Homeಮುಖಪುಟದಿಶಾ ರವಿಯ ಬಂಧನ ಒಂದೇ ಕಲ್ಲಲ್ಲಿ ಮೂರು ಹಕ್ಕಿಗಳನ್ನು ಹೊಡೆದ ಹಾಗೆ

ದಿಶಾ ರವಿಯ ಬಂಧನ ಒಂದೇ ಕಲ್ಲಲ್ಲಿ ಮೂರು ಹಕ್ಕಿಗಳನ್ನು ಹೊಡೆದ ಹಾಗೆ

- Advertisement -
- Advertisement -

ದೇಶವ್ಯಾಪಿ ರೈತ ಹೋರಾಟ ಮುಂದುವರೆಯುತ್ತಿರುವಾಗಲೇ ದೇಶದ್ರೋಹ ಮುಂತಾದ ಗಂಭೀರ ಆರೋಪಗಳ ಮೇಲೆ ದಿಶಾ ರವಿ ಎಂಬ ಬೆಂಗಳೂರಿನ ಇಪ್ಪತ್ತೊಂದು ವರ್ಷದ ಯುವ ಹೋರಾಟಗಾರ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ತಿಂಗಳುಗಟ್ಟಲೆಗಳಿಂದ ನಡೆಯುತ್ತ ಬಂದಿರುವ ರೈತ ಹೋರಾಟದ ಕುರಿತು ಹಾಗೂ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಬಳಸಿದ ಕೆಲವು ವಿಧಾನಗಳನ್ನು ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದು ಸಾರ್ವಜನಿಕ ಟೂಲ್‌ಕಿಟ್ ಚಾಲ್ತಿಯಲ್ಲಿದೆ. ಎಲ್ಲ ರೀತಿಯ ಚಳವಳಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಜನರ ಜೊತೆಗೆ ವಿಚಾರವಿನಿಮಯ ಮಾಡಲು ಇಂತಹ ಟೂಲ್‌ಕಿಟ್‌ಗಳನ್ನು ಬಳಸಲಾಗುತ್ತದೆ. ಇಂತಹದೊಂದು ಸಾರ್ವಜನಿಕವಾಗಿ ಲಭ್ಯವಿರುವ ಟೂಲ್‌ಕಿಟ್‌ಅನ್ನು ದೇಶದ ವಿರುದ್ಧ ನಡೆಯುತ್ತಿರುವ ಅಂತಾರಾಷ್ಟ್ರೀಯ ಷಡ್ಯಂತ್ರವೆಂದು ಬಿಂಬಿಸಿ, ಆ ದಾಖಲೆಯನ್ನು ಸಂಪಾದಿಸಿದವರಲ್ಲೊಬ್ಬರಾದ ಕಾರಣಕ್ಕೆ ದಿಶಾ ಅವರನ್ನು ಬಂಧಿಸಲಾಗಿದೆ.

