ಗುಜರಾತ್ನಲ್ಲಿ ಕೊರೊನಾ ವೈರಸ್ ಬಿಕ್ಕಟ್ಟು “ತುಂಬಾ ಭಯಾನಕವಾಗಿದೆ” ಮತ್ತು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸ್ವತಃ ಸಿದ್ಧವಾಗಿರಬೇಕು ಎಂದು ಗುಜರಾತ್ ಹೈಕೋರ್ಟ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸ್ಥಿತಿಗತಿ ಕುರಿತು ವರದಿಯನ್ನು ಸಿದ್ಧಪಡಿಸಲು ಐದು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸುವಂತೆ ನ್ಯಾಯಾಲಯವು ಆಗಸ್ಟ್ 17 ರಂದು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿತ್ತು. ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರದ ಸನ್ನದ್ಧತೆಯ ವಿವರಗಳನ್ನು ಕೇಳಿರುವ ನ್ಯಾಯಾಲಯವು ಈ ಕುರಿತು ದಾಖಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸುತ್ತಿದೆ.
“ಗುಜರಾತ್ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಹೊರಹೊಮ್ಮುವ ಚಿತ್ರಣವು ಸಾಕಷ್ಟು ಭಯಾನಕವಾಗಿದೆ” ಎಂದು ಮುಖ್ಯ ನ್ಯಾಯಾಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ಡಿವಾಲಾ ಅವರನ್ನೊಳಗೊಂಡ ಗುಜರಾತ್ ಹೈಕೋರ್ಟ್ ಪೀಠ ಹೇಳಿದೆ.
“ಕೊರೊನಾ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದರೂ, ಯಂತ್ರೋಪಕರಣಗಳು ಸಜ್ಜಾಗಬೇಕಿದೆ ಮತ್ತು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ರಾಜ್ಯವು ಸಿದ್ಧವಾಗಬೇಕು” ಎಂದು ಅದು ಸೂಚಿಸಿದೆ.
ಇದನ್ನೂ ಓದಿ: ನವಿಲುಗಳೊಂದಿಗೆ ಮೋದಿ ವೀಡಿಯೋ: ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ
ಹಿರಿಯ ಅಧಿಕಾರಿಗಳ ತಂಡವು ಗುಜರಾತ್ನ ಸರ್ಕಾರಿ ಆಸ್ಪತ್ರೆಗಳನ್ನು, ವಿಶೇಷವಾಗಿ ವಡೋದರಾ, ಭಾವನಗರ, ರಾಜ್ಕೋಟ್ ಮತ್ತು ಗಾಂಧಿನಗರದಲ್ಲಿರುವ ಆಸ್ಪತ್ರೆಗಳನ್ನು ಪರಿಶೀಲಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
“ಚಿಕಿತ್ಸೆ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ವಿವಿಧ ನಾಗರಿಕ ಆಸ್ಪತ್ರೆಗಳಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳಿವೆ ಇದೆ” ಎಂದು ನ್ಯಾಯಾಲಯ ಹೇಳಿದೆ. “ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಗುಜರಾತ್ ರಾಜ್ಯದ ಎಲ್ಲಾ ನಾಗರಿಕ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿಯನ್ನು ಸಿದ್ಧಪಡಿಸುವಂತೆ ನಾವು ಸಮಿತಿಯ ಸದಸ್ಯರಿಗೆ ನಿರ್ದೇಶಿಸುತ್ತೇವೆ” ಎಂದು ಅದು ಹೇಳಿದೆ.
ಸಮಿತಿಯ ಸದಸ್ಯರು ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದಿರುವ ಹೈಕೋರ್ಟ್, ಆಸ್ಪತ್ರೆಗಳ ವಿವರವಾದ ವರದಿಯನ್ನು ಮುಂದಿನ ವಿಚಾರಣೆಯ ದಿನವಾದ ಸೆಪ್ಟೆಂಬರ್ 4 ರೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಗುಜರಾತ್ನಲ್ಲಿ ಇದುವರೆಗೆ 84,000 ಕೊರೊನಾ ವೈರಸ್ ಪ್ರಕರಣಗಳು ಮತ್ತು 2,908 ಸಾವುಗಳು ವರದಿಯಾಗಿದೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಓದಿ: ಅದಾನಿಗೆ ವಿಮಾನ ನಿಲ್ದಾಣ ನಿರ್ವಹಣೆ ವಿರುದ್ದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