Homeಅಂಕಣಗಳುನಡುಗಡ್ಡೆಗಳ ನಾಯಕ ಡುಟಾರ್ಟೆಯ ಮುಖದಲ್ಲಿ ಈ ನೆಲದ ನೆರಳುಗಳು

ನಡುಗಡ್ಡೆಗಳ ನಾಯಕ ಡುಟಾರ್ಟೆಯ ಮುಖದಲ್ಲಿ ಈ ನೆಲದ ನೆರಳುಗಳು

- Advertisement -
- Advertisement -

ಸುಮಾರು ಆರೇಳು ಸಾವಿರ ಪುಟ್ಟ ದ್ವೀಪಗಳ ಒಕ್ಕಲು ರಾಶಿಯಂತೆ ಜಮೆಗೊಂಡ ದೇಶ ಫಿಲಿಫೈನ್ಸ್. ಫೆಸಿಫಿಕ್ ಸಾಗರದ ಪಶ್ಚಿಮ ಭಾಗದೊಳಗೆ, ದಕ್ಷಿಣ ಚೀನಾ ಸಮುದ್ರದ ಕೊಂಚ ಪೂರ್ವಕ್ಕೆ ಚದುರಿಕೊಂಡಿರುವ ಈ ನಡುಗಡ್ಡೆಗಳು ನಕಾಶೆಯಲ್ಲಿ, ಕ್ಷುದ್ರ ಗ್ರಹವೊಂದು ಅಪ್ಪಳಿಸಿ, ಛಿದ್ರಗೊಂಡ ಭೂಮಿಯ ತುಣುಕುಗಳಂತೆ ಮೋಜು ಹುಟ್ಟಿಸುತ್ತವೆ. ಇಲ್ಲಿನ ಜನರ ಬದುಕು ಅಷ್ಟೇ ಧಾರುಣವಾದದ್ದು. ಮಾದಕ ವ್ಯಸನದ ಬಲೆಯಲ್ಲಿ ಸಿಲುಕಿ ನರಳಾಡಿದಂತದ್ದು. ಕೆಥೋಲಿಕ್ ಕ್ರಿಶ್ಚಿಯನ್ನರೇ ಬಹುಸಂಖ್ಯಾತರಾಗಿರುವ ಇಲ್ಲಿ ಮೋರೋ ಮುಸ್ಲಿಮರದ್ದು ಎರಡನೇ ಅತಿದೊಡ್ಡ ಜನಸಮುದಾಯ. ಬೌದ್ಧರು, ಸಿಖ್ಖರು, ಹಿಂದೂಗಳಂತಹ ಧರ್ಮಗಳು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುತ್ತವಾದರು ಅವು ನಗಣ್ಯ. ಸಾಗರದ ನಟ್ಟನಡುವೆ ಸಿಕ್ಕಿಕೊಂಡಿರುವ ಈ ಜನರಿಗೆ ಕೈಗಾರಿಕೆಗಳೇ ಪ್ರಧಾನ ಆಸರೆ. ಕೃಷಿ, ಮೀನುಗಾರಿಕೆಗಳೂ ತಕ್ಕಮಟ್ಟಿಗೆ ಬದುಕು ರೂಪಿಸುತ್ತಿವೆ. ಈ ಪುಟ್ಟ ದೇಶದ ಬಗ್ಗೆ ಹೀಗೊಂದು ಟಿಪ್ಪಣಿ ಬರೆಯುವಂತಹ ಜರೂರತ್ತು ಸೃಷ್ಟಿಸಿದ್ದು ಅದರ ಅಧ್ಯಕ್ಷ ರ್ಯೋಡ್ರಿಗೋ ಡುಟರ್ಟೆ ಎಂಬ ತಿಕ್ಕಲು ಮನುಷ್ಯ!
