ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿಯೆಂದು ತೀರ್ಪು ನೀಡಿದೆ.
ಮೈಸೂರಿನ ಕೆ.ಆರ್.ನಗರದ ಮಹಿಳೆ ಮೇಲೆ ನಡೆದ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜುಲೈ 29 ರಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು.
ತೀರ್ಪು ಪ್ರಕಟವಾಗುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ ಪ್ರಜ್ವಲ್ ರೇವಣ್ಣ ಕಣ್ಣೀರಿಟ್ಟರು. ನಂತರ ಕಣ್ಣೀರು ಒರೆಸಿಕೊಳ್ಳುತ್ತಲೇ ಅವರು ನ್ಯಾಯಾಲಯದಿಂದ ಹೊರನಡೆದರು. ಪ್ರಜ್ವಲ್ ರೇವಣ್ಣ ಅವರಿಗೆ ವಿಧಿಸಲಿರುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ನಾಳೆ ಪ್ರಕಟಿಸಲಿದೆ. ಕಾನೂನು ತಜ್ಞರ ಪ್ರಕಾರ, ಈ ಪ್ರಕರಣದಲ್ಲಿ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ.
ಪ್ರಕರಣದ ಹಿನ್ನೆಲೆ
ಕೆ.ಆರ್ ನಗರದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ವಿಷಯ ಬಹಿರಂಗವಾಗಬಹುದೆಂದು ಭಯಗೊಂಡು, ಪ್ರಜ್ವಲ್ ಅವರ ತಂದೆ ಎಚ್.ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ಮತ್ತು ಇತರ ಒಂಬತ್ತು ಜನರು ಸೇರಿ ಆ ಮಹಿಳೆಯನ್ನು ಅಪಹರಿಸಿದ್ದರು. ಆಕೆಯನ್ನು ಹುಣಸೂರು ಬಳಿ ಇರುವ ತೋಟದ ಮನೆಯೊಂದರಲ್ಲಿ ಕೂಡಿಹಾಕಲಾಗಿತ್ತು. ಈ ಅಪಹರಣ ಪ್ರಕರಣದಿಂದಲೇ ಎಚ್.ಡಿ ರೇವಣ್ಣ ಸೇರಿದಂತೆ ಎಂಟು ಜನರು ಜೈಲು ಸೇರಿದ್ದರು. ಭವಾನಿ ರೇವಣ್ಣ ಅವರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ನಂತರ ನಿರೀಕ್ಷಣಾ ಜಾಮೀನು ಪಡೆದರು.
ವಿಶೇಷ ತನಿಖಾ ದಳ (SIT) ಸಂತ್ರಸ್ತೆಯನ್ನು ರಕ್ಷಿಸಿ, ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಿತು. ತನಿಖೆ ಮುಗಿದ ನಂತರ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಪ್ರಜ್ವಲ್ ರೇವಣ್ಣನವರ ಮೊಬೈಲ್ನಲ್ಲಿ ಆ ಮಹಿಳೆಯನ್ನು ಬಲವಂತವಾಗಿ ಬೆತ್ತಲುಗೊಳಿಸಿ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಪತ್ತೆಯಾಯಿತು. ಈ ವಿಡಿಯೋ ಪ್ರಮುಖ ಸಾಕ್ಷಿಯಾಯಿತು. ವಿಧಿವಿಜ್ಞಾನ ಪರೀಕ್ಷೆಯಿಂದ ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಅವರೇ ಎಂದು ದೃಢಪಟ್ಟಿತು. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದೇ ಎಂದು ಹೇಳಲಾದ ಅಶ್ಲೀಲ ವಿಡಿಯೋಗಳಿರುವ ಪೆನ್ಡ್ರೈವ್ಗಳನ್ನು ಹಾಸನ ಕ್ಷೇತ್ರಾದ್ಯಂತ ಹಂಚಲಾಗಿತ್ತು. ಈ ಘಟನೆಯ ನಂತರ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮೇ 31, 2024ರಂದು ಪ್ರಜ್ವಲ್ ರೇವಣ್ಣನವರನ್ನು ಪೊಲೀಸರು ಬಂಧಿಸಿದರು.
ಅಂದಿನಿಂದ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಅವರು ಈಗಾಗಲೇ ಜಾಮೀನು ಪಡೆದಿದ್ದಾರೆ.
ತೀರ್ಪು ಪ್ರಕಟಿಸಲು ವಿಳಂಬವೇಕೆ?
ವಾಸ್ತವವಾಗಿ, ಈ ಪ್ರಕರಣದ ತೀರ್ಪನ್ನು ಜುಲೈ 30ರಂದೇ ಪ್ರಕಟಿಸಬೇಕಿತ್ತು. ಆದರೆ, ನ್ಯಾಯಾಲಯಕ್ಕೆ ಕೆಲವು ಸ್ಪಷ್ಟೀಕರಣಗಳು ಅಗತ್ಯವಿದ್ದ ಕಾರಣ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಾಲಯವು ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು.
- ಗೂಗಲ್ ಮ್ಯಾಪ್ ಸಾಕ್ಷ್ಯ: ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರು ಗೂಗಲ್ ಮ್ಯಾಪ್ ಅನ್ನು ಸಾಕ್ಷ್ಯವಾಗಿ ಮಂಡಿಸಿದ್ದರು. ಗೂಗಲ್ ಕಂಪನಿಯ ದೃಢೀಕರಣವಿಲ್ಲದೆ ಸಲ್ಲಿಸಲಾದ ಈ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ವಿಶೇಷ ತನಿಖಾ ತಂಡ (SIT)ವು, ಅತ್ಯಾಚಾರ ನಡೆದ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ಮಹಜರ್ ದಾಖಲೆಯಲ್ಲಿ ನಮೂದಿಸಲಾಗಿದೆ. ಈ ವಿವರಗಳನ್ನು ಕ್ಲಿಕ್ ಮಾಡಿದರೆ ಗೂಗಲ್ ಮ್ಯಾಪ್ನಲ್ಲಿ ಸ್ಥಳ ಮತ್ತು ಹಳೆಯ ಫೋಟೋಗಳು ಲಭ್ಯವಾಗುತ್ತವೆ. ಆದ್ದರಿಂದ ಇದನ್ನು ದಾಖಲೆಯ ಭಾಗವೆಂದು ಪರಿಗಣಿಸಬೇಕು ಎಂದು ಮನವಿ ಮಾಡಿತು.
- ಮೊಬೈಲ್ ಫೋನ್ ಸಾಕ್ಷ್ಯ: ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಸ್ಯಾಮ್ಸಂಗ್ ಜೆ 4 ಮೊಬೈಲ್ ಫೋನ್ ಬಗ್ಗೆಯೂ ನ್ಯಾಯಾಲಯ ಸ್ಪಷ್ಟೀಕರಣ ಕೇಳಿತ್ತು. ಇದಕ್ಕೆ ಪ್ರಜ್ವಲ್ ಪರ ವಕೀಲರು, ಆ ಮೊಬೈಲ್ ಅನ್ನು ತನಿಖಾಧಿಕಾರಿಗಳು ಬೇರೊಂದು ಪ್ರಕರಣದಿಂದ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಅವರು ಅದನ್ನು ವಶಪಡಿಸಿಕೊಂಡಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ವಾದಿಸಿದ್ದರು.
ಈ ಎಲ್ಲಾ ಸ್ಪಷ್ಟೀಕರಣಗಳ ನಂತರ, ನ್ಯಾಯಾಲಯವು ಅಂತಿಮವಾಗಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.


