Homeಅಂಕಣಗಳುರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

- Advertisement -
- Advertisement -

ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಕಳೆದಿರಲಿಲ್ಲ; ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿ ಆಗಬೇಕೆಂದು ಕನಸು ಕಾಣುತ್ತಿದ್ದ ದಲಿತ ಸಂಶೋಧಕನೊಬ್ಬನನ್ನು ಈ ವ್ಯವಸ್ಥೆ ಬಲಿ ಪಡೆದುಕೊಂಡಿತು. ಜಾತಿ, ಧರ್ಮವೆಂಬ ಗೋಡೆಗಳನ್ನು ದಾಟಿ ಭಾರತದ ಯುವ ಸಮೂಹ ಕಣ್ಣೀರಿಟ್ಟಿತು. ರೋಹಿತ್ ವೇಮುಲನ ಕಡೆಯ ಪತ್ರ ಹೃದಯವಿದ್ದ ಪ್ರತಿಯೊಬ್ಬರ ಕರುಳನ್ನು ಕಿವುಚಿತ್ತು.

ರೋಹಿತ್ ವೇಮುಲ, ರಾಧಿಕ ವೇಮುಲ ಎಂಬ ದಲಿತೆಯ ಮೊದಲನೇ ಮಗ. ತನ್ನ ಜೀವಮಾನವಿಡೀ ಮಲತಾಯಿಯ ಮನೆಯಲ್ಲಿ ನೊಂದುಬೆಂದು ಕೇವಲ ಕೆಲಸದವಳಾಗಿ ಬದುಕಿದ ರಾಧಿಕಾ ವೇಮುಲ ಕಷ್ಟಪಟ್ಟು ತನ್ನೆರಡು ಮಕ್ಕಳ ವಿದ್ಯಾಭ್ಯಾಸ ಮಾಡಿಸಿದರು. ಇದರ ಪರಿಣಾಮವಾಗಿ ರೋಹಿತ್ ವೇಮುಲ ಕೇಂದ್ರೀಯ ವಿವಿಯಲ್ಲಿ ಸಂಶೋಧನಾರ್ಥಿಯಾಗಿ ವಿದ್ಯಾಭ್ಯಾಸ ಮಾಡಲು ತೊಡಗಿದನು. ವಿಶ್ವವಿದ್ಯಾಲಯಗಳನ್ನು ಪ್ರವೇಶಿಸುವ ಬೆರಳೆಣಿಕೆಯಷ್ಟು ದಲಿತ-ಬಹುಜನ ವಿದ್ಯಾರ್ಥಿಯ ಮೇಲೆ ಅಂಬೇಡ್ಕರರು ಪ್ರಭಾವ ಬೀರದೇ ಇರಲಾರರು. ರೋಹಿತ್ ವೇಮುಲನೂ ಅವರಿಂದ ಪ್ರಭಾವಕ್ಕೊಳಗಾದನು. ವಿ.ವಿಯಲ್ಲಿದ್ದ ’ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್’ನ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಸಕ್ರಿಯ ಕಾರ್ಯಕರ್ತನಾದನು. ಕೇವಲ ಎರಡು ವರ್ಷಗಳಲ್ಲಿ ಸಂಘಟನೆಯ ಪ್ರಮುಖ ತೀರ್ಮಾನಗಳನ್ನು ತೀರ್ಮಾನಿಸುವ ಸದಸ್ಯರಲ್ಲಿ ಒಬ್ಬನಾದನು. ಸದಾ ಮನುಷ್ಯ ವಿರೋಧಿ ವಿಚಾರಗಳ ವಿರುದ್ಧವಿದ್ದ ’ಎಎಸ್‌ಎ’ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಸಹಜವಾಗಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ’ಅಖಿಲ ಭಾರತ ವಿದ್ಯಾರ್ಥಿ ಪರಿಷತ್’ನೊಂದಿಗೆ (ಎಬಿವಿಪಿ) ಎದುರುಬದಿರಾಯಿತು. ’ಆರ್‌ಎಸ್‌ಎಸ್’ ವಿಚಾರದಲ್ಲಿ ನಂಬಿಕೆ ಹೊಂದಿದ್ದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ಬಳಿಕವಂತೂ ಈ ಎರಡು ಭಿನ್ನ ಚಿಂತನೆಗಳುಳ್ಳ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳು ತಾರಕಕೇರಿದ್ದವು. ’ಎಬಿವಿಪಿ’ಯು ’ಹಿಂದೂರಾಷ್ಟ್ರ’ದ ಕನಸು ಕಾಣುತ್ತಿದ್ದರೆ ’ಎಎಸ್‌ಎ’ಯು ’ಜಾತಿರಹಿತ ಭಾರತ’ದ ಕನಸು ಕಾಣುತ್ತಿತ್ತು. ಇದರ ಭಾಗವಾಗಿ ಈ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಜಾತಿ ದಮನದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪರವಾಗಿ ರೋಹಿತ್ ವೇಮುಲ ಮಾತನಾಡತೊಡಗಿದನು ಹಾಗೂ ವಿದ್ಯಾರ್ಥಿಗಳನ್ನೂ ಸಂಘಟಿಸಿದನು. ಮರಣ ದಂಡನೆ ಶಿಕ್ಷೆಯ ವಿರುದ್ಧ, ದನದ ಮಾಂಸ ಸೇವಿಸುವವರ ವಿರುದ್ಧ ನಡೆಯುತ್ತಿದ್ದ ಹಲ್ಲೆಗಳ ವಿರುದ್ಧ ’ಎಎಸ್‌ಎ’ ವೈಚಾರಿಕ ಹೋರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.

