ಎಂಎಸ್ಪಿ ಕಾನೂನುಬದ್ಧಗೊಳಿಸಬೇಕು ಎಂಬುದು ಸೇರಿದಂತೆ ಇನ್ನು ಹಲವು ಹಕ್ಕೊತ್ತಾಯಗಳನ್ನಿಟ್ಟುಕೊಂಡು ಹೋರಾಟ ಮುಂದುವರೆಸಿದ್ದ ಸಂಯುಕ್ತ ಕಿಸಾನ್ ಮೋರ್ಚಾವು ತನ್ನ ಹೋರಾಟದ ಮುಂದಿನ ರೂಪುರೇಷೆಗಳನ್ನು ನಿರ್ಧರಿಸಲು ಇಂದು ಸಭೆ ಸೇರಿದೆ.
ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಸುಧೀರ್ಘ ಪ್ರತಿಭಟನೆಯ ಮುಂದಿನ ಹಾದಿಯನ್ನು ನಿರ್ಧರಿಸುವ ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಣಾಯಕ ಸಭೆಯು ಇಂದು ಸಿಂಘು ಗಡಿಯಲ್ಲಿ ಆರಂಭವಾಗಿದ್ದು, ಕೇಂದ್ರ ಸರ್ಕಾರದಿಂದ ಸರಿಯಾದ ಪ್ರತಿಕ್ರಿಯೆ ಇಲ್ಲದಿರುವಾಗ, ಕನಿಷ್ಠ ಬೆಂಬಲ ಬೆಲೆ ಕುರಿತ ಸಮಿತಿಗೆ ಐದು ಹೆಸರುಗಳನ್ನು ಕಳುಹಿಸಬೇಕೆ ಬೇಡವೇ ಎಂಬುದರ ಕುರಿತು ಚಿಂತನೆ ನಡೆಸಲಿವೆ ಎನ್ನಲಾಗಿದೆ.
ದೇಶಾದ್ಯಂತ ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಹುತಾತ್ಮರ ಕುಟುಂಬಕ್ಕೆ ಪರಿಹಾರ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಸಂಯುಕ್ತ ಕಿಸಾನ್ ಮೋರ್ಚಾವು ನವೆಂಬರ್ 21 ರಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರವು ಸರ್ಕಾರವು ಔಪಚಾರಿಕವಾಗಿ ಮತ್ತು ಸಂಪೂರ್ಣವಾಗಿ ಪ್ರತಿಕ್ರಿಯಿಸುವವರೆಗೆ ಕಾಯಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿತ್ತು.
ನವೆಂಬರ್ 29 ರಿಂದ ಆರಂಭವಾಗಬೇಕಿದ್ದ, ಯೋಜಿತ ಸಂಸತ್ತಿಗೆ ಟ್ಯ್ರಾಕ್ಟರ್ ಮಾರ್ಚ್ಅನ್ನು ಸ್ಥಗಿತಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಸಮಯ ನೀಡಲು ಮೋರ್ಚಾ ನಿರ್ಧರಿಸಿತ್ತು. ಆದರೆ ಕೇಂದ್ರ ಸರ್ಕಾರ ರೈತರೊಡನೆ ಅಧಿಕೃತ ಮಾತುಕತೆ ನಡೆಸದಿರುವುದು ಹೋರಾಟ ಮುಂದುವರೆಯುವುದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಹುತಾತ್ಮ ರೈತರ ಕುರಿತು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ: ಪಟ್ಟಿ ಬಿಡುಗಡೆ ಮಾಡಿದ ರಾಹುಲ್