ದೆಹಲಿ ಪೊಲೀಸರು ಇವರನ್ನು ಬಂಧಿಸಿದ ರೀತಿಯಲ್ಲಿ ಹಲವಾರು ತೊಂದರೆಗಳಿದ್ದವೆಂದು ಹಿರಿಯ ನ್ಯಾಯವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ. ರಾತ್ರೋರಾತ್ರಿ ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು, ಸ್ಥಳೀಯ ಪೊಲೀಸರಿಗೂ ತಿಳಿಸದೆ, ಸ್ಥಳೀಯ ಮ್ಯಾಜಿಸ್ಟ್ರೇಟ್ ನಾಯಾಲಯದ ಅನುಮತಿಯನ್ನೂ ಪಡೆಯದೆ, ದಿಶಾ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಅಲ್ಲಿ ಅವರ ಪರವಾಗಿ ವಕೀಲರೊಬ್ಬರು ಹಾಜರಾಗುವ ಮೊದಲೇ ಅವರ ಬಂಧನಕ್ಕೆ ಅನುಮತಿ ಪಡೆದ ವಿಧಾನದ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಒಂದೆಡೆ ದಿಶಾ ಅವರ ಬಂಧನದ ವಿರುದ್ಧ ವಿದ್ಯಾರ್ಥಿಗಳು, ಹೋರಾಟದ ಮುಂಚೂಣಿಯಲ್ಲಿರುವ ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ನಾಗರಿಕ ಸಮಾಜ ಪ್ರತಿಭಟಿಸುತ್ತಿದ್ದರೆ, ಇನ್ನೊಂದೆಡೆ ಆಡಳಿತ ಪಕ್ಷದ ಬೆಂಬಲಿಗರು ಸಂಘಟಿತವಾಗಿ ದಿಶಾ ಅವರ ತೇಜೋವಧೆ ನಡೆಸುತ್ತಿದ್ದಾರೆ. ಬೆಂಗಳೂರಿನ ಸಂಸದರಾದ ಪಿ ಸಿ ಮೋಹನ್ ಅವರೂ ಸೇರಿದಂತೆ ಬಹಳಷ್ಟು ಜನ ದಿಶಾ ಅವರನ್ನು ಮೃತ ಭಯೋತ್ಪಾದಕರಾದ ಅಜ್ಮಲ್ ಕಸಬ್ ಹಾಗೂ ಬುರ್ಹಾನ್ ವಾನಿ ಮುಂತಾದವರೊಂದಿಗೆ ಹೋಲಿಸಿದ್ದಾರೆ. ಯಾವ ಅಪರಾಧವೂ ಸಾಬೀತಾಗಿರದ ದಿಶಾ ಅವರನ್ನು ಅಪರಾಧ ಸಾಬೀತಾದ ಭಯೋತ್ಪಾದಕರೊಂದಿಗೆ ಹೋಲಿಸಿ ಅವರಂತೆಯೇ ಬಿಂಬಿಸುವ ಸಂಘಟಿತ ಯೋಜನೆ ಇದಾಗಿದೆ.

ದಿಶಾಳ ವಾಟ್ಸಾಪ್ ಚಾಟ್ಸ್‌, ತನಿಖಾ ಮಾಹಿತಿ ಸೋರಿಕೆ: ನ್ಯೂಸ್‌ ಚಾನೆಲ್‌ಗಳಿಗೆ ನೋಟಿಸ್!

ದಿಶಾ ಅವರ ಬಂಧನ ಹಾಗೂ ತೇಜೋವಧೆಯ ಹಿಂದೆ ಮೂರು ಮುಖ್ಯ ಉದ್ದೇಶಗಳಿವೆ:

1. ಅಂತಾರಾಷ್ಟ್ರೀಯ ಪರಿಸರ ಚಳವಳಿಯ ದೇಶದ ಆವೃತ್ತಿಯನ್ನು ಹತ್ತಿಕ್ಕುವುದು

ದಿಶಾ ಮುಖ್ಯವಾಗಿ ಪರಿಸರ ಹೋರಾಟಗಾರ್ತಿ. ಫ್ರೈಡೇಸ್ ಫಾರ್ ಫ್ಯೂಚರ್ ಎಂಬ ಹೆಸರಿನಡಿಯಲ್ಲಿ ಗ್ರೆಟಾ ಥನ್‌ಬರ್ಗ್ ಮುಂತಾದ ಯುವ ಹೋರಾಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿರುವ ಪರಿಸರ ಚಳವಳಿಯ ರಾಷ್ಟ್ರೀಯ ಆವೃತ್ತಿಯ ಸಂಸ್ಥಾಪಕರಲ್ಲೊಬ್ಬರು. ಜವಾಬ್ದಾರಿಯುತ ಸ್ಥಾನಗಳಲ್ಲಿರುವ ದೇಶಗಳು ಹಾಗೂ ಸಂಸ್ಥೆಗಳು ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ನಿಯಂತ್ರಿಸುವತ್ತ ತಕ್ಷಣವೇ ದಿಟ್ಟ ಹೆಜ್ಜೆಗಳನ್ನಿಡುವಂತೆ ಒತ್ತಡ ಹೇರುವುದು ಈ ಚಳವಳಿಯ ಮುಖ್ಯ ಧ್ಯೇಯ. ಇವರು ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವುದು ಇದೇ ಮೊದಲಲ್ಲ.

