ನವೆಂಬರ್ ೨ ರಂದು ದೆಹಲಿಯ ತೀಸ್ ಹಜಾರಿ ಕೋರ್ಟ್ ಮುಂಭಾಗದಲ್ಲಿ ನಡೆದ ಪೊಲೀಸ್ ಮತ್ತು ವಕೀಲರ ನಡುವಿನ ಮಾರಾಮಾರಿಯ ವಿಡಿಯೋ ಸಂಚಲನ ಮೂಡಿಸಿತ್ತು. ಈಗ ಪೊಲೀಸರು ಮತ್ತು ವಕೀಲರ ಮಧ್ಯೆ ನಡೆದ ಘರ್ಷಣೆಯ ಮತ್ತೊಂದು ವಿಡಿಯೋ ಬಹಿರಂಗವಾಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕಾರ್ಗಳಿಗೆ ಬೆಂಕಿ ಹಚ್ಚಲಾಗಿರುವ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ವಕೀಲರ ಗುಂಪೊಂದು ಎರಗಿದ ವಿಡಿಯೋ ಇದಾಗಿದೆ.
ಹಜಾರಿ ಕೋರ್ಟ್ ಎದುರು ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಸ್ಥಳಕ್ಕೆ ಮಹಿಳಾ ಪೊಲೀಸ್ ಸೇರಿದಂತೆ ಐದಾರು ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಓಡಿ ಬರುತ್ತಾರೆ. ಈ ವೇಳೆ ಏಕಾಏಕಿ ಬಂದ ವಕೀಲರ ಗುಂಪು ಪೊಲೀಸರ ಮೇಲೆ ಎರಗುತ್ತದೆ. ಮಹಿಳಾ ಪೊಲೀಸ್ ಒಬ್ಬರು ವಕೀಲರಿಗೆ ಕೈಮುಗಿದು ದಾಂಧಲೆ ಮಾಡದಂತೆ ಮನವಿ ಮಾಡುತ್ತಿರುವ ದೃಶ್ಯವೂ ಇದರಲ್ಲಿದೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸರು ಮತ್ತು ವಕೀಲರ ಮಧ್ಯೆ ನಡೆದ ಘರ್ಷಣೆಯಿಂದ ರಕ್ಷಣೆಗೆ ಕೋರಿ ಪೊಲೀಸರು ಮನವಿ ಮಾಡಿದ್ದರು. ಈ ವೇಳೆ ಹಿರಿಯ ಪೊಲೀಸರು, ಕಿರಿಯ ಪೊಲೀಸರಿಗೆ ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ ಅಂತಾ ಆರೋಪಿಸಲಾಗಿತ್ತು. ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೊಲೀಸರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈಗ ಮತ್ತೊಂದು ವಿಡಿಯೋ ಬಹಿರಂಗಗೊಂಡಿದ್ದು, ವಕೀಲರು ಆವೇಶದ ವರ್ತನೆ ಸೆರೆಯಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಬೀದಿಗಿಳಿದು ಪೊಲೀಸರು: ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಪ್ರತಿಭಟನೆ…
ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದು ಬಹುಮುಖ್ಯ ಸಾಕ್ಷ್ಯವಾಗಲಿದೆ. ಘರ್ಷಣೆಗೆ ಕಾರಣ ಮತ್ತು ಸತ್ಯ ಏನು ಎಂಬುದನ್ನು ತಿಳಿಯಲು ಸಿಸಿ ಕ್ಯಾಮರಾ ದೃಶ್ಯ ಸಾಕ್ಷಿಯಾಗಲಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರೊಬ್ಬರು ಮಾತನಾಡಿ, ನಾನು ಗುಂಪಿನಿಂದ ಮಹಿಳಾ ಪೊಲೀಸ್ನ್ನು ರಕ್ಷಿಸಲು ಹೋಗಿದ್ದೆ. ಈ ವೇಳೆ ನನ್ನನ್ನು ಸಾಕಷ್ಟು ಥಳಿಸಿದ್ರು. ಹಿರಿಯ ಅಧಿಕಾರಿಗಳು, ಕಿರಿಯ ಪೊಲೀಸರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಮಹಿಳಾ ಪೊಲೀಸ್ನ್ನು ತಳ್ಳಿ, ಅವರೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ. ಅವರನ್ನು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋದರು. ಅವರನ್ನು ಕೆಟ್ಟ ಶ್ಬ್ದಗಳಿಂದ ನಿಂದಿಸಿದರು. ಅವರು ಕೋರ್ಟ್ನ ಹೊರಭಾಗದಲ್ಲಿ ಬಂದು ನಿಂತು ಅಳುತ್ತಿದ್ದರು ಎಂದು ಹೇಳಿದರು.
Seeing a vedio on @CNNnews18 where lawyers are manhandling and misbehaving with a woman police officer and behaving like goons. I strongly condemn it. I am going to take Suo Motu and will be writing to Bar Council and @CPDelhi
— Rekha Sharma (@sharmarekha) November 7, 2019
ಇನ್ನು ಮಹಿಳಾ ಪೊಲೀಸ್ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ)ದ ಮುಖ್ಯ ಕಾರ್ಯದರ್ಶಿ ಮನನ್ ಕುಮಾರ್ ಮಿಶ್ರಾ ಅವರ ಬಳಿ, ಹಲ್ಲೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ತಿಳಿಸಿದ್ದಾರೆ. ಇತ್ತ ಪೊಲೀಸ್ ಹಿರಿಯ ಅಧಿಕಾರಿಗಳು, ದೌರ್ಜನ್ಯ ಎಸಗಿರುವ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದರು.