ಉತ್ತರ ಪ್ರದೇಶದ ಭದೋಹಿ ಸಮೀಪದ ಹಳ್ಳಿಯೊಂದರಲ್ಲಿ ದಲಿತ ರೈತ ಹಾಗೂ ಅವರ ಪತ್ನಿಯನ್ನು ಕೋಲು ಮತ್ತು ಕಬ್ಬಿಣದ ರಾಡ್ಗಳಿಂದ ಥಳಿಸಿ ಜಾತಿ ಆಧಾರಿತ ನಿಂದನೆ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಊಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೈಚ್ ಗ್ರಾಮದಲ್ಲಿ, ದಲಿತರು ಭೋಗ್ಯಕ್ಕೆ ಪಡೆದಿದ್ದ ಭೂಮಿಯಲ್ಲಿ ಪ್ರಬಲ ಜಾತಿ ಜನರು ದನಗಳನ್ನು ಮೇಯಿಸುತ್ತಿದ್ದ ಆರೋಪದ ಮೇಲೆ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದೂರುದಾರ ದೀಪಕ್ ಕುಮಾರ್ ಪಾಸಿ, ಭೂಹೀನ ದಲಿತ ರೈತರಾಗಿದ್ದಾರೆ. ಸ್ಥಳೀಯ ಗ್ರಾಮಸ್ಥರ ಹೊಲದಲ್ಲಿ ಭೋಗ್ಯದ ಆಧಾರದ ಮೇಲೆ ಉದ್ದು ಬೆಳೆಯುತ್ತಾರೆ.
ದೀಪಕ್, ತನ್ನ ಹೊಲದಲ್ಲಿ ಮತ್ತೊಬ್ಬ ಗ್ರಾಮಸ್ಥರ ದನ ಮೇಯುವುದನ್ನು ಆಕ್ಷೇಪಿಸಿದಾಗ, ಅವರ ಪತ್ನಿ ಸುಮಿತ್ರಾ, ಅಣ್ಣ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
“ರಾಜಾರಾಮ್ ಯಾದವ್ ತಮ್ಮ ಹೊಲದಲ್ಲಿ ದನಗಳು ಮೇಯುತ್ತಿರುವ ಬಗ್ಗೆ ದೀಪಕ್ ದೂರು ನೀಡಿದಾಗ, ರಾಜಾರಾಮ್ ಕೋಪಗೊಂಡರು. ಅವರು ದೀಪಕ್ ಮೇಲೆ ಜಾತಿ ನಿಂದನೆ ಮಾಡಿ, ಇತರರ ಸಹಾಯದಿಂದ ಕೋಲು ಮತ್ತು ಕಬ್ಬಿಣದ ಸರಳುಗಳಿಂದ ಹೊಡೆದರು” ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.
ದೂರಿನ ಪ್ರಕಾರ, ದಾಳಿಕೋರರು ಸುಮಿತ್ರಾಳ ಕೂದಲನ್ನು ಹಿಡಿದು ಹೊಲದಾದ್ಯಂತ ಎಳೆದೊಯ್ದು, ಹೊಡೆದು, ಬಟ್ಟೆ ಬಿಚ್ಚಿದರು. ದೀಪಕ್ ಮತ್ತು ಸುಮಿತ್ರಾ ಅವರ ಗಾಯಗಳು ಗಂಭೀರವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಕುಟುಂಬದ ಇತರ ನಾಲ್ವರು ಸದಸ್ಯರನ್ನು ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ.
ದೀಪಕ್ ಅವರ ದೂರಿನ ಆಧಾರದ ಮೇಲೆ, ಪೊಲೀಸರು ರಾಜಾರಾಮ್ ಯಾದವ್, ದಿಲಜೀತ್ ಯಾದವ್, ಅರವಿಂದ್ ಯಾದವ್, ರಾಜೇಂದ್ರ ಯಾದವ್, ಪಾರ್ವತಿ ದೇವಿ ಮತ್ತು ತಾರಾ ದೇವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.