ಹಿಂದಿನ ವರ್ಷ ಕೇಂದ್ರ ಸರ್ಕಾರ ಪರಿಸರ ಪರಿಣಾಮ ಮಾಪನ ಕಾಯ್ದೆಗೆ ತಿದ್ದುಪಡಿ ತಂದಾಗ ಅದರ ಲೋಪದೋಷಗಳನ್ನು ಕುರಿತು ಫ್ರೈಡೇಸ್ ಫಾರ್ ಫ್ಯೂಚರ್ ಸಂಫಟನೆ ತನ್ನ ಜಾಲತಾಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದುದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಗಮನಕ್ಕೆ ಬಂದು, ಅವರು ದೆಹಲಿ ಪೊಲೀಸರಿಗೆ ಈ ಸಂಘಟನೆಯ ವಿರುದ್ಧ ಅನಧಿಕೃತ ಚಟುವಟಿಕೆಗಳ ತಡೆ (UAPA) ಕಾಯ್ದೆಯಡಿ ಮೊಕದ್ದಮೆ ಹೂಡುವಂತೆ ಆದೇಶಿಸಿದ್ದರು. ಹೀಗೆ ಒಂದರ ಹಿಂದೆ ಇನ್ನೊಂದು ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರೀ ದೇಶದೊಳಗಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮುಜುಗರ ಉಂಟುಮಾಡುತ್ತಿರುವ ಕಾರಣಕ್ಕೆ ದಿಶಾ ಹಾಗೂ ಆಕೆಯ ಸಂಘಟನೆಯ ವಿರುದ್ಧ ಕೇಂದ್ರ ಇಂತಹ ಕಠಿಣ ನಿಲುವು ತೆಗೆದುಕೊಳ್ಳುತ್ತಿದೆ.

2. ರೈತ ಹೋರಾಟವನ್ನು ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದಂತೆ ಬಿಂಬಿಸಿ ಅದಕ್ಕೆ ಸಿಗುತ್ತಿರುವ ಜನಮನ್ನಣೆ ಕ್ಷೀಣಿಸುವಂತೆ ಮಾಡುವುದು

