ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ ದಿನ ಸಂಜೆ ಇತರ ನ್ಯಾಯಮೂರ್ತಿಗಳನ್ನು ಡಿನ್ನರ್ಗೆ ಕರೆದೊಯ್ದು, ಉತ್ತಮ ವೈನ್ ಕೊಡಿಸಿದ್ದೆ ಎಂದು ನಿವೃತ್ತ ಸಿಜೆಐ ರಂಜನ್ ಗೊಗೊಯ್ ಅವರು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದರು. ‘ಐತಿಹಾಸಿಕ ಅಯೋಧ್ಯೆ ತೀರ್ಪಿನ ಸಂಭ್ರಮಾಚರಣೆ’ ಎಂದು ಫೋಟೋ ಶೀರ್ಷಿಕೆಯಲ್ಲಿ ಬರೆದಿದ್ದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವಿವಾದಾತ್ಮಕ ವಿಷಯದ ಕುರಿತು ತೀರ್ಪು ನೀಡಿದ ನಂತರ ನ್ಯಾಯಮೂರ್ತಿಗಳು ಸಂಭ್ರಮಾಚರಣೆ ಮಾಡಿದ್ದು ಸರಿಯೇ ಪ್ರಶ್ನೆ ಕೇಳಿಬಂದಿದೆ.
ವಿವಾದಿತ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಬಗ್ಗೆ ತೀರ್ಪು ಪ್ರಕಟಿಸಿದ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ತಮ್ಮ ಆತ್ಮ ಚರಿತ್ರೆ “ಜಸ್ಟೀಸ್ ಫಾರ್ ದಿ ಜಡ್ಜ್” ಎಂಬ ಪುಸ್ತಕದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನೀಡಿದ ದಿನದ ಸಂಜೆಯನ್ನು ವಿವರಿಸಿದ್ದಾರೆ. ‘ಮಹತ್ವದ ಅಯೋಧ್ಯೆ ತೀರ್ಪಿನ ಸಂಭ್ರಮಾಚರಣೆ’ ಎಂಬ ಶೀರ್ಷಿಕೆಯೊಂದಿಗೆ ಅಂದು ಪೀಠದಲ್ಲಿದ್ದ ಇತರ ನ್ಯಾಯಾಧೀಶರೊಂದಿಗೆ ಐಷಾರಾಮಿ ಹೋಟೆಲ್ನಲ್ಲಿ ಊಟ ಮಾಡುತ್ತಿರುವ ಮತ್ತು ಒಟ್ಟಿಗೆ ಕೈಜೋಡಿಸಿ ನಿಂತಿರುವ ಫೋಟೋಗಳು ಪುಸ್ತಕದಲ್ಲಿವೆ.
ಈ ಬಗ್ಗೆ ಎನ್ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ‘ವಿವಾದಿತ ಅಯೋಧ್ಯೆ ತೀರ್ಪು ಸಂಭ್ರಮಾಚರಣೆಯ ವಿಷಯವೇ’ ಎಂಬ ಪ್ರಶ್ನೆಗೆ ಉತ್ತರಿಸಿರುವ ರಂಜನ್ ಗೊಗೊಯ್, ಪುಸ್ತಕದಲ್ಲಿನ ಫೋಟೋ ಶೀರ್ಷಿಕೆಯಲ್ಲಿ ಇರುವ ಪದಗಳನ್ನು ನಿರಾಕರಿಸಿ, “ಅದು ಆಚರಣೆಯಲ್ಲ, ಐದು ಜನ ನ್ಯಾಯಾಧೀಶರು ಈ ತೀರ್ಪಿಗಾಗಿ ನಾಲ್ಕು ತಿಂಗಳನ್ನು ಕಳೆದುಕೊಂಡೆವು. ಅದನ್ನು ನಾನು ಹೇಗೆ ಮರುಗಳಿಸುವುದು? ಅದಕ್ಕಾಗಿ ನಾಲ್ಕು ತಿಂಗಳ ಪ್ರಯಾಸಕರ ಕೆಲಸಗಳ ನಂತರ ಸ್ನೇಹಿತರುಗಳು ನಡೆಸಿದ ಸಭೆ. ಹೊರಗೆ ಊಟ ಮಾಡುವುದು ಅಪರಾಧವಲ್ಲ. ನಮ್ಮ ನ್ಯಾಯಾಧೀಶರುಗಳು ಸತತ ಪರಿಶ್ರಮದ ನಡುವೆ ತೆಗೆದುಕೊಂಡ ಸಣ್ಣ ವಿರಾಮ ಅದು” ಎಂದು ಹೇಳಿದ್ದಾರೆ.
ಎನ್ಡಿಟಿವಿಯ ಅನುಭವಿ ಪತ್ರಕರ್ತ ಶ್ರೀನಿವಾಸನ್ ಜೈನ್ ಕಠಿಣ ಪ್ರಶ್ನೆಗಳನ್ನು ನಿವೃತ್ತ ಸಿಜೆಐಗೆ ಕೇಳಿದ್ದಾರೆ. ನೀವು ಬಹಳ ಪ್ರಯಾಸಕರವಾಗಿ ಈ ತೀರ್ಪನ್ನು ನಿಭಾಯಿಸಿದ್ದೆವು, ಕೆಲಸ ಮುಗಿದಿದೆ ಎಂದು ಹೇಳಿಕೆ ನೀಡಿದ್ದೀರಿ ಎಂಬ ಪ್ರಶ್ನೆಯನ್ನು ತುಂಡರಿಸಿದ ಗೊಗೊಯ್ ನಾನು ಹಾಗೆ ಹೇಳಿಕೆ ನೀಡಿಲ್ಲ ಎಂದರು. ಅಲ್ಲದೆ ನೀವು ಏಕೆ ಕೆಲವು ವಾಕ್ಯಗಳನ್ನು ತೆಗೆದುಕೊಳ್ಳುತ್ತಿರಿ? ಆ ಸಂದರ್ಭದಲ್ಲಿ ನಾನು ನೀಡಿದ ಪೂರ್ಣ ಹೇಳಿಕೆಯನ್ನು ಗಮನಿಸಿ ಎಂದರು.
