Homeಚಳವಳಿಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮರೆತಹೋದ ಸ್ವಾತಂತ್ರ್ಯ ಸಂಗ್ರಾಮದ ರತ್ನ: ಮೌಲಾನಾ ಮುಹಮ್ಮ‍ದ್‌ ಅಲೀ ಜೌಹರ್

ಮೌಲಾನಾರು 1911 ಜನವರಿ 11 ರಂದು "ಕಾಮ್ರೇಡ್" ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದಿದ್ದರು.

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟಗಾರರ ಅಗ್ರಪಂಕ್ತಿಯ ಹೆಸರುಗಳಲ್ಲೊಂದು ಮೌಲಾನಾ ಮುಹಮ್ಮದ್ ಅಲೀ ಜೌಹರ್. ಇಂದು ಡಿಸೆಂಬರ್ 10 ಅವರ ನೂರ ನಲ್ವತ್ತಮೂರನೆಯ ಜನ್ಮ ದಿನ. ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೀವ ತೇಯ್ದ ಮಹಾನುಭಾವರನ್ನು ದೇಶ ಆಗಾಗ ನೆನಪಿಸಿಕೊಳ್ಳುತ್ತಿರುತ್ತದೆ. ಆದರೆ ದೇಶದ ಸ್ವಾತಂತ್ರ್ಯಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿ ದೇಶ ವಸಾಹತುಶಾಹಿಗಳ ಕಪಿಮುಷ್ಟಿಯಿಂದ ಬಿಡುಗಡೆಯಾಗುವುದಕ್ಕಿಂತ ಹದಿನಾರು ವರ್ಷ ಮುಂಚಿತವಾಗಿ ಲಂಡನ್ನಿನ ಬ್ರಿಟಿಷ್ ರಾಣಿಯ ಸಿಂಹಾಸನವೇ ಗುಡುಗುವಂತೆ ಗರ್ಜಿಸುತ್ತಾ ಹುತಾತ್ಮರಾದ ಈ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯನ್ನು ದೇಶ ಮರೆತೇ ಬಿಟ್ಟಿರುವುದು ವಿಷಾದನೀಯ. ಮೌಲಾನಾ ಮುಹಮ್ಮದ್ ಅಲಿಯವರ ಹೊರತಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆ ನಿಸ್ಸಂದೇಹವಾಗಿಯೂ ಅಪೂರ್ಣ.

ಮುಹಮ್ಮದ್ ಅಲಿ ಓರ್ವ ಶ್ರೇಷ್ಠ ಇಸ್ಲಾಮಿಕ್ ವಿದ್ವಾಂಸರಾಗಿದ್ದುದರಿಂದ ಅವರ ಹೆಸರಿನೊಂದಿಗೆ ಮೌಲಾನಾ ಎಂಬ ಪದವಿ ಅಂಟಿಕೊಂಡಿತ್ತು.ಅವರ ದೇಶ ನಿಷ್ಟೆಯನ್ನು ಅಂದಿನ ಆರೆಸ್ಸೆಸ್ ಮುಖಂಡರು ಪ್ರಶ್ನಿಸಿ ನಿಮಗೆ ದೇಶ ಮೊದಲೋ, ಧರ್ಮ ಮೊದಲೋ ಎಂದು ಚೇಡಿಸಿದಾಗ ಮೌಲಾನಾ ಕೊಟ್ಟ ಉತ್ತರ “ನಾನು ಮೊದಲನೆಯದಾಗಿ ಮುಸ್ಲಿಂ, ಎರಡನೆಯದಾಗಿಯೂ ಮುಸ್ಲಿಂ ಮತ್ತು ಮೂರನೆಯದಾಗಿಯೂ ಮುಸ್ಲಿಂ. ದೇಶದ ವಿಚಾರಕ್ಕೆ ಬಂದಾಗ ನಾನು ಮೊದಲನೆಯದಾಗಿ ಭಾರತೀಯ, ಎರಡನೆಯದಾಗಿಯೂ ಭಾರತೀಯ ಮತ್ತು ಮೂರನೆಯದಾಗಿಯೂ ಭಾರತೀಯ” ಎಂಬುದಾಗಿತ್ತು.

