ಡಾ. ಆನಂದ್ ತೇಲ್ತುಂಬ್ಡೆಯವರು ಖೈರ್ಲಾಂಜಿಯ ಹತ್ಯಾಕಾಂಡವನ್ನು ಜಗತ್ತಿಗೆ ಪರಿಚಯಿಸದೇ ಇದ್ದಿದ್ದರೆ, ಅದು ಇಂದು ಮೂರರಲ್ಲಿ ಮತ್ತೊಂದು ಪ್ರಕರಣವಾಗಿ ಜನಮಾನಸದಲ್ಲಿ ಮರೆಯಾಗಿ ಹೋಗುತ್ತಿತ್ತು. ಹಿಂದೂ ಮೇಲ್ಜಾತಿ ಭೂಮಾಲೀಕ ಫ್ಯೂಡಲ್ ಮನಸ್ಥಿತಿಗಳು ಈ ಮಟ್ಟದ ಕೀಳು ಮನಸ್ಥಿತಿ ಹೊಂದಿರುತ್ತಾರೆ ಎಂಬ ಸತ್ಯವನ್ನು ತಿಳಿಸುವಲ್ಲಿ ಅವರ ಖೈರ್ಲಾಂಜಿ ಸಂಶೋಧನಾ ಪುಸ್ತಕ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು. ದಲಿತರು ಚಾತುರ್ವರ್ಣ ಪದ್ಧತಿಯಂತೆ ಕೀಳು ಜನ್ಮವೆಂದು ತಿಳಿದು ಸಾಯುವವರೆಗೆ, ಇತರ ಬಲಾಢ್ಯ ಜಾತಿಗಳ ಸೇವೆ ಮಾಡಿಕೊಂಡಿರುವವರಿಗೆ ಯಾವುದೇ ಸಮಸ್ಯೆಗಳು ತಲೆದೋರದೇ ಇರುತ್ತವೆ. ಆದರೆ ಯಾವಾಗ ಸ್ವಾಭಿಮಾನಿಗಳಾಗಿ ಸ್ವತಂತ್ರವಾಗಿ ಬದುಕಲು ಆರಂಭಿಸುತ್ತಾರೋ ಆಗ ದಲಿತೇತರ ಮನಸ್ಸುಗಳಿಗೆ ಕಸಿವಿಸಿ ಉಂಟಾಗಿ ಅದು ಅಸೂಯೆಯಾಗಿ ಮಾರ್ಪಟ್ಟು ಮೃಗೀಯ ರೂಪ ತಾಳುವಂತೆ ಮಾಡುತ್ತದೆ. ಈ ಮೃಗೀಯ ರೂಪವು ವರ್ಗ ಸ್ವರೂಪದ್ದಾಗಿದ್ದು ಸಾಮೂಹಿಕವಾಗಿಯೇ ದಲಿತರ ಮೇಲೆರಗುತ್ತದೆ ಎಂಬುದನ್ನು ಬಹಳ ಸ್ಪಷ್ಟವಾಗಿ ನಿರೂಪಿಸಿದ್ದರು ತೇಲ್ತುಂಬ್ಡೆ.
