ಕಾಂಗ್ರೆಸ್ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರು ಜಮ್ಮು ಕಾಶ್ಮೀರದಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಿದ್ದು, ಡೆಮಾಕ್ರಟಿಕ್ ಆಜಾದ್ ಪಕ್ಷ (ಡಿಎಪಿ) ಎಂದು ಹೆಸರಿಟ್ಟಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ಆಗಸ್ಟ್ 26 ರಂದು ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಸುದೀರ್ಘ ಒಡನಾಟವನ್ನು ಕೊನೆಗೊಳಿಸಿದ್ದರು.
ತಮ್ಮ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ (ಡಿಎಪಿ) ಎಂದು ಹೆಸರಿಟ್ಟಿರುವುದಾಗಿ ಹೇಳಿರುವ ಅವರು, “ಇದು ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ಯ್ರ ಮತ್ತು ಚಿಂತನೆಯ ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ. ನಮ್ಮ ಸಿದ್ಧಾಂತವು ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಆದರ್ಶಗಳನ್ನು ಆಧರಿಸಿದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಡಿಎಪಿಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಯಾವುದೇ ಸ್ಪರ್ಧೆಯನ್ನು ಹೊಂದಿಲ್ಲ. ಜಮ್ಮು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆಯನ್ನು ‘ಬಲಪಡಿಸುವ’ ಕಡೆಗೆ ಪಕ್ಷದ ಗಮನವು ಕೇಂದ್ರೀಕರಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ 370ನೇ ವಿಧಿಗಾಗಿ ಪ್ರಜಾಸತ್ತಾತ್ಮಕ ಹೋರಾಟ ಮುಂದುವರೆಸುತ್ತೇವೆ: ಒಮರ್ ಅಬ್ದುಲ್ಲಾ ಪ್ರತಿಜ್ಞೆ
ಪಕ್ಷವು ನಿರಂಕುಶ ಪಕ್ಷವಾಗಿರದೆ ಪ್ರಜಾಸತ್ತಾತ್ಮಕವಾಗಿರುತ್ತದೆ ಎಂದು ಅವರು ಹೇಳಿದ್ದು, “ಡಿಎಪಿ ಪ್ರಜಾಪ್ರಭುತ್ವದ ತತ್ವಗಳನ್ನು ಆಧರಿಸಿದೆ. ಇದು ಯಾವುದೇ ಹೊರಗಿನ ನಾಯಕ ಅಥವಾ ಇತರ ಪಕ್ಷಗಳಿಂದ ಪ್ರಭಾವಿತವಾಗುವುದಿಲ್ಲ. ಅದು ಸ್ವತಂತ್ರ ಚಿಂತನೆಯನ್ನು ಹೊಂದಿರುತ್ತದೆ ಮತ್ತು ತನ್ನ ನಿರ್ಧಾರಗಳಲ್ಲಿ ಸ್ವತಂತ್ರವಾಗಿರುತ್ತದೆ. ಅದು ನಿರಂಕುಶವಾಗಿರುವುದಿಲ್ಲ ಮತ್ತು ಅಧಿಕಾರವು ಒಬ್ಬರ ಕೈಯಲ್ಲಿ ಇರುವುದಿಲ್ಲ” ಎಂದು ಹೇಳಿದ್ದಾರೆ.
“ಡಿಎಪಿ ತನ್ನ ರಚನೆಗಾಗಿ ತಳಮಟ್ಟದ ಚುನಾವಣೆಗಳನ್ನು ನಡೆಸುತ್ತದೆ. ನಾವು ನಮ್ಮ ಮಟ್ಟದಲ್ಲಿ ಸ್ಪರ್ಧಿಸಲಿದ್ದೇವೆ. ನಮಗೆ ಯಾವುದೇ ಶತ್ರುತ್ವ ಅಥವಾ ಶತ್ರುಗಳಿಲ್ಲ. 50% ಟಿಕೆಟ್ಗಳನ್ನು ಯುವಕರಿಗೆ ನೀಡಲಾಗುವುದು” ಎಂದು ಅವರು ಹೇಳಿದ್ದಾರೆ.
ಪಕ್ಷದ ಧ್ವಜದ ಹಳದಿ, ಬಿಳಿ ಮತ್ತು ಕಡು ನೀಲಿ ಬಣ್ಣದ ಕುರಿತು ಮಾತನಾಡಿದ ಅವರು, “ಗಾಢ ಹಳದಿ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ. ಬಿಳಿ ಶಾಂತಿಯನ್ನು ಮತ್ತು ನೀಲಿ ಬಣ್ಣವು ಸ್ವಾತಂತ್ರ್ಯ, ಮುಕ್ತ ಆಕಾಶ, ಮುಕ್ತ ಕಲ್ಪನೆ ಮತ್ತು ಸಮುದ್ರದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿಗೆ ಹೋರಾಟಗಾರರ ಸಾಥ್!