ಅಪ್ರತಿಮ ಮಾತುಗಾರ, ನಿರ್ಭೀತ ಬರಹಗಾರ, ಸ್ವಾತಂತ್ರ್ಯ ಯೋಧ ಮುಹಮ್ಮದ್ ಅಲಿ. ಮೌಲಾನಾರದ್ದು ನೆಪೋಲಿಯನ್‌ನ ಹೃದಯ, ಮೆಕಾಲೆಯ ಲೇಖನಿ ಮತ್ತು ಬರ್ಕ್‌ನ ಮಾತುಗಾರಿಕೆ ಎಂದು ಬ್ರಿಟಿಷರೇ ಅಂದು ಹೇಳುತ್ತಿದ್ದರು. ದೇಶ ಮತ್ತು ಇಸ್ಲಾಮ್ ಎರಡಕ್ಕೂ ನಿಸ್ವಾರ್ಥವಾಗಿ ದುಡಿದವರು ಮೌಲಾನಾ.

ಬರೋಡಾ ನವಾಬರ ಮಂತ್ರಿಯಾಗಿದ್ದ ಅಬ್ದುಲ್ ಅಲಿ ಖಾನ್ ಮತ್ತು ಆಬಿದಾ ಬೇಗಂ (ಬೀ ಅಮ್ಮಾ) ದಂಪತಿಗಳ ಕಿರಿಯ ಪುತ್ರನಾಗಿ ಉತ್ತರ ಪ್ರದೇಶದ ರಾಂಪುರದಲ್ಲಿ 1878 ಡಿಸೆಂಬರ್ 10ರಂದು ಮುಹಮ್ಮದ್ ಅಲಿ ಜನಿಸಿದರು. ಮುಹಮ್ಮದ್ ಅಲಿಯವರಿಗೆ ಎರಡು ವರ್ಷ ಪ್ರಾಯವಾಗುವಾಗಲೇ ಪಿತೃ ವಿಯೋಗವಾಯಿತು. ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಆಬಿದಾ ಬೇಗಂ ತನ್ನ ಒಡವೆಗಳನ್ನು ಮಾರಿ ಮಕ್ಕಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡಿದರು. ಬಿ.ಎ.ಪದವಿಯಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯಕ್ಕೆ ಮುಹಮ್ಮದ್ ಅಲಿ ಪ್ರಥಮ ಸ್ಥಾನ ಗಳಿಸಿದರು. ಆ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಆಕ್ಸ್‌ಫರ್ಡ್ ಯುನಿವರ್ಸಿಟಿಯಿಂದ ಆಧುನಿಕ ಇತಿಹಾಸದ ವಿಷಯದಲ್ಲಿ ಆನರ್ಸ್ ಪದವಿ ಪಡೆದರು. ಆನರ್ಸ್ ಪದವಿಗಾಗಿ ಆಕ್ಸ್‌ಫರ್ಡ್‌ನಲ್ಲಿ ಕಲಿಯುತ್ತಿರುವಾಗ ಇಸ್ಲಾಮ್‌ನ ಕುರಿತಂತೆ ಗಾಢ ಅಧ್ಯಯನ ನಡೆಸಿದರು. ಇಂಗ್ಲಿಷ್ ಭಾಷೆಯಲ್ಲಿ ಅದ್ಭುತ ಹಿಡಿತ ಹೊಂದಿದ್ದ ಮುಹಮ್ಮದ್ ಅಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದರು. ಆಕ್ಸ್‌ಫರ್ಡ್ ಯುನಿವರ್ಸಿಟಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ಮೊದಲ ಏಷ್ಯನ್ ವ್ಯಕ್ತಿ ಎಂಬ ಹೆಗ್ಗಳಿಕೆ ಮುಹಮ್ಮದ್ ಅಲಿಯವರದ್ದಾಗಿತ್ತು.
………………..

