Homeಕರ್ನಾಟಕಮನುಷ್ಯ ವಿರೋಧಿಗಳೊಂದಿಗೆ ಹೋಗದಿರಿ: ನಿರ್ಮಲಾನಂದನಾಥ ಶ್ರೀಗಳಿಗೆ ಬಹಿರಂಗ ಪತ್ರ

ಮನುಷ್ಯ ವಿರೋಧಿಗಳೊಂದಿಗೆ ಹೋಗದಿರಿ: ನಿರ್ಮಲಾನಂದನಾಥ ಶ್ರೀಗಳಿಗೆ ಬಹಿರಂಗ ಪತ್ರ

‘ನಿಲುಮೆ’ ಸಂಘಟನೆ ಆಯೋಜಿಸಿರುವ ‘ಸಾವರ್ಕರ್‌’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುತ್ತಿದ್ದು, ಅವರು ನಿಲುಮೆಯ ಜೊತೆ ಗುರುತಿಸಿಕೊಳ್ಳಬಾರದೆಂದು ಒತ್ತಾಯಿಸಲಾಗುತ್ತಿದೆ.

- Advertisement -
- Advertisement -

ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ಡಿಸೆಂಬರ್‌‌ 18 (ಶನಿವಾರ) ‘ವೀರ್‌ ಸಾವರ್ಕರ್‌- ದಿ ಮ್ಯಾನ್‌ ವೂ ಕುಡ್‌‌ ಹ್ಯಾವ್ ಪ್ರಿವೆಂಟೆಂಡ್‌ ಪಾರ್ಟಿಷನ್‌’ ಕೃತಿ ಬಿಡುಗಡೆಯಾಗಲಿವೆ. ಈ ಕಾರ್ಯಕ್ರಮವನ್ನು ನಿಲುಮೆ ಸಂಘಟನೆ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಆದಿಚುಂಚಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಸ್ತಕ ಬಿಡುಗಡೆ ಮಾಡಲಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಎನ್‌.ಮಹೇಶ್‌ ಪಾಲ್ಗೊಳ್ಳುವರು. ಕೃತಿಯ ರಚನಾಕಾರ ಉದಯ್ ಮಹೂರ್ಕರ್‌, ಪತ್ರಕರ್ತೆ ಶ್ರೀಲಕ್ಷ್ಮಿ ರಾಜಕುಮಾರ್‌‌ ಹಾಜರಿರಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಪಾಲ್ಗೊಳ್ಳುತ್ತಿರುವುದು ವಿರೋಧಕ್ಕೆ ಕಾರಣವಾಗಿದೆ. ಕೋಮು ವಿಚಾರಗಳೊಂದಿಗೆ ಗುರುತಿಸಿಕೊಂಡು ಸಮಾಜದ ಸ್ವಾಸ್ಥ್ಯಕ್ಕೆ ವಿರುದ್ಧವಿರುವ ನಿಲಮೆ ಸಂಘಟನೆಯ ಜೊತೆ, ಸಾವರ್ಕರ್‌ ವಿಚಾರಧಾರೆಗಳೊಂದಿಗೆ ನಿರ್ಮಲಾನಂದನಾಥರು ಗುರುತಿಸಿಕೊಳ್ಳಬಾರದು ಎಂದು ಆಕ್ಷೇಪ ವ್ಯಕ್ತವಾಗಿದೆ.

ಮಂಡ್ಯದ ಕವಿ ರಾಜೇಂದ್ರ ಪ್ರಸಾದ್‌ ಅವರು ವಿಸ್ತೃತ ಪತ್ರವೊಂದನ್ನು ಸ್ವಾಮೀಜಿಯವರಿಗೆ ಬರೆದಿದ್ದು, ಈಗ ವೈರಲ್ ಆಗಿದೆ. ರಾಜೇಂದ್ರ ಪ್ರಸಾದ್ ಅವರ ಪತ್ರವನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಪತ್ರಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.