ಹೀಗೆ ಸಕ್ರಿಯವಾಗಿ ’ಎಎಸ್‌ಎ’ ಕ್ಯಾಂಪಸ್ಸಿನ ಒಳಗೆ ಕೆಲಸ ನಿರ್ವಹಿಸುತ್ತಿರುವುದನ್ನು ಸಹಿಸದಾದ ’ಎಬಿವಿಪಿ’ ವಿದ್ಯಾರ್ಥಿ ಮುಖಂಡ ಸುಶೀಲ್ ಕುಮಾರ್ 2015ರ ಆಗಸ್ಟ್ 3ರಂದು ಫೇಸ್‌ಬುಕ್‌ನಲ್ಲಿ ’ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ’ಯ ಸದಸ್ಯರನ್ನು ’ಗೂಂಡಾಗಳು’ ಎಂದು ಕರೆದನು. ಇದರ ಬಗ್ಗೆ ಸ್ಪಷ್ಟನೆ ಕೇಳಿ ’ಎಎಸ್‌ಎ’ ಸದಸ್ಯರುಗಳೂ ಸಹ ಪೋಸ್ಟ್ ಮಾಡಿದರು. ಆಗ ದೆಹಲಿ ವಿಶ್ವವಿದ್ಯಾಲಯದಲ್ಲಿ ’ಎಬಿವಿಪಿ’ ನಡೆಸಿದ್ದ ಗಲಾಟೆಯನ್ನು ’ಎಎಸ್‌ಎ’ ವಿದ್ಯಾರ್ಥಿಗಳು ಖಂಡಿಸಿದ್ದರಿಂದ ತಾನು ಹಾಗೆ ಬರೆದಿರುವುದಾಗಿ ಸುಶೀಲ್ ಕುಮಾರ್ ಒಪ್ಪಿಕೊಂಡನು. ಆಗ ರೋಹಿತ್ ವೇಮುಲ ಸೇರಿದಂತೆ ಹಲವು ವಿದ್ಯಾರ್ಥಿಗಳು ಸುಶೀಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು. ಅವರ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಸುಶಿಲ್ ಕುಮಾರ್ ಕ್ಷಮೆ ಯಾಚಿಸಿದನು. ಇಲ್ಲಿಗೆ ಆ ಪ್ರಕರಣ ಅಂತ್ಯವಾಯಿತು ಎಂದುಕೊಳ್ಳುವಷ್ಟರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಮೂಗು ತೂರಿಸಲು ಆರಂಭಿಸಿದರು.

