Homeಮುಖಪುಟತಮಿಳು ನಾಡಗೀತೆಯು ಪ್ರಾರ್ಥನೆಯಾಗಿದ್ದು, ಅದನ್ನು ಹಾಡುವಾಗ ಎದ್ದುನಿಲ್ಲಬೇಕಾಗಿಲ್ಲ: ಮದ್ರಾಸ್ ಹೈಕೋರ್ಟ್

ತಮಿಳು ನಾಡಗೀತೆಯು ಪ್ರಾರ್ಥನೆಯಾಗಿದ್ದು, ಅದನ್ನು ಹಾಡುವಾಗ ಎದ್ದುನಿಲ್ಲಬೇಕಾಗಿಲ್ಲ: ಮದ್ರಾಸ್ ಹೈಕೋರ್ಟ್

- Advertisement -
- Advertisement -

ತಮಿಳುನಾಡಿನ ನಾಡಗೀತೆಯಾದ ‘ತಮಿಳು ತಾಯ್‌ ವಾಳ್ತ್‌‌’ ಕೇವಲ ಪ್ರಾರ್ಥನಾ ಗೀತೆಯಾಗಿದ್ದು, ಅದು ರಾಷ್ಟ್ರಗೀತೆಯಲ್ಲ, ಆದ್ದರಿಂದ ಅದನ್ನು ಹಾಡುವಾಗ ಪ್ರತಿಯೊಬ್ಬರೂ ಎದ್ದು ನಿಲ್ಲಬೇಕಾದ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಪೀಠವು ತೀರ್ಪು ನೀಡಿದೆ. 2018 ರಲ್ಲಿ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪೊಲೀಸರು ‘ನಾಮ್ ತಮಿಳರ್ ಕಚ್ಚಿ’ (NTK) ಪದಾಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಾಗ ಮದ್ರಾಸ್‌ ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್ ಅವರು ಈ ತೀರ್ಪು ನೀಡಿದ್ದಾರೆ.

2018 ರ ಜನವರಿ 24 ರಂದು ಕಂಚಿ ಕಾಮಕೋಟಿ ಪೀಠದ ಮಠಾಧೀಶ ವಿಜಯೇಂದ್ರ ಸರಸ್ವತಿಯವರ ಉಪಸ್ಥಿತಿಯಲ್ಲಿ ಚೆನ್ನೈನ ಸಂಗೀತ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ತಮಿಳು-ಸಂಸ್ಕೃತ ನಿಘಂಟನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ನಾಡಗೀತೆ ‘ತಮಿಳು ತಾಯ್ ವಾಳ್ತ್‌‌’ ನುಡಿಸುವಾಗ, ವಿಜಯೇಂದ್ರ ಸರಸ್ವತಿಯವರು ಕುಳಿತಿದ್ದರು. ಇದರ ವಿರುದ್ದ ಆಕ್ರೋಶ ವ್ಯಕ್ತವಾಗಿ ಸಾಕಷ್ಟು ಚರ್ಚೆಯು ನಡೆದಿತ್ತು.

ಇದರ ವಿರುದ್ದ ಪ್ರಸ್ತುತ NTK ಯ ನಾಯನಾಗಿರುವ, ಈ ಹಿಂದೆ ‘ತಮಿಳರ್ ದೇಸಿಯ ಮುನ್ನನಿ’ ಯ ಭಾಗವಾಗಿದ್ದ ಕಾನ್ ಇಲಂಗೋ ಮತ್ತು ಅವರ ಸಂಗಡಿಗರು ರಾಮೇಶ್ವರಂನಲ್ಲಿರುವ ಕಂಚಿ ಮಠದ ಶಾಖೆಯನ್ನು ಪ್ರವೇಶಿಸಿ, ಶಂಕರಾಚಾರ್ಯರ ವಿರುದ್ದ ಘೋಷಣೆಗಳನ್ನು ಕೂಗಿದ್ದರು.

ಇದನ್ನೂ ಓದಿ:ನಾಡ ಧ್ವಜ, ನಾಡಗೀತೆಗೆ ಅವಮಾನ ಮಾಡಿದವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸ್ಥಾನ: ತೀವ್ರ ತರಾಟೆ

ಈ ವೇಳೆ ಅವರು ಪಾದರಕ್ಷೆ ಧರಿಸಿ ಮಠದ ಆವರಣ ಪ್ರವೇಶಿಸಿದ್ದಾರೆ, ಜೊತೆಗೆ ಅವರು ಮಠವನ್ನು ಪ್ರವೇಶಿಸಿದ್ದರ ವಿರುದ್ದ ವ್ಯವಸ್ಥಾಪಕರು ಪ್ರತಿಭಟಿಸಿದಾಗ ಅವರಿಗೆ ಬೆದರಿಕೆ ಕೂಡಾ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ, ಅವರ ವಿರುದ್ಧ ಗಲಭೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಎಫ್‌ಐಆರ್‌ ಅನ್ನು ಪ್ರಶ್ನಿಸಿ ಇಳಂಗೋ ಅವರು ಅರ್ಜಿ ದಾಖಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆಗೆ ಅನುಮತಿಸಿದ ಮದ್ರಾಸ್ ಹೈಕೋರ್ಟ್, ತಮಿಳು ತಾಯ್ ವಾಳ್ತ್‌‌ ರಾಷ್ಟ್ರಗೀತೆ ಅಲ್ಲವಾದ್ದರಿಂದ ಅದನ್ನು ಹಾಡಿದಾಗ ಅಲ್ಲಿರುವವರು ಎದ್ದು ನಿಲ್ಲುವ ಯಾವುದೇ ಶಾಸನಬದ್ಧ ಅಥವಾ ಕಾರ್ಯಕಾರಿ ಆದೇಶವಿಲ್ಲ ಎಂದು ಸೂಚಿಸಿದ್ದಾರೆ.

