Homeಅಂಕಣಗಳುಮಾತು ಮರೆತ ಭಾರತ; ಖೈರ್ಲಾಂಜಿ ಫೈಲ್: ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಖೈರ್ಲಾಂಜಿ ಫೈಲ್: ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

ಡಾ. ಆನಂದ್ ತೇಲ್ತುಂಬ್ಡೆಯವರು ಖೈರ್ಲಾಂಜಿಯ ಹತ್ಯಾಕಾಂಡವನ್ನು ಜಗತ್ತಿಗೆ ಪರಿಚಯಿಸದೇ ಇದ್ದಿದ್ದರೆ, ಅದು ಇಂದು ಮೂರರಲ್ಲಿ ಮತ್ತೊಂದು ಪ್ರಕರಣವಾಗಿ ಜನಮಾನಸದಲ್ಲಿ ಮರೆಯಾಗಿ ಹೋಗುತ್ತಿತ್ತು. ಹಿಂದೂ ಮೇಲ್ಜಾತಿ ಭೂಮಾಲೀಕ ಫ್ಯೂಡಲ್ ಮನಸ್ಥಿತಿಗಳು ಈ ಮಟ್ಟದ ಕೀಳು ಮನಸ್ಥಿತಿ ಹೊಂದಿರುತ್ತಾರೆ ಎಂಬ ಸತ್ಯವನ್ನು ತಿಳಿಸುವಲ್ಲಿ ಅವರ ಖೈರ್ಲಾಂಜಿ ಸಂಶೋಧನಾ ಪುಸ್ತಕ ಅತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು. ದಲಿತರು ಚಾತುರ್ವರ್ಣ ಪದ್ಧತಿಯಂತೆ ಕೀಳು ಜನ್ಮವೆಂದು ತಿಳಿದು ಸಾಯುವವರೆಗೆ, ಇತರ ಬಲಾಢ್ಯ ಜಾತಿಗಳ ಸೇವೆ ಮಾಡಿಕೊಂಡಿರುವವರಿಗೆ ಯಾವುದೇ ಸಮಸ್ಯೆಗಳು ತಲೆದೋರದೇ ಇರುತ್ತವೆ. ಆದರೆ ಯಾವಾಗ ಸ್ವಾಭಿಮಾನಿಗಳಾಗಿ ಸ್ವತಂತ್ರವಾಗಿ ಬದುಕಲು ಆರಂಭಿಸುತ್ತಾರೋ ಆಗ ದಲಿತೇತರ ಮನಸ್ಸುಗಳಿಗೆ ಕಸಿವಿಸಿ ಉಂಟಾಗಿ ಅದು ಅಸೂಯೆಯಾಗಿ ಮಾರ್ಪಟ್ಟು ಮೃಗೀಯ ರೂಪ ತಾಳುವಂತೆ ಮಾಡುತ್ತದೆ. ಈ ಮೃಗೀಯ ರೂಪವು ವರ್ಗ ಸ್ವರೂಪದ್ದಾಗಿದ್ದು ಸಾಮೂಹಿಕವಾಗಿಯೇ ದಲಿತರ ಮೇಲೆರಗುತ್ತದೆ ಎಂಬುದನ್ನು ಬಹಳ ಸ್ಪಷ್ಟವಾಗಿ ನಿರೂಪಿಸಿದ್ದರು ತೇಲ್ತುಂಬ್ಡೆ.