ರಾಜೇಂದ್ರ ಪ್ರಸಾದ್ ಅವರ ಪತ್ರ


ಸ್ವಾಮೀಜಿಯವರಿಗೆ ನಮಸ್ಕಾರ,

ಇಂದು (12-12-2021) ಸೋಷಿಯಲ್ ಮೀಡಿಯಾದಲ್ಲಿ ತಾವು ‘ಸಾವರ್ಕರ್’ ಕುರಿತಾದ ಪುಸ್ತಕವೊಂದರ ಬಿಡುಗಡೆಗೆ ದಿವ್ಯ ಸಾನಿಧ್ಯವಹಿಸುತ್ತಿರುವ ಕುರಿತು ಪ್ರಕಟವಾದ ಆಹ್ವಾನ ಪತ್ರಿಕೆಯೊಂದನ್ನು ಗಮನಿಸಿದೆ. ಅದನ್ನು ಕಂಡು ಆಶ್ಚರ್ಯವೂ, ಅವಮಾನವೂ ಆಯಿತು.

ಒಕ್ಕಲಿಗರು ಸೇರಿದಂತೆ ಮಾಂಸಾಹಾರಿಗಳಾದ ಶೂದ್ರ ಸಮುದಾಯಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ, ಅಮಾನವೀಯವಾದ ವರ್ಣಾಶ್ರಮ ಧರ್ಮವನ್ನು ಇವತ್ತಿಗೂ ಬೆಂಬಲಿಸುವ, ಜಾತೀಯ ದೃಷ್ಟಿಯಿಂದ ನಮ್ಮನ್ನು ಅಸ್ಪೃಶ್ಯರಾಗಿ ನಡೆಸಿಕೊಳ್ಳುವ ಪೈಶಾಚಿಕ ಬ್ರಾಹ್ಮಣ ಮತವೇ ಉತ್ತಮವೆಂದು ಬಗೆವ ‘ನಿಲುಮೆ’ ಯಂತಹ ಬಿಜೆಪಿ ಪಕ್ಷವಾದಿ, ಕೋಮುವಾದಿ ಸಂಘಟನೆಯು ಏರ್ಪಡಿಸಿರುವ ಅಂತಹದ್ದೇ ಕೋಮುವಾದಿಯೂ ಆಗಿರುವ ‘ಸಾವರ್ಕರ್’ ಕುರಿತಾದ ಪ್ರಪಗಾಂಡ ಆಧಾರಿತ ಪುಸ್ತಕ ಬಿಡುಗಡೆಯಲ್ಲಿ ತಾವು ದಿವ್ಯಸಾನಿಧ್ಯ ವಹಿಸುವುದು ಎಷ್ಟರ ಮಟ್ಟಿಗೆ ಸರಿ? ಎಂಬುದನ್ನು ತಾವು ವಿವೇಚಿಸಬೇಕಿದೆ.

ಅಧಿಕಾರಸ್ಥರು ತಮ್ಮ ಗದ್ದುಗೆ ಉಳಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಹೋಗುತ್ತಾರೆ, ಯಾವ ಕೆಲಸ ಬೇಕಾದರೂ ಮಾಡುತ್ತಾರೆ. ಆದರೆ ಸ್ವಾಮಿ ಅವರಿಗೆ ಅಂತಹ ಅಗತ್ಯ ಇಲ್ಲ. ಸಮುದಾಯದ ಒಳಿತಿಗಾಗಿ ಕೆಲಸ ಮಾಡುವ ಸ್ವಾಮಿಯವರು, ಸಮುದಾಯ ಕೇಂದ್ರಿತ ಕಾರ್ಯಕ್ರಮಗಳಿಗೆ ದಿವ್ಯಸಾನಿಧ್ಯ ವಹಿಸಬೇಕೇ ಪರಂತು ಪ್ರಪಗಾಂಡ ಆಧಾರಿತ ಕಾರ್ಯಕ್ರಮಗಳಿಗೆ ಖಂಡಿತ ಅಲ್ಲ.

