್ತಿಲ್ಲ.” ಎಂದಿದ್ದಾರೆ.
ನಾಗೇಶ್ರವರು ನಿಮ್ಮ ಮನ ಒಲಿಸುತ್ತಾರಂತೆ ಎಂಬದಕ್ಕೆ ಉತ್ತರಿಸಿದ ಅವರು, “ಬರಲಿ, ಬಹಳ ಸಂತೋಷ, ತುಂಬಾ ಸಂತೋಷ” ಎಂದರು.
“ಅವರು ಎಲ್ಲಿ ತಪ್ಪು ಮಾಡಿದ್ದಾರೋ, ಆ ತಪ್ಪು ಸರಿಪಡಿಸಿ ಪಾಠ ಬರೆಯಲು, ಕೊರತೆಯ ಪಾಠಗಳನ್ನು ತುಂಬಲು, ಸಂವಿಧಾನದ ಮುನ್ನಡಿಯ ಕುರಿತು ಹಾಡು ಕಟ್ಟಿ ಹಾಡಲು, ಸಂವಿಧಾನದ ಪ್ರತಿ ಅಂಶವನ್ನು ಸರಳವಾಗಿ ತಜ್ಞರಿಂದ ಪಾಠ ಮಾಡಿಸಲು, ಕಮ್ಮಟಗಳನ್ನು ಏರ್ಪಡಿಸಲು, ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಮಾಡುತ್ತೇವೆ” ಎಂದು ದೇವನೂರು ತಿಳಿಸಿದರು.
ನಮ್ಮ ಮಕ್ಕಳಿಗೆ ಮಾತ್ರ ಯಾವ ರೀತಿ ತೊಂದರೆಯಾಗಬಾರದು. ಅವರು ಪ್ರಶ್ನೆ ಮಾಡುವುದನ್ನು ಉಳಿಸಿಕೊಳ್ಳಬೇಕು, ಮೂಡನಂಬಿಕೆಯಲ್ಲಿ ಬೀಳಬಾರದು, ವೈಜ್ಞಾನಿಕವಾಗಿ ಆಲೋಚಿಸುವಂತೆ ಮಾಡಬೇಕು. ಅದಕ್ಕೆ ಶ್ರಮಿಸುವ ಪ್ರಜ್ಞಾವಂತ ಮನಸ್ಸುಗಳ ಜೊತೆ ನಾನಿರುತ್ತೇನೆ ಎಂದು ಪುನರುಚ್ಚರಿಸಿದರು.
ದೇವನೂರುರವರ ಮನವೊಲಿಸುತ್ತೇನೆ: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಪಠ್ಯಗಳು ಈಗಾಗಲೇ ಆಚೆ ಬಂದಿದೆ. ಈ ಸಂದರ್ಭದಲ್ಲಿ ದೇವನೂರುರವರು ಪಠ್ಯ ಬೋಧಿಸುವುದು ಬೇಡ ಎಂದಿದ್ದಾರೆ. ಕಾಂಗ್ರೆಸ್ ಹುಟ್ಟುಹಾಕಿದ ಚರ್ಚೆಯಿಂದ ಅವರ ಮನಸ್ಸಿನಲ್ಲಿ ಬೇಸರವಾಗಿರಬಹುದು. ಅವರ ಜೊತೆ ಮಾತನಾಡುತ್ತೇನೆ. ಅಂತ ದೊಡ್ಡ ಸಾಹಿತಿಯ ಅಭಿಪ್ರಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ದೇವನೂರುರವರು ಹಿರಿಯರು, ಹೋಗಿ ಭೇಟಿ ಮಾಡುವ ಪ್ರಯತ್ನ ಮಾಡುತ್ತೇನೆ. ಪ್ರಿಂಟ್ ಆಗಿ ಬಂದಮೇಲೆ ಈಗ ಏನು ಮಾಡಬೇಕು ಎಂದು ಕೇಳಿ ಅವರನ್ನು ಒಪ್ಪಿಸುವ ಪ್ರಯತ್ನಿಸುತ್ತೇನೆ” ಎಂದರು.
ಯಾವ ಕಾರಣಕ್ಕೆ ಅವರಿಗೆ ಅಸಮಾಧಾನವಾಗಿದೆ ಎಂಬುದನ್ನು ಕೇಳುತ್ತೇನೆ. ಅವರು ಬರೆದ ಪತ್ರವನ್ನು ಗಮನಿಸಿದ್ದೇವೆ. ಅವರು ಹೇಳುತ್ತಿರುವುದು ಸತ್ಯದ ಮಾತು ಎಂದು ಬಿ.ಸಿ ನಾಗೇಶ್ ಹೇಳಿದ್ದಾರೆ.