Homeಮುಖಪುಟಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು

ಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು

- Advertisement -
- Advertisement -

ಬಿಜೆಪಿ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುನರ್ ಪರಿಷ್ಕರಣೆ ಸಮಿತಿ ಮಾಡಿರುವ ಬದಲಾವಣೆಗಳು ವಿವಾದದ ಬಿರುಗಾಳಿಯೆಬ್ಬಿಸಿವೆ. ಒಂದೇ ಜಾತಿಯ ಸದಸ್ಯರನ್ನೊಳಗೊಂಡ ಸಮಿತಿಯು ಅವರದೇ ಜಾತಿ ಲೇಖಕರ ಪಠ್ಯಗಳನ್ನು ತುಂಬಿದ್ದು, ದಲಿತ – ಶೂದ್ರ ಲೇಖಕರ ಪಠ್ಯಗಳನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ವ್ಯಕ್ತವಾಗಿವೆ. ಭಗತ್ ಸಿಂಗ್ ಪಠ್ಯ ಕೈಬಿಟ್ಟು ಹೆಡಗೇವಾರ್ ಪಠ್ಯ ಸೇರಿಸಿದ್ದಕ್ಕೆ ತೀವ್ರ ವಿರೋಧ ಕೇಳಿಬಂದಿದೆ. ಈ ಪಠ್ಯ ಪುನರ್ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಮತ್ತು ಹಳೆಯ ಪಠ್ಯಗಳನ್ನೆ ಮುಂದುವರೆಸಬೇಕೆಂದು ಟ್ವಿಟರ್ ಟ್ರೆಂಡ್ ಸಹ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೇ 23ರ ಸೋಮವಾರದಂದು ಸ್ಪಷ್ಟನೆ ನೀಡುವುದಕ್ಕಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ಪತ್ರಿಕಾಗೋಷ್ಟಿ ನಡೆಸಿದ್ದರು. ಆದರೆ ಅಲ್ಲಿ ಸ್ಪಷ್ಟನೆ ನೀಡುವುದಕ್ಕೆ ಬದಲು ಹಿಂದಿನ ಸಮಿತಿಯನ್ನು ದೂಷಿಸುವ, ಸುಳ್ಳು ಮತ್ತು ಅರ್ಧ ಸುಳ್ಳುಗಳನ್ನು ಹೇಳಿದ್ದಾರೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಸೇರಿದಂತೆ ಇತರರು ಆರೋಪಿಸಿದ್ದಾರೆ. ಶಿಕ್ಷಣ ಸಚಿವರು ಹೇಳಿದ ನಾಲ್ಕು ಸುಳ್ಳುಗಳು ಇಲ್ಲಿವೆ.

  1. ಕುವೆಂಪು ಪಠ್ಯ ಕೈಬಿಟ್ಟ ಬರಗೂರು ಸಮಿತಿ

ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯ ಸಮಿತಿಯು ಕುವೆಂಪು, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಮೈಸೂರು ಮಹಾರಾಜರು, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ ಮುಂತಾದ ಮಹನೀಯರ ಪಾಠಗಳನ್ನು ಕೈ ಬಿಟ್ಟಿತ್ತು ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಬರಗೂರು ರಾಮಚಂದ್ರಪ್ಪನವರು “ಶಿಕ್ಷಣ ಸಚಿವರು ಅಪ್ಪಟ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾವು ಅವರು ಉಲ್ಲೇಖಿಸಿರುವ ಯಾವ ಪಠ್ಯವನ್ನು ಕೈಬಿಟ್ಟಿಲ್ಲ. ಬದಲಿಗೆ ಮತ್ತಷ್ಟು ಸೇರಿಸಿ ಎಲ್ಲಾ ತರಗತಿ ಮಕ್ಕಳಿಗೂ ಪಾಠ ಇಟ್ಟಿದ್ದೇವೆ” ಎಂದಿದ್ದಾರೆ.

ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ. ಖಂಡಿತ ಕೈ ಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ “ಭರತ ಭೂಮಿ ನಮ್ಮ ತಾಯಿ” ಎಂಬ ಪದ್ಯವನ್ನು ಚಿಕ್ಕಂದಿನಲ್ಲೇ ದೇಶಪ್ರೇಮದ ಭಾವನೆ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಲು ನಾವು ಸೂಚಿಸಿದ್ದೆವು ಅಷ್ಟೇ. ಇನ್ನು, 7ನೇ ತರಗತಿಯ 2ನೇ ಭಾಗ ಮತ್ತು 10ನೇ ತರಗತಿಯ 2ನೇ ಭಾಗದ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಗಾಂಧಿ ಕುರಿತು ಸಾಕಷ್ಟು ವಿವರಗಳಿವೆ. ಸಮಾಜ ವಿಜ್ಞಾನದ 8ನೇ ತರಗತಿಯ ಭಾಗ-1 ಮತ್ತು 10ನೇ ತರಗತಿಯ ಭಾಗ-2ರಲ್ಲಿ ಡಾ.ಅಂಬೇಡ್ಕರ್‌ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ ‘ನಮ್ಮ ಸಂವಿಧಾನ’ ಎ೦ಬ ಪಾಠವಿದ್ದು ಅಲ್ಲಿಯೂ ಡಾ.ಅಂಬೇಡ್ಕರ್‌ ಅವರನ್ನು ಕುರಿತ ವಿವರಗಳಿವೆ ಎಂದು ಬರಗೂರು ಹೇಳಿದ್ದಾರೆ.

2. 1930 ರಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ

ಹೆಡಗೇವಾರ್‌ರವರನ್ನು ಪಠ್ಯದಲ್ಲಿ ಸೇರಿಸಿದ್ದೀರಿ. ಅವರು ಭಾರತದ ತ್ರಿವರ್ಣ ಧ್ವಜಕ್ಕೆ ಬದಲಾಗಿ ಭಗವಾಧ್ವಜ ಬೆಂಬಲಿಸಿದ್ದರು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಾಗೇಶ್‌ರವರು, ನಮಗೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ. ಅಲ್ಲಿಂದ ತ್ರಿವರ್ಣ ಧ್ವಜಕ್ಕೆ ಮಾನ್ಯತೆ ಇದೆ ಹೊರತು 1930ರಲ್ಲಿ ತ್ರಿವರ್ಣ ಧ್ವಜ ಇರಲಿಲ್ಲ ಎಂದು ಹೆಡಗೇವಾರ್‌ರನ್ನು ಸಮರ್ಥಿಸಿಕೊಂಡರು.

ವಾಸ್ತವ ಏನೆಂದರೆ, ಸ್ವಾತಂತ್ರ್ಯ ಚಳವಳಿಯು 1930ರ ಜನವರಿ 26ರಂದು ದೇಶದ ಎಲ್ಲಾ ಕಡೆ ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಮಾಡಿ ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ನೀಡಿದ್ದಾಗ ಹೆಡಗೇವಾರರು ಸಂಘದಲ್ಲಿ ಕೇವಲ ಭಗವಾ ಧ್ವಜವನ್ನು ಮಾತ್ರ ಹಾರಿಸಬೇಕೆಂದು ಕರೆ ನೀಡುತ್ತಾರೆ. 1931ರಲ್ಲಿ ದಂಡಿ ಸತ್ಯಾಗ್ರಹದ ಕರೆ ಇಡೀ ದೇಶವನ್ನು ಆವರಿಸುತ್ತಿದ್ದಾಗ ಆರೆಸ್ಸೆಸ್ ಸಹ ಒಂದು ನಿಲುವು ತೆಗೆದುಕೊಳ್ಳಲೇಬೇಕಾದ ಸಂದರ್ಭ ಬಂದಾಗ ಆರೆಸ್ಸೆಸ್ಸಿನ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಬಹುದೇ ವಿನಾ ಆರೆಸ್ಸೆಸ್ ಒಂದು ಸಂಘವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಎಂಬ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡಿರುವ ಚಿಂತಕ ಶಿವಸುಂದರ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಾಗೇಶ್‌ರವರು ಹೆಡಗೇವಾರ್ ಸಮರ್ಥಿಸುವ ಬರದಲ್ಲಿ ಸುಳ್ಳಿಗೆ ಮೊರೆ ಹೋಗಿದ್ದಾರೆ.

3. ಸಾಹಿತಿಗಳ ಜಾತಿ ಹುಡಕಬಾರದು, ಕಂಟೆಂಟ್ ನೋಡಿ

ಯಾವ ಯಾವ ಸಾಹಿತಿಗಳ ಪಠ್ಯ ಸೇರ್ಪಡೆಯಾಗಿದೆಯೋ ಅವರ ಜಾತಿ ನೋಡಬಾರದು, ಬದಲಿಗೆ ಅವರ ಕಂಟಂಟ್ ನೋಡಿದರೆ ಒಳ್ಳೆಯದು ಕಾಣುತ್ತದೆ ಎಂದು ಸಚಿವ ನಾಗೇಶ್ ಹೇಳಿದರು.

ಪಠ್ಯ ಪುನರ್ ಪರಿಷ್ಕರಣಾ ಸಮಿತಿಯಲ್ಲಿ 7 ಜನ ಸದಸ್ಯರಿದ್ದು ಆ 7 ಜನರೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಎಸ್. ಎಲ್.ಭೈರಪ್ಪ, ಕೆ.ಬಿ.ಹೆಡ್ಗೇವಾರ್, ಗಜಾನನ ಶರ್ಮಾ, ಎನ್.ರಂಗನಾಥ ಶರ್ಮಾ, ಸುಶ್ರುತ ದೊಡ್ಡೇರಿ, ಎಸ್.ವಿ.ಪರಮೇಶ್ವರ ಭಟ್, ಗಣೇಶ್ ಶತಾವಧಾನಿ, ಬನ್ನಂಜೆ ಗೋವಿಂದಾಚಾರ್ಯ, ಶಿವಾನಂದ ಕಳವೆ, ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ಸೇರಿಸಲಾಗಿದೆ. ಇವರಲ್ಲಿ ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದ್ದಾರೆ. ಇವರ ಕಂಟೆಂಟ್‌ಗಳು ಹೇಗಿವೆ ಎಂಬುದನ್ನು ನೋಡಿದರೆ ಅದರಲ್ಲಿ ಒಳ್ಳೆಯದು ಕಾಣುವುದಿಲ್ಲ.

“ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು”

ಇದು ಬನ್ನಂಜೆ ಗೋವಿಂದಚಾರ್ಯರ ಶುಕನಾಸನ ಉಪದೇಶ ಪಾಠ ಭಾಗ. ಮಹಿಳೆಯರನ್ನು ಇಷ್ಟು ಕೀಳು ಮಟ್ಟಕ್ಕೆ ಚಿತ್ರಿಸಿರುವ ಪಾಠವನ್ನು ಮಕ್ಕಳು ಓದಿದರೆ ಅವರಲ್ಲಿ ಯಾವ ಭಾವ ಬರಬಹುದು? ಇದನ್ನು ಒಳ್ಳೆಯ ಕಂಟೆಂಟ್‌ ಎನ್ನಲಾಗುತ್ತದೆಯೇ?

ಇನ್ನು ಭಾರತದ ರಸ್ತೆಗಳನ್ನು ಚಿನ್ನದಲ್ಲಿ ಮಾಡಬಹುದು, ಸೌದಿ ಪೆಟ್ರೋಲಿಯಂ ಸಚಿವನಿಗೆ ಮೋದಿ ಫೋನ್ ಮಾಡಿ ಪೆಟ್ರೋಲ್ ರೇಟ್ ಕಡಿಮೆ ಮಾಡುತ್ತಾರೆ. ಬೆಂಗಳೂರಿಂದ ಮಂಗಳೂರಿಗೆ ಬುಲೆಟ್ ಟ್ರೈನ್ ಬರುತ್ತೆ ಎಂದೆಲ್ಲ ಸುಳ್ಳು ಹೇಳಿಕೊಂಡು ತಿರುಗಿದ ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ಮಕ್ಕಳು ಓದಬೇಕೆ? ಅವರು ಒಳ್ಳೆಯ ಕಂಟೆಂಟ್ ಬರೆಯುತ್ತಾರೆಯೇ?