ಡುಟಾರ್ಟೆಯ ಬದುಕಿನ ಪುಟಗಳನ್ನು ತೆರೆದು ಕೂತರೆ ಅಲ್ಲಿ ನಮ್ಮ ದೇಶದ ಬಹಳಷ್ಟು ರಾಜಕಾರಣಿಗಳ ಛಾಯೆ ಹಾದುಹೋಗುತ್ತದೆ. ವಿಚಿತ್ರವೆಂದರೆ ಕ್ರೂರಿಗಳು, ಅವಿವೇಕಿಗಳು ಎಂದು ನಾವು ತೆಗಳುವ ರಾಜಕಾರಣಿಗಳಲ್ಲದೆ ಬಹಳವಾಗಿ ಮೆಚ್ಚಿಕೊಳ್ಳುವ, ಪ್ರಗತಿಪರರೆಂದು ಅಚ್ಚಿಕೊಳ್ಳುವ ರಾಜಕೀಯ ನಾಯಕರ ನೆರಳೂ ಅಲ್ಲಿ ಸರಿದಾಡಿದಂತಾಗುತ್ತೆ. ಬಹುಶಃ ಈ ಗೋಜಲು ವ್ಯಕ್ತಿತ್ವವೇ ಡುಟಾರ್ಟೆಯನ್ನು ತಿಕ್ಕಲು ಮನುಷ್ಯನನ್ನಾಗಿ ರೂಪಿಸಿದೆ ಅನಿಸುತ್ತೆ. ಸೆಕ್ಯುಲರ್ ದೇಶವೊಂದರ ಅಧ್ಯಕ್ಷನಾಗಿ ಸರ್ವಾಧಿಕಾರಿ ಪಡಸಾಲೆಯ ಬಲು ಸನಿಹದಲ್ಲಿ ಸುಳಿದಾಡುವ ಈತನ ಆಳ್ವಿಕೆ ತಮಗೆ ಒಳ್ಳೆಯದೊ, ಕೆಡುಕಿನದೊ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲೇ ಫಿಲಿಫೈನಿಗರು ಗೊಂದಲದಲ್ಲಿದ್ದಾರೆ. ಅದಕ್ಕೆ ಕಾರಣಗಳುಂಟು.
ಭೌಗೋಳಿಕ ನಂಟೇ ಇಲ್ಲದಂತೆ ಸಹಸ್ರ ಸಂಖ್ಯೆಯಲ್ಲಿ ಛಿದ್ರಗೊಂಡ ದ್ವೀಪಗಳನ್ನು ಇಡಿಯಾಗಿ ಒಂದು ದೇಶವೆಂದು ಕರೆದು ಆಳ್ವಿಕೆ ಮಾಡಲು ಇಲ್ಲಿನ ರಾಜಕಾರಣಿಗಳು ಇವುಗಳನ್ನು ಮೂರು ದ್ವೀಪ ಸಮೂಹಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಉತ್ತರದ್ದು ಲುಜಾನ್ ಪ್ರಾಂತ್ಯ. ಇದು ದಕ್ಷಿಣ ಏಷ್ಯಾದ ಪ್ರಭಾವದಲ್ಲಿದೆ. ತೀರಾ ದಕ್ಷಿಣದ್ದು ಮಿಂಡಿನಾಒ ಸಮೂಹ. ಇವೆರಡರ ಮಧ್ಯೆ ಇರೋದು ವಿಸಾಯ ನಡುಗಡ್ಡೆಗಳ ಕೂಟ. 1945ರಲ್ಲಿ ಜಪಾನಿಯರ ತೆಕ್ಕೆಯಿಂದ ಸ್ವತಂತ್ರಗೊಂಡಾಗಿನಿಂದ ಇಲ್ಲಿಯವರೆಗೆ ಫಿಲಿಫೈನ್ಸ್‍ನ ಅಧ್ಯಕ್ಷರಾಗಿ ಲುಜಾನ್ ಮತ್ತು ವಿಸಾಯ ಪ್ರಾಂತ್ಯದವರೇ ಆಯ್ಕೆಯಾಗುತ್ತಾ ಬಂದಿದ್ದರು. ಅದನ್ನು ಛಿದ್ರಗೊಳಿಸಿದ ಮಿಂಡಿನಾಒ ಮೂಲದ ಮೊದಲ ವ್ಯಕ್ತಿ ಈ ಡುಟಾರ್ಟೆ. ತನಗೆ ಸರಿ ಅನ್ನಿಸಿದ್ದನ್ನು ಜನರ ಮೇಲೆ ಹೇರಲು ಯಾವ ಮುಜುಗರವೂ ಇಲ್ಲದ, ತನ್ನ ಸಕಲಷ್ಟು ದೌರ್ಜನ್ಯಗಳು ದೇಶಕ್ಕೆ ಒಳಿತನ್ನೇ ಮಾಡುತ್ತವೆ ಮತ್ತು ಅವು ಈ ದೇಶಕ್ಕೆ ಅನಿವಾರ್ಯ ಎಂಬ ಭ್ರಮೆಯಲ್ಲಿರುವ ಡುಟಾರ್ಟೆ ಮಾನವ ಹಕ್ಕುಗಳಿಗೆ ನಯಾಪೈಸೆ ಬೆಲೆ ಕೊಟ್ಟವನಲ್ಲ. ಈತನ ಅನಧಿಕೃತ ಕುಮ್ಮಕ್ಕಿನಿಂದ `ಡಾವೋ ಡೆತ್ ಸ್ಕ್ವಾಡ್’ ಎಂಬ ಅಸಂಘಟಿತ ಹಂತಕರ ಗುಂಪು ನಡೆಸಿದ ಹತ್ಯಾಕಾಂಡವೇ ಇದಕ್ಕೆ ಸಾಕ್ಷಿ. ಪೊಲೀಸರು, ಮಿಲಿಟರಿಯಿಂದ ಮೊದಲ್ಗೊಂಡು ದೇಶದ ಸಾಮಾನ್ಯ ನಾಗರಿಕರು ಸಹಾ ಮಹತ್‍ಕಾರ್ಯದ ಭ್ರಮೆಯಲ್ಲಿ ಡುಟಾರ್ಟೆಯ ಉನ್ಮಾದಕ್ಕೆ ಒಳಗಾಗಿ ಸಾವಿರಾರು ಜನರನ್ನು ನಡುರಸ್ತೆಯಲ್ಲೇ ಬಡಿದುಕೊಂದದ್ದು ಮನುಷ್ಯ ಇತಿಹಾಸ ಎಂದೆಂದೂ ಕ್ಷಮಿಸದ ಘೋರ ಕೃತ್ಯ.
ಈತ ಅಧ್ಯಕ್ಷನಾಗುವುದಕ್ಕೂ ಮುನ್ನ, ಸುಮಾರು ಇಪ್ಪತ್ತು ವರ್ಷಗಳ ಕಾಲ ಮಿಂಡಿನಾಒ ಪ್ರಾಂತ್ಯದ ಡಾವೋ ಸಿಟಿಯ ಮೇಯರ್ ಆಗಿದ್ದ. ಕಡಲಿನ ಮಧ್ಯೆದಲ್ಲಿದ್ದ ಈ ನಡುಗಡ್ಡೆಗಳು ಸಮುದ್ರಯಾನದ ಟರ್ಮಿನಲ್‍ಗೆ ಹೇಳಿ ಮಾಡಿಸಿದಂತಿದ್ದವು. ನೂರಾರು ವ್ಯಾಪಾರಿ ಹಡಗುಗಳು ಇಲ್ಲಿ ವಿಶ್ರಮಿಸಿಕೊಂಡೋ, ತಂದ ಸರಕನ್ನು ಬದಲಾಯಿಸಿಕೊಂಡೊ ಹೋಗುತ್ತಿದ್ದವು. ಸಹಜವಾಗೇ ಬ್ಲ್ಯಾಕ್ ಮಾರುಕಟ್ಟೆಗಳು ಗರಿಗೆದರಿದವು. ಡ್ರಗ್ಸ್ ವಹಿವಾಟು ವಿಪರೀತವಾಯ್ತು. ನೋಡನೋಡುತ್ತಿದ್ದಂತೆಯೇ ಮಿಂಡಿನಾಒ ಪ್ರಾಂತ್ಯವೇ ಡ್ರಗ್ಸ್ ಹಾವಳಿಗೆ, ಮತ್ತದರ ಉಪಟಳಗಳಿಗೆ ತವರು ಮನೆಯಂತಾಯ್ತು. ಮದ್ಯವ್ಯಸನಿ ಕ್ರಿಮಿನಲ್‍ಗಳು ವಿಜೃಂಭಿಸಲು ಶುರುವಾಯಿತು. ಇದರಿಂದಾಗಿ ಪ್ರವಾಸೋದ್ಯಮ ಕುಸಿದು ಬಿತ್ತು, ವಿದೇಶಿ ಹೂಡಿಕೆ ಸ್ತಬ್ಧವಾಯ್ತು. ಅಂತಹ ಸಮಯದಲ್ಲಿ ಉದಯಿಸಿದವನೇ ಡುಟಾರ್ಟೆ.