ಆನರ್ಸ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೌಲಾನಾ ಬರೋಡಾದಲ್ಲಿ ಸರಕಾರಿ ಹುದ್ದೆಗೆ ಸೇರಿದರು. ಆದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ದೇಶವಾಸಿಗಳ ಮೇಲೆ ನಡೆಸುತ್ತಿದ್ದಂತಹ ದೌರ್ಜನ್ಯವನ್ನು ಕಂಡು ರೋಸಿಹೋದ ಅವರು ಬ್ರಿಟಿಷ್ ಸರಕಾರದ ಉದ್ಯೋಗದಲ್ಲಿದ್ದುಕೊಂಡೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಬೆಂಕಿಯುಗುಳುವಂತಹ Thoughts on present discontents ಎಂಬ ಲೇಖನಮಾಲಿಕೆಯನ್ನು Times of India ದಲ್ಲಿ ಬರೆಯಲಾರಂಭಿಸಿದರು. ಸರಕಾರದ ಹುದ್ದೆಯಲ್ಲಿದ್ದು ಸರಕಾರದ ವಿರುದ್ಧ ಬರೆಯುವುದರ ಪರಿಣಾಮ ನೆಟ್ಟಗಿರಲ್ಲ ಎಂದು ಬ್ರಿಟಿಷರು ಎಚ್ಚರಿಸಿದಾಗ ಮೌಲಾನಾ ತನ್ನ ಹುದ್ದೆಗೆ ರಾಜೀನಾಮೆ ಎಸೆದು ಹೊರಬಂದು ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಿದರು.

ಮೌಲಾನಾರು 1911 ಜನವರಿ 11 ರಂದು “ಕಾಮ್ರೇಡ್” ಎಂಬ ಆಂಗ್ಲ ಪತ್ರಿಕೆಯೊಂದನ್ನು ಕಲ್ಕತ್ತಾದಿಂದ ಪ್ರಾರಂಭಿಸಿ ವಸಾಹತುಶಾಹಿಗಳ ವಿರುದ್ಧ ಅಕ್ಷರ ಸಮರಕ್ಕಿಳಿದರು.

ಬ್ರಿಟಿಷ್ ಪ್ರಭುತ್ವದ ವಿರುದ್ಧ ಬೆಂಕಿ ಚೆಂಡುಗಳಂತಹ ತೀಕ್ಷ್ಣ ಬರಹಗಳನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರಲ್ಲಿ‌ ಅದಮ್ಯ ಸ್ಪೂರ್ತಿಯನ್ನು ತುಂಬಿದರು. ಮೊದಲು ಕಲ್ಕತ್ತಾವನ್ನು ಕೇಂದ್ರವಾಗಿರಿಸಿಕೊಂಡು ಪ್ರಕಟಗೊಳ್ಳುತ್ತಿದ್ದ ‘ ಕಾಮ್ರೇಡ್ ‘ ಪತ್ರಿಕೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಅದನ್ನು ದೆಹಲಿಗೆ ಸ್ಥಳಾಂತರಿಸಿದರು. ಇಂಗ್ಲಿಷ್ ಜನಸಾಮಾನ್ಯರನ್ನು ತಲುಪಲಾರದು ಎಂದು ಮತ್ತೊಂದು ಉರ್ದು ಪತ್ರಿಕೆ ಹಮ್‌ದರ್ದ್ ಸ್ಥಾಪಿಸಿದರು. ಇವೆರಡೂ ಪತ್ರಿಕೆಗಳ ಮೂಲಕ‌ ನಿರಂತರವಾಗಿ ನಿರ್ಬಿಡೆಯ ಬರಹಗಳನ್ನು ಪ್ರಕಟಿಸಿ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದರು. ಇದೇ ಸಾಮ್ರಾಜ್ಯಶಾಹಿ ಶಕ್ತಿಗಳು ಅತ್ತ ಯುರೋಪ್‌ನಲ್ಲಿ ತುರ್ಕಿಯ ಮೇಲೆ ನಡೆಸುತ್ತಿದ್ದಂತಹ ದಬ್ಬಾಳಿಕೆಯನ್ನು ವಿರೋಧಿಸಿಯೂ ಮೌಲಾನಾ ಪ್ರಚೋದನಕಾರಿಯಾಗಿ ಬರೆಯಲಾರಂಭಿಸಿದರು. ಖಿಲಾಫತ್ ಚಳುವಳಿಯು ಭಾರತದಲ್ಲಿ ಹುಟ್ಟಿಕೊಳ್ಳವ ನಿಟ್ಟಿನಲ್ಲಿ ಪ್ರಧಾನ ಭೂಮಿಕೆ ನಿರ್ವಹಿಸಿದ್ದ ಅವರು ತನ್ನ ಬರಹಗಳ ಮೂಲಕ ಚಳವಳಿಗೆ ಶಕ್ತಿ ತುಂಬುವುದರೊಂದಿಗೆ ಅದ್ವಿತೀಯ ನೇತೃತ್ವ ನೀಡಿದರು.

