ಉಕ್ರೇನ್ನಲ್ಲಿ ಸಿಲುಕಿರುವವರನ್ನು ರಕ್ಷಿಸುವಲ್ಲಿ ಉತ್ತರ ಭಾರತದ ಜನರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಮಿಳುನಾಡು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಗಳನ್ನು ರಕ್ಷಿಸುವಾಗಲೂ ಉತ್ತರ ಭಾರತ, ದಕ್ಷಿಣ ಭಾರತ ಎಂದು ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಮೂಲಕ ಪೋಲೆಂಡ್ಗೆ ಆಗಮಿಸಿ ಅಲ್ಲಿಂದ ದೆಹಲಿಗೆ ಆಗಮಿಸಿ, ಮನೆ ತಲುಪಿರುವ ಕೊಯಮತ್ತೂರಿನ ಜೋಸ್ಲಿನ್ ಕೂಡ ಇದೇ ಆರೋಪ ಮಾಡಿದ್ದಾರೆ. ಜೋಸ್ಲಿನ್ ಕೀವ್ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮಿಳುನಾಡಿನ ಅನೇಕ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವಿಮಾನಕ್ಕೆ ಪ್ರವೇಶವಿಲ್ಲದೆ ಸಿಲುಕಿಕೊಂಡಿದ್ದಾರೆ. ಅಧಿಕಾರಿಗಳು ತಮಿಳು ಮಾತನಾಡುವ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ನಿಂದ ವಾಪಸ್ ಆಗಿರುವ ಮೂವರು ವಿದ್ಯಾರ್ಥಿಗಳು ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಹಿಂತಿರುಗುತ್ತಿರೋ ವಿದ್ಯಾರ್ಥಿಗಳನ್ನು ದೇಶದ ವೈದ್ಯಕೀಯ ಕಾಲೇಜುಗಳಿಗೆ ದಾಖಲಿಸಿ: ವೈದ್ಯಕೀಯ ಸಂಘ
“ನಾವು ಉಕ್ರೇನ್ನಿಂದ್ ಪೋಲಾಂಡ್ ಗಡಿಗೆ ಬಂದೆವು. ಆದರೆ, ಅಲ್ಲಿ ಮತ್ತೊಂದು ಸಮಸ್ಯೆ ಉಂಟಾಯಿತು. ನಾವು ವಿಮಾನಕ್ಕಾಗಿ 48 ಗಂಟೆಗೂ ಹೆಚ್ಚು ಕಾಲ ಕಾಯುತ್ತಿದ್ದೇವು. ಅಲ್ಲಿ ಸೌತ್ ಇಂಡಿಯನ್ಸ್ ಮತ್ತು ನಾರ್ತ್ ಇಂಡಿಯನ್ಸ್ ಎಂಬ ತಾರತಮ್ಯ ಶುರುವಾಯಿತು. ಅಷ್ಟು ಸಮಯದಿಂದ ನಾವು ಅಲ್ಲಿಯೇ ಕಾಯುತ್ತಿದ್ದರೂ ನಮ್ಮ ಹೆಸರುಗಳನ್ನು ಅವರು ಕರೆಯಲಿಲ್ಲ. ಎಲ್ಲಾ ಉತ್ತರ ಭಾರತದವರನ್ನು ಮಾತ್ರ ಕರೆಯಲಾಗುತ್ತಿತ್ತು. ನಮಗೆ ’ಮೊದಲು ಬಂದವರಿಗೆ ಆದ್ಯತೆ’ ಎಂದು ಹೇಳಿದ್ದರು. ಆದರೆ ಅವರು ಮಾಡಿದ್ದು ಮಾತ್ರ ಬೇರೆ. ಮಾರ್ಚ್ 1 ರಂದು ನಾವು ಅಲ್ಲಿಗೆ ಹೋದರೂ ನಮಗೆ ವಿಮಾನಕ್ಕೆ ಹತ್ತಿಸಿಕೊಳ್ಳಲಿಲ್ಲ. ಮಾರ್ಚ್ 2ಕ್ಕೆ ಬಂದ ನಾರ್ತ್ ಇಂಡಿಯನ್ಸ್ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ನೀಡಲಾಯಿತು. ಒಂದು ವಿಮಾನದಲ್ಲಿ ಹೋಗಲು 15 ಮಲಯಾಳಿ ವಿದ್ಯಾರ್ಥಿಗಳ ಹೆಸರನ್ನು ಮೊದಲೇ ಬರೆದುಕೊಳ್ಳಲಾಗಿತ್ತು. ಆದರೆ, ಕಾರಣವೇ ಇಲ್ಲದೆ ಅವರ ಹೆಸರುಗಳನ್ನು ತೆಗೆದು ಉತ್ತರ ಭಾರತದ ವಿದ್ಯಾರ್ಥಿಗಳ ಹೆಸರು ಬರೆದುಕೊಳ್ಳಲಾಯಿತು” ಎಂದು ಅಲ್ಲಿನ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
For those who Ask,Why Specifically Tamils? Tamils are being discriminated in evacuation process. https://t.co/oXnVPIMhTJ pic.twitter.com/XaXyja0ulI
— Avudaiappan (@ImAvudaiappan) March 4, 2022
ಇನ್ನು, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರ ಸ್ಥಳಾಂತರಕ್ಕೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾಡಿದ ಕರೆಗಳ ಆಧಾರದ ಮೇಲೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ, ಸಿಪಿಐ(ಎಂ) ಸಂಸದೀಯ ಪಕ್ಷದ ನಾಯಕ ಎಳಮರಮ್ ಕರೀಂ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಉಕ್ರೇನ್ನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಮಾನವೀಯ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಯುದ್ಧದ ಹತ್ತನೇ ದಿನವಾದ ಇಂದು (ಶನಿವಾರ) ರಷ್ಯಾದ ಅಧ್ಯಕ್ಷೀಯ ಭವನವು ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.30ಕ್ಕೆ ಕದನ ವಿರಾಮ ಜಾರಿಗೆ ಬಂದಿದೆ.
ಇದನ್ನೂ ಓದಿ: ಟಾಯ್ಲೆಟ್ ಕ್ಲೀನ್ ಮಾಡಿದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದ ರಾಯಭಾರಿ ಕಚೇರಿ: ಆರೋಪ
ಈ ರೀತಿಯ ತಾರತಮ್ಯ ನೀತಿಯಿಂದ, ಮುಂದಿನ ದಿನಗಳಲ್ಲಿ ನಮ್ಮ ಒಕ್ಕೂಟದ ವ್ಯವಸ್ಥೆಗೆ ದಕ್ಕೆ ಬರುತ್ತದೆ.