ಸಂವಿಧಾನದ ಕಾನೂನುಗಳಿಂದ ಇಂತಹ ವಿಪರೀತಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಕಂಡಕಂಡಲ್ಲಿ ಈ ಮದ್ಯವ್ಯಸನಿಗಳನ್ನು ಹೊಡೆದು ಕೊಲ್ಲುವುದೊಂದೇ ಪರಿಹಾರ ಎನ್ನುವುದು ಡುಟಾರ್ಟೆಯ ಸಿದ್ಧಾಂತ. ಮದ್ಯವ್ಯಸನಿಗಳಿಂದ ಬೇಸತ್ತಿದ್ದ ಜನರಿಗೂ ಈತ ಬದಲಾವಣೆಯ, ರಕ್ತಕ್ರಾಂತಿಯ ಹರಿಕಾರನಂತೆ ಕಂಡ.
ಇದರಲ್ಲಿ ಅಚ್ಚರಿಯೇನಿಲ್ಲ. ಯಾಕೆಂದರೆ ನಮ್ಮ ಜನರ ದೌರ್ಬಲ್ಯವೇ ಇದು!
ಮೊದಮೊದಲು ಪೊಲೀಸರನ್ನು ಮುಂದಿಟ್ಟುಕೊಂಡು ಮದ್ಯವ್ಯಸನಿಗಳನ್ನು, ಡ್ರಗ್ ದಂಧೆಕೋರರನ್ನು ಕಾನೂನುಬಾಹಿರ ಕೊಲೆ ಮಾಡಿಸಿದ. ಅಂತಹ ಪೊಲೀಸರಿಗೆ ಸಿಗುತ್ತಿದ್ದ ರಕ್ಷಣೆ ಮತ್ತು ಸನ್ಮಾನಗಳನ್ನು ಕಂಡ ಜನರೇ ಮದ್ಯವ್ಯಸನಿ ಕ್ರಿಮಿನಲ್‍ಗಳನ್ನು ಕೊಲೆ ಮಾಡಲು ಶುರು ಮಾಡಿದರು. ಹಾಗೆ ಹುಟ್ಟಿಕೊಂಡ ಡಾವೊ ಡೆತ್ ಸ್ಕ್ವಾಡ್‍ಗೆ ಡುಟಾರ್ಟೆಯ ಸಂಪೂರ್ಣ ಬೆಂಬಲವಿತ್ತು.
2016ರಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಿಂತಾಗಲು, ನನ್ನನ್ನು ಗೆಲ್ಲಿಸಿ, ಕೇವಲ ಆರು ತಿಂಗಳಲ್ಲಿ ಫಿಲಿಫೈನ್ಸ್ ದೇಶದ ಕ್ರಿಮಿನಲ್‍ಗಳನ್ನೆಲ್ಲ ನಿರ್ನಾಮ ಮಾಡುತ್ತೇನೆ ಎಂಬ ಉನ್ಮಾದವನ್ನು ಮುಂದಿಟ್ಟೇ ಜನರ ಬಳಿ ಮತ ಕೇಳಿದ್ದ. ದುರಂತವೆಂದರೆ, ಜಗತ್ತಿನ ಎಲ್ಲದನ್ನೂ ಒಳ್ಳೆಯದು ಅಥವಾ ಕೆಟ್ಟದು ಎಂಬ ಎರಡೇ ಗುಂಪಿನಲ್ಲಿ, ಗೆರೆ ಕೊರೆದು ವಿಂಗಡಿಸಲು ಬಯಸುವ ಜನ ಒಳ್ಳೆಯದರ ರೂಪದಲ್ಲಿ ಬಂದೆರಗುವ ಕೆಟ್ಟ ಭವಿಷ್ಯವನ್ನು, ಕೆಟ್ಟದರ ತೆಕ್ಕೆಯಿಂದ ಕಳಚಿಕೊಳ್ಳಲು ಇರುವ ಒಳ್ಳೆಯ ಹಾದಿಗಳನ್ನು ಸಮಚಿತ್ತದಿಂದ ಯೋಚಿಸುವುದೇ ಇಲ್ಲ. ಫಿಲಿಫೈನ್ಸ್‍ನಲ್ಲಿ ಆದದ್ದು ಅದೇ. ಡ್ರಗ್ಸ್ ಮತ್ತು ಕ್ರಿಮಿನಲ್‍ಗಳ ಮೇಲಿನ ಸಿಟ್ಟಿನಿಂದ ಜನ ಡುಟಾರ್ಟೆಯನ್ನು ಆಯ್ಕೆ ಮಾಡಿದರು. ಮಿಂಡಿನಾಒಗೆ ಸೀಮಿತವಾಗಿದ್ದ ಆ ಕಾನೂನುಬಾಹಿರ ಹತ್ಯೆಗಳು ಇಡೀ ದೇಶಕ್ಕೆ ವ್ಯಾಪಿಸಿದವು. ಕೇವಲ ಕೆಲವೇ ತಿಂಗಳಲ್ಲಿ 7000 ಜನರನ್ನು ಹತ್ಯೆ ಮಾಡಲಾಯ್ತು. ಆ ಶವಗಳಿಗೆ ಕ್ರಿಮಿನಲ್‍ಗಳು ಅಥವಾ ಮದ್ಯವ್ಯಸನಿಗಳು ಎಂದು ಲೇಬಲ್ ಅಂಟಿಸಿ ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿತ್ತು. ಜನ ಆ ಕೊಲೆಗಳನ್ನು ತಮ್ಮ ದಿಗ್ವಿಜಯಗಳೆಂದೇ ಸಂಭ್ರಮಿಸಿದರು. ಆದರೆ ಕೊಲ್ಲುವ ಮನಸ್ಥಿತಿಯವನಿಗೆ, ಕೊಲ್ಲುವ ಎಲ್ಲಾ ಕೆಟ್ಟದ್ದು (ಆತನ ದೃಷ್ಟಿಯಲ್ಲಿ) ಮುಗಿದ ಮೇಲೆ ಸುಮ್ಮನೆ ಕೂರಬೇಕು ಅಂತನ್ನಿಸುವುದಿಲ್ಲ. ಹಿಟ್ಲರ್ ಹುಟ್ಟಿದ್ದು ಇಂತದ್ದೇ ಘಳಿಗೆಯಲ್ಲಿ!
ಡುಟಾರ್ಟೆ ಆ ಹಾದಿಯಲ್ಲಿ ಇರುವ ಮನುಷ್ಯ. ಒಮ್ಮೆ ಮಾನವಹಕ್ಕು ಆಯೋಗವು, `ಹೀಗೆ ವಿಚಾರಣೆ ಇಲ್ಲದೆ, ಸಂವಿಧಾನದ ನಿಯಮಗಳನ್ನು ಪರಿಗಣಿಸದೆ ಮನುಷ್ಯರನ್ನು ಕೊಲ್ಲುವುದು ಅಪರಾಧವಲ್ಲವೇ?’ ಅಂತ ಡುಟಾರ್ಟೆಗೆ ಪ್ರಶ್ನೆ ಕೇಳಿತ್ತು. ಅದಕ್ಕಾತ ಕೊಟ್ಟ ಉತ್ತರ ಹೀಗಿತ್ತು, `ಮನುಷ್ಯರನ್ನು ಕೊಲ್ಲುವುದು ಅಪರಾಧ. ಆದರೆ ಮನುಷ್ಯರು ಅಂದರೆ ಯಾರು? ಇವರನ್ನೆಲ್ಲ ನೀವು ಮನುಷ್ಯರು ಅಂತ ಕರೀತೀರಾ?’!
