ಗ್ರೇಟರ್ ಚೆನ್ನೈ ಮಹಾನಗರ ಪಾಲಿಕೆಯು ಆರಂಭವಾಗಿ 334 ವರ್ಷಗಳು ಕಳೆದಿವೆ. ಈ ದೀರ್ಘಾವಧಿಯ ನಂತರ, ಮೊದಲ ಬಾರಿಗೆ ಚೆನ್ನೈ ಪಾಲಿಕೆಗೆ ದಲಿತ ಮಹಿಳೆಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಚೆನ್ನೈ ಪಾಲಿಕೆಯಲ್ಲಿ ಬಹುಮತ ಪಡೆದಿರುವ ಡಿಎಂಕೆ ಪಕ್ಷವು ದಲಿತ ಕಾರ್ಪೋರೇಟರ್ ಆರ್.ಪ್ರಿಯಾ ಅವರನ್ನು ಮೇಯರ್ ಹುದ್ದೆಗೆ ಶುಕ್ರವಾರ ನಡೆದ ಚುನಾವಣೆಗೆ ನಾಮನಿರ್ದೇಶನ ಮಾಡಿತ್ತು. ಚುನಾವಣೆಯಲ್ಲಿ ಹೆಚ್ಚು ಸದಸ್ಯರ ಬೆಂಬಲ ಪಡೆದ ಪ್ರಿಯಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಚೆನ್ನೈ ಮಹಾನಗರ ಪಾಲಿಕೆಗಳಲ್ಲಿ ಮೇಯರ್, ಉಪಮೇಯರ್ ಹಾಗೂ ಪುರಸಭೆ ಅಧ್ಯಕ್ಷರು, ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಪರೋಕ್ಷ ಚುನಾವಣೆ ನಡೆದಿದೆ.
ತಾರಾ ಚೆರಿಯನ್ (ಕಾಂಗ್ರೆಸ್, 1957-1958) ಮತ್ತು ಕಾಮಾಕ್ಷಿ ಜಯರಾಮನ್ (ಡಿಎಂಕೆ, 1971-1972) ನಂತರ ಪ್ರಿಯಾ ಅವರು ಚೆನ್ನೈಗೆ ಮೂರನೇ ಮಹಿಳಾ ಮೇಯರ್ ಆಗಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್ನಲ್ಲಿರುವ ಒಟ್ಟು 200 ವಾರ್ಡ್ಗಳಲ್ಲಿ ಡಿಎಂಕೆ 153 ವಾರ್ಡ್ಗಳಲ್ಲಿ ಗೆಲುವು ಸಾಧಿಸಿತ್ತು. ಅಲ್ಲದೆ, ಡಿಎಂಕೆಯ ಮಿತ್ರಪಕ್ಷಗಳು 25 ಸ್ಥಾನಗಳನ್ನು ಗೆದ್ದಿವೆ. ಪಾಲಿಕೆಗೆ ಸರ್ಕಾರವು ಪರೋಕ್ಷ ಚುನಾವಣೆ ನಡೆಸಿದ್ದು, ಪ್ರಿಯಾ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.
ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಿಯಾ, ಚೆನ್ನೈನ ತಿರು-ವಿ-ಕಾ ನಗರದಲ್ಲಿ ವಾರ್ಡ್ ಸಂಖ್ಯೆ 74ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ವಾರ್ಡ್ ಚೆನ್ನೈ ನಗರದ ಅತ್ಯಂತ ಹಿಂದುಳಿದ ಮತ್ತು ಅಭಿವೃದ್ದಿ ಕಾಣದ ಪ್ರದೇಶಗಳಲ್ಲಿ ಒಂದಾಗಿದೆ. ಈ ವಾರ್ಡ್ನಲ್ಲಿ ಕಳಪೆ ಮೂಲಸೌಕರ್ಯಗಳಿದ್ದು, ಚಿಕ್ಕಚಿಕ್ಕ ಮನೆಗಳಲ್ಲಿ ಜನರು ವಾಸಿಸುತ್ತಿದ್ದಾರೆ.
