Homeಮುಖಪುಟಸಂವಿಧಾನದ ಆಶಯಕ್ಕೆ ವಿರುದ್ಧವಾದ ಮತಾಂತರದ ಚರ್ಚೆಗಳು: ಡಾ.ಹೆಚ್.ಸಿ ಮಹದೇವಪ್ಪ

ಸಂವಿಧಾನದ ಆಶಯಕ್ಕೆ ವಿರುದ್ಧವಾದ ಮತಾಂತರದ ಚರ್ಚೆಗಳು: ಡಾ.ಹೆಚ್.ಸಿ ಮಹದೇವಪ್ಪ

“ಧಾರ್ಮಿಕ ಮತ್ತು ಸಾಮಾಜಿಕ ಘನತೆಯನ್ನು ಬಯಸಿ ಆಗುವ ಮತಾಂತರವನ್ನು ಯಾರಾದರೂ ಕೂಡಾ ಅಣಕಿಸಿದರೆ ಅಂತಹ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆಯಿರಿ” ಎಂದು ಬಾಬಾ ಸಾಹೇಬರು ಹೇಳುತ್ತಾರೆ.

- Advertisement -
- Advertisement -

ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಂಡಿಸುವ ಕುರಿತಂತೆ ರಾಜ್ಯ ಸರ್ಕಾರದ ಸಚಿವರು ಮಾತನಾಡಲು ಆರಂಭಿಸಿರುವ ಬೆನ್ನಲ್ಲೇ ಮತಾಂತರದ ಕುರಿತಂತೆ ಚರ್ಚೆಗಳು ಮುನ್ನಲೆಗೆ ಬಂದಿವೆ. ಭಾರತೀಯ ಸಂವಿಧಾನದಲ್ಲಿ 25 -28 ನೇ ವಿಧಿಯ ಅನುಸಾರ ನೀಡಲಾಗಿರುವ ಮೂಲಭೂತ ಹಕ್ಕುಗಳಲ್ಲಿ ಸ್ವಾತಂತ್ರ್ಯದ ಹಕ್ಕು ಕೂಡಾ ಒಂದು. ನಮ್ಮಲ್ಲಿನ ಧಾರ್ಮಿಕ, ಭೌಗೋಳಿಕ ಹಾಗೂ ಜನಾಂಗೀಯ ಹಾಗೂ ಇನ್ನಿತರೆ ವೈವಿಧ್ಯತೆಯ ಕಾರಣದಿಂದಾಗಿಯೇ 1976 ರಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿ ತಿದ್ದುಪಡಿ ತಂದು ಭಾರತವನ್ನು ಜಾತ್ಯಾತೀತ ದೇಶವೆಂದು ಕರೆಯಲಾಗಿದೆ.

ಇನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತದ ಯಾವುದೇ ಪ್ರಜೆಯೂ ಕೂಡಾ ಶಾಂತಿಯುತವಾಗಿ ಸಂವಿಧಾನದ ಚೌಕಟ್ಟಿನಲ್ಲಿ ತಾನು ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರಚಾರ ಮಾಡಬಹುದಾಗಿದೆ. ಆದರೆ ಧಾರ್ಮಿಕ ಸಾಮರಸ್ಯವನ್ನು ಮೂಡಿಸುವ ಉದ್ದೇಶದಿಂದ ಸಂವಿಧಾನದಲ್ಲಿ ನೀಡಿದ ಈ ಅವಕಾಶವನ್ನು ಅರ್ಥ ಮಾಡಿಕೊಳ್ಳದೇ ಬಹಳಷ್ಟು ಮಂದಿ ಎಡವಿದ್ದಾರೆ. ಹಾಗಾಗಿಯೇ ಧಾರ್ಮಿಕ ಅಸಹನೆ ಉಂಟಾಗಿ ಕೋಮು ಗಲಭೆಗಳು ಉಂಟಾಗಿದ್ದು 1984 ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ಖರ ಹತ್ಯೆ, 1990 ರಲ್ಲಿ ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ನಡೆದ ಹಿಂದೂ ವಿರೋಧಿ ಕಲಹಗಳು, 2002 ರ ಗುಜರಾತ್ ಹತ್ಯಾಕಾಂಡ ಹಾಗೂ 2008 ರಲ್ಲಿ ಓರಿಸ್ಸಾದಲ್ಲಿ ನಡೆದ ಕ್ರೈಸ್ತರ ಕಲಹಗಳನ್ನು ನಾವು ಕಾಣಬಹುದು.