ಅಚ್ಚರಿಯಿಲ್ಲ. ಯಾಕಂದ್ರೆ ಡುಟಾರ್ಟೆ ಬೆಳೆದು ಬಂದದ್ದೇ ಇಂತಹ ಪ್ರಕ್ಷುಬ್ಧ ವಾತಾವರಣಗಳಲ್ಲಿ. ಆತ ಸಣ್ಣ ವಯಸ್ಸಿನಲ್ಲಿರುವಾಗಲೇ ಚರ್ಚ್‍ನ ಪಾದ್ರಿಯೊಬ್ಬ ಅವನ ಮೇಲೆ ನಿರಂತರ ಲೈಂಗಿಕ ಅತ್ಯಾಚಾರ ನಡೆಸಿದ್ದ. ಅದು ಅವನನ್ನು ಕ್ರೂರಿಯನ್ನಾಗಿಸಿತ್ತು. ಅತ್ಯಾಚಾರ ಹೀನಕೃತ್ಯವಲ್ಲ ಎಂಬ ಮನಸ್ಥಿತಿಗೆ ಅವನನ್ನು ತಳ್ಳಿತ್ತು. ಗತಿಸಿಹೋದ 1989ರ ಡಾವೋ ಅತ್ಯಾಚಾರ ಹತ್ಯಾಕಾಂಡವನ್ನು ನೆನಪು ಮಾಡಿಕೊಳ್ಳುತ್ತಾ ಅಧ್ಯಕ್ಷ ಗಾದಿಯಲ್ಲಿ ಕೂತು ಡುಟಾರ್ಟೆ ಕೊಟ್ಟ ಪ್ರತಿಕ್ರಿಯೆ ಆತನ ಮಾನಸಿಕ ವಿಲಕ್ಷಣವನ್ನು ಬಿಚ್ಚಿಡುತ್ತದೆ. ಕ್ರಿಮಿನಲ್‍ಗಳ ತಂಡವೊಂದು ಜೈಲಿನಿಂದ ಪರಾರಿಯಾಗಿ ಬಂದು ಚರ್ಚಿನ 16 ಜನ ಸಿಬ್ಬಂದಿಗಳನ್ನು ಒತ್ತೆಯಾಳಾಗಿಟ್ಟುಕೊಂಡ ಘಟನೆ ಅದು. ಅದರಲ್ಲಿ ಆಸ್ಟ್ರೇಲಿಯಾದ ಸಿಸ್ಟರ್ ಒಬ್ಬಳನ್ನು ರೇಪ್ ಮಾಡಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಗುಂಡಿಗೆ ಬಲಿಯಾಗುವ ಮುನ್ನ, ಆಕೆಯಂತೆ ಇನ್ನೂ ಮೂವರನ್ನು ಕ್ರಿಮಿನಲ್‍ಗಳು ಕೊಂದುಹಾಕಿದ್ದರು. ಆಗ ಡುಟಾರ್ಟೆ ಮೇಯರ್ ಆಗಿದ್ದ. ಸ್ಥಳಕ್ಕೆ ಭೇಟಿ ನೀಡಿದ ಆತನಿಗೆ ಆ ಸಿಸ್ಟರ್ ಹೆಣ ನೋಡಿ ವಿಪರೀತ ಕೋಪ ಬಂದಿತಂತೆ. ಮುಂದೆ ಆತನದೇ ಮಾತುಗಳಲ್ಲಿ ಕೇಳಿ,
`ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಜಾಕ್ವೆಲಿನ್ ಹೆಮಿಲಿ ಮುಖ ನೋಡಿ ನನಗೆ ಸಿಟ್ಟು ಬಂತು. ಆಕೆಯನ್ನು ಕೊಂದು ಬಿಟ್ಟರಲ್ಲಾ ಅಂತ ಅಲ್ಲ! ನೋಡಲು ಥೇಟು ಅಮೆರಿಕಾದ ಸಿನಿಮಾ ನಟಿಯಷ್ಟು ಚೆಂದವಾಗಿದ್ದ ಆಕೆಯನ್ನು ಅವರು ರೇಪ್ ಮಾಡಿದರಂತೆ. ಆ ಚೆಂದುಳ್ಳಿಯನ್ನು ರೇಪ್ ಮಾಡುವಾಗ ಈ ಸಿಟಿಯ ಮೇಯರ್ ಆದ ನನಗೆ ಮೊದಲ ಅವಕಾಶ ಕೊಡ್ಬೇಕು ಅಂತ ಅವರಿಗೆ ಗೊತ್ತಾಗಲಿಲ್ಲವೇ? ಛೇ, ಅಂಥಾ ಸೌಂದರ್ಯ ಎಂಥಾ ವೇಸ್ಟ್ ಆಯ್ತು’…!!!