ಮರುದಿನ ಅಂದರೆ ಆಗಸ್ಟ್ 4ರಂದು ಸುಶೀಲ್ ಕುಮಾರ್ ಅಣ್ಣ ಹಾಗೂ ಬಿಜೆಪಿಯ ಯುವ ಮುಖಂಡ ಸೇರಿ ಸುಶೀಲ್‌ನನ್ನು ಒಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸಿದನು. ಈ ಮೊದಲಿಂದಲೇ ಸುಶೀಲನಿಗೆ ಅಪೆಂಡಿಸೈಟಿಸ್ ಕಾಯಿಲೆ ಇದ್ದ ಕಾರಣ ಆಪರೇಷನ್ ಮಾಡಿಸಲಾಯಿತು. ಆದರೆ ಬಿಜೆಪಿ ಮುಖಂಡರು ಇದೇ ನೆಪ ಇಟ್ಟುಕೊಂಡು ’ಎಎಸ್‌ಎ’ ವಿದ್ಯಾರ್ಥಿಗಳು ಸುಶೀಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಹೊಟ್ಟೆಗೆ ಪೆಟ್ಟಾಗಿದ್ದು ಆಪರೇಷನ್ ಮಾಡಿಸುವಷ್ಟು ಗಂಭೀರವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಸುಳ್ಳು ಆರೋಪದ ವಿರುದ್ಧ ’ಎಎಸ್‌ಎ’ ವಿದ್ಯಾರ್ಥಿಗಳು ಕೂಡಲೇ ಪ್ರತಿಭಟನೆ ನಡೆಸಿ ಸುಳ್ಳು ಕೇಸ್ ವಾಪಾಸು ಪಡೆಯಲು ಆಗ್ರಹಿಸಿದ್ದಾರೆ. ಅದೇ ದಿನ ಬಿಜೆಪಿ ಎಂಎಲ್‌ಸಿ ’ರಾಮಚಂದ್ರ ರಾವ್’ ತಮ್ಮ ಹಿಂಬಾಲಕರೊಟ್ಟಿಗೆ ವಿವಿಯೊಳಗೆ ನುಗ್ಗಿ “ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ’ದೇಶದ್ರೋಹಿ’ಗಳನ್ನು ವಿವಿಯಿಂದ ಹೊರಹಾಕಬೇಕು” ಎಂದು ಉಪಕುಲಪತಿ ಪ್ರೊ. ಆರ್.ಪಿ.ಶರ್ಮಾ ಅವರಿಗೆ ಧಮುಕಿ ಹಾಕಿ ದಾಂಧಲೆ ನಡೆಸಿದ್ದಾರೆ. ಇದರಿಂದಾಗಿ ಶರ್ಮಾ ಅವರು ಈ ಪ್ರಕರಣದ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಮಾಜಿ ಉಪಕುಲಪತಿಗಳಾಗಿದ್ದ ಪ್ರೊ. ಅಲೋಕ್ ಪಾಂಡೆ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿದ್ದಾರೆ.