4. ರೋಹಿತ್ ಚಕ್ರತೀರ್ಥ ಐಐಟಿ-ಸಿಇಟಿ ಪ್ರೊಫೆಸರ್ ಆಗಿದ್ದರು

ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಲು ರೋಹಿತ್ ಚಕ್ರತೀರ್ಥರಿಗಿರುವ ಅರ್ಹತೆಯೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಶಿಕ್ಷಣ ತಜ್ಞ ಎನ್ನುವುದಕ್ಕೆ ಎಲ್ಲಿಯಾದರೂ ಪ್ರಮಾಣ ಪತ್ರ ಇದೆಯಾ? ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡುತ್ತಿರುವವರು ಅವರ ಹಿನ್ನೆಲೆ ಹೇಳಲಿ ನೋಡೋಣ. ಚಕ್ರತೀರ್ಥ ಈ ಹಿಂದೆ ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಎಂಬುದನ್ನು ಮರೆಯಬಾರದು” ಎಂದು ರೋಹಿತ್‌ ಚಕ್ರತೀರ್ಥ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಈ ಕುರಿತು ಶೋಧನೆ ನಡೆಸಿದಾಗ ರೋಹಿತ್ ಚಕ್ರತೀರ್ಥರವರು ಯಾವುದೇ ಐಐಟಿಗೆ ಪ್ರೊಫೆಸರ್ ಆಗಿರುವುದು ಕಂಡುಬಂದಿಲ್ಲ. ಐಐಟಿ ಅಂದರೆ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ ಎಂಬುವುದು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ 23 ಐಐಟಿ ಸಂಸ್ಥೆಗಳಿವೆ. ಕರ್ನಾಟಕದ ಧಾರವಾಡದಲ್ಲೂ ಐಐಟಿ ಇದೆ. ಆದರೆ ಈ ಯಾವ ವಿವಿಗಳಲ್ಲಿಯೂ ಪ್ರಾಧ್ಯಾಪಕರಾಗಿ ಅವರು ಹೆಸರು ಇಲ್ಲ.

ಇನ್ನು ಸಿಇಟಿ ಎಂಬ ಯಾವ ವಿಶ್ವವಿದ್ಯಾಲಯವೂ ಇಲ್ಲ. ಅದು ಪಿಯುಸಿ ನಂತರ ನಡೆಯುವ ಪ್ರವೇಶ (CET-Common Entrance Test) ಪರೀಕ್ಷೆಯಾಗಿದೆ. ಅದೊಂದು ಸಂಸ್ಥೆಯಾಗಲಿ, ಹುದ್ದೆಯಾಗಲಿ ಅಲ್ಲ. ಈ ಪರೀಕ್ಷೆ ಬರೆಯಲು ಸಾಮಾನ್ಯವಾಗಿ ಟ್ಯೂಷನ್‌ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ಟ್ಯೂಷನ್‌ ಕೇಂದ್ರಗಳಿಗೆ ಮಾನ್ಯತೆಯೂ ಇರುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹುಡುಕಿದಾಗಲೂ ಅವರೊಬ್ಬ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ, ಬರಹಗಾರ ಮತ್ತು ವಿಜ್ಞಾನ ಸಂಬಂಧಿ ವಿಚಾರಗಳ ಲೇಖಕ ಎಂದಷ್ಟೇ ಮಾಹಿತಿ ಇದೆ. ಸ್ವತಃ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ತಮ್ಮನ್ನು ಶಿಕ್ಷಕ ಎಂದಷ್ಟೇ ಪರಿಚಯಿಸಿಕೊಂಡಿದ್ದಾರೆ.

ಅವರ ಬಗ್ಗೆ ತಿಳಿದಿದ್ದ ಕೆಲವರ ಬಳಿ ವಿಚಾರಿಸಲಾಗಿ, ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ರೋಹಿತ್ ಚಕ್ರತೀರ್ಥ ಗಣಿತ ಪಾಠ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ‘ಟೆಸ್ಲಾ ಎಜುಕೇಷನ್’ ಎಂಬ‌ ಆನ್‌ಲೈನ್‌ ಪಾಠ ಮಾಡುವ ಶಿಕ್ಷಣ ಸಂಸ್ಥೆ ಹೊಂದಿರುವ ರೋಹಿತ್ ಚಕ್ರತೀರ್ಥ ಯೂಟ್ಯೂಬ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮಾಡುವ ವಿಡಿಯೋ ಸಹ ಲಭ್ಯವಾಗಿದೆ.