ಬ್ರಿಟಿಷ್ ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಪ್ರಬಲ ಧ್ವನಿಯಾದ ಮೌಲಾನಾ ಬ್ರಿಟಿಷರಿಗೆ ಸಿಂಹಸ್ವಪ್ನವಾದರು. ಇದರಿಂದ ಕಂಗೆಟ್ಟ ಬ್ರಿಟಿಷ್ ಪ್ರಭುತ್ವ 1914 ರಲ್ಲಿ ಅವರ ಎರಡೂ ಪತ್ರಿಕೆಗಳಿಗೆ ನಿಷೇಧ ಹೇರಿ ಅವರನ್ನು ಮತ್ತು ಅವರ ಸಹೋದರ ಶೌಕತ್ ಅಲಿಯವರನ್ನು ಬಂಧಿಸಿ ಜೈಲಿಗೆ ತಳ್ಳಿತು. ಐದು ವರ್ಷಗಳ ದೀರ್ಘ ಸೆರೆವಾಸದ ಬಳಿಕ 1919 ರ ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಸ್ವಾತಂತ್ರ್ಯದೆಡೆಗಿನ ಮೌಲಾನಾರ ತುಡಿತವನ್ನು ಅರ್ಥೈಸಿದ ಮುಸ್ಲಿಂ ಲೀಗ್ 1917 ರಲ್ಲಿ ಅಂದರೆ ಮೌಲಾನಾ ಜೈಲಿನಲ್ಲಿರುವಾಗಲೇ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಿತು. ಜೈಲಿನಿಂದ ಬಿಡುಗಡೆಯಾದ ಬಳಿಕವೂ ಅವರು ತಮ್ಮ ಅದೇ ಉರಿಭಾಷೆಯಲ್ಲಿ ಬ್ರಿಟಿಷರ ವಿರುದ್ಧ ಸಮರ ಘೋಷ ಮೊಳಗಿಸಿದರು. 1921ರಲ್ಲಿ ಬ್ರಿಟಿಷರು ಅವರನ್ನು ಮತ್ತೆ ಕಂಬಿಯೊಳಕ್ಕೆ ತಳ್ಳಿದರು. 1923ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೌಲಾನಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೊಕ್ಕನಾಡ ಅಧಿವೇಶನದ ಅಧ್ಯಕ್ಷತೆ ವಹಿಸಿ ಅವರು ಸ್ವಾತಂತ್ರ್ಯ ಯೋಧರಿಗೆ ನೀಡಿದ ಕರೆ ಸ್ವಾತಂತ್ರ್ಯ ವಾಂಛೆ ಇಮ್ಮಡಿಗೊಳ್ಳುವಂತೆ ಮಾಡಿತು. “ನಾವೆಲ್ಲ ಐಕ್ಯದಿಂದ ಹೋರಾಡೋಣ, ಅಗತ್ಯ ಬಿದ್ದರೆ ಪ್ರಾಣಾರ್ಪಣೆಗೂ ಸಿದ್ಧರಾಗೋಣ. ಒಂದು ವರ್ಷದೊಳಗೆ ಬ್ರಿಟಿಷರು ದೇಶಬಿಟ್ಟು ತೊಲಗದಿದ್ದರೆ ನಾವೇ ಸ್ವಾತಂತ್ರ್ಯ ಘೋಷಿಸೋಣ.” ಮೌಲಾನಾರ ಈ ಕರೆಗೆ ಓಗೊಟ್ಟು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿ ಯುವ ಸಮೂಹ ಹೋರಾಟದ ಕಣಕ್ಕೆ ದುಮುಕಿತು.

