Homeಅಂಕಣಗಳುಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

ಮಾರಿ ಸೆಲ್ವರಾಜ್‍ರ ನೂತನ ಭಾರತದಲ್ಲಿ ಈಗ ಧನುಷ್ ’ಕರ್ಣ’

- Advertisement -
- Advertisement -

‘ಭಾರತೀಯ ಚಿತ್ರರಂಗವನ್ನು ರಾಮಾಯಣ ಮತ್ತು ಮಹಾಭಾರತದ ಆಚೆಗೆ ನಿಂತು ನೋಡಲು ಸಾದ್ಯವಿಲ್ಲ’ ಎನ್ನುವ, ನಿರ್ದೇಶಕ ಮಣಿರತ್ನಂ ಅವರ ಮಾತು ಒಂದು ಮಟ್ಟಕ್ಕೆ ನಿಜ ಕೂಡ.

ನಮ್ಮಲ್ಲಿ ಮಹಾಭಾರತ ಮತ್ತು ರಾಮಾಯಣದ ಕಥೆ ಅಥವಾ ಆ ಕಾವ್ಯಗಳ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಬಂದ ಹಲವಾರು ಚಿತ್ರಗಳು ಯಶಸ್ವಿಯಾಗಿದೆ. ಕೆಲವು ಚಿತ್ರಗಳು ಈ ಕಥೆ/ಪಾತ್ರಗಳನ್ನು ಯಥಾವತ್ತಾಗಿ(ಪೌರಾಣಿಕವಾಗಿ) ಚಿತ್ರಿಸಿದ್ದರೆ, ಮತ್ತೆ ಕೆಲವು ಚಿತ್ರಗಳು ಅವುಗಳಿಂದ ಸ್ಪೂರ್ತಿ ಪಡೆದು, ಕಾಲಕ್ಕೆ ತಕ್ಕಂತೆ (ಆಧುನಿಕ)ವಿಶ್ಲೇಷಣಾತ್ಮಕವಾಗಿ ಚಿತ್ರಿಸಿವೆ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಸುಮಾರು 91 ಚಿತ್ರಗಳು, ರಾಮಾಯಣವನ್ನು ಆಧಾರವಾಗಿಟ್ಟುಕೊಂಡ ಸುಮಾರು 47 ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ, ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ.

ಮಹಾಭಾರತದಲ್ಲಿ ಅತ್ಯಂತ ಪ್ರಮುಖ ಮತ್ತು ದುರಂತ ನಾಯಕ ಎನಿಸಿಕೊಂಡ ಕರ್ಣನ ಪಾತ್ರವು ಹಲವು ನಿರ್ದೇಶಕರುಗಳಿಗೆ ಸ್ಪೂರ್ತಿಯಾಗಿದೆ. ‘ಕರ್ಣರಸಾಯನಮಲ್ತೆ ಭಾರತಂ’ ಎನ್ನುವ ಕುಮಾರವ್ಯಾಸನ ಮಾತಿನಂತೆ, ಮಹಾಭಾರತವೆಂದರೆ ಕರ್ಣ-ಕರ್ಣನೆಂದರೆ ಮಹಾಭಾರತ ಎನ್ನಬಹುದೇನೋ?

ಕರ್ಣನ ಹುಟ್ಟು, ಬೆಳವಣಿಗೆ, ಬೆಳೆದ ಮನೆತನದ ಜಾತಿಯ ಕಾರಣದಿಂದ ಅನುಭವಿಸಿದ ಅವಮಾನ, ಆತನ ಸ್ನೇಹಪರತೆ, ದಾನ, ಸತ್ಯ, ಪ್ರಾಮಾಣಿಕತೆ, ಧೈರ್ಯ, ನೈತಿಕತೆ ಮುಂತಾದ ಗುಣಗಳೆಲ್ಲವೂ ಆ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಕಾರಣಕ್ಕಾಗಿಯೇ ಕರ್ಣನ ಪಾತ್ರವನ್ನಿಟ್ಟುಕೊಂಡು ಹಲವು ಚಿತ್ರಗಳು ಬಿಡುಗಡೆಯಾಗಿವೆ. ಇನ್ನೂ ಮತ್ತಷ್ಟು ಚಿತ್ರಗಳು ಸೆಟ್ಟೇರಿವೆ.

ಅವುಗಳಲ್ಲಿ, ತಮಿಳಿನ ಯಶಸ್ವಿ ಯುವ ನಿರ್ದೇಶಕರಲ್ಲಿ ಒಬ್ಬರಾದ ಮಾರಿ ಸೆಲ್ವರಾಜ್ ನಿರ್ದೇಶನದಲ್ಲಿ ಇನ್ನೂ ಚಿತ್ರೀಕರಣ ಹಂತದಲ್ಲಿರುವ ತಮಿಳು ಚಿತ್ರ “ಕರ್ಣನ್” ಸದ್ಯ ಹೆಚ್ಚು ಚರ್ಚಿಸಲ್ಪಡುತ್ತಿರುವ ಚಿತ್ರವಾಗಿದೆ.

ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ, ಮಾರಿ ಸೆಲ್ವರಾಜ್ ಈ ಹಿಂದೆ ತಮ್ಮ ಚೊಚ್ಚಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರಲ್ಲದೆ ಆ ಸಿನೆಮಾಗ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಸಬ್-ಆಲ್ಟರ್ನ್ ಪರಿದೃಷ್ಟಿಯಿಂದ ಜಾತಿವ್ಯವಸ್ಥೆ ಮತ್ತು ಅದರ ಕಬಂದ ಬಾಹುಗಳ ಸಮಸ್ಯೆ ಮತ್ತು ಪರಿಣಾಮಗಳನ್ನು ಸಂವೇದನಾಶೀಲವಾಗಿ ದಾಟಿಸುವಲ್ಲಿ ನಿರ್ದೇಶಕ ಯಶಸ್ವಿಯಾಗಿದ್ದರು. ಮುಖ್ಯವಾಹಿನಿಯ ಚಿತ್ರದಂತೆಯೇ ಮನರಂಜನೆ ಮತ್ತು ಹಣಗಳಿಕೆಯ ದೃಷ್ಟಿಯಲ್ಲೂ ‘ಪರಿಯೇರುಂ ಪೆರುಮಾಳ್’ ಯಶಸ್ವಿಯಾಗಿತ್ತು.

ಎರಡನೆಯದಾಗಿ, ಈಗ ಸೆಟ್ಟೇರಿರುವ ಸಿನಿಮಾದ ನಾಯಕನಾಗಿ ಅಭಿನಯಿಸುತ್ತಿರುವ ಧನುಷ್ ಕೂಡ ಈ ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಧನುಷ್ ಮುಖ್ಯಪಾತ್ರದಲ್ಲಿ ನಟಿಸಿದ್ದ ವೆಟ್ರಿಮಾರನ್ ನಿರ್ದೇಶನದ ’ಅಸುರನ್’ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ಅದೂ ಅಲ್ಲದೆ ಧನುಷ್ ಅವರ ‘ವಂಡರ್ ಬಾರ್’ ಬ್ಯಾನರ್ ಅಡಿಯಲ್ಲಿ ಅತ್ಯುತ್ತಮ ಚಿತ್ರಗಳ ನಿರ್ಮಾಣವಾಗುತ್ತಿದೆ. ಅವುಗಳೆಲ್ಲವೂ ಬಹುತೇಕ ಜಾತಿ ವ್ಯವಸ್ಥೆ ತಳಸಮುದಾಯಗಳನ್ನು ಶೋಷಿಸುವ ವಸ್ತು-ವಿಷಯಗಳನ್ನು ಹೊಂದಿರುವಂತವು.

ಕೆಲವು ದಿನಗಳ ಹಿಂದೆ ಈ ಚಿತ್ರದ ಮೇಕಿಂಗ್ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಮೇಕಿಂಗ್‍ನಲ್ಲಿ ಚಿತ್ರಕ್ಕಾಗಿ ಒಂದು ಹಳ್ಳಿಯನ್ನೇ ನಿರ್ಮಿಸುತ್ತಿರುವ ವಿಷಯ ಹೆಚ್ಚು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಮೂರನೆಯದಾಗಿ, ಅದರ ಶೀರ್ಷಿಕೆಯಿಂದಲೇ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ. ಕರ್ಣನ ಪಾತ್ರವನ್ನು ಅಥವಾ ಅದರ ಸ್ಪೂರ್ತಿಯಿಂದ ಮೂಡಿರುವ ಪಾತ್ರವನ್ನು ತಮಿಳಿನ ದಿಗ್ಗಜ ನಟರುಗಳು ಈ ಹಿಂದೆ ಅಭಿನಯಿಸಿದ್ದಾರೆ. ಈಗ ಇದು ಧನುಷ್ ಅವರ ಸರದಿಗೆ ಬಂದಿದೆ.

