Homeಮುಖಪುಟ12 ಕೆಜಿ ಭಾರದ ಸಾಣೆಯಂತ್ರ ಹೊತ್ತು ಊರುರು ತಿರುಗುವ ಕತ್ತರಿ ಸಾಣೆಯ ಶರೀಫ್ ಕಾಕನ ಇಕನಾಮಿಕ್ಸ್..

12 ಕೆಜಿ ಭಾರದ ಸಾಣೆಯಂತ್ರ ಹೊತ್ತು ಊರುರು ತಿರುಗುವ ಕತ್ತರಿ ಸಾಣೆಯ ಶರೀಫ್ ಕಾಕನ ಇಕನಾಮಿಕ್ಸ್..

ಮಂಗಳೂರಿನಲ್ಲಿ ಬೀಡಿ ಉದ್ಯಮ ನೆಲಕಚ್ಚಿದಂದಿನಿಂದ ನಮ್ಮ ಬದುಕೂ ನೆಲಕಚ್ಚುತ್ತಾ ಹೋಗ್ತಿದೆ ಎನ್ನುತ್ತಾರೆ ಸಾಣೆ ಹಿಡಿಯುವ ಶರೀಫ್ ಕಾಕ.

- Advertisement -
- Advertisement -

ಅದೊಂದು ಭಾನುವಾರ. ಗಡ್ಡ ಟ್ರಿಮ್ ಮಾಡಲೆಂದು ಸೆಲೂನಿಗೆ ಹೊರಟಿದ್ದೆ. ಬೈಕ್ ಸ್ಟಾರ್ಟ್ ಮಾಡಿ ಗೇಟಿಂದ ಹೊರತೆಗೆಯುವಷ್ಟರಲ್ಲಿ ಬೇತಾಳನನ್ನು ಹೆಗಲ ಮೇಲೆ ಹೊತ್ತು ಕೊಂಡು ಕತೆ ಹೇಳಿಸಿಕೊಂಡು ನಡೆಯುತ್ತಿರುವ ವಿಕ್ರಮಾಧಿತ್ಯನಂತೆ ಹೆಗಲ ಮೇಲೆ ಬದುಕಿನ ಬಂಡಿಯನ್ನು ಹೊತ್ತುಕೊಂಡು ಶರೀಫ್ ಕಾಕ ಬರುತ್ತಿದ್ದರು. ಅಸ್ಸಲಾಮು ಅಲೈಕುಂ ಶರೀಫಾಕ ಎಂದೆ. ವ ಅಲೈಕುಂ ಸಲಾಂ ಎನ್ನುತ್ತಾ ಮೂವತ್ತೆರಡರಲ್ಲಿ ಅಳಿದುಳಿದ ಸುಮಾರು ಇಪ್ಪತ್ತು- ಇಪ್ಪತ್ತೆರಡರಷ್ಟಿರಬಹುದಾದ ಪಾಚಿಗಟ್ಟಿದ ಅಷ್ಟೂ ಹಲ್ಲುಗಳನ್ನು ತೋರಿಸುತ್ತಾ ನಗಾಡಿದರು. ಯಾವ ಕಡೆ ಹೊರಟಿಯಪ್ಪಾ ಎಂದು ಕೇಳಿದರು. ಇಲ್ಲೇ ಪದವಿಗೆ ಗಡ್ಡ ಮಾಡ್ಸೋಣ ಎಂದು ಹೊರಟೆ. ನೀವು..?

ಇವತ್ತು ತುಸು ಬೇಗ ಬಂದಿದ್ದೆ ಕಣಪ್ಪಾ.. ಇಲ್ಲಿ ಕೆಳಗಿನ ಮನೆಗಳದ್ದೆಲ್ಲಾ ಮುಗಿಸಿದೆ. ಇನ್ನು ಯಾವ ಕಡೆ..?
ಪದವು ಕಡೆ..

ಹಾಗಾದ್ರೆ ಬನ್ನಿ ಹತ್ಕೊಳ್ಳಿ ಎಂದು ಕರೆದೆ. ಇಲ್ಲಪ್ಪಾ ನೀನು ಹೋಗು.

ಬನ್ನಿ ಶರೀಫಾಕ..

ಏ ನಿಂಜೊತೆ ಬೈಕಲ್ಲಿ ಬಂದ್ರೆ ನನ್ನ ಹೊಟ್ಟೆ ತುಂಬುತ್ತಾ..?