ಖೈರ್ಲಾಂಜಿ ಮಹಾರಾಷ್ಟ್ರದ ಒಂದು ಹಳ್ಳಿ. ಕೇವಲ ನಾಲ್ಕು ದಲಿತ ಕುಟುಂಬವಿರುವ ಏಳು ನೂರಕ್ಕೂ ಹೆಚ್ಚು ಹಿಂದುಳಿದ ಜಾತಿಗಳಾದ ಕುಣಬಿ, ತೇಲಿ, ಕಲಾಲ ಮುಂತಾದವರು ವಾಸಿಸುವ ಹಳ್ಳಿ. ಈ ನಾಲ್ಕು ದಲಿತ ಕುಟುಂಬಗಳಲ್ಲಿ ಮೂರು ಕುಟುಂಬಗಳು ಅಂಬೇಡ್ಕರರ ಪ್ರಭಾವದಿಂದಾಗಿ ಬೌದ್ಧ ಧರ್ಮಕ್ಕೆ ಮತಾಂತರವಾದವರು. ಅದರಲ್ಲಿ ಒಂದು ಕುಟುಂಬ ಭೈಯ್ಯಾಲಾಲ್ ಹಾಗೂ ಸುರೇಖಾ ಭೋತಮಾಂಗೆ ಕುಟುಂಬ. ಮತಾಂತರವು ದಲಿತರಿಗೆ ಸ್ವಾಭಿಮಾನದ ಬದುಕನ್ನು ರೂಪಿಸಲು ರೂಢಿಸುತ್ತದೆಯಾದ್ದರಿಂದ ಭೈಯ್ಯಾಲಾಲ್ ಭೋತಮಾಂಗೆ ಹಾಗೂ ಸುರೇಖಾ ಭೋತಮಾಂಗೆ ದಂಪತಿಗಳು ಖೈರ್ಲಾಂಜಿಯಲ್ಲಿ 5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅವರಿಗೆ ಮುದ್ದಾದ ಮೂರು ಮಕ್ಕಳಿದ್ದರು. ಸುಧೀರ್ ಭೋತಮಾಂಗೆ (21) ರೋಷನ್ ಭೋತಮಾಂಗೆ (19) ಮತ್ತು ಪ್ರಿಯಾಂಕ ಭೋತಮಾಂಗೆ (17). ಎಲ್ಲರೂ 21 ವರ್ಷ ವಯಸ್ಸಿನೊಳಗಿನವರೇ. ಈ ದಂಪತಿಗಳು ತಮ್ಮ ಮೂವರು ಮಕ್ಕಳನ್ನೂ ಚನ್ನಾಗಿ ಓದಿಸುತ್ತಿದ್ದರು. ಬೈಯ್ಯಾಲಾಲ್ ಅಷ್ಟೇನು ಓದಿಲ್ಲದಿದ್ದರೂ ಸ್ವತಃ ಸುರೇಖಾ 9 ನೇ ತರಗತಿ ಕಲಿತಿದ್ದರು. ಆ ಕಾರಣಕ್ಕಾಗಿ ಅವರ ಮೇಲೆ ಅಂಬೇಡ್ಕರರ ಪ್ರಭಾವವುಂಟಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದರು. ಇವರಲ್ಲಿದ್ದ ಸೈಕಲ್, ಮೋಟಾರ್ ಸೈಕಲ್ಗಳೂ ಸಹ ಭೂಮಾಲೀಕ ಮೇಲ್ಜಾತಿಗಳ ಕಣ್ಣು ಕುಕ್ಕಿಸುತ್ತಿದ್ದವು. ಹೀಗಿರುವಾಗ ಶಿವಶಂಕರ್ ಎಂಬ ಮೇಲ್ಜಾತಿ ಭೂಮಾಲೀಕನೊಂದಿಗೆ ಭೋತಮಾಂಗೆ ಕುಟುಂಬಕ್ಕೆ ಪದೇಪದೇ ತಗಾದೆಗಳು ಆರಂಭವಾದವು. ಅದಕ್ಕೆ ಮುಖ್ಯ ಕಾರಣ ಶಿವಶಂಕರ್ ಜಮೀನಿಗೆ ಹೋಗಬೇಕಾದರೆ ಭೋತಮಾಂಗೆ ಜಮೀನನ್ನು ದಾಟಿಕೊಂಡು ಹೋಗಬೇಕಿತ್ತು. ಭೋತಮಾಂಗೆ ಕುಟುಂಬದೊಂದಿಗೆ ಅಚ್ಚುಕಟ್ಟಾಗಿ ಕುಳಿತು ಮಾತುಕತೆ ಮಾಡಿಕೊಂಡಿದ್ದರೆ ತಾವಾಗಿಯೇ ದಾರಿ ಬಿಟ್ಟುಕೊಡುತ್ತಿದ್ದರು. ಆದರೆ ಮೇಲ್ಜಾತಿ ಪ್ರತಿಷ್ಠೆ ಅಷ್ಟು ಸುಲಭವಾಗಿ ದಲಿತರ ಮುಂದೆ ಕೈಚಾಚಲು ಒಪ್ಪಲಾರದಲ್ಲ. ಶಿವಶಂಕರ್ ಸೇರಿದಂತೆ ಇತರರು ದೌರ್ಜನ್ಯದಿಂದ ಭೋತಮಾಂಗೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಹರಿಸಿಕೊಂಡು ಹೋಗುತ್ತಿದ್ದರು. ಬೆಳೆದ ಬೆಳೆಗಳೆಲ್ಲವನ್ನೂ ನಾಶಪಡಿಸುತ್ತಿದ್ದರು. 