ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆಗಳು ಮತ್ತು ಅತ್ಯಾಚಾರ ಕೃತ್ಯಗಳ ತನಿಖೆಯನ್ನು ಆರಂಭಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. ಪ್ರಕರಣದ ನಿರ್ಣಾಯಕ ಹಂತವಾಗಿ, ಶನಿವಾರ ದೂರುದಾರರು ಎಸ್ಐಟಿ ಅಧಿಕಾರಿಗಳ ಎದುರು ಹಾಜರಾಗಿದ್ದು, ತನಿಖೆಗೆ ಹೊಸ ಆಯಾಮ ದೊರಕಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ “ಸಾವಿರಕ್ಕೂ ಹೆಚ್ಚು ಮಂದಿಯನ್ನು, ಅದರಲ್ಲೂ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ” ಎಂದು ಗುರುತು ಬಯಸದ ದೂರುದಾರರೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದರು. ತಾವೇ ಹಲವಾರು ಮೃತದೇಹಗಳನ್ನು ಹೂತಿದ್ದು, ಅವುಗಳನ್ನು ಹೊರತೆಗೆಯಲು ಸಿದ್ಧವಿರುವುದಾಗಿಯೂ ಅವರು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಇಂದು ಮಂಗಳೂರಿನ ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ಎಸ್ಐಟಿ ತಂಡದ ಎದುರು ದೂರುದಾರರು ಹಾಜರಾಗಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಕೃತ್ಯಗಳ ಬಗ್ಗೆ ಅವರು ಎಸ್ಐಟಿ ಅಧಿಕಾರಿಗಳಿಗೆ ಸಮಗ್ರ ವಿವರಣೆ ನೀಡುವ ನಿರೀಕ್ಷೆಯಿದೆ. ಡಿಐಜಿ ಎಂ.ಎನ್. ಅನುಚೇತ್ ಅವರ ಸಮ್ಮುಖದಲ್ಲಿ ಈ ಮಹತ್ವದ ವಿಚಾರಣೆ ನಡೆಯಲಿದ್ದು, ಎಸ್ಐಟಿ ಅಧಿಕಾರಿಗಳು ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮತ್ತು ಮುಂದಿನ ತನಿಖೆಯ ರೂಪುರೇಷೆಯನ್ನು ಸಿದ್ಧಪಡಿಸಿಕೊಳ್ಳಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರಣೆಯು ಪ್ರಕರಣದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.
ಪೊಲೀಸ್ ಮಹಾ ನಿರ್ದೇಶಕ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರಂತಹ ಅನುಭವಿ ಅಧಿಕಾರಿಗಳು ಇದ್ದು, ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಪರಿಗಣಿಸಿ ಈ ತಂಡವನ್ನು ನಿಯೋಜಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಪ್ರದೇಶವು ಕಳೆದ ಕೆಲವು ವರ್ಷಗಳಿಂದ ವಿವಾದಗಳು ಮತ್ತು ಗಂಭೀರ ಆರೋಪಗಳು ಸುತ್ತುವರಿದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, 2012ರಲ್ಲಿ ನಡೆದ ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ರಾಜ್ಯಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯಲ್ಲಿನ ಲೋಪಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಡಿಜಿಟಲ್ ವೇದಿಕೆಗಳಲ್ಲಿ “ಧರ್ಮಸ್ಥಳದಲ್ಲಿ ಸರಣಿ ಕೊಲೆಗಳು ಮತ್ತು ಅತ್ಯಾಚಾರ ಕೃತ್ಯಗಳು ನಡೆದಿದ್ದು, ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ” ಎಂಬ ಗಂಭೀರ ಆರೋಪಗಳು ದೊಡ್ಡ ಪ್ರಮಾಣದಲ್ಲಿ ಹರಿದಾಡಲು ಶುರುವಾಗಿವೆ. ಈ ಆರೋಪಗಳ ಪ್ರಸಾರವನ್ನು ತಡೆಯಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚಾರಣಾಧೀನ ನ್ಯಾಯಾಲಯವು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ನ್ಯಾಯಾಲಯವು “ನಿರ್ಲಜ್ಜವಾಗಿ ಎಲ್ಲರನ್ನು ನಿರ್ಬಂಧಿಸುವ ಇದೆಂಥಾ ಆದೇಶ” ಎಂದು ಪ್ರಶ್ನಿಸಿ, ಮಾಧ್ಯಮ ಸ್ವಾತಂತ್ರ್ಯದ ಪರವಾಗಿ ನಿಂತಿತ್ತು. ಈ ಬೆಳವಣಿಗೆಗಳ ನಡುವೆಯೇ, ರಾಜ್ಯ ಸರ್ಕಾರವು ಇಂತಹ ಗಂಭೀರ ಆರೋಪಗಳ ಸತ್ಯಾಸತ್ಯತೆಯನ್ನು ಹೊರತರಲು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲು ನಿರ್ಧರಿಸಿತ್ತು. ಈ ಪ್ರಕರಣದ ಸೂಕ್ಷ್ಮತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ಎಸ್ಐಟಿ ತನಿಖೆ ಆರಂಭಿಸಿದೆ. ಇದೀಗ ಹೈಕೋರ್ಟ್ ಕೂಡ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಪ್ರಶ್ನಿಸಿದೆ.
ಧರ್ಮಸ್ಥಳ ಪ್ರಕರಣ: ಮಾಧ್ಯಮಗಳ ನಿರ್ಬಂಧ ಪ್ರಶ್ನಿಸಿದ ಹೈಕೋರ್ಟ್; ಆದೇಶದ ಸಿಂಧುತ್ವದ ಬಗ್ಗೆ ಗಂಭೀರ ಪ್ರಶ್ನೆಗಳು


