ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮುನ್ನ ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ನಾಯಕರು ಈಗ ಮತ್ತೆ ಟಿಎಂಸಿಗೆ ವಾಪಾಸ್ ಆಗುತ್ತಿದ್ದಾರೆ. ಇದರಿಂದ ಬಂಗಾಳದಲ್ಲಿ ದೀದಿ V/s ಮೋದಿ ಎಂಬ ಆಟಕ್ಕೆ ಮತ್ತಷ್ಟು ಕಳೆ ಬಂದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಚುನಾವಣೆಗೆ ಮೊದಲು ಎದುರಿಸಿದ ದೊಡ್ಡ ಸವಾಲು ಎಂದರೆ, ತಮ್ಮ ಪಕ್ಷದ ನಾಯಕರು ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಪಕ್ಷಾಂತರವಾದದ್ದು. ನಿರಂತರವಾಗಿ ನಡೆದ ಈ ಪ್ರಕ್ರಿಯೆಯಿಂದ ಬಂಗಾಳದಲ್ಲಿ ಟಿಎಂಸಿಗೆ ಮತ್ತೆ ಅಧಿಕಾರ ಸಿಗುವುದಿಲ್ಲ ಎಂದು ಬಿಜೆಪಿ ಪ್ರಚಾರಪಡಿಸಿತ್ತು.
ಆದರೆ, ಮೇ 2 ರಂದು ಬಂದ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಭರ್ಜರಿ ಬಹುಮತ ದೊರಕಿ, ಸರ್ಕಾರ ರಚಿಸಿದರು. ತೃಣಮೂಲ ಕಾಂಗ್ರೆಸ್ 292 ವಿಧಾನಸಭಾ ಸ್ಥಾನಗಳಲ್ಲಿ 213 ಸ್ಥಾನಗಳು ಮತ್ತು ಬಿಜೆಪಿ 77 ಸ್ಥಾನಗಳನ್ನು ಗಳಿಸಿದೆ.
ಈಗ, ಬಂಗಾಳದಲ್ಲಿ ರಿವರ್ಸ್ ಮೈಗ್ರೇಶನ್ ಹೊಸ ಪ್ರವೃತ್ತಿಯಾಗಿದ್ದು, ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್ಗೆ ಪಕ್ಷಾಂತರ ಮಾಡುವವರು ಹೆಚ್ಚಾಗಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ಪಕ್ಷಕ್ಕೆ ಮರು ಪ್ರವೇಶ ಕೋರಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ವಾಪಾಸು ಕರೆಸಿ-ಕೇರಳ ಅಸೆಂಬ್ಲಿ ನಿರ್ಣಯ ಮಂಡನೆ
ಉದಾಹರಣೆಗೆ, ಮಾಜಿ ಶಾಸಕ ಸೋನಾಲಿ ಗುಹಾ, ಮಾರ್ಚ್ನಲ್ಲಿ ತೃಣಮೂಲವನ್ನು ತೊರೆದ ನಂತರ “ನೀರಿನಿಂದ ಹೊರ ಬಂದ ಮೀನು ನಾನು” ಎಂದು ಹೇಳಿದ್ದರು. “ಮತ್ತೊಮ್ಮೆ ಟಿಎಂಸಿ ಧ್ವಜವನ್ನು ಹಿಡಿಯಲು ಬಯಸುತ್ತೇನೆ” ಎಂದು ಫುಟ್ಬಾಲ್ ಆಟಗಾರ, ರಾಜಕಾರಣಿ ದೀಪೇಂದು ಬಿಸ್ವಾಸ್, ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ. ಇನ್ನೂ ಪಿಟಿಐ ವರದಿಯ ಪ್ರಕಾರ ಅಂತಹ ಇತರ ಹೆಸರುಗಳಲ್ಲಿ ಸರಳಾ ಮುರ್ಮೂ ಮತ್ತು ಅಮಲ್ ಆಚಾರ್ಯ ಕೂಡ ಸೇರಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಾಜೀಬ್ ಬ್ಯಾನರ್ಜಿ ಕೂಡ ಪಕ್ಷಕ್ಕೆ ವಾಪಸ್ ಬರುವುದಾಗಿ ಹೇಳಿದ್ದಾರೆ.
“ನಾಯಕರು ಮಾತ್ರವಲ್ಲ, 7 ರಿಂದ 8 ಮಂದಿ ವಿಜೇತ ಶಾಸಕರು ಮತ್ತು ಬಿಜೆಪಿಯ 3 ರಿಂದ 4 ಮಂದಿ ಹಾಲಿ ಸಂಸದರು ತೃಣಮೂಲ ಕಾಂಗ್ರೆಸ್ ಸೇರಲು ಇಚ್ಛೆ ವ್ಯಕ್ತಪಡಿಸಿದ್ದಾರೆ” ಎಂದು ತೃಣಮೂಲ ವಕ್ತಾರ ಕುನಾಲ್ ಘೋಷ್ ತಿಳಿಸಿದ್ದಾರೆ. ಆದರೆ, ಪಕ್ಷದ ನಾಯಕತ್ವವು ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬ ಬಗ್ಗೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
“ಆದರೆ ನಾವು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕಾಗಿದೆ. ಈ ನಾಯಕರು ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಪಕ್ಷವನ್ನು ತೊರೆದಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಘೋಷ್ ಹೇಳಿದ್ದಾರೆ.
ಟಿಎಂಸಿಗೆ ಹಿಂದಿರುಗುವವರಲ್ಲಿ ಮತ್ತೆ ಕೇಳಿಬಂದಿರುವ ದೊಡ್ಡ ಹೆಸರು ಮುಕುಲ್ ರಾಯ್. ತೃಣಮೂಲ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡ ಮೊದಲ ನಾಯಕರಾದ ಮುಕುಲ್ ರಾಯ್. ಅವರ ಮಗ ಈಗ ಬಿಜೆಪಿಯನ್ನು ಟೀಕಿಸಿ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಹಿರಿಯ ನಾಯಕ ಮುಕುಲ್ ರಾಯ್ ಒಂದು ಮಾತನ್ನೂ ಹೇಳಿಲ್ಲ.
ಒಟ್ಟಾರೆ, ವಿಧಾನಸಭಾ ಚುನಾವಣೆಯಲ್ಲಿ ದೀದಿ V/s ಮೋದಿ ಎಂಬುದು ಜನಪ್ರಿಯವಾಗಿತ್ತು. ಟಿಎಂಸಿಯನ್ನು ಸೋಲಿಸಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ನಡೆಸಿತ್ತು. ಸುವೇಂದು ಅಧಿಕಾರಿ, ಮುಕುಲ್ ರಾಯ್ ಸೇರಿದಂತೆ ಹಲವು ನಾಯಕರು ಟಿಎಂಸಿ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಬಿಜೆಪಿ ಬಿಟ್ಟು ಟಿಎಂಸಿಗೆ ಸೇರಲು ಬಯಸುತ್ತಿದ್ದಾರೆ.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ: ಡಿಸಿ ರೋಹಿಣಿ ಸಿಂಧೂರಿ