ಪಾಂಡೆಯವರ ಸಮಿತಿಯು ತನಿಖೆ ನಡೆಸಿ ಆಗಸ್ಟ್ 12ರಂದು ತನ್ನ ವರದಿ ನೀಡಿತು. ಅದರಲ್ಲಿ ಸ್ಪಷ್ಟವಾಗಿ ಸುಶೀಲ್ ಕುಮಾರ್ ಮೇಲೆ ಯಾವುದೇ ರೀತಿಯ ಹಲ್ಲೆ ಆಗಿಲ್ಲವೆಂದೂ, ಆತನನ್ನು ದಾಖಲಿಸಿದ್ದ ಆಸ್ಪತ್ರೆಯ ವೈದ್ಯೆ ಡಾ. ಅನುಪಮಾ ಅವರು ಇದಕ್ಕೆ ಸಾಕ್ಷಿ ನೀಡಿದ್ದಾರೆಂದೂ ಹೇಳಿ ’ಎಎಸ್‌ಎ’ ವಿದ್ಯಾರ್ಥಿಗಳ ವಿರುದ್ಧ ಬಿಜೆಪಿ-ಎಬಿವಿಪಿ ಮಾಡಿದ್ದ ಆರೋಪವನ್ನು ತಳ್ಳಿಹಾಕಿತು. ತಮ್ಮ ಸುಳ್ಳನ್ನು ಸಮರ್ಥಿಸಿಕೊಳ್ಳಲಾಗದೆ ಅವಮಾನಗೊಂಡ ಎಬಿವಿಪಿ-ಬಿಜೆಪಿ ಮುಖಂಡರು ಅಂದಿನ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಆಂಧ್ರಪ್ರದೇಶದ ಬಂಡಾರು ದತ್ತಾತ್ರೇಯ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ ದತ್ತಾತ್ರೇಯ ’ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ದಲಿತ ವಿದ್ಯಾರ್ಥಿಗಳು ವಿವಿಯಲ್ಲಿ ನಡೆಸುತ್ತಿರುವ ತೀವ್ರಗಾಮಿ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಂತ್ರಿಯಾಗಿದ್ದ ಸ್ಮೃತಿ ಇರಾನಿಯವರಿಗೆ ಪತ್ರ ಬರೆದರು. ಇದಕ್ಕೆ ಕಾದು ಕುಳಿತವರಂತಿದ್ದ ಸ್ಮೃತಿ ಇರಾನಿಯವರು ವಿ.ವಿಯ ಅಧಿಕಾರಿಗಳಿಗೆ ಮೇಲಿಂದಮೇಲೆ ಐದು ಪತ್ರಗಳನ್ನು ಬರೆದರು. ಈ ಪತ್ರಗಳಲ್ಲಿ ವಿ.ವಿಯಲ್ಲಿನ ದೇಶದ್ರೋಹಿ ದಲಿತ ವಿದ್ಯಾರ್ಥಿಗಳನ್ನು ಕ್ಯಾಂಪಸ್ಸಿನಿಂದ ಹೊರಹಾಕಲು ಹಾಗೂ ಅವರ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲು ಒತ್ತಾಯಿಸಿದ್ದರು.

ಸ್ಮೃತಿ ಇರಾನಿ

ನರೇಂದ್ರ ಮೋದಿಯವರ ಸರ್ಕಾರದ ಮಂತ್ರಿಗಳಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮೃತಿ ಇರಾನಿಯವರು ಈ ಪ್ರಕರಣಕ್ಕೆ ತಲೆಹಾಕಿದ್ದೇ ತಡ ಎಲ್ಲವೂ ಅದಲುಬದಲಾಯಿತು. ವಿ.ವಿಗೆ ಹೊಸದಾಗಿ ಉಪಕುಲಪತಿಯಾಗಿ ನೇಮಕಗೊಂಡಿದ್ದ. ಅಪ್ಪಾರಾವ್ ಪೊಡಿಲೆ, ಈ ಹಿಂದೆ ಪಾಂಡೆಯವರು ನೀಡಿದ್ದ ವರದಿಯನ್ನು ಏಕಾಏಕಿ ನಿರ್ಲಕ್ಷಿಸಿ ಹಿಂದಿನ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಿದರು. ಆ ಸಮಿತಿಯು ಯಾವ ತನಿಖೆಯನ್ನೂ ಕೈಗೊಳ್ಳದೆ ಸುಶೀಲ್ ಕುಮಾರ್ ಮೇಲೆ ಹಲ್ಲೆ ನಡೆದಿದ್ದು ನಿಜವೆಂದೂ ಐದು ದಲಿತ ವಿದ್ಯಾರ್ಥಿಗಳನ್ನು ವಿ.ವಿಯಿಂದಲೇ ಅಮಾನತುಗೊಳಿಸಬೇಕೆಂದು ಶಿಫಾರಸ್ಸು ಮಾಡಿತು. ಇದಾದ ಐದು ದಿನಕ್ಕೆ ರೋಹಿತ್ ವೇಮುಲ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು. ವಿಶ್ವವಿದ್ಯಾಲಯದ ಸಂಗತಿಗಳಿಗೆ ಬಿಜೆಪಿಯವರು ’ಕುತ್ಸಿತ’ ರಾಜಕೀಯ ತಂದಿದ್ದರ ಪರಿಣಾಮವಾಗಿ ದಲಿತೇತರ ವಿದ್ಯಾರ್ಥಿಗಳೆಲ್ಲಾ ಸೇರಿ ಪ್ರತಿಭಟನೆ ನಡೆಸಿದ್ದರಿಂದ, ಉಪಕುಲಪತಿಗಳು ಮತ್ತೊಂದು ತನಿಖೆ ನಡೆಸುವುದಾಗಿ ಒಪ್ಪಿಕೊಂಡು 2015 ಸೆಪ್ಟೆಂಬರ್ 11ರಂದು ಅಮಾನತ್ತನ್ನು ಹಿಂಪಡೆದರು.

ಈ ಪರಿಣಾಮವಾಗಿ ರಚನೆಯಾದ ಮತ್ತೊಂದು ಸಮಿತಿಯೂ ಸಹ ಕೇವಲ ಸುಶೀಲ್ ಕುಮಾರ್ ಮತ್ತು ಪೊಲೀಸರ ಹೇಳಿಕೆ ಪಡೆದು ವರದಿ ನೀಡಿತು. ಆದಾಗ್ಯೂ ಸುಶೀಲ್ ಮೇಲೆ ಹಲ್ಲೆಯಾಗಿಲ್ಲವೆಂದೇ ತಿಳಿಸಿತ್ತು. ಈ ಸಮಿತಿ ಯಾರ ಮೇಲೂ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿರಲಿಲ್ಲ ಎಂಬುದಿಲ್ಲಿ ಗಮನಾರ್ಹ. ಆದರೆ 2015 ಡಿಸೆಂಬರ್ 12ರಂದು ಇದ್ದಕ್ಕಿದ್ದಂತೆ ವಿವಿ ಉಪಕುಲಪತಿ ಅಪ್ಪಾರಾವ್ ’ಎಎಸ್‌ಎ’ನ ಐದು ಜನ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ವಿ.ವಿಯ ವಿದ್ಯಾರ್ಥಿನಿಲಯದಿಂದ ಅಮಾನತುಗೊಳಿಸಿ ಆದೇಶಿಸಿದರು. ಜೊತೆಗೆ ಅವರ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದರು. ಸುಳ್ಳು ದೂರು ನೀಡಿದ್ದ ’ಎಬಿವಿಪಿ’ ವಿದ್ಯಾರ್ಥಿ ಸುಶೀಲ್ ಕುಮಾರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದರಿಂದಾಗಿ, ರೋಹಿತ್ ವೇಮುಲ ತನ್ನ ರೂಮಿನಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ಹಿಡಿದು ತನ್ನ ನಾಲ್ವರು ಸ್ನೇಹಿತರೊಡನೆ ಹೊರಬಂದಿದ್ದಾನೆ. ಆದರೆ ಈ ಅನ್ಯಾಯದ ವಿರುದ್ಧ ಹೋರಾಡುವ ಸಲುವಾಗಿ ಕ್ಯಾಂಪಸ್ಸಿನೊಳಗೆ ’ವೆಲಿವಾಡ’ (ಭಾರತದ ಹಿಂದೂ-ಮೇಲ್ಜಾತಿಗಳು ದಲಿತರ ಪ್ರತ್ಯೇಕ ವಾಸನೆಲೆಗೆ ನೀಡಿರುವ ಹೆಸರು) ಟೆಂಟ್ ಹಾಕಿಕೊಂಡು ಅಲ್ಲಿಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಬರೋಬ್ಬರಿ ಒಂದು ತಿಂಗಳವರೆಗೆ ಈ ಐದು ವಿದ್ಯಾರ್ಥಿಗಳು ವೆಲಿವಾಡದಲ್ಲಿಯೇ ತಂಗುತ್ತಾ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಆದರೆ ಬಿಜೆಪಿಯ ವಾಮಮುಷ್ಟಿಯಲ್ಲಿದ್ದ ವಿ.ವಿ ಆಡಳಿತವು ಅಲ್ಲಾಡಲಿಲ್ಲ. ಇದರಿಂದ ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿದ್ದ ರೋಹಿತ್ ವೇಮುಲ ಎದೆಗುಂದಿದ್ದಾನೆ. ಕಾರ್ಲ್ ಸಗಾನನಂತೆ ವಿಜ್ಞಾನಿಯಾಗಬೇಕು ಎಂದುಕೊಂಡಿದ್ದ ರೋಹಿತ್ ವೇಮುಲ ’ಜನವರಿ 17’ರಂದು ಸ್ನೇಹಿತನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲಿಗೆ ಭವಿಷ್ಯದ ದಲಿತ ವಿಜ್ಞಾನಿಯೊಬ್ಬನನ್ನು ಆರೆಸ್ಸೆಸ್-ಬಿಜೆಪಿ-ಎಬಿವಿಪಿ ಮೇಲ್ಜಾತಿ ಹಾಗೂ ದಲಿತ ವಿರೋಧಿ ರಾಜಕಾರಣವು ಬಲಿ ತೆಗೆದುಕೊಂಡಿತು. ಈ ಸಾಂಸ್ಥಿಕ ಕೊಲೆಯ ವಿರುದ್ಧ ತಪ್ಪಿಸಿಕೊಳ್ಳಲು ರೋಹಿತನನ್ನು ದಲಿತನೇ ಅಲ್ಲವೆಂದು, ಉಗ್ರಗಾಮಿ ಎಂದು ಬಿಜೆಪಿ ಹಾಗೂ ಬಿಜೆಪಿ ಐಟಿ ಸೆಲ್ ಪ್ರಚಾರ ಮಾಡತೊಡಗಿದವು. ರೋಹಿತ್ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಲಾಯಿತು. ದೇಶಾದ್ಯಂತ ವಿದ್ಯಾರ್ಥಿಗಳು ರೋಹಿತ್ ವೇಮುಲನಿಗೆ ನ್ಯಾಯ ಸಿಗಬೇಕೆಂದು ಕೇಂದ್ರ ಮಂತ್ರಿಗಳನ್ನು ಬಂಧಿಸಬೇಕೆಂದು ಪ್ರತಿಭಟಿಸಿದರು. ಆದರೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರಕ್ಕೆ ಈ ಕೂಗು ತಟ್ಟಲೇ ಇಲ್ಲ.