ನೀವು ನೀಡಿದ ತೀರ್ಪಿನಿಂದ ಬಹಳಷ್ಟು ಜನ ಬಹಳಷ್ಟು ಕಳೆದುಕೊಂಡ ನೋವಿನ ಪರಿಸ್ಥಿತಿಯಲ್ಲಿದ್ದರು. ಅಂದು ನೀವು ಆಚರಣೆ ಮಾಡಿ ಊಟ ಮಾಡಿದ ಫೋಟೊ ಹಾಕುವುದು ಅಸೂಕ್ಷ್ಮತೆಯಲ್ಲವೇ ಎಂಬ ಪ್ರಶ್ನೆಗೆ ಸಿಜೆಐ ಕೆಂಡಮಂಡಲವಾದರು. “ಮಿಸ್ಟರ್ ಶ್ರೀನಿವಾಸನ್ ಒಬ್ಬ ಪತ್ರಕರ್ತರಾಗಿ ನೀವು ಬಹಳಷ್ಟು ಜನರ ನೋವಿಗೆ ಕಾರಣರಾಗುತ್ತೀರಿ, ನಿಮಗದು ಗೊತ್ತೆ? ಹಾಗೆಂದು ನೀವು ಡಿನ್ನರ್ಗೆ ಹೋಗುವುದಿಲ್ಲವೇ? ನೀವು ಏನೂ ತಿನ್ನದೆ ಮನೆಯಲ್ಲಿಯೇ ಕುಳಿದು ದುಃಖಿಸುತ್ತೀರೆ? ನನ್ನ ಸಂದರ್ಶನ, ಸ್ಟೋರಿ ಅರ್ಧಸತ್ಯ, ಸುಳ್ಳುಗಳಿಂದ ಕೂಡಿದ್ದು ಇತರರಿಗೆ ನೋವು ನೀಡಿದೆ ಎಂದು ನೀವು ಉಳಿದೆಲ್ಲಾ ದಿನ ದುಃಖಿಸುತ್ತೀರಾ? ನಾಲ್ಕು ತಿಂಗಳ ಶ್ರಮದ ನಂತರ ಊಟ ಮಾಡಿದ್ದು ತಪ್ಪಲ್ಲ” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
“ತೀರ್ಪಿನ ನಂತರ, ಸೆಕ್ರೆಟರಿ ಜನರಲ್ ಅವರು ಕೋರ್ಟ್ ನಂ 1 ರ ಹೊರಗಿನ ನ್ಯಾಯಾಧೀಶರ ಗ್ಯಾಲರಿಯ ಅಶೋಕ ಚಕ್ರದ ಕೆಳಗೆ ಫೋಟೋ ಸೆಷನ್ ಅನ್ನು ಆಯೋಜಿಸಿದರು. ಸಂಜೆ ನಾನು ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ತಾಜ್ ಮಾನ್ಸಿಂಗ್ ಹೋಟೆಲ್ಗೆ ಊಟಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಲಭ್ಯವಿರುವ ಅತ್ಯುತ್ತಮವಾದ ವೈನ್ ಬಾಟಲಿಯನ್ನು ಹಂಚಿಕೊಂಡು, ನಾವು ಚೈನೀಸ್ ಆಹಾರವನ್ನು ಸೇವಿಸಿದೆವು. ಹಿರಿಯವನಾಗಿ ನಾನೇ ಅಂದು ಬಿಲ್ಲನ್ನು ಪಾವತಿಸಿದೆ” ಎಂದು ಗೊಗೊಯ್ ಬರೆದಿದ್ದಾರೆ.
ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸ ದಿನ: ರಾಮ್ ಕೆ ನಾಮ್ | ರಾಮನ ಹೆಸರಿನಲ್ಲಿ | In the name God; ಸಾಕ್ಷ್ಯಚಿತ್ರ ನೋಡಿ
ರಂಜನ್ ಗೊಗೊಯ್ ಸುಪ್ರೀಂಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಬಾಬರಿ ಮಸೀದಿ ವಿವಾದದ ತೀರ್ಪು ನೀಡಿದ ಐದು ನ್ಯಾಯಾಮೂರ್ತಿಗಳ ಸಂವಿಧಾನ ಪೀಠದಲ್ಲಿ ಗೊಗೊಯ್ ನಂತರ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಇದ್ದರು.
ರಂಜನ್ ಗೊಗೊಯ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ತನ್ನ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣ, 2018 ರಂದು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬರೆದಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ: ಬಾಬರಿಗಿಂತ 4 ಪಟ್ಟು ದೊಡ್ಡ ಮಸೀದಿ – ಮಸೀದಿಗಿಂತ 6 ಪಟ್ಟು ದೊಡ್ಡ ಆಸ್ಪತ್ರೆ!