ಟೀಕಾಕಾರರ ಹೊರತಾಗಿ ಜನ ಆತನ ವಿರುದ್ಧ ತಿರುಗಿ ಬೀಳಲಿಲ್ಲ. ಸ್ವತಃ ಡುಟಾರ್ಟೆಯ ಮಗಳು, `ನಾನೂ ರೇಪ್ ಸಂತ್ರಸ್ತೆ. ಆದಾಗ್ಯೂ, ನಾನು ನನ್ನಪ್ಪನ ಪರವಾಗಿ ನಿಲ್ಲುವೆ..’ ಎಂದು ಸಮರ್ಥಿಸಿಕೊಂಡಳು. ಜನ ಗೊಂದಲಗೊಂಡರು. ದೇಶಕ್ಕೆ ಏನೋ ಒಳ್ಳೆಯದಾಗುತ್ತಿದೆ ಎಂಬ ಭ್ರಮೆಗೆ ಕಟ್ಟುಬಿದ್ದರು.
ಡುಟಾರ್ಟೆಯ ತಿಕ್ಕಲುತನಗಳನ್ನು ಗಮನಿಸುತ್ತಿದ್ದರೆ, ನಮಗೆ ಈ ದೇಶದ ಹಲವು ಪ್ರಸ್ತುತ ರಾಜಕಾರಣಿಗಳು ಮನಸಿನಲ್ಲಿ ಮೂಡುತ್ತಾರೆ. ಕ್ರೂರತನ, ಜನರನ್ನು ಅವರ ಕೆಟ್ಟದಿನಗಳಿಗೆ ಸಮ್ಮತಿಸಿ ಕರೆದೊಯ್ಯುವ ಚಕ್ಯತೆಗಳು ನಮ್ಮ ಹೋಲಿಕೆಯ ಸರಕುಗಳಾಗುತ್ತವೆ. ಆದರೆ ನಮ್ಮ ರಾಜಕಾರಣಿಗಳಂತೆ ಡುಟಾರ್ಟೆ ಸತ್ಯ ಮುಚ್ಚಿಟ್ಟು, ಮೌಢ್ಯದ ಮರೆಯಲ್ಲಿ ಜನರನ್ನು ಯಾಮಾರಿಸುತ್ತಿಲ್ಲ. ತಾನು ಸರಿ ಎಂದು ಭ್ರಮಿಸಿರುವ `ತಪ್ಪ’ನ್ನು ಮುಂದಿಟ್ಟೇ ದೇಶವನ್ನು ಹಾಳುಗೆಡವುತ್ತಿದ್ದಾನೆ. ಅಂದಹಾಗೆ, ದೇವರನ್ನು ಮಹಾ ಮುಟ್ಠಾಳ ಎಂದು ಕರೆದಿದ್ದ ಈತ ಮೊನ್ನೆ, `ಆ ದೇವರು ಇರೋದನ್ನು ಯಾರಾದ್ರೂ ಪ್ರೂವ್ ಮಾಡಿದ್ರೆ, ಈ ಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಹೆಚ್ಚೇನು ಬೇಡ, ದೇವರ ಜೊತೆ ತೆಗೆಸಿಕೊಂಡ ಒಂದು ಸೆಲ್ಫಿ ತನ್ನಿ, ನನ್ನ ರಾಜೀನಾಮೆ ತಗೊಂಡು ಹೋಗಿ…’ ಎಂದು ಸವಾಲು ಹಾಕಿದ್ದಾನೆ.
ನಮ್ಮ ರಾಜಕೀಯ ಕ್ರೂರಿಗಳಿಗು, ಈ ಕ್ರೂರ ರಾಜಕಾರಣಿಗೂ ಇರುವ ವ್ಯತ್ಯಾಸ ಇದು…

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...