2001ರಲ್ಲಿ ಶಿವಶಂಕರ್, ಭೋತಮಾಂಗೆ ಹೊಲದಲ್ಲಿ ಬೇಕಂತಲೇ ದನಕರುಗಳನ್ನು ಮೇಯಲು ಬಿಟ್ಟಿದ್ದನು. ಇದರಿಂದ ಕುಪಿತಗೊಂಡ ಸುರೇಖಾ ಭೋತಮಾಂಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ಐಆರ್ ಸಹ ದಾಖಲಾಗಿತ್ತು. ಇದನ್ನು ಶಿವಶಂಕರ್ ಮಾತ್ರವಲ್ಲ ಇಡೀ ಖೈರ್ಲಾಂಜಿ ಮೇಲ್ಜಾತಿಗಳು ತಮ್ಮ ಮೇಲಾದ ಅವಮಾನವೆಂದು ಬಗೆದವು. ಸನಾತನ ಧರ್ಮದ ಪ್ರಕಾರ ದಲಿತರು ಮೇಲ್ಜಾತಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದುಂಟೆ!
ಈ ಪ್ರಕರಣದಲ್ಲಿ ಸುರೇಖಾ ಭೋತಮಾಂಗೆಯ ಪರವಾಗಿ ಪಕ್ಕದ ಹಳ್ಳಿಯ ದಲಿತ ಮುಖಂಡ ಸಿದ್ಧಾರ್ಥ ಗಜ್ಭಿಯೇ ಸಹಾಯ ಮಾಡಿದ್ದರ ಪರಿಣಾಮವಾಗಿ ಖೈರ್ಲಾಂಜಿ ಭೂಮಾಲೀಕರ ವಿರುದ್ಧ ಕೇಸು ದಾಖಲಾಯಿತು. ಆದರೂ ಶಿಕ್ಷೆಯಾಗಲಿಲ್ಲ. ಪೊಲೀಸರು ಎಂದಿನಂತೆ ನಿರ್ಲಕ್ಷಿಸಿಬಿಟ್ಟರು. ಈ ಸಿದ್ಧಾರ್ಥ ಗಜ್ಭಿಯೇ ಅದೆಷ್ಟು ಪ್ರಭಾವಿ ದಲಿತ ನಾಯಕನೆಂದರೆ ಆತನ ಜಮೀನಿನಲ್ಲಿ ಮೇಲ್ಜಾತಿ ಕೂಲಿಗಳು ಕೆಲಸ ಮಾಡುತ್ತಿದ್ದರು. ಹಾಗಾಗಿ ಇದೇ ಸಮಯವನ್ನು ಬಳಸಿಕೊಂಡು ಸಿದ್ಧಾರ್ಥ ಗಜ್ಭಿಯೇ ವಿರುದ್ಧ ಕೂಲಿ ಸಂಬಳಕ್ಕಾಗಿ ಜಗಳವಾಡಿದರು ಜೊತೆಗೆ ಅವನನ್ನು ಥಳಿಸಿದರು. ಈ ಸಮಯದಲ್ಲಿ ಸಿದ್ಧಾರ್ಥನನ್ನು ಅವರಿಂದ ರಕ್ಷಿಸಿದ್ದು ಸುರೇಖಾ ಭೋತಮಾಂಗೆ ಮತ್ತು ಪ್ರಿಯಾಂಕ ಭೋತಮಾಂಗೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು. ಈ ಪ್ರಕರಣದಲ್ಲಿ ಮೇಲ್ಜಾತಿ ಭೂಮಾಲೀಕರ ವಿರುದ್ಧ ಸಾಕ್ಷಿ ನುಡಿದಿದ್ದು ಇದೇ ಸುರೇಖಾ ಭೋತಮಾಂಗೆ. ಹೀಗೆ ಮೂರು ವಾರಗಳ ಕಾಲ ಜೈಲಿನಲ್ಲಿದ್ದ ಮೇಲ್ಜಾತಿ ಭೀಮಾಲೀಕರು ಜಾಮೀನಿನಿಂದ ಹೊರಬಂದವರೇ ಏಕಾಏಕಿ ಸುರೇಖಾ ಭೋತಮಾಂಗೆ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದರು.