ದಕ್ಷಿಣ ಕರ್ನಾಟಕದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಒಕ್ಕಲಿಗ ಸಮುದಾಯದಲ್ಲಿ ಉಪಜಾತಿ ಧ್ರುವೀಕರಣವು ಅತಿಯಾಗಿ ಪಂಗಡಗಳು ವಿಪರೀತ ಆಗುತ್ತಿವೆ. ಇವುಗಳ ನಡುವೆ ವೈವಾಹಿಕ ಸಂಬಂಧಗಳೂ ಸಾಧ್ಯವಾಗದಷ್ಟು ಬಿಗಡಾಯಿಸಿಕೊಳ್ಳುತ್ತಿವೆ. ಬರ–ನೆರೆ, ಮಾರುಕಟ್ಟೆ ಧಾರಣೆ ಕುಸಿತ, ಸಿಗದ ಬೆಂಬಲ ಬೆಲೆ, ಸಕ್ಕರೆ ಕಾರ್ಖಾನೆಗಳು ಪಾವತಿಸದ ಬಾಕಿ, ಕೃಷಿ ಭೂಮಿಯ ಲ್ಯಾಂಡ್ ಮಾಫಿಯಾ ಹೀಗೆ ದಕ್ಷಿಣ ಕರ್ನಾಟಕದ ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಗಳು ಸಾಲು ಸಾಲು ಇವೆ. ಜನಸಾಮಾನ್ಯರು ಬದುಕಲು ಕಷ್ಟವಾಗುತ್ತಿರುವ ಹೊತ್ತಿನಲ್ಲಿ ‘ನಿಲುಮೆ’ ಯಂತಹ ಸಂಘಟನೆ ಜಾತಿ ಧರ್ಮಾಧಾರಿತವಾಗಿ ಜನರನ್ನು ಒಡೆಯಲು ಸತತವಾಗಿ ಪ್ರಯತ್ನಿಸುತ್ತಲೇ ಇವೆ. ಹೌದು! ಆ ಸಂಘಟನೆಯಲ್ಲಿ ಕೆಳಜಾತಿಯ ಕೆಲವು ಜನರು ಕೂಡ ಇದ್ದಾರೆ. ಆದರೆ ಅವರೆಲ್ಲರ ಆಲೋಚನೆಗಳು ಬ್ರಾಹ್ಮಣ್ಯದ ದಾಸ್ಯಕ್ಕೆ ತೊತ್ತಾಗಿವೆ. ಇವಾಗ ನೀವು ನಿಲ್ಲಬೇಕಾದ್ದು ನಮ್ಮ ಜನಗಳ ಜೊತೆಗೆ ಹೊರತು ಕೋಮುವಾದಿಗಳ ಅಂಗಳದಲ್ಲಿ ಖಂಡಿತ ಅಲ್ಲ. ಅದರಲ್ಲೂ ನಮ್ಮ ಸಂಸ್ಕೃತಿ, ಆಹಾರ ಮತ್ತು ಆಡುನುಡಿಗಳನ್ನು ಅಪಹಾಸ್ಯ ಮಾಡುವವರ ಸಂಗಡವಂತೂ ಅಲ್ಲವೇ ಅಲ್ಲ.

ಸ್ವಾಮಿಯವರು ವಿಜ್ಞಾನ, ವೇದಾಂತಗಳನ್ನೂ ಓದಿಕೊಂಡ ಹಾಗೆಯೇ ಸೂಫಿ ಕವಿಗಳ ಕಾವ್ಯವನ್ನು ತುಂಬಾ ಅಸ್ಥೆಯಿಂದ ಓದುವುದನ್ನ ನಾನು ಕೇಳಿ ತಿಳಿದಿದ್ದೇನೆ. ಹಾಗಿದ್ದ ಮೇಲೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗಳ ಕುರಿತು ಅವ್ಯಾಹತವಾದ ದ್ವೇಷ ಮತ್ತು ಈರ್ಷೆಯನ್ನು ಸದಾಕಾಲವೂ ಪ್ರಚೋದಿಸುತ್ತಲೇ ಬಂದಿರುವ ‘ನಿಲುಮೆ’ ಮತ್ತು ‘ಸಾವರ್ಕರ್’ ಅಂತಹ ಜನರ ನಡುವೆ ಕುಳಿತು ಯಾವ ಮಾತುಗಳನ್ನು ಆಡಲು ಸಾಧ್ಯವಿದೆ ಹೇಳಿ? ಅಲ್ಲದೆ ಮಹಾತ್ಮಾ ಗಾಂಧಿ ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಸಂಭ್ರಮಿಸುವ ಮನಸ್ಥಿತಿಗಳು ಕೂಡ ಇದೆ ‘ನಿಲುಮೆ’ ಗುಂಪಿನಲ್ಲಿವೆ. ಅಂತಹವರ ನಡುವೆ ನೀವು ಕುಳಿತುಕೊಳ್ಳುವುದು ನಿಮ್ಮ ಮತ್ತು ಶ್ರೀಮಠದ ಗೌರವಕ್ಕೆ ತಕ್ಕುನಾದುದೇ? ದಯವಿಟ್ಟು ಯೋಚಿಸಿರಿ.