ಮೌಲಾನಾರ ಬಂಧನದ ಕುರಿತಂತೆ ಯಂಗ್ ಇಂಡಿಯಾದ 1923ರ ಸೆಪ್ಟೆಂಬರ್ ಸಂಚಿಕೆಯಲ್ಲಿ ಗಾಂಧೀಜಿ ತನ್ನ ಲೇಖನದಲ್ಲಿ “ಮೌಲಾನಾರ ಬಂಧನ ಸ್ವಾತಂತ್ರ್ಯ ಸ್ಥಾಪನೆಯ ಮೊದಲ ನಡೆ” ಎಂದು ಬರೆದಿದ್ದರು.

1930ರ ಕೊನೆಯಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನಕ್ಕೆ ಗಾಂಧೀಜಿಯ ಜೊತೆಗೆ ಮೌಲಾನಾ ತೆರಳಿದ್ದರು. ಆ ಸಮ್ಮೇಳನದಲ್ಲಿ ಮೌಲಾನಾ ಮಾಡಿದ ಭಾಷಣ ಬ್ರಿಟಿಷ್ ಪ್ರಭುತ್ವದ ಎದೆಗೆ ಇರಿದಂತಿತ್ತು. “ಭಾರತದಲ್ಲಿ ನಾವು ಮೂವತ್ತೆರಡು ಕೋಟಿ ಜನ ಅನಕ್ಷರತೆ, ಬಡತನ, ಹಸಿವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಆದರೂ ನಮ್ಮ ಸ್ವಾತಂತ್ರ್ಯ ದಾಹ ಕಿಂಚಿತ್ತೂ ಕಡಿಮೆಯಾಗದು. ಸ್ವಾತಂತ್ರ್ಯ ನೀವು ಕೊಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ನಮ್ಮ ಸ್ವಾತಂತ್ರ್ಯಕ್ಕಾಗಿ ನಾವು ನಿಮ್ಮ ಫಿರಂಗಿ, ಗುಂಡುಗಳಿಗೆ ಎ‍ದೆಯೊಡ್ಡಲೂ‌ ಸಿದ್ಧ. ಮೂವತ್ತೆರಡು ಕೋಟಿ ಭಾರತೀಯರನ್ನು ಕೊಲ್ಲುವ ತಾಕತ್ತು ಮತ್ತು ಧೈರ್ಯವಿರುವ ನೂರು ಜನರೂ ಇಡೀ ಬ್ರಿಟನ್‌ನಲ್ಲಿ ಹುಡುಕಿದರೆ ಸಿಗಲಾರರು..” ಎಂದು ಗುಡುಗಿದ್ದರು.