ಕಳೆದ ಎರಡು ಮೂರು ವರ್ಷಗಳಿಂದ ಆಡಳಿತ ಪಕ್ಷವು ತನ್ನ ಸರ್ಕಾರದ ವಿರುದ್ಧ ನಡೆಯುವ ಜನಾಂದೋಲನಗಳೆಲ್ಲವನ್ನೂ ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳೆಂದೇ ಬಿಂಬಿಸುತ್ತಾ ಬಂದಿದೆ. ಈ ಆಂದೋಲನಗಳ ಪರ ಜನಾಭಿಪ್ರಾಯ ವಾಲುತ್ತಿರುವ ಸುಳಿವು ಸಿಕ್ಕಕೂಡಲೆ ಅದನ್ನು ಸಂಪೂರ್ಣವಾಗಿ ಬದಲಿಸಿ, ಜನಾಭಿಪ್ರಾಯ ಅವುಗಳ ವಿರುದ್ಧ ತಿರುಗಿಬೀಳುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಸತತ ಎರಡು ಮೂರು ತಿಂಗಳು ತೀವ್ರ ಚಳಿಯ ಮಧ್ಯದಲ್ಲಿ, ಬೀದಿಯಲ್ಲೇ ನೆಲೆಸಿ ನಡೆಸಿದ ಶಾಂತಿಯುತ ಹೋರಾಟವನ್ನು ಲೆಕ್ಕಿಸದೆ, ಗಣರಾಜ್ಯೋತ್ಸವದ ದಿನ ನಡೆದ ಒಂದೆರಡು ಹಿಂಸಾಚಾರದ ಘಟನೆಗಳನ್ನು ಉಪಯೋಗಿಸಿಕೊಂಡು ಇಡೀ ರೈತ ಹೋರಾಟವನ್ನೇ ಅಪಖ್ಯಾತಿಗೆ ಒಳಪಡಿಸುವುದು ಮೂಲ ಉಪಾಯವಾಗಿತ್ತು. ಆದರೆ ಅವರು ಅಂದುಕೊಂಡಂತೆ ರೈತ ಹೋರಾಟ ಅಲ್ಲಿಗೆ ಕುಂದಲಿಲ್ಲ. ಅದರ ಬದಲಾಗಿ ಇನ್ನೂ ಹೆಚ್ಚು ರೈತರು ಬೀದಿಗಿಳಿದರು. ಹೋರಾಟ ತೀವ್ರವಾಗುವ ಲಕ್ಷಣಗಳು ಕಂಡುಬಂದವು. ಇದರ ಬೆನ್ನಲ್ಲೇ ರಿಹಾನ್ನ, ಮೀನಾ ಹ್ಯಾರಿಸ್, ಗ್ರೆಟಾ ಮುಂತಾದ ಅಂತಾರಾಷ್ಟ್ರೀಯ ತಾರೆಯರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಆಡಳಿತ ಪಕ್ಷಕ್ಕೆ ಇರುಸುಮುರುಸಾಗುವಂತೆ ಮಾಡಿದರು.

ರೈತ ಹೋರಾಟದ ಪರವಾಗಿ ಸೃಷ್ಟಿಯಾಗುತ್ತಿರುವ ಇಂತಹ ಅಭೂತಪೂರ್ವ ಜನಾಭಿಪ್ರಾಯವನ್ನು ಹತ್ತಿಕ್ಕಲು ಅದನ್ನು ಅಂತಾರಾಷ್ಟ್ರೀಯ ಷಡ್ಯಂತ್ರವೆಂಬಂತೆ ಬಿಂಬಿಸಿವುದೊಂದೇ ದಾರಿಯಾಗಿತ್ತು. ಹಾಗಾಗಿ, ಮೊದಲು ಸರ್ಕಾರದ ಕೈಗೊಂಬೆಗಳಾಗಿರುವ ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಯರು ಸರ್ಕಸ್ ಕುದುರೆಗಳಂತೆ ಬಂದು ದೇಶದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆಯೆಂದು ಒದರಿ, ಕುಣಿದು ಹೋದರು. ಈಗ, ಎಲ್ಲ ಹೋರಾಟಗಳಲ್ಲೂ ಸರ್ವೇಸಾಮಾನ್ಯವಾದ ಒಂದು ಟೂಲ್‌ಕಿಟ್‌ಅನ್ನು ದೇಶದ್ರೋಹದ ಕೃತ್ಯವೆಂಬಂತೆ ಬಿಂಬಿಸಿ ಅದನ್ನು ಸಂಪಾದಿಸಿದವರೆಲ್ಲರನ್ನು ಬಂಧಿಸಲು ಆಡಳಿತ ವ್ಯವಸ್ಥೆ ಹವಣಿಸುತ್ತಿದೆ.