1964 ರಲ್ಲಿ ಬಿಡುಗಡೆಯಾಗಿದ್ದ ತಮಿಳು ಪೌರಾಣಿಕ ಚಿತ್ರ ‘ಕರ್ಣನ್’ ಭಾರತೀಯ ಮತ್ತು ತಮಿಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿತ್ತು. ಈ ಚಿತ್ರದ ನಾಯಕ ಶಿವಾಜಿ ಗಣೇಶನ್ ಅವರ ನಟನೆ ತಮಿಳಯನಾಡಿನ ಜನರಲ್ಲಿ ಇಂದಿಗೂ ನೆನಪಿನಲ್ಲುಳಿದಿದೆ. ಬಿ ಆರ್ ಪಂತುಲು ನಿರ್ದೇಶಿಸಿದ್ದ ಈ ಚಿತ್ರ, 11ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ಮೂರನೇ ಅತ್ಯುತ್ತಮ ಚಿತ್ರ) ಪಡೆದುಕೊಂಡಿತ್ತು. ಇಷ್ಟೇ ಅಲ್ಲದೇ ಎನ್. ಟಿ. ರಾಮಾರಾವ್ ಅವರಿಂದ ಹಿಡಿದು ಸಾವಿತ್ರಿ, ಮುತ್ತುರಾಮನ್, ಎಂ. ವಿ. ರಾಜಮ್ಮ ಮುಂತಾದವರ ದೊಡ್ಡ ತಾರಾಬಳಗವೇ ಇತ್ತು. ಕರ್ಣನ ಪಾತ್ರವನ್ನು ತಮ್ಮ ಅದ್ಭುತ ಅಭಿನಯದ ಮೂಲಕ ಶಿವಾಜಿ ಗಣೇಶನ್ ಕಟ್ಟಿಕೊಟ್ಟಿದ್ದರು.

1991ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾದ ಮತ್ತೊಂದು ಯಶಸ್ವಿ ತಮಿಳು ಚಿತ್ರ ‘ದಳಪತಿ’. ಮಹಾಭಾರತವನ್ನು ಅಳವಡಿಸಿಕೊಂಡಿದ್ದ ಈ ಸಮಕಾಲೀನ ಕಥೆಯಲ್ಲಿ ರಜನಿಕಾಂತ್ ಕರ್ಣನಿಂದ ಸ್ಪೂರ್ತಿ ಪಡೆದ ಪಾತ್ರವನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ನಿರ್ದೇಶಕ ಕರ್ಣನ ಪಾತ್ರವನ್ನು ಈ ಚಿತ್ರದಲ್ಲಿ ಹೆಚ್ಚು ಸಮಕಾಲೀನಗೊಳಿಸಿದ್ದಾರೆ.

ಹುಟ್ಟಿದಾಗಲೇ ತಾಯಿಂದ ಬೇರೆಯಾಗುವ ಮಗು(ಸೂರ್ಯ/ಕರ್ಣ) ಬೆಳೆಯುತ್ತಾ ದೇವರಾಜ್ (ದುರ್ಯೋಧನ) ಎನ್ನುವ ರೌಡಿಯ ಸ್ನೇಹವನ್ನು ಮಾಡುತ್ತಾನೆ. ಸುಬ್ಬಲಕ್ಷ್ಮಿ ಎನ್ನುವ ಬ್ರಾಹ್ಮಣ ಹುಡುಗಿಯನ್ನು ಪ್ರೀತಿಸಿ, ತನ್ನ ಹುಟ್ಟಿನ ಕಾರಣಕ್ಕೆ, ಸ್ನೇಹದ ಕಾರಣಕ್ಕೆ ಆಕೆಯ ತಂದೆಯಿಂದಲೇ ಅವಮಾನಿತನಾಗುತ್ತಾನೆ. ಅದೇ ಊರಿಗೆ ಡಿ.ಸಿಯಾಗಿ ಬರುವ ತನ್ನ ತಮ್ಮ ಅರವಿಂದಸಾಮಿ (ಅರ್ಜುನ) ಸೂರ್ಯ ಮತ್ತು ದೇವರಾಜ್‌ನನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಇದರ ನಡುವೆ ತಾಯಿ (ಕುಂತಿ) ಪ್ರೀತಿಯ ಸಂಘರ್ಷವನ್ನೂ ಸಿನೆಮಾ ಒಳಗೊಂಡಿದೆ.

ಹೀಗೆ ಮಹಾಭಾರತದ ಕಥೆಯ ಹಿನ್ನಲೆಯಲ್ಲಿ ಕರ್ಣನ ಪಾತ್ರದಿಂದ ಸ್ಪೂರ್ತಿಗೊಂಡ ಈ ಚಿತ್ರ ರಜನಿಕಾಂತ್, ಮಣಿರತ್ನಂ ಮತ್ತು ತಮಿಳು ಚಿತ್ರರಂಗಕ್ಕೆ ಒಂದು ಮೈಲಿಗಲ್ಲಾಯಿತು.