ದಿ. ಮಾಜಿ ಸಿಎಂ ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿಯನ್ನು ಜಾರಿಗೆ ತಂದರು. ಬಳಿಕ, ಎಲ್ಲಾ ಪಕ್ಷದ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ತಮ್ಮ ಪತ್ನಿಯರು, ಸಹೋದರಿಯರು ಮತ್ತು ಮಕ್ಕಳನ್ನು ಕಣಕ್ಕಿಳಿಸಲು ಪ್ರಾರಂಭಿಸಿದ್ದರು. ಈಗಲೂ ಆ ರೀತಿಯ ನಿದರ್ಶನಗಳು ಸಾಕಷ್ಟಿವೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಹಿಳೆಯರ ಪರವಾಗಿ ಅವರ ಗಂಡಂದಿರು ಅಧಿಕಾರ ಚಲಾಯಿಸುತ್ತಿದ್ದ ಮತ್ತು ಚಲಾಯಿಸುತ್ತಿರುವುದೂ ಇದೆ. ಮಹಿಳಾ ಸದಸ್ಯರನ್ನು ಕೌನ್ಸಿಲ್ ಹಾಲ್ನಲ್ಲಿ ಟೋಕನಿಸಂ ರೀತಿಯಲ್ಲಿ ಮಾತ್ರ ಕೂರಿಸುತ್ತಿದ್ದದ್ದೂ ಇದೆ. ಚೈನ್ನೈ ಪಾಲಿಕೆಯಲ್ಲಿಯೂ ಇದೆಲ್ಲವೂ ನಡೆದಿದೆ. ಇದೆಲ್ಲವನ್ನೂ ನಿಭಾಯಿಸಿ ಮಹಿಳೆಯರೇ ತಮ್ಮ ಅಧಿಕಾರವನ್ನು ಚಲಾಯಿಸುವ ಮತ್ತು ಪಾಲಿಕೆಯಲ್ಲಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸುವಂತೆ ಮಾಡುವ ದೊಡ್ಡ ಜವಾಬ್ದಾರಿಯೂ ಪ್ರಿಯಾ ಅವರ ಮೇಲಿದೆ. ತಮಿಳುನಾಡಿನ ವಿವಿಧ ಪಾಲಿಕೆಗಳಲ್ಲಿ ಒಟ್ಟಾರೆಯಾಗಿ ಡಿಎಂಕೆಯಿಂದ 11 ಮಹಿಳೆಯರು ಮೇಯರ್ ಹುದ್ದೆ ಅಲಂಕರಿಸಿದ್ದಾರೆ ಮತ್ತು 5 ಮಹಿಳೆಯರು ಉಪಮೇಯರ್ ಆಗಿದ್ದಾರೆ.
ಒಂದು ಮೇಯರ್, ಎರಡು ಉಪಮೇಯರ್ ಸ್ಥಾನ, ಪುರಸಭೆಗಳಲ್ಲಿ 6 ಅಧ್ಯಕ್ಷರು ಮತ್ತು 11 ಉಪಾಧ್ಯಕ್ಷರು, ಪಟ್ಟಣ ಪಂಚಾಯತಿಗಳಲ್ಲಿ 8 ಅಧ್ಯಕ್ಷರು ಮತ್ತು 11 ಉಪಾಧ್ಯಕ್ಷರ ಸ್ಥಾನಗಳನ್ನು ತಮ್ಮ ಪ್ರಮುಖ ಮಿತ್ರ ಪಕ್ಷವಾದ ಕಾಂಗ್ರೆಸ್ಗೆ ಡಿಎಂಕೆ ಬಿಟ್ಟುಕೊಟ್ಟಿದೆ. ಇತರ ಮಿತ್ರಪಕ್ಷಗಳಾದ ಸಿಪಿಐ (ಎಂ), ಸಿಪಿಐ, ಎಂಡಿಎಂಕೆ ಮತ್ತು ವಿಸಿಕೆ ತಲಾ ಒಂದು ಉಪಮೇಯರ್ ಹುದ್ದೆಯನ್ನು ಪಡೆದುಕೊಂಡಿವೆ.
ಕುಂಭಕೋಣಂನಲ್ಲಿ ಆಟೋರಿಕ್ಷಾ ಚಾಲಕ ಶರವಣನ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಲಾಗಿದ್ದು, ಅವರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿರಿ: ರಾಯಚೂರು: ಕ್ಷುಲ್ಲಕ ಕಾರಣಕ್ಕೆ ದಲಿತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಆರೋಪ, ದೂರು ದಾಖಲು
My name Praveen kp kottiginhull (g) Goudnar (post) Hospet (T) Bellray (D) Karnataka pine code 583223 email [email protected]