ಶತಮಾನಗಳಿಂದ ಶೂದ್ರ ಸಮುದಾಯಗಳನ್ನು ಜ್ಞಾನ, ಅಕ್ಷರ, ಅಧಿಕಾರ, ಅನುಭೋಗಗಳಿಂದ ವಂಚಿಸುತ್ತಾ ಬಂದ ಬ್ರಾಹ್ಮಣ ಸಮುದಾಯವು ಈಗ ಶೂದ್ರ ಸಮುದಾಯದ ಸ್ವಾಮಿಗಳು ಮತ್ತು ರಾಜಕಾರಣಿಗಳನ್ನು ಆಕರ್ಷಿಸಿ ಜನಪದ ದೈವ – ಸಂಸ್ಕೃತಿಗಳನ್ನು ವೈದಿಕೀಕರಣಗೊಳಿಸುತ್ತಾ ಎರಡೂ ಬೇರೆಯಲ್ಲ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ಅಂತಹ ಭ್ರಮೆಗೆ ತಾವೂ ಸಿಲುಕಬಾರದು. ಉಪಖಂಡವು ವೈದಿಕ ಮತ ಸಂಸ್ಕೃತಿಗಿಂತಲೂ ಭಿನ್ನವಾದ ನೂರಾರು ಬುಡಕಟ್ಟು ಜಾತೀಯ ಸಂಸ್ಕೃತಿಗಳನ್ನು ಹೊಂದಿವೆ. ಇದು ನಿಮಗೆ ತಿಳಿಯದೇ ಇರುವ ವಿಚಾರವೇನಲ್ಲ. ಆದರೆ ನೆನೆಪಿಸಬೇಕಾದ ವಿಚಾರವಾಗಿದೆ. ಶೂದ್ರ ಸಮುದಾಯವೊಂದರ ಮಠದ ಸ್ವಾಮಿ ಅವರಾದ ನಿಮಗೆ ಬ್ರಾಹ್ಮಣ ಮಠಗಳು ಕೊಟ್ಟಿರುವ ಪ್ರಾಮುಖ್ಯತೆ ಎಷ್ಟರ ಮಟ್ಟಗಿನದು ಎಂಬುದು ಈ ವೇಳೆಗಾಗಲೇ ತಮಗೆ ಅರ್ಥವಾಗಿರಬಹುದು ಎಂದು ಭಾವಿಸುತ್ತೇನೆ. ನೀವೀಗ ಪಾಲ್ಗೊಳ್ಳುತ್ತಿರುವುದು ಅಂತಹದೇ ಒಂದು ಬ್ರಾಹ್ಮಣ್ಯದ ಕೂಟ. ಅವರು ಎಂದೂ ನಮ್ಮ ಸಂಸ್ಕೃತಿ, ಆಹಾರ ಮತ್ತು ಆಡುನುಡಿಗಳನ್ನ ಗೌರವದಿಂದ ಖಂಡಿಲ್ಲ. ಅಂತಹರೊಡನೆ ತಾವು ಇರುವುದನ್ನು ನಾವು ಒಪ್ಪಲಾರೆವು.