ಸುಶೀಲ್ ಕುಮಾರ್

ತನ್ನ ಮೇಲೆ ಹಾಗೂ ತನ್ನವರ ಮೇಲೆ ನಡೆವ ದೌರ್ಜನ್ಯಗಳನ್ನು ಬಹಳ ಬೇಗ ಮರೆಯುವ ದಲಿತ ಸಮುದಾಯವು ರೋಹಿತ್ ವೇಮುಲನ ಸಾಂಸ್ಥಿಕ ಕೊಲೆಯನ್ನೂ ಮರೆಯಿತು. ಬೇರೆ ಸಮುದಾಯಗಳ ಮಾತಂತೂ ವ್ಯರ್ಥವೇ ಸರಿ. ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಬಿಜೆಪಿಗೆ 2019ನೇ ಇಸವಿಯಲ್ಲಿ ಶೇ.34ರಷ್ಟು (2014ರಲ್ಲಿ ಶೇ.24) ಓಟು ನೀಡುವುದರ ಮೂಲಕ ಮತ್ತೆ ಬಂಡಾರು ದತ್ತಾತ್ರೇಯ, ಸ್ಮೃತಿ ಇರಾನಿ, ಸುಶೀಲ್ ಕುಮಾರ್, ರಾಮಚಂದ್ರ ರಾವ್ ಅವರ ಪಕ್ಷವನ್ನೇ ಗೆಲ್ಲಿಸಿತು.


ಇದನ್ನೂ ಓದಿ: ಮಾತು ಮರೆತ ಭಾರತ; ಖೈರ್ಲಾಂಜಿ ಫೈಲ್: ಭಾರತದ ಭೀಕರ ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....