ಅರೇ..ಶರೀಫಾಕ ಇದೇನು ನನ್ನಲ್ಲೂ ಈ ಮಾತು..? ಹಾಗೇನಿಲ್ಲ ಮಾರಾಯ..ನನ್ನ ದಿನದ ಪಡಿ ಈ ನಡೆತದಲ್ಲೇ ಸಿಗೋದಲ್ವಾ..?
ಹೂಂ.. ಹೌದಲ್ವಾ..
ಚಾ ಆಯ್ತೇನು ಶರೀಫಾಕ..
ಹೂಂ.. ಚಹಾ ಮೂರಾಯ್ತು.
ಆಗಲಿ ನಾಲ್ಕನೆಯದ್ದು ನನ್ನ ಜೊತೆಗಾಗಲಿ ಎನ್ನುತ್ತಾ ಇಗ್ನಿಶನ್ ಆಫ್ ಮಾಡಿ ಕೆಳಗಿಳಿದೆ. ಶರೀಫಾಕ ಗೇಟು ದಾಟಿ ಒಳಬಂದರು. ತನ್ನ ಹೆಗಲಿನ ಬೇತಾಳನಂತಹ ಕತ್ತರಿ ಸಾಣೆಯ ಯಂತ್ರವನ್ನು ಕೆಳಗಿಳಿಸಿ ನನ್ನ ಪಕ್ಕವೇ ಸಿಟೌಟಿನ ನೆಲದಲ್ಲಿ ಕೂತರು.

ಮಿಸ್ರಿಯಾಳನ್ನು ಕೂಗಿ ಕರೆದು ಎರಡು ಚಹಾ ಮಾಡಿ ಕೊಡೇ ಎಂದು ವಿನಂತಿಸಿದೆ.

ಮಾತಿಗಿಳಿಯುವ ಮುನ್ನ ಶರೀಫಾಕ ಜೇಬಿನಿಂದ ಬೀಡಿ ತೆಗೆದು ತುಟಿಗಳ ನಡುವಿಟ್ಟು ಕಡ್ಡಿ ಗೀರಿದರು. ಅದೂ ಇದೂ ಮಾತಾಡ್ತಾ ಕೆಲಸ ತುಂಬಾ ಕಡಿಮೆಯಾಗಿದೆ ಕಣಪ್ಪಾ ಎಂದರು.

ಯಾಕೆ..?

ಹಿಂದೆಲ್ಲಾ ಪದವಿನಿಂದ ಮುಂಜಾನೆ ಕೆಳಗಿಳಿದರೆ ಮತ್ತೆ ಪದವು ಏರುವಾಗ ಬಾನಲ್ಲಿ ಸೂರ್ಯ ಕರಗುತ್ತಿದ್ದ. ಈಗ ಒಂದು ಗಂಟೆಯಲ್ಲಿ ಕೆಲಸ ಮುಗಿಸಿ ಪದವು ಏರುತ್ತೇನೆ.
ಯಾಕೆ..?