ಅಂದು ಸೆಪ್ಟೆಂಬರ್ 29, 2006 ಶುಕ್ರವಾರ. ಸುರೇಖಾ ಭೋತಮಾಂಗೆಗೆ ಊರಿನಲ್ಲಿನ ವಾತಾವರಣ ಯಾಕೋ ನಿಧಾನವಾಗಿ ಹದಗೆಡುತ್ತಿದ್ದಂತೆ ಕಾಣುತ್ತಿತ್ತು. ಸಿದ್ಧಾರ್ಥನಿಗೆ ವಿಷಯ ತಿಳಿಸಿದ್ದಳು. ಪೊಲೀಸರಿಗೂ ಸಂದೇಶ ಹೋಗಿತ್ತು. ಆದರೆ ಯಾರೂ ಕೈ ಹಿಡಿಯಲಿಲ್ಲ. ಖೈರ್ಲಾಂಜಿಯ ಮೇಲ್ಜಾತಿ ಮಹಿಳೆಯರು ಸುರೇಖಾ ಭೋತಮಾಂಗೆ ಮನೆಯತ್ತ ಹೆಜ್ಜೆ ಹಾಕಿದೊಡನೆ ಸುರೇಖಾ ತನ್ನ ಮೂವರು ಮಕ್ಕಳನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡಿದ್ದಳು. ಆದರೆ ಮೇಲ್ಜಾತಿ ಮಹಿಳೆಯರು ಅಷ್ಟಕ್ಕೆ ಸುಮ್ಮನಾಗದೇ ಬಾಗಿಲನ್ನು ಹೊಡೆದು ಆ ನಾಲ್ವರನ್ನೂ ಹೊರ ಬೀದಿಗೆ ಎಳೆದು ತಂದು ಊರಿನ ಮಧ್ಯೆ ಎತ್ತಿನ ಗಾಡಿಗೆ ಅವರನ್ನು ಕಟ್ಟಿಹಾಕಿದರು. ತಮ್ಮ ಮನೆಯ ಗಂಡಸರನ್ನು ಜೈಲಿಗೆ ಹಾಕಿಸಿದ್ದರ ಸಿಟ್ಟು ಅವರಲ್ಲಿತ್ತು. ಗಂಡಸರು ಅವರ ಸುತ್ತಲೂ ನಿಂತಿದ್ದು ಕೈಯಲ್ಲಿ ಸಿಕ್ಕಸಿಕ್ಕ ಹತಾರಗಳನ್ನು ಹಿಡಿದು ನಿಂತಿದ್ದರು. ಸುರೇಖಾ, ಪ್ರಿಯಾಂಕ, ರೋಷನ್ ಹಾಗೂ ಸುಧೀರ್ ಬಟ್ಟೆಗಳನ್ನು ಕಳಚಿ ನಗ್ನಗೊಳಿಸಿ ಥಳಿಸಿದರು. ಆ ಇಬ್ಬರು ಗಂಡು ಮಕ್ಕಳಿಗೆ ತಮ್ಮ ತಾಯಿ ಮತ್ತು ತಂಗಿಯನ್ನು ಅತ್ಯಾಚಾರ ಮಾಡಬೇಕೆಂದು ತಾಕೀತು ಮಾಡಿದರು. ಮರ್ಮಾಂಗಗಳಿಗೆ ಒದ್ದು ಹಿಂಸಿಸಿದರು. ಪ್ರಿಯಾಂಕ ಮತ್ತು ಸುರೇಖಾರನ್ನು ಬಹಿರಂಗವಾಗಿಯೇ ಮೇಲ್ಜಾತಿ ಗಂಡಸರು ತಮ್ಮ ತಾಯಿ, ಅಕ್ಕ, ತಂಗಿ, ಹೆಂಡತಿ ಮುಂದೆಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದರು. ನಂತರ ಅವರಿಬ್ಬರ ಗುಪ್ತಾಂಗಗಳಲ್ಲಿ ಕಲ್ಲು, ಸರಳು, ಕಬ್ಬಿಣಗಳನ್ನು ತುರುಕಿದರು. ಹಲವು ಸತ್ಯಶೋಧನಾ ವರದಿಗಳು ತಿಳಿಸುವ ಪ್ರಕಾರ ಸುರೇಖಾ ಮತ್ತು ಪ್ರಿಯಾಂಕ ಇಬ್ಬರೂ ಹಿಂಸೆ ತಾಳಲಾರದೇ ಶವವಾದರು; ಅದರ ಬಳಿಕವೂ ಅವರನ್ನು ಅತ್ಯಾಚಾರ ಮಾಡುತ್ತಲೇ ಇದ್ದರಂತೆ ಆ ಮೃಗೀಯ ಗಂಡಸರು. ಇಬ್ಬರು ಗಂಡು ಮಕ್ಕಳನ್ನೂ ಥಳಿಸಿ ಅವರ ಮರ್ಮಾಂಗಕ್ಕೆ ಹಾನಿ ಮಾಡಿ ಕೊಲ್ಲಲಾಯಿತು. ಈ ಮೇಲ್ಜಾತಿ ಕ್ರೂರಿಗಳ ವಿಕೃತಿ ತಣ್ಣಗಾದ ಮೇಲೆ ಖೈರ್ಲಾಂಜಿಯ ಕಾಲುವೆಗೆ ಆ ನಾಲ್ವರ ಶವವನ್ನೂ ಎಸೆದಿದ್ದರು. ದುರಂತವೆಂದರೆ ಈ ಎಲ್ಲಾ ದೃಶ್ಯವನ್ನೂ ದೂರದಿಂದಲೇ ಹೆದರಿಕೊಂಡು ನೋಡುತ್ತಿದ್ದ ಭೈಯ್ಯಾಲಾಲ್ ನಿಷ್ಪ್ರಯೋಜಕನಾಗಿ ಅವಿತು ಕುಳಿತಿದ್ದನು.
ಈ ಭಾರತದ ಭೀಕರ ಹತ್ಯಾಕಾಂಡದ ವಿರುದ್ಧ ತಡವಾಗಿಯಾದರೂ ದೇಶಾದ್ಯಂತ ಹೋರಾಟಗಳು ಎದ್ದಾಗ ಭಂಡಾರ ಸೆಷನ್ ಕೋರ್ಟ್ ಎಂಟು ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಮೂವರನ್ನು ಖುಲಾಸೆಗೊಳಿಸಿತು. ಎಂಟರಲ್ಲಿ ಆರು ಕ್ರೂರಿಗಳಿಗೆ ಮರಣದಂಡನೆಯನ್ನೂ ಇಬ್ಬರಿಗೆ ಜೀವಾವಧಿ ಶಿಕೆಯನ್ನೂ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿದಾಗ ಅಲ್ಲಿ ಮರಣದಂಡನೆ ಶಿಕ್ಷೆಯನ್ನು 25 ವರ್ಷಗಳ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಯಿತು. ಈಗ ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಏಕೈಕ ಸಾಕ್ಷಿಯಾಗಿದ್ದ ಭೈಯ್ಯಾಲಾಲ್ ಭೋತಮಾಗೆ 2017 ಇಸವಿಯಲ್ಲಿ ತೀರಿಕೊಂಡಿದ್ದಾನೆ. ಮಣ್ಣಲ್ಲಿ ಮಣ್ಣಾಗಿರುವ ಆ ನಾಲ್ಕು ಜೀವಗಳು ಅಂತಿಮ ನ್ಯಾಯಕ್ಕಾಗಿ ಇಲ್ಲೆಲ್ಲೋ ಕಾದು ಕುಳಿತಿರಬಹುದೇ?
ಇದನ್ನೂ ಓದಿ: ಖೈರ್ಲಾಂಜಿ ದಲಿತರ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಾಲಯ ನಡೆದುಕೊಂಡಿದ್ದಾದರೂ ಹೇಗೆ?