ಜಾತ್ಯಾತೀತ ತತ್ವಗಳ ನಮ್ಮ ದೇಶದಲ್ಲಿ ಆಯಾ ರಾಜ್ಯಗಳಲ್ಲಿ ನಿರ್ದಿಷ್ಟವಾದ ಧಾರ್ಮಿಕ ಆಚರಣೆಗಳಿವೆ. ಉದಾಹರಣೆಗೆ ಮುಸ್ಲೀಮರು ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ಇಸ್ಲಾಂ ಧರ್ಮದ ಆಚರಣೆಗಳು ಹೆಚ್ಚಾಗಿದ್ದರೆ, ಸಿಖ್ಖರು ಹೆಚ್ಚಾಗಿರುವ ಪಂಜಾಬಿನಲ್ಲಿ ಸಿಖ್ ಧರ್ಮದ ಆಚರಣೆಗಳು ಹೆಚ್ಚಾಗಿವೆ. ಇನ್ನು ಕ್ರೈಸ್ತ ಸಮುದಾಯದ ಜನರು ಹೆಚ್ಚಾಗಿರುವ ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ಆ ಧರ್ಮದ ಆಚರಣೆಗಳು ಜನ ಸಾಮಾನ್ಯರ ಸಹಜ ಸಂಪ್ರದಾಯಗಳಂತಿವೆ. ಇನ್ನು ಸಿಕ್ಕಿಂ, ಲಡಾಕ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ಡಾರ್ಜಿಲಿಂಗ್ ನಲ್ಲಿ ಬೌದ್ಧರ ಜನಸಂಖ್ಯೆಯು ಗಣನೀಯವಾಗಿದೆ. ಸಿಖ್, ಬೌದ್ಧ, ಜೈನ, ಕ್ರೈಸ್ತ ಮತ್ತು ಮುಸ್ಲಿಂ ಧರ್ಮಗಳು ಭಾರತದ ಪ್ರಾದೇಶಿಕ ಅಸ್ಮಿತೆಯ ಭಾಗವಾಗಿದ್ದು ಮುಸ್ಲೀಮರು ಅಲ್ಪಸಂಖ್ಯಾತರ ವಿಭಾಗದಲ್ಲಿ ಹೆಚ್ಚಿನ ಜನರನ್ನು ಹೊಂದಿದ ಸಮುದಾಯವಾಗಿದ್ದಾರೆ. ಹೀಗಿರುವಾಗಿ ಇಲ್ಲಿನ ಧಾರ್ಮಿಕ ವೈವಿಧ್ಯತೆಗಳನ್ನು ಅರ್ಥ ಮಾಡಿಕೊಳ್ಳದೇ ಕಲಹಗಳನ್ನು ಉಂಟು ಮಾಡಬಲ್ಲಂತಹ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿರುವುದು ಅರ್ಥಹೀನ

ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸ್ಥಾಪಕರಾದ ರಜನಿ ಕೊಠಾರಿ ಅವರು “ಭಾರತವು ಮೂಲತಃ ಸಹಿಷ್ಣುತೆಯ ತತ್ವದ ಮೇಲೆ ನಿರ್ಮಿಸಲ್ಪಟ್ಟ ನಾಗರೀಕ ದೇಶವಾಗಿದೆ” ಎಂದು ಅಭಿಪ್ರಾಯ ಪಡುತ್ತಾರೆ. ಅದು ವಾಸ್ತವವೂ ಕೂಡಾ.