ನಿನ್ನದೇ ಮನೆಯ ಉದಾಹರಣೆ ನೋಡು. ನೀನು ಚಿಕ್ಕವನಿದ್ದಾಗ ನಿನ್ನಮ್ಮನೂ ಬೀಡಿ ಕಟ್ಟುತ್ತಿದ್ದರು. ಈಗ ಕಟ್ತಾರಾ..? ಹಾಗೆ ಬಹುತೇಕ ಮನೆಗಳಲ್ಲಿ ಬೀಡಿಯ ಸೂಪು ಕಾಣೆಯಾಗಿದೆ.ಹೊಸ ತಲೆಮಾರಿನ ಹೆಣ್ಮಕ್ಕಳು ಕಲಿತು ಹೊರಗೆ ಉದ್ಯೋಗಕ್ಕೆ ಹೋಗ್ತಿದ್ದಾರೆ. ಕಲಿತವರು ಹೋಗ್ಲಿ ಬಿಡು, ಒಳ್ಳೆಯದೇ.. ಹತ್ತನೇ ಕ್ಲಾಸು ಓದಿದವರೂ ಹೀಗೆ ಹೆಗಲಿಗೆ ಬ್ಯಾಗ್ ಹಾಕಿ ಎಲ್ಲೋ ಅಂಗಡಿಯಲ್ಲಿ ಬೆಳಗ್ಗಿಂದ ಸಂಜೆ ತನಕ ನಿಂತು ಕಾಲು ನೋಯಿಸಿ ಫ್ಯಾನ್ಸಿ ಸಾಮಾನು, ರೆಡಿಮೇಡ್ ಅಂಗಡಿಯಲ್ಲಿ ಬಟ್ಟೆ ಮಾರುವ ಕೆಲಸಕ್ಕೆ ನಿಂತು ಮೂರೋ ನಾಲ್ಕೋ ಸಾವಿರ ತಿಂಗಳಿಗೆ ಪಡೆಯುವ ಕೆಲಸಕ್ಕೆ ಹೋಗ್ಬೇಕಾ..? ಮನೆಯಲ್ಲಿ ಕೂತು ಆರಾಮಾಗಿ ನೆಟ್ಟಗೆ ಬೀಡಿ ಕಟ್ಟಿದ್ರೆ ದಿನಕ್ಕೆ ಇನ್ನೂರು ರೂಪಾಯಿ ದುಡಿಯಬಹುದಲ್ವಾ..? ಬೇರೆ ಖರ್ಚೂ ಇರೋದಿಲ್ವಲ್ಲ. ಹೊರಗಡೆ ಕೆಲಸಕ್ಕೆ ಹೋದ್ರೆ ಬಸ್ಸಿನ ಖರ್ಚು ಕಳೆದು ಏನುಳಿಯುತ್ತೆ..? ಹಿಂದೆಲ್ಲಾ ಬೀಡಿ ಕಟ್ಟುತ್ತಿದ್ದ ಹುಡುಗಿಯರು ಮಜೂರಿ, ವರ್ಷದ ಬೋನಸ್ ಇವೆಲ್ಲಾ ಸೇರಿಸಿ ಪ್ರತೀ ವರ್ಷ ಒಂದಿಷ್ಟು ಚಿನ್ನದ ಒಡವೆ ಮಾಡಿಡುತ್ತಿದ್ದರು. ಈ ಫ್ಯಾನ್ಸಿ, ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುವ ಹುಡುಗೀರು ಒಂದು ತುಂಡು ಚಿನ್ನ ತಮ್ಮ ದುಡಿಮೆಯಿಂದ ಮಾಡಿದ್ದು ನೋಡಿದ್ಯಾ..?

ಅದಿರಲಿ ಶರೀಫಾಕ.. ಅದೆಲ್ಲಾ ಅವರವರ ಖುಷಿ, ನಿಮ್ಮ ವಹಿವಾಟು ಹೇಗಿದೆ..?

ಹಿಂದೆ ಕತ್ತರಿಯೊಂದರ ಸಾಣೆ ಮಾಡಿದ್ರೆ ಐದು ರೂಪಾಯಿ ಸಿಗುವ ಕಾಲದಲ್ಲಿ ದಿನಕ್ಕೆ ಐದು ನೂರು ರೂಪಾಯಿ ದುಡೀತಿದ್ದೆ. ಈಗ ಇಪ್ಪತ್ತೈದು ರೂಪಾಯಿಗೆ ಒಂದು ಕತ್ತರಿ ಸಾಣೆ ಮಾಡಿದ್ರೆ ಮುನ್ನೂರು- ಮುನ್ನೂರೈವತ್ತು ರೂಪಾಯಿ ದಿನದ ಕಮಾಯಿಯೂ ಆಗ್ತಿಲ್ಲ ಕಣಪ್ಪಾ..

ಆ ಕಾಲದಲ್ಲಿ ದುಡಿದು ಮನೆ ಕಟ್ಟಿಸಿದ್ರಿಂದ ಬದುಕಿದೆ. ಅಂದು ದುಡಿದು ಉಳಿತಾಯ ಮಾಡಿದ್ರಿಂದ ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿದೆ. ಈಗಿನ ಬೆಲೆಯಲ್ಲಿ‌ ದಿನಕ್ಕೆ ಐನೂರು ದುಡಿದ್ರೂ ಮನೆ ಕಟ್ಟಿಸಲಿಕ್ಕೆ, ಇಬ್ರು ಹೆಣ್ಮಕ್ಕಳ ಮದುವೆ ಮಾಡೋದು ಸಾಧ್ಯನಾ..?

