ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯ ಮರುಸ್ಥಾಪನೆಗಾಗಿ ‘ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಮತ್ತು ರಾಜಕೀಯವಾಗಿ’ ತಮ್ಮ ಪಕ್ಷ ಹೋರಾಟ ಮುಂದುವರೆಸುತ್ತದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಹೇಳಿದ್ದು, 370ನೇ ವಿಧಿಯು ತಮ್ಮ ಹಕ್ಕು ಎಂದು ಅವರು ಪ್ರತಿಪಾದಿಸಿದ್ದಾರೆ.
“ಬಿಟ್ಟುಕೊಡುವವರ ಜೊತೆ ನಾನಿಲ್ಲ. ನಮಗೆ ಸುಪ್ರೀಂ ಕೋರ್ಟ್ನಲ್ಲಿ ನಂಬಿಕೆ ಇದೆ. ಆದರೆ ನಮ್ಮ ಏಕೈಕ ವಿನಂತಿಯೆಂದರೆ ಅದು ನಮ್ಮ ಮಾತನ್ನಾದರೂ ಕೇಳಬೇಕು” ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಒಮರ್ ಅಬ್ದುಲ್ಲಾ ಅವರು ಪಕ್ಷವೂ 370ನೇ ವಿಧಿಯನ್ನು ರದ್ದುಗೊಳಿಸಿರುವ ಒಕ್ಕೂಟ ಸರ್ಕಾರದ 2019 ಆಗಸ್ಟ್ 5ರ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಪ್ರಕರಣವು ತಮ್ಮ ಪಕ್ಷಕ್ಕೆ ಪ್ರಮುಖ ಹೋರಾಟವಾಗಿದ್ದು, 370 ನೇ ವಿಧಿಯನ್ನು ಮರುಸ್ಥಾಪಿಸಲು ಪಕ್ಷವು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿಲ್ಲ ಅಥವಾ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಶನಿವಾರ ಹೇಳಿದ್ದಾರೆ.
ಒಕ್ಕೂಟ ಸರ್ಕಾರದ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಜಮ್ಮು ಕಾಶ್ಮೀರದ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ತಮ್ಮ ಪಕ್ಷವು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿಲ್ಲ ಎಂದು ಅವರು ಹೇಳಿದ್ದಾರೆ.
“ನಾವು ಈ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ಬೇಡಿಕೆ ಇಟ್ಟಿಲ್ಲ. ವಿಧಿಯನ್ನು ನಮ್ಮಿಂದ ಕಸಿದುಕೊಂಡವರು ಅವರು, ಅದನ್ನು ನಮಗೆ ಹಿಂದಿರುಗಿಸುತ್ತಾರೆ ಎಂದು ನಾನು ಭಾವಿಸಬೇಕೇ” ಎಂದು ಅವರು ಕೇಳಿದ್ದಾರೆ.
ಒಕ್ಕೂಟ ಸರ್ಕಾರದಲ್ಲಿ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದರೆ ಕೂಡಾ 370 ನೇ ವಿಧಿಯನ್ನು ಪುನಃಸ್ಥಾಪಿಸಲಾಗುತ್ತದೆ ಎಂಬುವುದನ್ನು ತಾನು ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಯಾಕೆಂದರೆ ಕೆಲವೇ ಪಕ್ಷಗಳಷ್ಟೆ ತಮ್ಮ ನಿಲುವುಗಳನ್ನು ಬೆಂಬಲಿಸಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!
“ಸರ್ಕಾರ ಬದಲಾಗುತ್ತಿರುವುದರಿಂದ 2024ರ ಚುನಾವಣೆವರೆಗೆ ಕಾಯಲು ನಾನು ಜನರಿಗೆ ಹೇಳುವುದಿಲ್ಲ. ಇದು ನಡೆಯುತ್ತದೆ ಎಂದು ನಾನು ಭಾವಿಸುವುದಿಲ್ಲ. ಇದು ರಾಜಕೀಯ ಹೋರಾಟವಾಗಿದ್ದು, ಇದರಲ್ಲಿ ನಾವು ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಹೋರಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.