ಆದರೆ ಸಂವಿಧಾನದ ಆಶಯಗಳ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಸಂವಿಧಾನದ ಕುರಿತು ಗೌರವ ಇಲ್ಲದ ಬಿಜೆಪಿಗರು ಧಾರ್ಮಿಕ ಅಸಹಿಷ್ಣುತೆಯನ್ನು ಹಬ್ಬುವ ಮೂಲಕ ಭಾರತದ ಸಾಮರಸ್ಯವನ್ನು ಹಾಳು ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇದೀಗ ಕರೋನಾ ಮತ್ತು ಒಮೈಕ್ರಾನ್ ವೈರಸ್ ನ ತೊಂದರೆ ಇರುವ ಮತ್ತು ಜನ ಸಾಮಾನ್ಯರು ಬೆಲೆ ಏರಿಕೆ ಹಾಗೂ ಸರ್ಕಾರದ ದುರಾಡಳಿತದಿಂದ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಧಾರ್ಮಿಕ ಕಲಹವನ್ನು ಸೃಷ್ಟಿಸಲು ಮುಂದಾಗಿರುವ ಇವರು ಅಸಂವಿಧಾನಿಕವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ನಿಜಕ್ಕೂ ಜನ ಸಾಮಾನ್ಯರ ಸಂಕಷ್ಟಗಳ ನಡುವೆ ಇವರು ಮಾಡುತ್ತಿರುವ ಕಪಿಚೇಷ್ಟೆಗಳು ತೀರಾ ಅಮಾನವೀಯವಾಗಿರುವಂತಹವು.

ಮತಾಂತರ ಎಂಬುದು ಸಂವಿಧಾನವು ವ್ಯಕ್ತಿಯೊಬ್ಬನಿಗೆ ನೀಡಿದ ಆಯ್ಕೆ. ಇಂತಹ ಸಂವಿಧಾನಿಕ ಆಯ್ಕೆಯನ್ನೇ ನಿಷೇಧಿಸಲು ಹೊರಟಿರುವ ಬಿಜೆಪಿಗರಿಗೆ ಸಂವಿಧಾನ ಎಂದರೇನು ಎಂದು ಇನ್ನೂ ಅರ್ಥವಾದಂತೆ ತೋರುತ್ತಿಲ್ಲ. ಕೇವಲ ಆರ್ ಎಸ್ ಎಸ್ ನ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ರಾಜ್ಯವನ್ನು ಕಲಹದ ಕೇಂದ್ರವಾಗಿ ಮಾರ್ಪಡಿಸಲು ಹೊರಟಿರುವ ಮತ್ತು ಸಂವಿಧಾನದ ಮೂಲ ಆಶಯವನ್ನೇ ಅರಿಯದೇ ಅಜ್ಞಾನದಿಂದ ವರ್ತಿಸುತ್ತಿರುವ ಬಸವರಾಜ ಬೊಮ್ಮಾಯಿ ಅವರು ಅಸಂವಿಧಾನಿಕವಾಗಿ ವರ್ತಿಸುತ್ತಿದ್ದು ತಾವು ಮುಖ್ಯಮಂತ್ರಿ ಆಗಿರುವುದು ಸಂವಿಧಾನದ ಬಲದಿಂದ ಎಂಬುದನ್ನು ಮರೆತು ವರ್ತಿಸುತ್ತಿರುವುದು ದುರಂತ!

ಸಂವಿಧಾನಿಕ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಸೇವೆಗಾಗಿ ಆಯ್ಕೆಯಾಗಿರುವ ಬಿಜೆಪಿಯ ಜನ ಪ್ರತಿನಿಧಿಗಳು ಧರ್ಮದ ಹೆಸರಲ್ಲಿ ಜನ ಸಾಮಾನ್ಯರ ಹಿತಕ್ಕೆ ವಿರುದ್ಧವಾದ ಮೌಢ್ಯದ ಪ್ರತಿಪಾದಕರಾಗಿ ಬದಲಾಗಿರುವುದು ಅವರ ದುರ್ಬಲ ಮನಸ್ಥಿತಿಯ ಮತ್ತು ಅತಿ ಅಜ್ಞಾನದ ಪ್ರತೀಕವಾಗಿದೆ.

ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಆಗುವುದು ಹಿಂದೂ ಧರ್ಮದ ಉಳಿವಿಗೆ ಉಂಟಾಗುವ ಅಪಾಯವಾಗಿರುವುದರಿಂದ ಅದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಬಿಜೆಪಿಗರು ತಮ್ಮದು ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಶೋಷಣೆಯನ್ನು ವಿಜೃಂಭಿಸುವ ಧರ್ಮ ಎಂಬುದನ್ನು ಮರೆಯಬಾರದು

ಈ ಹೊತ್ತಿಗೂ ಹಿಂದೂ ಧರ್ಮದ ಪರಿಧಿಯ ಒಳಗೆ ಜಾತಿಯ ಅಸಮಾನತೆಯ ಕಾರಣಕ್ಕೆ ದೌರ್ಜನ್ಯ ಅನುಭವಿಸುತ್ತಿರುವ ಮತ್ತು ಅನಗತ್ಯವಾಗಿ ಕೀಳರಿಮೆಯನ್ನು ಅನುಭವಿಸುತ್ತಿರುವ ಜನ ಸಮುದಾಯಕ್ಕೆ ಎಂದಿಗೂ ಕೂಡಾ ಹಿಂದೂ ಧರ್ಮ ಪ್ರೀತಿ ತೋರಿಸುವ ಮತ್ತು ಘನತೆಯಿಂದ ನಿಯಂತ್ರಿಸುವ ಪ್ರಯತ್ನವನ್ನು ಮಾಡಿಲ್ಲ. ಯಾವಾಗಲೋ ಒಮ್ಮೆ ಸಾರ್ವಜನಿಕವಾಗಿ ನೆನಪಾದಾಗ ಬರೀ ಬಾಯಿ ಮಾತಲ್ಲಿ ಆದರ್ಶ ಸಮಾಜದ ಬಗ್ಗೆ ಪ್ರವಚನ ನೀಡುವ ಮಂದಿ, ಅಂತರಂಗದಲ್ಲಿ ಅಸಮಾನತೆಯನ್ನು ಆರಾಧಿಸುವವರಾಗಿದ್ದಾರೆ. ದುರ್ದೈವ ಎಂದರೆ ಇದೇ ನೀಚ ಮನಸ್ಥಿತಿಗಳೇ ಸಾಮಾಜಿಕ ನ್ಯಾಯಕ್ಕಾಗಿ ಜಾರಿಗೊಳಿಸಿರುವ ಮೀಸಲಾತಿ ಹಾಗೂ ಇನ್ನಿತರೆ ಜನಪರ ಯೋಜನೆಗಳ ಜಾರಿಯ ವಿರೋಧಿಗಳಾಗಿದ್ದಾರೆ. ಇವರ ಬಾಯಿಂದ ಯಾವತ್ತೂ ಕೂಡಾ ಶೋಷಣೆಯ ವಿರುದ್ಧ ಪ್ರತಿರೋಧದ ದನಿ ಹೊರಡುವುದಿಲ್ಲ, ಸಮಾನತೆಗಾಗಿ ಹೋರಾಟವಂತೂ ಇಲ್ಲವೇ ಇಲ್ಲ. ದಿನ ಬೆಳಗಾದರೆ ಶೋಷಣೆಯನ್ನೇ ಅಸ್ತ್ರ ಮಾಡಿಕೊಂಡು ನಮ್ಮ ಧರ್ಮ ಬಿಟ್ಟು ಹೋಗಬೇಡಿ ಎಂದರೆ ಅದಕ್ಕೆ ನಗದೆ ಇನ್ನೇನು ಮಾಡಬೇಕು?