ಹೋಟ್ಲಲ್ಲಿ ಒಂದು ಊಟ ಮಾಡಲು ಐವತ್ತರುವತ್ತು ರೂಪಾಯಿ ಕೊಡ್ಬೇಕಪ್ಪ. ಹಿಂದೆ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟ, ಒಂದು ಮೀನು ಫ್ರೈ ಎಲ್ಲಾ ಸಿಗ್ತಿತ್ತು. ಹಿಂದೆ ನಿಮ್ಮಂತಹ ಹಳ್ಳಿಗಳಿಗೆ ಸಾಣೆಯಂತ್ರ ಎತ್ಕೊಂಡು ಬಂದರೆ ಊಟ, ಚಾ, ತಿಂಡಿ ಎಲ್ಲಾ ಮುಫತ್ತಾಗಿ ಸಿಗ್ತಿತ್ತು. ಈಗ ಊಟ ಚಾ ಬಿಡು.. ಬೆಂಕಿ‌ಪೊಟ್ಟಣ ಮುಗಿದ್ರೆ ಬೀಡಿ ಹೊತ್ತಿಸಲಿಕ್ಕೆ ಒಂದು‌ ಕಡ್ಡಿ ಕೇಳಿದ್ರೂ ಸಿಗುವುದು ಕಷ್ಜ. ಹಿಂದೆ ಮಧ್ಯಾಹ್ನದ ಹೊತ್ತು ಯಾವ ಮನೆಗೆ ಸಾಣೆಗೆ ಹೋಗ್ತಿದ್ದೆನೋ ಆ ಮನೆಯವರು ಊಟ ಮಾಡುವಾಗ ನನಗೂ ಊಟ ಬಡಿಸದೇ ಬಿಡುತ್ತಿರಲಿಲ್ಲ. ದಿನಕ್ಕೊಂದು ನಾಲ್ಕು ಚಹಾ ಸಾಣೆಗೆ ಹೋದ ಮನೆಗಳಲ್ಲೇ ಆಗ್ತಿತ್ತು. ಹಿಂದಿನಂತೆ ಕಷ್ಟ ಸುಖ ಹೇಳೋರು, ಪ್ರೀತಿಯಿಂದ ಮಾತಾಡ್ಸೋರು ಈಗ ಬಹಳ ಕಡಿಮೆ. ಕೆಲ್ಸ ಇದ್ರೆ ಏ ಕತ್ತರಿ ಸಾಣೆ ಎಂದು ಕರೆದು ಗೇಟಿನ ಹೊರಗೇ ನಿಲ್ಲಿಸಿ ಕತ್ತರಿ ತಂದು ಕೊಡ್ತಾರೆ. ಹಿಂದೆಲ್ಲಾ ಮನೆಯ ಜಗಲಿಗೆ ನಾನೇ ಹೋಗಿ ಕತ್ತರಿ ಸಾಣೆ ಮಾಡ್ತಿದ್ದೆ. ಹಿಂದೆ ಎಲ್ಲಾ ಮನೆಯ ನಾಯಿಗಳಿಗೂ ನನ್ನ ಪರಿಚಯವಿತ್ತು. ಈಗ ನಾಯಿ ಇರುವ ಮನೆಗಳ ಕಂಪೌಂಡಿನ ಸುತ್ತ ಸುಳಿಯುವುದೂ ಕಷ್ಟ. ಇಂತಹ ಹಳ್ಳಿಗಳಿಗೆ ಬರುವಾಗ ಕೈಯಲ್ಲೊಂದು ಕೋಲು ಬೇಕೇ ಬೇಕು ಮಾರಾಯ.
ಹಿಂದೆ ನಮ್ಮ ಕತ್ತರಿ ಸಾಣೆಯವರಲ್ಲೂ ಒಪ್ಪಂದವಿರುತ್ತಿತ್ತು. ನಾನು ಖಾಯಂ ಹೋಗುವ ಹಳ್ಳಿಗಳಿಗೆ ಇನ್ನೊಬ್ಬ ಬರಲಿಕ್ಕಿಲ್ಲ. ನಾವು ನಮ್ಮ ಏರಿಯಾ ಎಂದು ನಿರ್ಣಯಿಸಿ ಬಿಡುತ್ತಿದ್ದೆವು. ಈಗ ಹಾಗಲ್ಲ ಮಾರಾಯ.. ಬೈಕಿಗೆ ಡೀಸೆಲ್ ಸಾಣೆ ಮೋಟರ್ ಸಿಕ್ಕಿಸಿ ಅದರಿಂದ ಕೆಲಸ ಮಾಡ್ತಾರೆ.‌ ನನ್ನಂತಹ ಮುದುಕರು ನಾಲ್ಕು ಮನೆಗೆ ಹೋಗುವ ಹೊತ್ತಿಗೆ ಅವರು ನಲ್ವತ್ತು ಮನೆಗೆ ಹೋಗಿ ಕೆಲಸ ಮುಗಿಸಿ ಹೋಗುತ್ತಿದ್ದರು. ಹಳೇ ತಲೆಮಾರಿನ ಬೀಡಿ ಕಟ್ಟುವವರು, ಕೃಷಿಕರು ಮಾತ್ರ ಇಂದಿಗೂ ನನ್ನನ್ನೇ ಕಾದು ನನ್ನಲ್ಲಿ‌ ಕತ್ತರಿ, ಕತ್ತಿ, ಅಡಕತ್ತರಿ, ಸಾಣೆ ಮಾಡಿಸ್ತಾರೆ. ಬೀಡಿ ಉದ್ಯಮ ನೆಲಕಚ್ಚಿದಂದಿನಿಂದ ನಮ್ಮ ಬದುಕೂ ನೆಲಕಚ್ಚುತ್ತಾ ಹೋಗ್ತಿದೆ.

