ಕಳೆದ ಏಪ್ರಿಲ್ – ಮೇ ಅವಧಿಯಲ್ಲಿ ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ತಲೆದೋರಿತ್ತು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವಿರಾರು ಜನರು ದೇಶದಲ್ಲಿ ಮೃತಪಟ್ಟಿದ್ದರು. ಆಮ್ಲಜನಕ ಕೊರತೆಯ ಕುರಿತು ಸಲ್ಲಿಕೆಯಾದ ಅನೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒಂದು ವಿಶೇಷ ಸಮಿತಿಯನ್ನು ರಚನೆ ಮಾಡಿತ್ತು. ದೆಹಲಿಯಲ್ಲಿ ಲಭ್ಯವಿರುವ ಆಕ್ಸಿಜನ್, ದೆಹಲಿಯ ಅಗತ್ಯತೆಯನ್ನು ಆಡಿಟ್ ಮಾಡುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಸಮಿತಿಯು ತನಿಖೆ ನಡೆಸಿದ್ದು ದೆಹಲಿ ಸರ್ಕಾರ ತನಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಆಕ್ಸಿಜನ್ ಬಳಸಿಕೊಂಡಿದೆ. ತನ್ನ ಅಗತ್ಯತೆಗಳನ್ನು ನಾಲ್ಕುಪಟ್ಟು ಹೆಚ್ಚು ಬಿಂಬಿಸಿಕೊಂಡಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
AIIMS ನಿರ್ದೇಶಕ ರಣದೀಪ್ ಗುಲೇರಿಯಾ, ದೆಹಲಿ ಸರ್ಕಾರದ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮಾಕ್ಸ್ ಹೆಲ್ತ್ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಕರ್ಯದರ್ಶಿ ಸುಬೋಧ್ ಯಾದವ್ ಅವರನ್ನೊಳಗೊಂಡ ಸಮಿತಿ ಈ ವರದಿಯನ್ನು ಸುಪ್ರೀಂ ಕೋರ್ಟ್ಗೆ ನೀಡಿದೆ.
ದೆಹಲಿ ಸರ್ಕಾರವು 1,140 ಮೆಟ್ರಿಕ್ ಟನ್ ಆಕ್ಸಿಜನ್ ದೆಹಲಿಗೆ ಅಗತ್ಯವಿದೆ ಎಂದು ಹೇಳಿಕೊಂಡಿತ್ತು. ವಾಸ್ತವದಲ್ಲಿ ದೆಹಲಿಗೆ ಅಗತ್ಯವಿರುವ ಆಕ್ಸಿಜನ್ ಕೇವಲ 289 ಮೆಟ್ರಿಕ್ ಟನ್ ಮಾತ್ರ. ದೆಹಲಿ ಸರ್ಕಾರ ಹೇಳಿರುವ ಆಕ್ಸಿಜನ್ಗೆ ಸಂಬಂಧಿಸಿದ ಅಂಕಿ ಸಂಖ್ಯೆಗಳು ವಾಸ್ತವಕ್ಕಿಂತ ನಾಲ್ಕುಪಟ್ಟು ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್ ಸಮಿತಿ ತನ್ನ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ದೆಹಲಿ ನಗರದ ಸರಾಸರಿ ಆಕ್ಸಿಜನ್ ಬಳಕೆ 284 ಮೆಟ್ರಿಕ್ ಟನ್ ನಿಂದ 372 ಮೆಟ್ರಿಕ್ ಟನ್ ನಷ್ಟು ಇದೆ. ದೆಹಲಿಯು ಬಳಸಿಕೊಂಡ ಹೆಚ್ಚುವರಿ ಆಕ್ಸಿಜನ್ ಇತರ ರಾಜ್ಯಗಳ ಆಕ್ಸಿಜನ್ ಪೂರೈಕೆಯಲ್ಲಿನ ಕೊರತೆಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಸಮಿತಿ ತಿಳಿಸಿದೆ.
ಸಿಂಘಾಲ್ ಆಸ್ಪತ್ರೆ, ಅರುಣಾ ಆಸಾಫಲಿ ಆಸ್ಪತ್ರೆ, ಇಎಸ್ಐಸಿ ಮೊಡೆಲ್ ಆಸ್ಪತ್ರೆ, ಲೈಫ್ರೇ ಆಸ್ಪತ್ರೆ ಸೇರಿ ದೆಹಲಿಯ ಕೆಲವು ಆಸ್ಪತ್ರೆಗಳು ಕಡಿಮೆ ಬೆಡ್ಗಳನ್ನು ಹೊಂದಿದ್ದರೂ ಹೆಚ್ಚುವರಿ ಆಕ್ಸಿಜನ್ ಬಳಸಿಕೊಂಡಿವೆ. ಇದು ದೆಹಲಿಯಲ್ಲಿನ ಆಕ್ಸಿಜನ್ ಪೂರೈಕೆಯಲ್ಲಿನ ಕೊರತೆಗೆ ಕಾರಣವಾಗಿದೆ ಸಮಿತಿ ತಿಳಿಸಿದೆ.
ಏಪ್ರಿಲ್ 29 ರಿಂದ ಮೇ 10 ರ ವರೆಗಿನ ಅವಧಿಯಲ್ಲಿ ದೆಹಲಿಯಲ್ಲಿ ದಿನಕ್ಕೆ 350 ಮೆಟ್ರಿಕ್ ಟನ್ಗಿಂತ ಹೆಚ್ಚು ಆಕ್ಸಿಜನ್ ಬಳಕೆಯಾಗಿಲ್ಲ ಎಂದು ದೆಹಲಿ ಸರ್ಕಾರ ಇದುವರೆಗೆ ಹೇಳುತ್ತ ಬಂದಿದೆ.
ದೆಹಲಿಗೆ 700 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ದೆಹಲಿ ಸರ್ಕಾರ ತನ್ನ ಅಗತ್ಯತೆಗಿಂತ ಹೆಚ್ಚು ಆಕ್ಸಿಜನ್ ಬೇಡಿಕೆಯನ್ನು ಇಡುತ್ತಿದೆ ಎಂದು ಕೆಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಆದೇಶಿಸಿತ್ತು. ಜೂನ್ 30 ರಂದು ಸುಪ್ರೀಂ ಕೋರ್ಟ್ ಅರ್ಜಿಯ ಮುಂದಿನ ವಿಚಾರಣೆಯನ್ನು ನಡೆಸಲಿದೆ.
ಇದನ್ನು ಓದಿ : Explainer: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಆಯಿಲ್ ಬಾಂಡ್ಗಳು ಕಾರಣವೇ? GST ವ್ಯಾಪ್ತಿಗೆ ತರಲು ರಾಜ್ಯಗಳ ವಿರೋಧವೇಕೆ?