ಖೈರ್ಲಾಂಜಿ ಮಹಾರಾಷ್ಟ್ರದ ಒಂದು ಹಳ್ಳಿ. ಕೇವಲ ನಾಲ್ಕು ದಲಿತ ಕುಟುಂಬವಿರುವ ಏಳು ನೂರಕ್ಕೂ ಹೆಚ್ಚು ಹಿಂದುಳಿದ ಜಾತಿಗಳಾದ ಕುಣಬಿ, ತೇಲಿ, ಕಲಾಲ ಮುಂತಾದವರು ವಾಸಿಸುವ ಹಳ್ಳಿ. ಈ ನಾಲ್ಕು ದಲಿತ ಕುಟುಂಬಗಳಲ್ಲಿ ಮೂರು ಕುಟುಂಬಗಳು ಅಂಬೇಡ್ಕರರ ಪ್ರಭಾವದಿಂದಾಗಿ ಬೌದ್ಧ ಧರ್ಮಕ್ಕೆ ಮತಾಂತರವಾದವರು. ಅದರಲ್ಲಿ ಒಂದು ಕುಟುಂಬ ಭೈಯ್ಯಾಲಾಲ್ ಹಾಗೂ ಸುರೇಖಾ ಭೋತಮಾಂಗೆ ಕುಟುಂಬ. ಮತಾಂತರವು ದಲಿತರಿಗೆ ಸ್ವಾಭಿಮಾನದ ಬದುಕನ್ನು ರೂಪಿಸಲು ರೂಢಿಸುತ್ತದೆಯಾದ್ದರಿಂದ ಭೈಯ್ಯಾಲಾಲ್ ಭೋತಮಾಂಗೆ ಹಾಗೂ ಸುರೇಖಾ ಭೋತಮಾಂಗೆ ದಂಪತಿಗಳು ಖೈರ್ಲಾಂಜಿಯಲ್ಲಿ 5 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಅವರಿಗೆ ಮುದ್ದಾದ ಮೂರು ಮಕ್ಕಳಿದ್ದರು. ಸುಧೀರ್ ಭೋತಮಾಂಗೆ (21) ರೋಷನ್ ಭೋತಮಾಂಗೆ (19) ಮತ್ತು ಪ್ರಿಯಾಂಕ ಭೋತಮಾಂಗೆ (17). ಎಲ್ಲರೂ 21 ವರ್ಷ ವಯಸ್ಸಿನೊಳಗಿನವರೇ. ಈ ದಂಪತಿಗಳು ತಮ್ಮ ಮೂವರು ಮಕ್ಕಳನ್ನೂ ಚನ್ನಾಗಿ ಓದಿಸುತ್ತಿದ್ದರು. ಬೈಯ್ಯಾಲಾಲ್ ಅಷ್ಟೇನು ಓದಿಲ್ಲದಿದ್ದರೂ ಸ್ವತಃ ಸುರೇಖಾ 9 ನೇ ತರಗತಿ ಕಲಿತಿದ್ದರು. ಆ ಕಾರಣಕ್ಕಾಗಿ ಅವರ ಮೇಲೆ ಅಂಬೇಡ್ಕರರ ಪ್ರಭಾವವುಂಟಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದರು. ಇವರಲ್ಲಿದ್ದ ಸೈಕಲ್, ಮೋಟಾರ್ ಸೈಕಲ್‌ಗಳೂ ಸಹ ಭೂಮಾಲೀಕ ಮೇಲ್ಜಾತಿಗಳ ಕಣ್ಣು ಕುಕ್ಕಿಸುತ್ತಿದ್ದವು. ಹೀಗಿರುವಾಗ ಶಿವಶಂಕರ್ ಎಂಬ ಮೇಲ್ಜಾತಿ ಭೂಮಾಲೀಕನೊಂದಿಗೆ ಭೋತಮಾಂಗೆ ಕುಟುಂಬಕ್ಕೆ ಪದೇಪದೇ ತಗಾದೆಗಳು ಆರಂಭವಾದವು. ಅದಕ್ಕೆ ಮುಖ್ಯ ಕಾರಣ ಶಿವಶಂಕರ್ ಜಮೀನಿಗೆ ಹೋಗಬೇಕಾದರೆ ಭೋತಮಾಂಗೆ ಜಮೀನನ್ನು ದಾಟಿಕೊಂಡು ಹೋಗಬೇಕಿತ್ತು. ಭೋತಮಾಂಗೆ ಕುಟುಂಬದೊಂದಿಗೆ ಅಚ್ಚುಕಟ್ಟಾಗಿ ಕುಳಿತು ಮಾತುಕತೆ ಮಾಡಿಕೊಂಡಿದ್ದರೆ ತಾವಾಗಿಯೇ ದಾರಿ ಬಿಟ್ಟುಕೊಡುತ್ತಿದ್ದರು. ಆದರೆ ಮೇಲ್ಜಾತಿ ಪ್ರತಿಷ್ಠೆ ಅಷ್ಟು ಸುಲಭವಾಗಿ ದಲಿತರ ಮುಂದೆ ಕೈಚಾಚಲು ಒಪ್ಪಲಾರದಲ್ಲ. ಶಿವಶಂಕರ್ ಸೇರಿದಂತೆ ಇತರರು ದೌರ್ಜನ್ಯದಿಂದ ಭೋತಮಾಂಗೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಹರಿಸಿಕೊಂಡು ಹೋಗುತ್ತಿದ್ದರು. ಬೆಳೆದ ಬೆಳೆಗಳೆಲ್ಲವನ್ನೂ ನಾಶಪಡಿಸುತ್ತಿದ್ದರು. 