ಬೀಡಿ ಇಲ್ಲಾಂದ್ರೇನಾಯಿತು. ಕತ್ತಿ, ಅಡಕತ್ತರಿ, ಕಸಾಯಿಗಳ ಮಾಂಸ ಕಡಿಯುವ ಕತ್ತಿಗಳೆಲ್ಲಾ ಇವೆಯಲ್ವಾ ಶರೀಫಾಕ..?

ಏಯ್..ಅದೇನಪ್ಪಾ ಊರಿಗೆಷ್ಟು ಕಸಾಯಿಗಳಿದ್ದಾರಪ್ಪಾ..? ಎಷ್ಟು ಅಡಿಕೆ ಬೆಳೆಗಾರರಿದ್ದಾರೆ..? ಈ‌ ಕತ್ತಿಗಳನ್ನೆಲ್ಲಾ ಕೆಲವರು ವರ್ಷಕ್ಕೊಮ್ಮೆ ಸಾಣೆ ಹಿಡಿಸ್ತಾರೆ ಅಷ್ಟೇ. ಈಗ ಮೀನು ಮುರಿಯಲೂ ಮೆಟ್ಟುಗತ್ತಿ ಬಳಸೋರಿಲ್ಲ. ಅದಕ್ಕೂ ಕತ್ತರಿ ಬಂದಿದೆ. ಅದು ಸಾಣೆ ಹಿಡಿಯುವಂತಹ ಕತ್ತರಿಯಲ್ಲ. ಮೊಂಡಾದ್ರೆ ಎಸೆದು ಬೇರೆ ತರಬೇಕು. ಹಿಂದೆ ಚಾಕುಗಳಿಗೆಲ್ಲಾ ಸಾಣೆ ಹಿಡೀತಿದ್ರು. ಈಗ ನಲ್ವತ್ತೈವತ್ತಕ್ಕೆ ಸಿಗುವ ಚಾಕಿಗೆ ಇಪ್ಪತ್ತೈದು ರೂಪಾಯಿ ಕೊಟ್ಟು ಯಾರು ಸಾಣೆ ಹಿಡಿಸ್ತಾರೆ..? ಶರೀಫಾಕ ಹೀಗೆ ತನ್ನ ಇಕನಾಮಿಕ್ಸ್ ಮಾತನಾಡುತ್ತಿದ್ದಾಗ ಮಿಸ್ರಿಯಾ ಚಹಾ ಮತ್ತು ನಮ್ಮದೇ ಹಿತ್ತಲಲ್ಲಿ ನನ್ನಮ್ಮ ಬೆಳೆದಿದ್ದ ಬಾಳೆಹಣ್ಣುಗಳನ್ನು ಹಿಡ್ಕೊಂಡು ಬಂದಳು. ಚಹಾ ಸೇವಿಸುತ್ತಾ ಅದೇನೋ ಊರಲ್ಲಿ ಪೆಂಶನ್ ಕೆಲ್ಸ ಎಲ್ಲಾ ಮುಗೀತು ಎಂದಿದ್ದರಲ್ವಾ ಏನಾಯಿತು..? ಅದು ವೃದ್ದಾಪ್ಯ ವೇತನ ಕಣಪ್ಪಾ. ಜಗನ್ಮೋಹನ್ ರೆಡ್ಡಿ ಬಂದು ಎರಡು ಸಾವ್ರಕ್ಕೇರಿಸಿದ್ದಾನೆ. ನಂಗೂ ಬರ್ತಾ ಇದೆ. ಇನ್ನು ಸಾಣೆ ಯಂತ್ರ ಹೊತ್ತು ಹಳ್ಳಿ-ಗಲ್ಲಿ, ಬೆಟ್ಟ- ಗುಡ್ಡ‌ ಏರಿ‌ ಅಲೆದಾಡಿದ್ದು ಸಾಕು ಎಂದು ಮಕ್ಕಳು ಹೇಳ್ತಿದ್ದರು. ನನಗೂ ವಯಸ್ಸಾಯ್ತಲ್ವಾ.. ಎರಡು ಸಾವಿರ ರೂಪಾಯಿ ಪೆಂಶನ್ ಸಿಕ್ಕಿದ್ರೆ ನನ್ನ ಖರ್ಚಿಗೆ ಸಾಕು, ಮನೆ ಖರ್ಚು ಗಂಡು ಮಕ್ಕಳು ನೋಡ್ಕೋತಾರೆ ಎಂದು ಊರಿಗೆ ಹೋಗೋಣಾಂತಿದ್ದೆ. ಆದ್ರೆ ನನಗೆ ಕೆಲಸ ಬಿಡಲು ಆಗ್ತಿಲ್ಲ. ಮಂಗಳೂರಿಗೆ ಬಂದು ಐವತ್ತೈದು ವರ್ಷ ಆಯ್ತು. ಮಂಗಳೂರು ನನ್ನದೇ ಸ್ವಂತ ಊರಿನಂತಾಗಿ ಬಿಟ್ಟಿದೆ. ಊರಲ್ಲಿ ಹತ್ತಿರದ ಸಂಬಂಧಿಕರು ಬಿಟ್ಟರೆ ಯಾರಿಗೂ ನನ್ನ ಪರಿಚಯವಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೂ ಪರಿಚಿತರಿದ್ದಾರೆ, ನಿನ್ನಂತೆ ಎಲ್ಲಿ ಕಂಡರೂ ನಿಲ್ಲಿಸಿ ಕಷ್ಟ ಸುಖ ವಿಚಾರಿಸುವ ಸ್ನೇಹಿತರಿದ್ದಾರೆ. ಈ ಮಂಗಳೂರು ನನ್ನನ್ನು ಪೊರೆದಿದೆ, ಬದುಕು ಕೊಟ್ಟಿದೆ.. ಇಂತಹ ಮಂಗಳೂರು ಬಿಟ್ಟು ಹೇಗೆ ಹೋಗಲಿ..? ಕೈ ಕಾಲಲ್ಲಿ ಕಸುವಿದ್ದಷ್ಟು ದಿನ ದುಡಿಯುವೆ ಎನ್ನುತ್ತಾ ಮತ್ತೆ ಬೇತಾಳನನ್ನು ಹೆಗಲಿಗೇರಿಸಿ ಶರೀಫಾಕ ಹೊಟ್ಟೆಪಾಡು ಅರಸುತ್ತಾ ಹೊರಟರು.