ಹಿಂದೂ ಧರ್ಮದ ಒಳಗೆ ಪ್ರಜ್ಞಾ ಪೂರ್ವಕವಾಗಿಯೇ ಆಚರಿಸುತ್ತಿರುವ ಜಾತಿ ಶ್ರೇಷ್ಠತೆ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯಂತಹ ಅಮೇದ್ಯದ ವಿರುದ್ಧ ನಿರಂತರ ಹೋರಾಟ ನಡೆಸಿ, ಸಮಾಜದಲ್ಲಿ ಸಮಾನತೆ ಎಂಬುದು ಒಂದು ದೇಶದ ಆರೋಗ್ಯಕರ ಅಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಎಷ್ಟು ಮುಖ್ಯ ಎಂಬ ಸಂಗತಿಯನ್ನು ಮನ ಮುಟ್ಟುವಂತೆ ಪ್ರತಿಪಾದಿಸಿದರೂ ಹಿಂದೂ ಧರ್ಮ ಸುಧಾರಣೆ ಮಾಡುವಲ್ಲಿ ಬಾಬಾ ಸಾಹೇಬರು ಯಶಸ್ಸು ಕಾಣಲಿಲ್ಲ. ಹೀಗಾಗಿಯೇ ಬೇಸರಗೊಂಡ ಅವರು ಹಿಂದೂ ಧರ್ಮವನ್ನು ತೊರೆಯುವಂತಹ ಪರಿಸ್ಥಿತಿ ಉಂಟಾಯಿತು.

ತನ್ನ ಸಹಜೀವಿಗಳೆಲ್ಲಾ ಘನತೆಯಿಂದ ಇರಬೇಕೆಂದು ಬಯಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಂತಹ ಮಹಾನ್ ವ್ಯಕ್ತಿಯನ್ನೇ ಸಂಕಟದಲ್ಲಿ ಮುಳುಗಿಸಿದ ಇವರ ಧರ್ಮದ ಕಲ್ಪನೆಯಲ್ಲಿ ಯಾವುದೇ ಪ್ರಾಮಾಣಿಕತೆ ಉಳಿದಿಲ್ಲ ಎಂಬುದನ್ನು ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ವಿಷಯದಲ್ಲಿ ಮತಾಂತರ ಎಂಬುದು ಬೇರೊಂದು ಧರ್ಮದ ಆಕರ್ಷಣೆಗೆ ಒಳಗಾಗಿ ಹೋದ ಸಂಗತಿಯಾಗಿರಲಿಲ್ಲ, ಬದಲಿಗೆ ಹಿಂದೂ ಧರ್ಮದ ಒಳಗೇ ಘನತೆ ಮತ್ತು ಮಾನಸಿಕ ನೆಮ್ಮದಿಯಿಂದ ಬದುಕಲು ಸಾಧ್ಯವಾಗದೇ ಮಾಡಿಕೊಂಡ ಅನಿವಾರ್ಯವಾದ ಆಯ್ಕೆಯಾಗಿತ್ತು. ಹೀಗಾಗಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೇ ಹಿಂದೂ ಧರ್ಮದಿಂದ ಉಂಟಾಗುವ ಮತಾಂತರದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ.

1935 ರಲ್ಲಿ ಹಿಂದೂ ಧರ್ಮ ತೊರೆಯುವಾಗ ಬಾಬಾ ಸಾಹೇಬರು “ಧಾರ್ಮಿಕ ಮತ್ತು ಸಾಮಾಜಿಕ ಘನತೆಯನ್ನು ಬಯಸಿ ಆಗುವ ಮತಾಂತರವನ್ನು ಯಾರಾದರೂ ಕೂಡಾ ಅಣಕಿಸಿದರೆ ಅಂತಹ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುನ್ನಡೆಯಿರಿ” ಎಂದು ಹೇಳುತ್ತಾರೆ.