2001ರಲ್ಲಿ ಶಿವಶಂಕರ್, ಭೋತಮಾಂಗೆ ಹೊಲದಲ್ಲಿ ಬೇಕಂತಲೇ ದನಕರುಗಳನ್ನು ಮೇಯಲು ಬಿಟ್ಟಿದ್ದನು. ಇದರಿಂದ ಕುಪಿತಗೊಂಡ ಸುರೇಖಾ ಭೋತಮಾಂಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ಸಹ ದಾಖಲಾಗಿತ್ತು. ಇದನ್ನು ಶಿವಶಂಕರ್ ಮಾತ್ರವಲ್ಲ ಇಡೀ ಖೈರ್ಲಾಂಜಿ ಮೇಲ್ಜಾತಿಗಳು ತಮ್ಮ ಮೇಲಾದ ಅವಮಾನವೆಂದು ಬಗೆದವು. ಸನಾತನ ಧರ್ಮದ ಪ್ರಕಾರ ದಲಿತರು ಮೇಲ್ಜಾತಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದುಂಟೆ!

ಡಾ. ಆನಂದ್ ತೇಲ್ತುಂಬ್ಡೆ

ಈ ಪ್ರಕರಣದಲ್ಲಿ ಸುರೇಖಾ ಭೋತಮಾಂಗೆಯ ಪರವಾಗಿ ಪಕ್ಕದ ಹಳ್ಳಿಯ ದಲಿತ ಮುಖಂಡ ಸಿದ್ಧಾರ್ಥ ಗಜ್‌ಭಿಯೇ ಸಹಾಯ ಮಾಡಿದ್ದರ ಪರಿಣಾಮವಾಗಿ ಖೈರ್ಲಾಂಜಿ ಭೂಮಾಲೀಕರ ವಿರುದ್ಧ ಕೇಸು ದಾಖಲಾಯಿತು. ಆದರೂ ಶಿಕ್ಷೆಯಾಗಲಿಲ್ಲ. ಪೊಲೀಸರು ಎಂದಿನಂತೆ ನಿರ್ಲಕ್ಷಿಸಿಬಿಟ್ಟರು. ಈ ಸಿದ್ಧಾರ್ಥ ಗಜ್‌ಭಿಯೇ ಅದೆಷ್ಟು ಪ್ರಭಾವಿ ದಲಿತ ನಾಯಕನೆಂದರೆ ಆತನ ಜಮೀನಿನಲ್ಲಿ ಮೇಲ್ಜಾತಿ ಕೂಲಿಗಳು ಕೆಲಸ ಮಾಡುತ್ತಿದ್ದರು. ಹಾಗಾಗಿ ಇದೇ ಸಮಯವನ್ನು ಬಳಸಿಕೊಂಡು ಸಿದ್ಧಾರ್ಥ ಗಜ್‌ಭಿಯೇ ವಿರುದ್ಧ ಕೂಲಿ ಸಂಬಳಕ್ಕಾಗಿ ಜಗಳವಾಡಿದರು ಜೊತೆಗೆ ಅವನನ್ನು ಥಳಿಸಿದರು. ಈ ಸಮಯದಲ್ಲಿ ಸಿದ್ಧಾರ್ಥನನ್ನು ಅವರಿಂದ ರಕ್ಷಿಸಿದ್ದು ಸುರೇಖಾ ಭೋತಮಾಂಗೆ ಮತ್ತು ಪ್ರಿಯಾಂಕ ಭೋತಮಾಂಗೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು. ಈ ಪ್ರಕರಣದಲ್ಲಿ ಮೇಲ್ಜಾತಿ ಭೂಮಾಲೀಕರ ವಿರುದ್ಧ ಸಾಕ್ಷಿ ನುಡಿದಿದ್ದು ಇದೇ ಸುರೇಖಾ ಭೋತಮಾಂಗೆ. ಹೀಗೆ ಮೂರು ವಾರಗಳ ಕಾಲ ಜೈಲಿನಲ್ಲಿದ್ದ ಮೇಲ್ಜಾತಿ ಭೀಮಾಲೀಕರು ಜಾಮೀನಿನಿಂದ ಹೊರಬಂದವರೇ ಏಕಾಏಕಿ ಸುರೇಖಾ ಭೋತಮಾಂಗೆ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದರು.