ಈ ಹಿಂದೆ ಶ್ರೀಕುವೆಂಪು ಅವರು ಶ್ರೀಮಠದ ಹಿರಿಯ ಸ್ವಾಮೀಜಿ ಅವರಿಗೆ ಹೇಳಿದ್ದ ಕಿವಿಮಾತನ್ನು ಇಲ್ಲಿ ಮತ್ತೆ ಉಲ್ಲೇಖಿಸುತ್ತಿದ್ದೇನೆ. “ವೈದಿಕ ಮಠಗಳನ್ನು ಅನುಕರಣೆ ಮಾಡುತ್ತಾ, ಪಾದಪೂಜೆ, ಅಡ್ಡಪಲ್ಲಕ್ಕಿ, ಕಿರೀಟಧಾರಣೆ ಇವುಗಳ ನಕಲಿಯಲ್ಲಿ ತೊಡಗಬೇಡಿ. ಏಕೆಂದರೆ ನೀವು ಭಾರತೀಯ ಸನಾತನ ಧರ್ಮದ ವೈದಿಕ ಆವೃತ್ತಿಯನ್ನು ಪುರಸ್ಕರಿಸುವುದಾದರೆ ಅದು ಕಟ್ಟ ಕಡೆಗೆ ಜಗದ್ಗುರುವಾಗುವ ನಿಮ್ಮ ಅರ್ಹತೆಯನ್ನೇ ತಿರಸ್ಕರಿಸುತ್ತದೆ. ನೀವು ರಾಮಕೃಷ್ಣ ಮಿಶನ್‌ನ ರೀತಿ ನಿಯಮಗಳನ್ನೂ ಧ್ಯೇಯ-ಧೋರಣೆಗಳನ್ನೂ ತಿಳಿದುಕೊಂಡು ಆ ರೀತಿ ವರ್ತಿಸಿ, ಇಡೀ ಶೂದ್ರ ಸಮುದಾಯವನ್ನು ಬದಲಾಯಿಸುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ…”

ಇವತ್ತಿಗೆ ಮುಂದುವರಿದು ಹೇಳುವುದಾದರೆ ‘ಅನಗತ್ಯವಾದ ಪ್ರಪಗಾಂಡ ಆಧಾರಿತ ಬ್ರಾಹ್ಮಣರ ಕೂಟಗಳಲ್ಲಿ ದಿವ್ಯ ಸಾನಿಧ್ಯವಹಿಸುವುದು, ಅವರನ್ನು ಅನಗತ್ಯವಾಗಿ ಶ್ರೀಮಠಕ್ಕೆ ಕರೆಸಿ ಆತಿಥ್ಯ ವಹಿಸುವುದು, ಬಲಪಂಥೀಯ ರಾಜಕಾರಣಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದು/ಬೆಂಬಲಿಸುವುದು, ಜನಪದ ಸಾಮಾನ್ಯ ಆಚರಣೆಗಳನ್ನು ಕೈಬಿಟ್ಟು ವೈದಿಕ ಸಂಪ್ರದಾಯದ ಆಚರಣೆಗಳಿಗೆ ಪ್ರಾಮುಖ್ಯತೆ ಕೊಡುವುದು – ಇದೆಲ್ಲವನ್ನು ಬಿಟ್ಟು ಸಮುದಾಯದ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ, ಅಭಿವೃದ್ದಿಗಾಗಿ ಶ್ರಮಿಸುವ ಸ್ವಾಮಿಯವರಾಗಬೇಕು’ ಎಂಬುದು ನನ್ನಂತಹ ಹಲವರ ನಿರೀಕ್ಷೆ.