ಸಚಿವ ನಾಗೇಶ್‌ ಅವರು ಹೇಳಿದಂತೆ ಯಾರಾದರೂ ಪ್ರೊಫೆಸರ್ ಸ್ಥಾನಕ್ಕೆ ಏರುವ ಪ್ರಕ್ರಿಯೆಯೂ ಅಷ್ಟು ಸುಲಭದ್ದಲ್ಲ. ಮೊದಲು ಅವರು ಶಿಕ್ಷಣ ಸಂಸ್ಥೆಯೊಂದರಲ್ಲಿ ಸಹಾಯಕ ಪ್ರಾಧ್ಯಾಪಕ (Assistant Professor) ಆಗಿ ಕೆಲಸಕ್ಕೆ ನಿಯುಕ್ತಿಯಾಗಬೇಕು. ನಂತರ ಅವರ ಅನುಭವದ ಆಧಾರದ ಮೇಲೆ ಸಹ ಪ್ರಾಧ್ಯಾಪಕ (Associate Professor ) ಆಗಿ ಬಡ್ತಿ ನೀಡಲಾಗುತ್ತದೆ. ಆನಂತರ, ಅವರ ಸೇವಾನುಭವ ಮತ್ತು ಪ್ರಕಟಿತ ಸಂಶೋಧನಾ ಬರಹಗಳ ಆಧಾರದಲ್ಲಿ ಪ್ರೊಫೆಸರ್ ಎಂಬ ಗೌರವವನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ರೋಹಿತ್ ಚಕ್ರತೀರ್ಥ ಪ್ರೊಫೆಸರ್ ಅಲ್ಲ ಎಂಬುದು ಮೇಲಿನ ವಿಷಯಗಳಿಂದ ಖಚಿತವಾಗುತ್ತದೆ.

ಇದನ್ನೂ ಓದಿ: ಜಿ.ರಾಮಕೃಷ್ಣ, ಲಂಕೇಶ್‌ರವರ ಜಾತಿ ಗೊತ್ತಿಲ್ಲ: ರೋಹಿತ್ ಚಕ್ರತೀರ್ಥ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ನಮ್ಮದನ್ನು ನಾವು ಕಲಿಯುವುದು ಬೇಡ,ಪರಕೀಯರ ಬಗ್ಗೆನೇ ಕಲಿಯಿರಿ ಎನ್ನುವುದು ನಿಮ್ಮ ವಾದ ವಲ್ಲವೇ?ನೆಹರು ಗಾಂಧಿ ಜಿನ್ನಾ ಮೋಗಳತಬ್ಬಗ್ಗೆ ಮಾತ್ರ ಒದಬೇಕಲ್ಲವೆ,ಅಬ್ಬಾ ಭಾರತೀಯತೆಯನ್ನು ಹತ್ತಿಕ್ಕಲು ಏಷ್ಟು ಹುನ್ನಾರ, ಪದೆ ಪದೇ ಹೇಳಿದ್ದನ್ನೇ ಪ್ರತಿಯೊಬ್ಬ ಪ್ರಗತಿ ಪರರು ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸಿಕೊಂಡು ಎಲ್ಲಾ ಕೆಲ್ಸ ಬಿಟ್ಟು ಸಾರುತ್ತಿದ್ದಾರೆ ಮೆಚ್ಚಲೇ ಬೇಕು ಇವರ ದೇಶಿಯತೆಯನ್ನು,

  2. ನಮ್ಮದನ್ನು ನಾವು ಕಲಿಯುವುದು ಬೇಡ,ಪರಕೀಯರ ಬಗ್ಗೆನೇ ಕಲಿಯಿರಿ ಎನ್ನುವುದು ನಿಮ್ಮ ವಾದ ವಲ್ಲವೇ?ನೆಹರು ಗಾಂಧಿ ಜಿನ್ನಾ ಮೋಘಲರ ಬಗ್ಗೆಮಾತ್ರ ಒದಬೇಕಲ್ಲವೆ,ಅಬ್ಬಾ ಭಾರತೀಯತೆಯನ್ನು ಹತ್ತಿಕ್ಕಲು ಏಷ್ಟು ಹುನ್ನಾರ, ಪದೆ ಪದೇ ಹೇಳಿದ್ದನ್ನೇ ಪ್ರತಿಯೊಬ್ಬ ಪ್ರಗತಿ ಪರರು ಎಲ್ಲಾ ರೀತಿಯ ಮಾಧ್ಯಮಗಳನ್ನು ಬಳಸಿಕೊಂಡು ಎಲ್ಲಾ ಕೆಲ್ಸ ಬಿಟ್ಟು ಸಾರುತ್ತಿದ್ದಾರೆ ಮೆಚ್ಚಲೇ ಬೇಕು ಇವರ ದೇಶಿಯತೆಯನ್ನು,

  3. ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರು ಮತ್ತೆ ಗುಲಾಮರು ತರ ಬದುಕ ಬೇಕು ಅನ್ನುವ ನಿಮ್ಮ ಜನ್ಮಕ್ಕೆ ನಾಚಿಕೆ ಆಗಬೇಕು……ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಚ್ಚಾ .

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...