ಅಂದು ಸೆಪ್ಟೆಂಬರ್ 29, 2006 ಶುಕ್ರವಾರ. ಸುರೇಖಾ ಭೋತಮಾಂಗೆಗೆ ಊರಿನಲ್ಲಿನ ವಾತಾವರಣ ಯಾಕೋ ನಿಧಾನವಾಗಿ ಹದಗೆಡುತ್ತಿದ್ದಂತೆ ಕಾಣುತ್ತಿತ್ತು. ಸಿದ್ಧಾರ್ಥನಿಗೆ ವಿಷಯ ತಿಳಿಸಿದ್ದಳು. ಪೊಲೀಸರಿಗೂ ಸಂದೇಶ ಹೋಗಿತ್ತು. ಆದರೆ ಯಾರೂ ಕೈ ಹಿಡಿಯಲಿಲ್ಲ. ಖೈರ್ಲಾಂಜಿಯ ಮೇಲ್ಜಾತಿ ಮಹಿಳೆಯರು ಸುರೇಖಾ ಭೋತಮಾಂಗೆ ಮನೆಯತ್ತ ಹೆಜ್ಜೆ ಹಾಕಿದೊಡನೆ ಸುರೇಖಾ ತನ್ನ ಮೂವರು ಮಕ್ಕಳನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡಿದ್ದಳು. ಆದರೆ ಮೇಲ್ಜಾತಿ ಮಹಿಳೆಯರು ಅಷ್ಟಕ್ಕೆ ಸುಮ್ಮನಾಗದೇ ಬಾಗಿಲನ್ನು ಹೊಡೆದು ಆ ನಾಲ್ವರನ್ನೂ ಹೊರ ಬೀದಿಗೆ ಎಳೆದು ತಂದು ಊರಿನ ಮಧ್ಯೆ ಎತ್ತಿನ ಗಾಡಿಗೆ ಅವರನ್ನು ಕಟ್ಟಿಹಾಕಿದರು. ತಮ್ಮ ಮನೆಯ ಗಂಡಸರನ್ನು ಜೈಲಿಗೆ ಹಾಕಿಸಿದ್ದರ ಸಿಟ್ಟು ಅವರಲ್ಲಿತ್ತು. ಗಂಡಸರು ಅವರ ಸುತ್ತಲೂ ನಿಂತಿದ್ದು ಕೈಯಲ್ಲಿ ಸಿಕ್ಕಸಿಕ್ಕ ಹತಾರಗಳನ್ನು ಹಿಡಿದು ನಿಂತಿದ್ದರು. ಸುರೇಖಾ, ಪ್ರಿಯಾಂಕ, ರೋಷನ್ ಹಾಗೂ ಸುಧೀರ್ ಬಟ್ಟೆಗಳನ್ನು ಕಳಚಿ ನಗ್ನಗೊಳಿಸಿ ಥಳಿಸಿದರು. ಆ ಇಬ್ಬರು ಗಂಡು ಮಕ್ಕಳಿಗೆ ತಮ್ಮ ತಾಯಿ ಮತ್ತು ತಂಗಿಯನ್ನು ಅತ್ಯಾಚಾರ ಮಾಡಬೇಕೆಂದು ತಾಕೀತು ಮಾಡಿದರು. ಮರ್ಮಾಂಗಗಳಿಗೆ ಒದ್ದು ಹಿಂಸಿಸಿದರು. ಪ್ರಿಯಾಂಕ ಮತ್ತು ಸುರೇಖಾರನ್ನು ಬಹಿರಂಗವಾಗಿಯೇ ಮೇಲ್ಜಾತಿ ಗಂಡಸರು ತಮ್ಮ ತಾಯಿ, ಅಕ್ಕ, ತಂಗಿ, ಹೆಂಡತಿ ಮುಂದೆಯೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದರು. ನಂತರ ಅವರಿಬ್ಬರ ಗುಪ್ತಾಂಗಗಳಲ್ಲಿ ಕಲ್ಲು, ಸರಳು, ಕಬ್ಬಿಣಗಳನ್ನು ತುರುಕಿದರು. ಹಲವು ಸತ್ಯಶೋಧನಾ ವರದಿಗಳು ತಿಳಿಸುವ ಪ್ರಕಾರ ಸುರೇಖಾ ಮತ್ತು ಪ್ರಿಯಾಂಕ ಇಬ್ಬರೂ ಹಿಂಸೆ ತಾಳಲಾರದೇ ಶವವಾದರು; ಅದರ ಬಳಿಕವೂ ಅವರನ್ನು ಅತ್ಯಾಚಾರ ಮಾಡುತ್ತಲೇ ಇದ್ದರಂತೆ ಆ ಮೃಗೀಯ ಗಂಡಸರು. ಇಬ್ಬರು ಗಂಡು ಮಕ್ಕಳನ್ನೂ ಥಳಿಸಿ ಅವರ ಮರ್ಮಾಂಗಕ್ಕೆ ಹಾನಿ ಮಾಡಿ ಕೊಲ್ಲಲಾಯಿತು. ಈ ಮೇಲ್ಜಾತಿ ಕ್ರೂರಿಗಳ ವಿಕೃತಿ ತಣ್ಣಗಾದ ಮೇಲೆ ಖೈರ್ಲಾಂಜಿಯ ಕಾಲುವೆಗೆ ಆ ನಾಲ್ವರ ಶವವನ್ನೂ ಎಸೆದಿದ್ದರು. ದುರಂತವೆಂದರೆ ಈ ಎಲ್ಲಾ ದೃಶ್ಯವನ್ನೂ ದೂರದಿಂದಲೇ ಹೆದರಿಕೊಂಡು ನೋಡುತ್ತಿದ್ದ ಭೈಯ್ಯಾಲಾಲ್ ನಿಷ್ಪ್ರಯೋಜಕನಾಗಿ ಅವಿತು ಕುಳಿತಿದ್ದನು.

ಭೈಯ್ಯಾಲಾಲ್ ಭೋತಮಾಗೆ

ಈ ಭಾರತದ ಭೀಕರ ಹತ್ಯಾಕಾಂಡದ ವಿರುದ್ಧ ತಡವಾಗಿಯಾದರೂ ದೇಶಾದ್ಯಂತ ಹೋರಾಟಗಳು ಎದ್ದಾಗ ಭಂಡಾರ ಸೆಷನ್ ಕೋರ್ಟ್ ಎಂಟು ಆರೋಪಿಗಳಿಗೆ ಶಿಕ್ಷೆ ವಿಧಿಸಿತು. ಮೂವರನ್ನು ಖುಲಾಸೆಗೊಳಿಸಿತು. ಎಂಟರಲ್ಲಿ ಆರು ಕ್ರೂರಿಗಳಿಗೆ ಮರಣದಂಡನೆಯನ್ನೂ ಇಬ್ಬರಿಗೆ ಜೀವಾವಧಿ ಶಿಕೆಯನ್ನೂ ನೀಡಿತು. ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿದಾಗ ಅಲ್ಲಿ ಮರಣದಂಡನೆ ಶಿಕ್ಷೆಯನ್ನು 25 ವರ್ಷಗಳ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಯಿತು. ಈಗ ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಏಕೈಕ ಸಾಕ್ಷಿಯಾಗಿದ್ದ ಭೈಯ್ಯಾಲಾಲ್ ಭೋತಮಾಗೆ 2017 ಇಸವಿಯಲ್ಲಿ ತೀರಿಕೊಂಡಿದ್ದಾನೆ. ಮಣ್ಣಲ್ಲಿ ಮಣ್ಣಾಗಿರುವ ಆ ನಾಲ್ಕು ಜೀವಗಳು ಅಂತಿಮ ನ್ಯಾಯಕ್ಕಾಗಿ ಇಲ್ಲೆಲ್ಲೋ ಕಾದು ಕುಳಿತಿರಬಹುದೇ?


ಇದನ್ನೂ ಓದಿ: ಖೈರ್ಲಾಂಜಿ ದಲಿತರ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಾಲಯ ನಡೆದುಕೊಂಡಿದ್ದಾದರೂ ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....