Homeಕರ್ನಾಟಕದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ...

ದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ…

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

- Advertisement -
- Advertisement -

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಒಟ್ಟು ಚಳವಳಿಗಳ ಕುರಿತಾಗಿ ‘ಆಯಾ ಕಾಲದ ಪ್ರತಿರೋಧವನ್ನು ಸಂದರ್ಭವೇ ಸೃಷ್ಟಿಸುತ್ತದೆ. ಹೊಸ ತಲೆಮಾರಿನ ಚಳವಳಿಯ ಸ್ವರೂಪವೇ ಬೇರೆಯಾಗಿರುತ್ತದೆ’ ಎಂಬರ್ಥದಲ್ಲಿ ಹಿಂದೊಮ್ಮೆ ಹೇಳಿದ್ದರು.

ಹಿರಿಯ ಕವಿ ಡಾ.ವಿ.ಮುನಿವೆಂಕಟಪ್ಪ ‘ದಸಂಸದ ಸ್ಥಾಪಕರೆಲ್ಲ ಗತಿಸದೇ ಹೊರತು ಬಣಗಳ ಐಕ್ಯ ಸಾಧ್ಯವಿಲ್ಲ. ವಿಘಟಿತ ಬಣಗಳು ಯಾವ ಉದ್ದೇಶವನ್ನು ಈಡೇರಿಸುವುದಿಲ್ಲ’ ಎಂದಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರಮುಖ ಹೋರಾಟಗಾರರಾದ ಇಬ್ಬರ ಮಾತಿನಲ್ಲಿ ಸಾಮ್ಯತೆ ಇದೆ. ಆದರೆ ಕರ್ನಾಟಕದ ನೋವಿನ ನೆಲಗಳು ದಸಂಸ ಬಣಗಳು ಒಂದಾಗಬೇಕೆಂದು ಬಯಸುತ್ತಿವೆ.

ಎರಡು ದಶಕಗಳಿಂದ ಕೇಳುತ್ತಿರುವ ಒಂದೇ ಮಾತು. ದಸಂಸ ಬಣಗಳು ಒಂದಾಗಬೇಕು. ಯಾವಾಗ? ಹೇಗೆ? ಬಣಗಳ ಒಗ್ಗೂಡಿಸುವವರು ಯಾರು? ಹೀಗೆ ನಾನಾ ಪ್ರಶ್ನೆಗಳು. ಕವಿ ಸಿದ್ದಲಿಂಗಯ್ಯ ಅವರು ‘ನನ್ನ ಅಣ್ಣನಂತಿರುವ ದೇವನೂರ ಮಹಾದೇವ ಅವರು ದಸಂಸ ನೇತೃತ್ವ ವಹಿಸಿದರೆ ಅವರೊಂದಿಗೆ ಮುನ್ನಡೆಯುವುದಾಗಿ’ ಹೇಳಿದ್ದರು. ಅದು ಈಡೇರಲಿಲ್ಲ.

ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಒಂದೇ ಉದ್ದೇಶದ ಹತ್ತಾರು ಸಂಘಟನೆಗಳಿವೆ. ಇವುಗಳಲ್ಲಿಯೇ ಬೇಕಾದಷ್ಟು ಬಣಗಳಿವೆ. ಆದರೆ ದಸಂಸದ ನಾಲ್ಕು ಬಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಈ ಬಣಗಳು ಮುಖ್ಯಸ್ಥರು ತಮ್ಮ ಮುನಿಸು ಬದಿಗೆ ಸರಿಸಿ ಒಂದಾಗಬೇಕೆಂದು ನಾಡಿನುದ್ದಗಲಕ್ಕೂ ಬಯಸಿದವರಿದ್ದಾರೆ.

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

ನೆರೆಯ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಪ್ರಭಾವದಿಂದ ಪ್ರೊ.ಬಿ.ಕೃಷ್ಣಪ್ಪ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣರಾದರು. ಅದು 1975ರ ಸಂದರ್ಭ. ತುರ್ತು ಪರಿಸ್ಥಿತಿ ಎದುರಿಸಿದ ಕರಾಳ ದಿನಗಳು ಹಸಿರಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾದರೂ ಸಾಮಾಜಿಕ, ಆರ್ಥಿಕ ತರತಮಗಳು ಬಡ ಜನರನ್ನು ಇನ್ನಿಲ್ಲದಂತೆ ನೋಯಿಸುತ್ತಿದ್ದವು. ಹೋರಾಟಕ್ಕೆ ಜನ ತುಡಿಯುತ್ತಿದ್ದರು. ದಸಂಸ ಅವರಿಗೆ ದಿಕ್ಕಾಯಿತು.

ಪ್ರೊ.ಬಿ.ಕೃಷ್ಣಪ್ಪ

ಶೂದ್ರರಷ್ಟೇ ಅಲ್ಲದೇ ಬಡವರ ಅಭ್ಯುದಯದ ಧ್ಯೇಯದೊಂದಿಗೆ ದಸಂಸ ಪ್ರಭುತ್ವದ ಬಂಡವಾಳಶಾಹಿಗಳ ಜಮೀನುದಾರರ ಪುರೋಹಿತಶಾಹಿ ವಿರುದ್ಧ ಕಹಳೆ ಸಾರಿತು. ಹಳ್ಳಿಯ-ದಿಲ್ಲಿಯ ಅನ್ಯಾಯದ ವಿರುದ್ಧ ಗುಡುಗಿ ದಲಿತರಲ್ಲಿ ನೈತಿಕ ಶಕ್ತಿ ತುಂಬಿತು. ಮಹಾನಾಯಕ ಅಂಬೇಡ್ಕರರು ತೋರಿದ ಬೆಳಕಲ್ಲಿ ನಡೆದ ದಸಂಸ ಚಾರಿತ್ರಿಕ ಬದಲಾವಣೆಗಳಿಗೆ ಕಾರಣವಾಯಿತು.

‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂದು ಬೀದಿಯಲ್ಲಿ ಹಾಡುತ್ತ ಅಧಿಕಾರದ ಗದ್ದುಗೆ ಕಡೆ ನಡೆಯುವಾಗಲೇ ದಸಂಸ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಬಣಗಳಾದವು. ಸಂಚಾಲಕರೆಲ್ಲ ರಾಜ್ಯಾಧ್ಯಕ್ಷರಾದರು. ಕೆಲವರು ರಾಜಕಾರಣಿಗಳ ಹಿಂಬಾಲಕರಾದರು. ಬಡವರ ಹಿತಾಶಕ್ತಿ ಬಲಿಕೊಟ್ಟರು.

ಇಷ್ಟಾದರೂ ಇವತ್ತಿನ ತನಕ ಬಣಗಳು ನಿಷ್ಕ್ರೀಯವಾಗದೇ ಚಾಲನೆಯಲ್ಲಿದ್ದವು ಎಂಬುದೇ ಸಮಾಧಾನದ ಸಂಗತಿ. ಒಂದೇ ಸಮಸ್ಯೆ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಕರೆ ಕೊಡುತ್ತಿದ್ದವು. ಜಾಗೃತಿ ಮೂಡಿಸುತ್ತಿದ್ದವು. ನಿರೀಕ್ಷಿತ ಫಲ ಸಿಗದೇ ಹತಾಶೆಗೊಂಡಿದ್ದವು. ಈಗ ಬಣಗಳು ಒಂದುಗೂಡುವುದೊಂದೇ ಅವುಗಳಿಗಿರುವ ದಾರಿ ಎಂಬ ಅರಿವುಂಟಾಗಿದೆ. ಹಲವು ಬಾರಿ ಒಂದಾಗಿವೆ, ಮತ್ತೆ ಬೇರೆಯಾಗಿವೆ.

ಈ ದಿಸೆಯಲ್ಲಿ ಆಶಾವಾದವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಳಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಲ್ಕು ಬಣಗಳ ಮೈಸೂರು ಜಿಲ್ಲಾ ಸಂಚಾಲಕರು ‘ಒಂದೇ ದನಿ, ಒಂದೇ ಗುರಿ, ಒಂದೇ ಹಾದಿ’ ತತ್ವದಡಿ ಒಂದಾಗುವ ಸುದ್ದಿ ನೀಡಿದ್ದಾರೆ. ರಾಜ್ಯ ಸಂಚಾಲಕರು ಇವರ ಹಾದಿ ಹಿಡಿಯಬೇಕು. ಈ ಸಂಕಟದ ವರ್ತಮಾನಕ್ಕೆ ಮುಖಾಮುಖಿಯಾಗಬೇಕು.

ದಸಂಸ ಯಶಸ್ವಿ ಹೋರಾಟ ನೆನೆಯುವ ಸಂದರ್ಭವಿದು. ಅದು ನಾಗಸಂದ್ರದ ಭೂ ಹೋರಾಟ. ಪ್ರಭುತ್ವ ಮತ್ತು ಜಮೀನುದಾರರ ಸೊಕ್ಕಡಗಿಸಿದ ಹೋರಾಟವದು. ‘ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ. ಅಂದದ್ದೇ ಹೋರಾಟ ಕಟ್ಟುವ ಕಾಲವಿದು.

ನಾಗಸಂದ್ರ ಭೂ ಹೋರಾಟದ ಕುರಿತ ಪುಸ್ತಕ

ಹಿಂದಿನ ಸರ್ಕಾರಗಳು ಭೂ ರಹಿತರ ಪರವಾಗಿ ಕಾಯಿದೆ ಜಾರಿಗೆ ತಂದು ಬಡವರನ್ನು ರೈತರನ್ನಾಗಿಸಿತು. ಇಂದಿನ ಸರ್ಕಾರ ರೈತರಿಂದ ಭೂಮಿ ಕಸಿಯುವ ಅಘಾತಕಾರಿ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಭೂ ಕಬಳಿಕರಿಗೆ ಕೆಂಪುಹಾಸು ಹಾಸಿದೆ.

ಕಾಲದ ಒತ್ತಡಗಳೂ ನೂರೆಂಟು. ಈಗ ದಸಂಸದ ಗುರಿ ಒಂದೇ. ಅದು ಕರ್ನಾಟಕದ ರೈತಕುಲವನ್ನು ಉಳಿಸುವುದು. ಭೂಮಿ ಉಳಿಸಲು ಹೋರಾಡುವುದು. ಆ ಮೂಲಕ ತನ್ನ ಹಿಂದಿನ ಘನತೆಯನ್ನು ಎತ್ತಿಹಿಡಿಯುವುದು.

ವಿನೋದ್ ಮಹದೇವಪುರ, ಪತ್ರಕರ್ತರು, ಯುವ ಬರಹಗಾರರು.


ಇದನ್ನೂ ಓದಿ: ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...