ತಮ್ಮ ಉಪನಾಮ ಆಜಾದ್ಗೂ ಪಕ್ಷದ ಹೆಸರಿಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯೊಂದಿಗೆ ಮೊದಲೇ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು,“ತಾನು ಅಥವಾ ತನ್ನ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಹೊಂದಿಲ್ಲ. ಪಕ್ಷವು ಜಮ್ಮು ಕಾಶ್ಮೀರದ ಜನರ ಹೃದಯದೊಂದಿಗೆ ಮಾತ್ರ ಮೈತ್ರಿ ಮಾಡಿಕೊಂಡಿದೆ. ಪಕ್ಷ ಆರಂಭಿಸುವ ಮುನ್ನ ನಾವು ಯಾರನ್ನೂ ಸಂಪರ್ಕಿಸಿಲ್ಲ” ಎಂದು ಹೇಳಿದ್ದಾರೆ.
ಡಿಎಪಿ ನೀತಿಯು ಯಾವುದೆ ಧರ್ಮದ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದ ಅವರು, “ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ನರು ಮಾನವ ಹೃದಯದ ನಾಲ್ಕು ಕೋಣೆಗಳು. ಪಕ್ಷದ ಹೆಸರು ಹಿಂದೂಸ್ತಾನಿ ಆಗಿದೆ. ನಮ್ಮ ಮನೆಗಳಲ್ಲಿ ಮಾತನಾಡುವ ಉರ್ದು ಮತ್ತು ಹಿಂದೂಗಳ ಮಿಶ್ರಣವನ್ನು ಹಿಂದೂಸ್ತಾನಿ ಎಂದು ಜವಾಹರಲಾಲ್ ನೆಹರು ಹೇಳುತ್ತಿದ್ದರು” ಎಂದು ತಿಳಿಸಿದ್ದಾರೆ.
ಆರ್ಟಿಕಲ್ 370ರ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ವಿಧಿಯನ್ನು ಪುನಃಸ್ಥಾಪಿಸುವುದಿಲ್ಲ ಎಂದು ನಾನು ಎಂದಿಗೂ ಹೇಳಲಿಲ್ಲ. ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರನ್ನು ಯಾರಾದರೂ ಮನವೊಲಿಸಿದರೆ ಅದನ್ನು ಬದಲಾಯಿಸಬಹುದು. ಸದ್ಯ ನನಗೆ ಅಂತಹ ಶಕ್ತಿ ಇಲ್ಲದಿರುವುದರಿಂದ ನಾನು ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಅವರು ಈ ಹಿಂದೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಶಾಶ್ವತವಾಗಿ ಮರುಸ್ಥಾಪಿಸಲು ಸಾಧ್ಯತೆಯಿಲ್ಲ ಎಂದು ಎಂದು ಹೇಳಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!
ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆಯುವ ಅದೇ ಸಮದಯಲ್ಲಿ, ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ ಎರಡು ಡಜನ್ ಪ್ರಮುಖ ನಾಯಕರು ಅವರನ್ನು ಅನುಸರಿಸಿದ್ದರು.
“ಭಾರತಕ್ಕೆ ಯಾವುದು ಸರಿ ಎಂದು ಹೋರಾಡಲು ಎಐಸಿಸಿಯನ್ನು ನಡೆಸುವ ಕೂಟದ ಮಾರ್ಗದರ್ಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಚ್ಛೆ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ” ಎಂದು ಅವರು ಸೋನಿಯಾ ಗಾಂಧಿಗೆ ಬರೆದ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಹೊಸ ಪಕ್ಷದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ರಾಜಕೀಯ ವಿಶ್ಲೇಷಕರೊಬ್ಬರು,“ಗುಲಾಂ ನಬಿ ಆಝಾದ್ ಅವರು ಬಿಜೆಪಿಯ ಕೈಗೊಂಬೆ ಎಂಬುವುದು ಇಲ್ಲಿವರೆ ಜಮ್ಮು ಕಾಶ್ಮೀರ ಸೇರಿದಂತೆ ಎಲ್ಲರಿಗೂ ತಿಳಿದದೆ. ಇದೆಲ್ಲಾ ಬಿಜೆಪಿಯ ನಿರೀಕ್ಷಿತ ಕಡೆ. ಜಮ್ಮು ಕಾಶ್ಮೀರದಲ್ಲಿ ಡಿಲಿಮಿಟೇಷನ್ ಮಾಡಿರುವುದರಿಂದ ಜಮ್ಮುವಿನಲ್ಲಿ ಹೆಚ್ಚಿನ ಸ್ಥಾನಗಳು ಬಿಜೆಪಿಗೆ ಬರುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ. ಬಿಜೆಪಿ ಹಿಡಿತವಿಲ್ಲದ ಕಾಶ್ಮೀರದಲ್ಲಿ ಕೂಡಾ ಕೆಲವು ಸ್ಥಾನಗಳನ್ನು ಹೊಸ ಪಕ್ಷ ಪಡೆದರೆ ಅಲ್ಲಿ ಬಿಜೆಪಿ ಹಿಡಿತ ಸಾಧಿಸಬಹುದು ಎಂದು ಅವರ ಯೋಜನೆ. ಆದರೆ ಗುಲಾಂ ನಬಿ ಅವರನ್ನು ಜನರು ನೋಡಿಕೊಂಡೆ ಬಂದಿರುವುದರಿಂದ ಉಳಿದ ತೀರ್ಮಾನ ಅವರಿಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ.