ಪ್ರಸ್ತುತ ಧನುಷ್ ಈಗ ಕರ್ಣನಾಗಲಿದ್ದಾರೆ. ಆದರೆ ಇದು ಪೌರಾಣಿಕ ಚಿತ್ರವಲ್ಲ. ಬದಲಿಗೆ ನಿರ್ದೇಶಕರ ಹಿನ್ನೆಲೆಯಿಂದ ನೋಡುವುದಾದರೆ, ಪಕ್ಕಾ ತಳಸಮುದಾಯದ ಪರವಾದ ದನಿಯಿರುವ ಚಿತ್ರ ಇದು ಎನ್ನುವುದರಲ್ಲಿ ಅನುಮಾನವಿಲ್ಲ.

ನಿರ್ದೇಶಕನ ಮಾತುಗಳಲ್ಲೇ ಹೇಳುವುದಾದರೆ ”ಇದು ನನ್ನ ಎರಡನೇ ಚಿತ್ರ. ವಾಸ್ತವದಲ್ಲಿ ಇದೇ ಮೊದಲ ಚಿತ್ರವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ‘ಪರಿಯೇರುಂ ಪೆರುಮಾಳ್’ ಚಿತ್ರ ಮೊದಲು ಬರಬೇಕಾಯಿತು. ನನ್ನ ಸಿದ್ಧಾಂತವನ್ನು ಈ ಚಿತ್ರದಲ್ಲಿಯೇ ವ್ಯಕ್ತಪಡಿಸಿದ್ದೆ. ಇದರಲ್ಲಿ ನಾಯಕ ತಾನಾಯಿತು ತನ್ನ ಪಾಡಾಯಿತು ಎಂದು ಬದುಕುತ್ತಿರುತ್ತಾನೆ. ಆದರೂ ಆತನನ್ನು ಬಿಡದೇ ಕಾಡುವ ಜಾತಿ ವ್ಯವಸ್ಥೆಯ ಅನಿಷ್ಟಗಳನ್ನು ಸೂಕ್ಷ್ಮವಾಗಿ ತೊರಿಸುವಲ್ಲಿ ಯಶಸ್ವಿಯಾಗಿದ್ದೆ ಎಂದು ನಂಬಿದ್ದೇನೆ.

ಆದರೆ ‘ಕರ್ಣನ್’ ಚಿತ್ರದಲ್ಲಿ ನಾಯಕ ಅನ್ಯಾಯವನ್ನು ಸಹಿಸದ, ತನ್ನ(ತಳಸಮುದಾಯದ) ಜನಗಳಿಗಾಗಿ, ನ್ಯಾಯಕ್ಕಾಗಿ ಏನನ್ನು ಬೇಕಾದರೂ ಮಾಡುವ ಛಲವುಳ್ಳವನಾಗಿರುತ್ತಾನೆ. ಮಹಾಭಾರತದ ಕರ್ಣನ ತ್ಯಾಗ ಮತ್ತು ಧೈರ್ಯವನ್ನು ಈ ಚಿತ್ರದ ನಾಯಕನಲ್ಲಿ ಕಾಣಬಹುದು. ಪೌರಾಣಿಕ ಕರ್ಣನಿಗಿಂತ ವಿಭಿನ್ನವಾಗಿ ಹೋರಾಟ ಮಾಡಿ ತನ್ನ ಹಕ್ಕನ್ನು ಪಡೆಯುತ್ತಾನೆ’’ ಎನ್ನುತ್ತಾರೆ ಮಾರಿ ಸೆಲ್ವರಾಜ್.

ಶಿವಾಜಿ ಗಣೇಶನ್ ಮತ್ತು ರಜನಿಕಾಂತ್ ಕರ್ಣನಾಗಿ ನಟಿಸಿದ್ದ ಚಿತ್ರಗಳು ಉಂಟುಮಾಡಿದ ಸಂಚಲನವನ್ನು ಈ ಚಿತ್ರವು ಇನ್ನೂ ವಿಭಿನ್ನವಾಗಿ ಉಂಟುಮಾಡಬಹುದೆಂಬ ನಿರೀಕ್ಷೆಯನ್ನು ಚಿತ್ರಪ್ರೇಮಿಗಳಿಗೆ ಹುಟ್ಟಿಸಿದೆ. ತುದಿಗಾಲಿನಲ್ಲಿ ಚಿತ್ರಕ್ಕಾಗಿ ಕಾಯುವಂತೆ ಮಾಡಿದೆ.

– ಪ್ರತಾಪ್ ಹುಣಸೂರು


ಇದನ್ನು ಓದಿ: ಕೀಲಾರ ಟೆಂಟ್ ಹೌಸ್-4: ಮನುಷ್ಯನ ಆಳದ ಮಾನವೀಯ ತಂತುಗಳನ್ನು ಶೋಧಿಸುವ ಕೀಸ್ಲೋಸ್ಕಿ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...