3. ಕೇಂದ್ರ ಸರ್ಕಾರವನ್ನು ಟೀಕಿಸದಂತೆ ಜನರಲ್ಲಿ, ಅದರಲ್ಲೂ ಯುವಕರಲ್ಲಿ, ಭಯ ಹುಟ್ಟಿಸುವುದು

ದೇಶದ್ರೋಹದಂತಹ ಗಂಭೀರ ಆರೋಪದಡಿ ಬಂಧಿತರಾಗಿರುವವರಲ್ಲಿ ದಿಶಾ ಮೊದಲಿಗರಲ್ಲ. ಭೀಮಾ ಕೋರೆಗಾಂವ್, ಪೌರತ್ವ ತಿದ್ದುಪಡಿ ಕಾಯ್ದೆ, ಹತ್ರಸ್ ಅತ್ಯಾಚಾರ ಪ್ರಕರಣ, ರೈತ ಹೋರಾಟ ಮುಂತಾದ ಹಲವು ಸಂದರ್ಭಗಳಲ್ಲಿ ಸಾಲುಸಾಲಾಗಿ ಜನರನ್ನು ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಕಾಯ್ದೆಯಡಿ ಬಂಧಿಸಲಾಗಿದೆ. ಯುವಕರಿಂದ ಹಿಡಿದು ಗಂಭೀರ ಆರೋಗ್ಯ ಸಮಸ್ಯೆಗಳಿರುವ ಮುದುಕರವರೆಗೂ, ಬಸರಿ ಹೆಂಗಸರಿಂದ ಹಿಡಿದು ಶೋಷಿತ ಹಾಗೂ ಅಲ್ಪಸಂಖ್ಯಾತ ವರ್ಗಗಳ ಜನರವರೆಗೂ, ಎಲ್ಲರೂ ಸೆರೆಮನೆ ಸೇರಿದ್ದಾರೆ. ಆದರೂ ದಿಶಾ ಅವರ ಬಂಧನ ಹಾಗೂ ಅವರ ಮೇಲೆ ನಡೆಯುತ್ತಿರುವ ಸಂಘಟಿತ ತೇಜೋವಧೆ ಸಾರ್ವಜನಿಕರಲ್ಲಿ, ಅದರಲ್ಲೂ ಸರ್ಕಾರದ ನಿಲುವುಗಳನ್ನು ಒಪ್ಪದವರಲ್ಲಿ, ದಿಗಿಲು ಹುಟ್ಟಿಸುವಂತದ್ದು.

ಆಕೆ ಸಾವಿರಾರು ಜನ ಹಿಂಬಾಲಕರನ್ನು ಹೊಂದಿರುವ ಪಳಗಿದ ಹೋರಾಟಗಾರ್ತಿಯಾಗಿರಲಿಲ್ಲ, ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದವಳಲ್ಲ. ಪರಿಸರದ ಮೇಲಿನ ಕಾಳಜಿಯಿಂದಾಗಿ ತನಗಾಗುವ ಮಟ್ಟದಲ್ಲಿ, ರೀತಿಯಲ್ಲಿ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದ್ದ ಇಪ್ಪತ್ತೊಂದು ವರ್ಷದ ಸಾಮಾನ್ಯ ಹುಡುಗಿ. ಕಂಪ್ಯೂಟರ್‌ನಲ್ಲಿ ಒಂದು ಸಾರ್ವಜನಿಕ ದಾಖಲೆಯನ್ನು ಸಂಪಾದಿಸಿದಕ್ಕಾಗಿ ದೇಶದ್ರೋಹದ ಆರೋಪ ಹೊರಿಸಿ ಪೊಲೀಸರು ಬಂದು ಕರೆದೊಯ್ದು ಬಂಧಿಸುತ್ತಾರೆಂದರೆ, ಯಾರನ್ನು ಬೇಕಾದರೂ ಯಾವಾಗಲಾದರೂ ಬಂಧಿಸಬಹುದೆಂಬ ಭಯ ಸಾಧಾರಣವಾಗಿಯೇ ಜನರಲ್ಲಿ ಮೂಡುತ್ತದೆ.