********

ಈ ಶರೀಫಾಕನನ್ನು ನಾನು ನೋಡುತ್ತಿರುವುದು ಇಂದು‌ ನಿನ್ನೆಯಿಂದಲ್ಲ. ನಾನಿನ್ನೂ ಚಡ್ಡಿ ಹಾಕದೇ ಮೂಗಿನಿಂದ ಸುರಿಯುತ್ತಿದ್ದ ಗೊಣ್ಣೆಯನ್ನು ಅಂಗಿ ತೋಳಿಗೆ ಒರೆಸುತ್ತಾ ಆಟದಲ್ಲಿ ತಲ್ಲೀನನಾಗಿರುತ್ತಿದ್ದ ಕಾಲದಿಂದಲೂ ಅವರನ್ನು ನೋಡುತ್ತಿದ್ದೆ. ಚಿಕ್ಕಂದಿನಲ್ಲಿ ಇವರ ಕತ್ತರಿ ಸಾಣೆ ಯಂತ್ರದ ಪೆಡಲನ್ನು ಸೈಕಲ್ ತುಳಿದಂತೆ ಕುತೂಹಲದಿಂದ ತುಳಿಯುತ್ತಿದ್ದೆ. ಉಪಟಳ ಅತಿಯಾದಾಗ ಕತ್ತರಿ ತೋರಿಸಿ ಸುನ್ನತಿ ಮಾಡ್ತೇನೆ ಎಂದು ಹೆದರಿಸುತ್ತಿದ್ದರು.