ಈ ನಿಟ್ಟಿನಲ್ಲಿ ಧಾರ್ಮಿಕತೆ ಎಂಬುದು ಸಂವಿಧಾನಿಕವಾದ ಸ್ವತಂತ್ರ ಆಯ್ಕೆಯೇ ವಿನಃ ಯಾರದ್ದೋ ಮತಿಗೆಟ್ಟ ಮೌಢ್ಯದ ಜನರ ಆಜ್ಞೆಗೆ ತಲೆ ಬಾಗಿ ಮಾಡುವ ಆಚರಣೆ ಅಲ್ಲ. ಈ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು.

ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಬಿಜೆಪಿಯ ಕೋಮು ಶಕ್ತಿಗಳು ಸನಾತನ ಧರ್ಮ, ಹಿಂದುತ್ವ, ವರ್ಣಾಶ್ರಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ಹಾಗೂ ಶೋಷಣೆಯ ವಾತಾವರಣವನ್ನೇ ಮುಂದುವರೆಸುತ್ತಾ ಸಾಗಿದರೆ ಈ ದೇಶದ ಎಲ್ಲಾ ಶೋಷಿತ ಜನರೂ ಕೂಡಾ ಬಾಬಾ ಸಾಹೇಬರಂತೆಯೇ ಮತ್ತೊಮ್ಮೆ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಬೌದ್ಧ ಧರ್ಮದ ಮಾನವೀಯ ತತ್ವಗಳ ಆಧಾರದ ಮೇಲೆ ಸಾಮಾಜಿಕತೆಯನ್ನು ಅಧಿಕೃತವಾಗಿ ರೂಪಿಸಿಕೊಂಡು ಅದರ ಆಧಾರದ ಮೇಲೆಯೇ ರಾಜಕೀಯ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಸಲು ಬಯಸುತ್ತೇನೆ.

ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿರುವ ಬಿಜೆಪಿಗರೇ,

“ಯಾವುದೇ ಧರ್ಮದ ಆಚರಣೆಯನ್ನು ಮಾಡುತ್ತಿರುವ ವ್ಯಕ್ತಿಯನ್ನು ಅವರ ಇಚ್ಛೆಗೆ ವಿರುದ್ಧ ಬಲವಂತವಾಗಿ ಇಲ್ಲವೇ ಮೋಸದ ತಂತ್ರಗಳ ಮೂಲಕ ಮತಾಂತರ ಮಾಡಲು ಯತ್ನಿಸುವುದು ಸಂವಿಧಾನ ಬಾಹಿರವಾದ ಕೃತ್ಯ” ಎಂಬುದು ಸಾಮಾನ್ಯ ತಿಳುವಳಿಕೆ ಆಗಿದೆ. ಇನ್ನು ಐಚ್ಛಿಕ ಮತಾಂತರವನ್ನು ತಡೆಯುವುದೂ ಕೂಡಾ ಸಂವಿಧಾನ ಬಾಹಿರ ಎಂಬ ಬೇಗ ಅರಿತುಕೊಂಡು, ಇಂತಹ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟು, ರೈತರು, ಯುವಕರು ಹಾಗೂ ಸದಾ ಶ್ರಮ ವಹಿಸಿ ದುಡಿಯುತ್ತಿರುವ ಜನ ಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡಬೇಕೆಂದು ಈ ಮೂಲಕ ನಾನು ಆಗ್ರಹಿಸುತ್ತೇನೆ!

(ಡಾ.ಹೆಚ್.ಸಿ ಮಹದೇವಪ್ಪನವರು ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರು.)


ಇದನ್ನೂ ಓದಿ: ಮತಾಂತರ ಆರೋಪ: ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗದಳದಿಂದ ಶಾಲೆ ಮೇಲೆ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಗುಲಾಮರಿಗೆ ಮತಾಂತರ ಮಾಡಲು ಕಷ್ಟ ಅನ್ನುವ ಅಳಲು

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...