ಇದರಿಂದ ಜನರು ಸರ್ಕಾರವನ್ನು ಟೀಕಿಸುವ ಮೊದಲೂ ನೂರು ಬಾರಿ ಯೋಚಿಸುವಂತಾಗುತ್ತದೆ. ದಿಶಾಳ ಬಂಧನ ಹಾಗೂ ತೇಜೋವಧೆಯನ್ನು ಗಮನಿಸುವ ಪೋಷಕರು ಹೆದರಿ ತಮ್ಮ ಮಕ್ಕಳ ರಾಜಕೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಅವರ ಅಭಿಪ್ರಾಯಗಳನ್ನು ಎಲ್ಲೂ ಹೊರಹಾಕದಂತೆ ನಿಯಂತ್ರಿಸಲು ಶುರು ಮಾಡುತ್ತಾರೆ. ದೇಶದ ಭವಿಷ್ಯವಾದ ಯುವಕರು ತಮ್ಮ ರಾಜಕೀಯ ಅಭಿಪ್ರಾಯಗಳು ರೂಪುಗೊಳ್ಳುವ ಕಾಲಘಟ್ಟದಲ್ಲಿ ಸರ್ಕಾರದ ಹಾಗೂ ಪೋಷಕರ ಕಪಿಮುಷ್ಟಿಯಲ್ಲಿ ಸಿಲುಕಿ, ಒದ್ದಾಡಿ, ಕ್ರಮೇಣ ತಮ್ಮ ಸ್ವಂತ ಚಿಂತನೆಯ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸರ್ವಾಧಿಕಾರಿ ಯೋಜನೆಗಳಿಗೆ ಬೇಕಿರುವುದೇ ಇಂತಹದೊಂದು ಸಮಾಜದ ನಿರ್ಮಾಣ.

ಕೇಂದ್ರ ಸರ್ಕಾರವನ್ನು ಟೀಕಿಸುವುದು ದೇಶದ್ರೋಹಕ್ಕೆ ಸಮಾನವೆಂಬ ನಂಬಿಕೆ ಜನರಲ್ಲಿ ಬೆಳೆಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸರ್ಕಾರದ ನಿಲುವುಗಳ ವಿರುದ್ಧ ಶಾಂತಿಯುತ ಹೋರಾಟ ನಡೆಸುವುದನ್ನು ಪ್ರಜಾಪ್ರಭುತ್ವವನ್ನು ಪಾಲಿಸುವ ಎಲ್ಲ ದೇಶಗಳು ಹಾಗೂ ಸಮಾಜಗಳು ಒಪ್ಪುತ್ತವೆ. ಹೀಗಿರುವಾಗ, “ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಸರ್ಕಾರದ ವಿರುದ್ಧ ಹೋರಾಟ ನಡೆಸುವವರೆಲ್ಲ ದೇಶದ್ರೋಹದ ಆರೋಪದ ಮೇಲೆ ಜೈಲು ಸೇರುತ್ತಿರುವಾಗ ಸುಮ್ಮನಿದ್ದರೆ, ನಾಳೆ ಇಡೀ ವಿಶ್ವ ನೀವ್ಯಾವ ಸೀಮೆ ಪ್ರಜಾಪ್ರಭುತ್ವವೆಂದು ನಮ್ಮನ್ನು ಪ್ರಶ್ನಿಸುವ ಸಂದರ್ಭ ಒದಗಿ ಬರಬಹುದು.

ರಕ್ಷಿತ್ ಪೊನ್ನಾಥಪುರ

ರಕ್ಷಿತ್ ಪೊನ್ನಾಥಪುರ
ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಾರ್ವಜನಿಕ ನೀತಿಯ ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡ ರಕ್ಷಿತ್ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಕ್ರಿಯವಾಗಿ ಪ್ರತಿಕ್ರಿಯಿಸುವ ಯುವ ಚಿಂತಕ


ಇದನ್ನೂ ಓದಿ: ದಿಶಾ ರವಿ ಬಂಧನ ಖಂಡಿಸಿದ ‘ಭಾರತದ ಗ್ರೇಟಾ ಥನ್‌ಬರ್ಗ್’ ರಿಧಿಮಾ ಪಾಂಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...