ಶರೀಫಾಕನಿಗೆ ಈಗ ಎಪ್ಪತ್ತೆರಡು ವರ್ಷ ವಯಸ್ಸಂತೆ. ಆಂದ್ರ ಪ್ರದೇಶದ ಕಾಳಹಸ್ತಿಯಿಂದ ತನ್ನ ಅಣ್ಣನೊಂದಿಗೆ ಸುಮಾರು ಐವತ್ತೈದು ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಒಳಪೇಟೆಗೆ ಬಂದು ಅಲ್ಲೊಂದು ಬಾಡಿಗೆ ಬಿಡಾರದಲ್ಲಿ ಹದಿನೆಂಟು ಜನ ಸಾನ್‌ವಾಲಾಗಳು ಒಟ್ಟೊಟ್ಟಿಗೆ ವಾಸಿಸುತ್ತಿದ್ದರು. ಹಾಗೆ ಬಂದವರು ಸುಮಾರು ಅರುವತ್ತು ಮಂದಿಯಿದ್ದರಂತೆ. ಮಂಗಳೂರಿನ ವಿವಿದೆಡೆ ಬಿಡಾರ ಹೂಡಿ ಪ್ರತಿನಿತ್ಯ ತಂತಮ್ಮ ಸಾಣೆಯಂತ್ರಗಳನ್ನು ಹೆಗಲ ಮೇಲೆ ಹೊತ್ಕೊಂಡು ಇಲ್ಲಿನ ಹಳ್ಳಿ- ಗಲ್ಲಿ, ಬೆಟ್ಟ-ಗುಡ್ಡಗಳಲ್ಲಿ ಮಂಗಳೂರಿನ ಜಡಿಮಳೆಯನ್ನೂ, ಬಿರು ಬಿಸಿಲನ್ನೂ ಲೆಕ್ಕಿಸದೇ ತಿರುಗಾಡಿ ಬದುಕಿನ ಬಂಡಿ ಎಳೆಯುತ್ತಿದ್ದರು.
ಈ ಐವತ್ತೈದು ವರ್ಷಗಳ ಅವಧಿಯಲ್ಲಿ ಶರೀಫಾಕನ ಅಣ್ಣನೂ ಸೇರಿದಂತೆ ಅನೇಕರು ಕಾಲವಾದರೆ ಕೆಲವರು ಹನ್ನೆರಡು ಕಿಲೋ ತೂಗುವ ಸಾಣೆಯಂತ್ರವನ್ನು ಬೇತಾಳನಂತೆ ಹೆಗಲಿಗೇರಿಸಿ ಊರೂರು, ಹಳ್ಳಿ ಗಲ್ಲಿ, ಬೆಟ್ಟ ಗುಡ್ಡ ಹತ್ತಿ ಇಳಿದು ಸುಸ್ತಾಗಿ ಇನ್ನು ಸಾಕು ಎಂದು ಊರು ಸೇರಿದರು. ಮತ್ತೆ ಕೆಲವರು ಊರು ಸೇರಿ ಬೇರೆ ವೃತ್ತಿ ಮಾಡ್ಕೊಂಡು ಬದುಕುತ್ತಿದ್ದಾರಂತೆ. ಮೊದಲ ಬ್ಯಾಚಿನ ಸಾನ್‌ವಾಲಾಗಳಲ್ಲಿ ಈಗಲೂ ಇಲ್ಲೇ ಉಳಿದು ಈ ವೃತ್ತಿಯನ್ನು ಮು‌ಂದುವರಿಸುತ್ತಿರುವವರು ಶರೀಫಾಕ ಒಬ್ಬರೇ. ಶರೀಫಾಕ ಶಾಲೆಯ ಮೆಟ್ಟಿಲು ತುಳಿದೇ ಇಲ್ಲ. ಆಗ ಅವರ ಊರಿನ ಸಾನ್‌ವಾಲಾ ಸಮುದಾಯದಲ್ಲಿ ಶಾಲೆಗೆ ಹೋಗುವುದೆಂಬ ಪರಿಕಲ್ಪನೆಯೂ ಇರಲಿಲ್ಲ ಎಂದು ಶರೀಫಾಕ ಹೇಳುತ್ತಾರೆ.