ಶ್ರೀಗಳು ಇದಕ್ಕೆ ಪ್ರತಿಕ್ರಿಯೆ ಬರೆಯಬೇಕು ಎಂದು ನಾನು ಬಯಸುವುದಿಲ್ಲ. ನಿಮ್ಮ ನಡೆಯೇ ನಮಗೆ ಉತ್ತರವೂ, ಮಾರ್ಗದರ್ಶನವೂ ಆಗಿರುತ್ತದೆ ಎಂದು ಭಾವಿಸುತ್ತೇನೆ. ಶ್ರೀಮಠವು ರಾಜಕೀಯ ಬಂಡವಾಳದ ಕೇಂದ್ರವಾಗಿಯಷ್ಟೇ ಉಳಿಯದೇ ಸಮುದಾಯದ ಸಮಸ್ತರ ಒಳಿತಿನ ಕೇಂದ್ರವಾಗಲಿ ಎಂದು ಬಯಸುತ್ತೇನೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ
(ರಾಜೇಂದ್ರ ಪ್ರಸಾದ್, ಮಂಡ್ಯ)

ಇದನ್ನೂ ಓದಿರಿ: ಕಾದಂಬರಿ, ರಂಗಕೃತಿಗೆ ಎಡಪಂಥೀಯ ಧೋರಣೆ ಆಧಾರ: ಮೈಮ್‌ ರಮೇಶ್

ಈ ಪತ್ರಕ್ಕೆ ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ. “ಇದನ್ನು ಸ್ವಾಮೀಜಿಯವರಿಗೆ ಯಾರಾದರೂ ಕಳುಹಿಸಿ” ಎಂದು ಚಿಂತಕ ಕೀಲಾರ ನಾಗೇಗೌಡ ಅವರು ಕೋರಿದ್ದಾರೆ. ಜೊತೆಗೆ ಮತ್ತೊಂದು ಪೋಸ್ಟ್‌‌ ಮಾಡಿರುವ ನಾಗೇಗೌಡ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ನಿರ್ಮಲಾನಂದನಾಥ ಸ್ವಾಮಿಗಳು , ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಈ ಪತ್ರವನ್ನು ಒಮ್ಮೆ ಓದಲಿ. ಚಿಕ್ಕ ಬಳ್ಳಾಪುರದ ಆದಿ ಚುಂಚನಗಿರಿ ಶಾಖಾ ಮಠದಲ್ಲಿದ್ದಾಗ ನೀವು ಹೀಗಿರಲಿಲ್ಲ. ಕುವೆಂಪು , ದೇಜಗೌ ನಿಮಗೆ ಆದರ್ಶವಾಗಲಿ. ಜನರ ನಡುವೆ ದ್ವೇಷದ ಬೆಂಕಿ ಧಗ ಧಗಿಸುವಂತೆ ಮಾಡುವ ಸಂಘಟನೆಗಳ ಜೊತೆ ಗುರುತಿಸಿಕೊಳ್ಳುವದು ನೀವು ಕುಳಿತ ಪೀಠಕ್ಕೆ ಶೋಭೆ ತರುವದಿಲ್ಲ. ಕರ್ನಾಟಕವನ್ನು ತಮ್ಮ ಕೋಮುವಾದಿ ಕೋಟೆಯನ್ನಾಗಿ ಮಾಡಿಕೊಳ್ಳಲು ಒಕ್ಕಲಿಗರ ಓಟ್ ಬ್ಯಾಂಕ್ ಅವರಿಗೆ ಬೇಕಾಗಿದೆ. ಅದಕ್ಕಾಗಿ ನಿಮ್ಮನ್ನು ಆಹ್ವಾನಿಸಿದ್ದಾರೆ. (ನಿಮ್ಮ ಮೇಲಿನ ಪ್ರೀತಿ, ಗೌರವದಿಂದ ಅಲ್ಲ) ಈಗಲೂ ಕಾಲ ಮಿಂಚಿಲ್ಲ. ಒಮ್ಮೆ ಯೋಚಿಸಿ‌. ದಯವಿಟ್ಟು ಭಾಗವಹಿಸಬೇಡಿ” ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ್‌ ಬೆಳಗಲಿಯವರು ಕೋರಿದ್ದಾರೆ.


ಇದನ್ನೂ ಓದಿರಿ: ಶೋಷಿತರ ಪ್ರಬಲ ಮಿತ್ರ ಅವರದ್ದೇ ಆದ ಸಂಘಟನೆ: ಜಸ್ಟೀಸ್ ಕೆ.ಚಂದ್ರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...