1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆಯ ಸೆಕ್ಷನ್ 3 ರ ಪ್ರಕಾರ ರಾಷ್ಟ್ರಗೀತೆ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅಂತಹ ಹಾಡುಗಾರಿಕೆಯಲ್ಲಿ ತೊಡಗಿರುವ ಸಭೆಗೆ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ನೀಡಬಹುದಾಗಿದೆ” ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಪಟ್ಟುಬಿಡದೇ ಸಾಹಿತ್ಯ ಸಮ್ಮೇಳನ ಆರಂಭಿಸಿದ ಚಿಕ್ಕಮಗಳೂರು ಕಸಾಪ.. ಸಂಘಪರಿವಾರಕ್ಕೆ ಮುಖಭಂಗ

“ಸಂವಿಧಾನದ ಅನುಚ್ಛೇದ 51A(a) ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಆದೇಶಿಸುತ್ತದೆ. ರಾಷ್ಟ್ರಗೀತೆಯನ್ನು ಹಾಡುವಾಗ ಗೌರವಯುತವಾಗಿ ಎದ್ದುನಿಂತು ಹಾಡುವವರೊಂದಿಗೆ ಸೇರಿ ಹಾಡದಿದ್ದರೆ ಅದು ರಾಷ್ಟ್ರಗೀತೆಗೆ ಅಗೌರವವಾಗಿದೆ ಎಂದು ಹೇಳಲಾಗುವುದಿಲ್ಲ ಸುಪ್ರೀಂ ಕೋರ್ಟ್ ಹೇಳಿದೆ”.

“ಆದರೆ ತಮಿಳಿನ ತಾಯ್ ವಾಳ್ತ್‌‌ಗೆ ಅತ್ಯುನ್ನತ ಗೌರವ ನೀಡಬೇಕು. ತಮಿಳು ತಾಯ್ ವಾಳ್ತ್‌‌ ಹಾಡಿದಾಗ ಪ್ರೇಕ್ಷಕರು ಸಾಂಪ್ರದಾಯಿಕವಾಗಿ ಎದ್ದು ನಿಲ್ಲುತ್ತಾರೆ ಎಂಬುದು ನಿಜ. ಆದರೆ ಗೌರವವನ್ನು ತೋರಿಸಬಹುದಾದ ಏಕೈಕ ವಿಧಾನ ಎದ್ದು ನಿಲ್ಲುವುದೆ ಆಗಿದೆಯೆ ಎಂಬುದು ಪ್ರಶ್ನೆ. ನಾವು ಬಹುತ್ವ ಮತ್ತು ವೈವಿಧ್ಯತೆಯನ್ನು ಆಚರಿಸಿದಾಗ, ಗೌರವವನ್ನು ತೋರಿಸಲು ಒಂದೇ ಒಂದು ಮಾರ್ಗವಿದೆ ಎಂದು ಒತ್ತಾಯಿಸುವುದು ಬೂಟಾಟಿಕೆಯಿಂದ ಕೂಡಿದೆ” ಎಂದು ಅವರು ಹೇಳಿದ್ದಾರೆ.

“ಸನ್ಯಾಸಿಯು ಮುಖ್ಯವಾಗಿ ಧರ್ಮನಿಷ್ಠೆಯ ಜೀವನವನ್ನು ನಡೆಸುತ್ತಾನೆ. ಪ್ರಾರ್ಥನೆಯಲ್ಲಿದ್ದಾಗ, ಅವನು ಧ್ಯಾನ ಭಂಗಿಯಲ್ಲಿ ಏಕರೂಪವಾಗಿ ಕಂಡುಬರುತ್ತಾನೆ. ತಮಿಳು ನಾಡಗೀತೆಯು ಪ್ರಾರ್ಥನಾ ಗೀತೆಯಾಗಿರುವುದರಿಂದ, ಸನ್ಯಾಸಿಯು ಧ್ಯಾನದ ಸ್ಥಿತಿಯಲ್ಲಿ ಕುಳಿತುಕೊಂಡಿದ್ದಾನೆ. ತತ್ಕ್ಷಣದ ಸಂದರ್ಭದಲ್ಲಿ, ಮಠಾಧೀಶರು ಧ್ಯಾನ ಭಂಗಿಯಲ್ಲಿ ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಇದು ತಮಿಳು ತಾಯಿಯ ಬಗ್ಗೆ ಅವರ ಗೌರವವನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡುತ್ತಿರುವಾಗ ಎದ್ದು ನಿಲ್ಲದಿರುವುದು ಅಪರಾಧವಲ್ಲ: ಹೈಕೋರ್ಟ್‌

ತಮಿಳು ನಾಡಗೀತೆಯನ್ನು ಇಲ್ಲಿ ನೋಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...