ಆದರೆ ಶರೀಫಾಕ ಬಹುಭಾಷಾ ಪ್ರವೀಣ. ತೆಲುಗು, ಉರ್ದು, ಕನ್ನಡ, ತುಳು, ಬ್ಯಾರಿ, ಮಲಾಮೆ ಇವಿಷ್ಟು ಭಾಷೆಗಳನ್ನು ಅವರ ಮಾತೃಭಾಷೆಯೆಂಬಷ್ಟು ಚೆನ್ನಾಗಿ ಮಾತನಾಡಬಲ್ಲರು. ಕೊಂಕಣಿ ಮತ್ತು ಮಲಯಾಳಂ ಭಾಷೆಯನ್ನು ಅರ್ಥೈಸಬಲ್ಲರು ಮತ್ತು ತನ್ನ ವೃತ್ತಿಗೆ ಬೇಕಾದಷ್ಟು ಮಾತನಾಡಬಲ್ಲರು.
ಅವರಿಗೆ ಮಂಗಳೂರು ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳ ಓಣಿ- ಒರುಕುಗಳೆಲ್ಲಾ ಗೊತ್ತು. ಮತ್ತು ಪಕ್ಕದ ಬಂಟ್ವಾಳ ತಾಲೂಕಿನ ಅನೇಕ ಊರುಗಳ ಗಲ್ಲಿ ಗಲ್ಲಿಗಳೂ ಗೊತ್ತು.‌ ಯಾವ ಮನೆಯಲ್ಲಿ ಇಂದಿಗೂ ಬೀಡಿ ಕಟ್ಟುತ್ತಾರೆಂದು ಗೊತ್ತು. ನಮ್ಮ ಕನ್ನಡದ ಪ್ರಸಿದ್ಧ ಜಾನಪದ ಹಾಡು “ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ” ಹಾಡಿನಂತೆ ಪಕ್ಕದ ಹಳ್ಳಿಯಿಂದ ಮದುವೆಯಾಗಿ ಬಂದ ಸೊಸೆಯಂದಿರು ತನ್ನವ್ವನ, ತನ್ನತ್ತಿಗೆಯ ಕತ್ತರಿಗೆ ಸಾಣೆ ಹಿಡಿಯಲಿದೆಯೆಂದು ಶರೀಫಾಕನನ್ನು ಕಳುಹಿಸುವುದೂ ಇದೆ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಸುಬಿನಲ್ಲಿ ಕಳೆದ ಐವತ್ತೈದು ವರ್ಷಗಳಲ್ಲಿ ಆದ ಪ್ರತೀ ಏರಿಳಿತ, ಕಷ್ಟ, ನಷ್ಟ ಇವೆಲ್ಲವೂ ಶರೀಫಾಕನಿಗೆ ಗೊತ್ತಿದೆ. ಯಾಕೆಂದರೆ ಅವರ ಬದುಕು ಅಷ್ಟರ ಮಟ್ಟಿಗೆ ಬೀಡಿ ಕಸುಬಿನ ಮೇಲೆ ಅವಲಂಬಿತವಾಗಿದೆ. ಅವರ ಕತ್ತರಿ ಸಾಣೆ ಕಸುಬು ಇಂದು ಲಾಭದಾಯಕವಾಗಿ ನಡೆಯುತ್ತಿಲ್ಲ. ತನಗೆ ಬದುಕು ಕೊಟ್ಟ ಮಂಗಳೂರನ್ನು ತ್ಯಜಿಸಲು ಅವರ ಈ ನೆಲದೊಂದಿಗಿನ ಭಾವನಾತ್ಮಕ ನಂಟು ಬಿಡುತ್ತಿಲ್ಲ. ಮಂಗಳೂರಿನಲ್ಲಿ ಎಷ್ಟೇ ಕೋಮು ಸಂಘರ್ಷಗಳು ನಡೆದರೂ, ಎಂತಹದ್ದೇ ವ್ಯಾಪಾರ ಬಹಿಷ್ಕಾರಗಳು ನಡೆದರೂ ಮನೆ ಮನೆಗೆ ಸಾಣೆಯ ಯಂತ್ರ ಹೊತ್ತು ನಡೆಯುವ ಶರೀಫಾಕನನ್ನು ಯಾವುದೂ ಬಾಧಿಸಿಲ್ಲ. ಯಾರೂ ಬಹಿಷ್ಕರಿಸಿಲ್ಲ. ಬೀಡಿ ಕಸುಬು ಹಂತ ಹಂತವಾಗಿ ಕ್ಷೀಣಿಸುತ್ತಿರುವುದರಿಂದ ಮತ್ತು ಆಧುನಿಕತೆಗೆ ಒಗ್ಗಿಕೊಂಡು ಬೈಕು ಓಡಿಸುವುದು ಅವರಿಗೆ ಒಗ್ಗುತ್ತಿಲ್ಲವಾದ್ದರಿಂದ ಮಾತ್ರ ಅವರ ಆದಾಯ ಕಡಿಮೆಯಾಗುತ್ತಾ ಬಂದಿದೆ. ಆದರೂ ಸಾಧ್ಯವಾದಷ್ಟು ದಿನ ದುಡಿಯುವೆ ಎಂಬ ಛಲ ಅವರದು.

  • ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬದಲಾವಣೆ ಅನಿವಾರ್ಯ, ಆದರೆ ಬದಲಾವಣೆಗಳಿಂದ ಬವಣೆ ಗಳಿಗೆ ಒಳಗಾಗುವವರು ಯಾವಾಗಲೂ ದುಡಿಯುವ ವರ್ಗದವರು,

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....