ತೀವ್ರ ಜ್ವರದಿಂದ ಬಳಲುತ್ತಿದ್ದರೂ ದೇಶ ವಿಮೋಚನೆಯ ಕೆಲಸಕ್ಕಾಗಿ ಹೊರಡುವಾಗ ಅವರ ಕುಟುಂಬಿಕರು ಅವರನ್ನು ತಡೆಯಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ ಮುಹಮ್ಮದ್ ಅಲಿಯವರ ಮಾತೆ ಬೀ ಅಮ್ಮಾ ತನ್ನ ದುಃಖಗಳನ್ನು ಮನದೊಳಗೆ ಅದುಮಿಟ್ಟು ಮಗನನ್ನು ಬೀಳ್ಕೊಟ್ಟಿದ್ದರು. ಲಂಡನ್‌ನಲ್ಲಿ ತಂಗಿದ್ದ ಹೋಟೆಲ್‌ನಿಂದ ದುಂಡು ಮೇಜಿನ ಸಮ್ಮೇಳನಕ್ಕೆ ಹೊರಡುವಾಗ ಮೌಲಾನಾರ ಆರೋಗ್ಯ ಸ್ಥಿತಿ ಕಂಡು ಗಾಂಧೀಜಿ ಕಂಗಾಲಾಗಿದ್ದರು. ಔಷಧಿ ಸೇವಿಸಿ ಮೌಲಾನಾ ಹೊರಟೇ ಬಿಟ್ಟರು. ಅಂದು ಅವರಾಡಿದ ಕೊನೆಯ ವಾಕ್ಯಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದಂತಹದ್ದು.. ” I want to go my country.. If I can go back with the substance of freedom in my hand; and if you do not give us freedom you have to give me a grave here…”

ಮೌಲಾನಾರ ಆರೋಗ್ಯ ತೀವ್ರ ಸ್ವರೂಪದಲ್ಲಿ ಹದಗೆಟ್ಟಿತು. ಅವರು ಗಾಂಧೀಜಿಯವರನ್ನು ಕರೆದು ತನ್ನ ಕೊನೆಯ ಆಶೆಯನ್ನು ಅರುಹಿದರು. ” ನನ್ನ ಕೊನೆ ಸಮೀಪಿಸಿತು. ಆದರೆ ಸ್ವಾತಂತ್ರ್ಯ ವಿಲ್ಲದ ಮಣ್ಣಲ್ಲಿ ನಾನು ಮಣ್ಣಾಗಲಾರೆ.. ನನ್ನ ಮೃತದೇಹವನ್ನು ಇಸ್ಲಾಮಿನ ಅನೇಕ ಪ್ರವಾದಿಗಳು ಮಣ್ಣಾಗಿರುವ ಮತ್ತು ಇಸ್ಲಾಮಿನ ಮೂರನೇ ಅತೀ ದೊಡ್ಡ ಪವಿತ್ರವಾಗಿರುವ ಮಸ್ಜಿದುಲ್ ಅಕ್ಸಾದ ಕಬರ್ ಸ್ಥಾನದಲ್ಲಿ ನನ್ನನ್ನು ದಫನ ಮಾಡಬೇಕು…”

ಮೌಲಾನಾ 1931ರ ಜನವರಿ ನಾಲ್ಕರಂದು ತನ್ನ ಐವತ್ತ ಮೂರನೇ ವಯಸ್ಸಿನಲ್ಲಿ ಚಿರನಿದ್ರೆಗೆ ಜಾರಿದರು.‌ ಅವರ ಇಚ್ಚೆಯಂತೆಯೇ ಅವರ ಮೃತದೇಹವನ್ನು ಫ್ಯಾಲೆಸ್ತೀನಿಗೆ ಕೊಂಡೊಯ್ದು ಮಸ್ಜಿದುಲ್ ಅಕ್ಸಾದ ದಫನ ಭೂಮಿಯಲ್ಲಿ ದಫನ ಮಾಡಲಾಯಿತು.

ಫ್ಯಾಲೆಸ್ತೀನ್‌ನಲ್ಲಿರುವ ಅವರ ಸಮಾಧಿ

ಉರ್ದು ಭಾಷೆಯ ಶ್ರೇಷ್ಠ ಕವಿಯೂ ಆಗಿದ್ದ ಅವರು ಜೌಹರ್ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದರು. ಜೌಹರ್ ಅರ್ಥಾತ್ ಅಮೂಲ್ಯ ರತ್ನ. ಅವರು ಈ ದೇಶದ ಸ್ವಾತಂತ್ರ್ಯ ಚಳವಳಿ ಕಂಡ ನಿಜವಾದ ಜೌಹರ್…

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...