Homeಅಂಕಣಗಳುಈ ಒಂದು ಸಂದೇಶ ಹೋಗಬೇಕಿತ್ತು... ಇನ್ನೂ ಬಲವಾಗಿ

ಈ ಒಂದು ಸಂದೇಶ ಹೋಗಬೇಕಿತ್ತು… ಇನ್ನೂ ಬಲವಾಗಿ

- Advertisement -
- Advertisement -

ಅಂದು ಹಿಂದುಳಿದ ವರ್ಗಗಳ ಹರಿಕಾರನೆಂದು ಕೊಂಡಾಡಲ್ಪಡುತ್ತಿರುವ ದೇವರಾಜ ಅರಸರನ್ನು ಅವಮಾನಕಾರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 1978ರಲ್ಲಿ ದೇವರಾಜ ಅರಸರ ನೇತೃತ್ವದಲ್ಲೇ ಗೆದ್ದಿದ್ದ ಕಾಂಗ್ರೆಸ್ ಪಕ್ಷವು 1983ರ ವಿಧಾನಸಭಾ ಚುನಾವಣೆಯಲ್ಲಿ ಸೋತು, ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರವು ಅಧಿಕಾರಕ್ಕೆ ಬಂದಿತ್ತು. ಆಗ ಅಧಿಕಾರಕ್ಕೇರಿದ್ದ ಜನತಾಪಕ್ಷವು ವಾಸ್ತವದಲ್ಲಿ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳ ಒಂದು ಮಟ್ಟಿಗಿನ ಧ್ರುವೀಕರಣದ ಫಲವಾಗಿ ಕಾಂಗ್ರೆಸ್ಸನ್ನು ಸೋಲಿಸಿತ್ತು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ‘ಜನತಾರಂಗ’ ಮೈತ್ರಿಕೂಟದ ರಂಗ – ಕ್ರಾಂತಿರಂಗವು ಸ್ವತಃ ದೇವರಾಜ ಅರಸರು ಸ್ಥಾಪಿಸಿದ್ದ ಮತ್ತು ಹಿಂದುಳಿದ ವರ್ಗಗಳ ನಾಯಕ ಎಸ್.ಬಂಗಾರಪ್ಪನವರ ನೇತೃತ್ವದಲ್ಲಿ ಅವರ ಜೊತೆಗೂಡಿತ್ತು. ಆದರೆ, ಬಂಗಾರಪ್ಪನವರು ಹೊಸ ಸರ್ಕಾರದಲ್ಲಿ ಮಂತ್ರಿಯೂ ಆಗಲಿಲ್ಲ. ಅವರೂ ಸೇರಿದಂತೆ ಕ್ರಾಂತಿರಂಗದ ಕೆಲವು ನಾಯಕರುಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಕಾಂಗ್ರೆಸ್ಸನ್ನು ಸೇರಿಕೊಂಡರು. ಒಟ್ಟಾರೆ ನೋಡುವುದಾದರೆ ಜನತಾ ಪರಿವಾರವೆಂಬುದು ಮೇಲ್ಜಾತಿ ನಾಯಕತ್ವದ ಮತ್ತು ಮೇಲ್ಜಾತಿ ಸಮೂಹ ನೆಲೆಯ ಪಕ್ಷವಾಗಿ ಉಳಿದುಕೊಂಡಿತು. ಆ ನಂತರ 1989 ಮತ್ತು 1999ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಾದರೂ, ಆಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದದ್ದು ಕ್ರಮವಾಗಿ ಲಿಂಗಾಯಿತ ಹಾಗೂ ಒಕ್ಕಲಿಗ ನಾಯಕರುಗಳು.
ಈ ರಾಜ್ಯದಲ್ಲಿ ಶೋಷಿತ ಸಮುದಾಯಗಳು ಒಂದಾಗಿ ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ವಾದಕ್ಕೆ ಪುರಾವೆಗಳನ್ನಾಗಿ ಈ ಮೇಲಿನ ವಿಶ್ಲೇಷಣೆಯನ್ನು ಕೆಲವರು ಮುಂದಿಡುತ್ತಿದ್ದಾರೆ. 2018ರ ಚುನಾವಣೆಯು ಮತ್ತೆ ಅದೇ ಸಂದೇಶವನ್ನು ಕೊಟ್ಟಿದೆ ಎಂಬ ಅನಿಸಿಕೆಯ ಹಿನ್ನೆಲೆಯಲ್ಲಿ ಈಗ ಮತ್ತೆ ಇತಿಹಾಸವನ್ನು ಕೆದಕಬೇಕಾಗಿ ಬಂದಿದೆ. ಮೇಲೆ ಹೇಳಲಾದ ಅಂಶಗಳು ವಾಸ್ತವವೇ. ಇವಿಷ್ಟನ್ನೇ ನೋಡಿದರೆ, ಹೌದಲ್ಲವೇ ಎನಿಸದಿರದು. ಈ ವಾದವನ್ನು ಪುಷ್ಟೀಕರಿಸುವ ಇನ್ನಷ್ಟು ಮಾತುಗಳನ್ನೂ ಜೋಡಿಸಬಹುದು.
ಆದರೆ, ಇವಿಷ್ಟೇ ವಾಸ್ತವವಲ್ಲ. ಅಂದು ಅವಮಾನಕಾರಿಯಾಗಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದ ಮತ್ತು ಸಾಯುವ ಹೊತ್ತಿಗೆ ಬಹುತೇಕ ಎಲ್ಲಾ ಅನುಯಾಯಿಗಳು ದೂರ ಮಾಡಿದ್ದ ಅರಸರನ್ನು ಇಂದು ಇಡೀ ನಾಡು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ನಾಯಕನೆಂದು ಬಣ್ಣಿಸುತ್ತಿದ್ದಾರೆ. ಆ ಕಾಲದ – ಅಂದರೆ, ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ‘70ರ ದಶಕದ – ಬೆಳವಣಿಗೆಗಳ ಕಾರಣದಿಂದ, ವಿವಿಧ ಶೋಷಿತ ಸಮುದಾಯಗಳು ಎಚ್ಚೆತ್ತುಕೊಂಡಿವೆ. ಹಾಗಾಗಿಯೇ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಜಾರಿಗೆ ಬಂದ ಮೂರು ಸ್ತರಗಳ ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಎಲ್ಲಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕಾಯಿತು. ದೇಶ ಮಟ್ಟದಲ್ಲಿ ಮಂಡಲ್ ಆಯೋಗವು ವಿವಿಧ ಕ್ಷೇತ್ರಗಳಲ್ಲಿ ಇದನ್ನೇ ಮಾಡಿತು.
ಕಾಂಗ್ರೆಸ್ ಪಕ್ಷದಿಂದ ವೀರೇಂದ್ರ ಪಾಟೀಲರ ನಂತರದಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾಗಿ ಬಂದಾಗ ಅತೀ ಹಿಂದುಳಿದ ಜಾತಿಗಳ ಎಸ್.ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿಯವರನ್ನು ಆರಿಸುವುದು ಅನಿವಾರ್ಯತೆಯಾಯ್ತು. 1996ರಲ್ಲಿ ದೇವೇಗೌಡರು ಪ್ರಧಾನಿಗಳಾಗಿ ದೆಹಲಿಗೆ ಹೋದಾಗ, ಲಿಂಗಾಯಿತ ಪಟೇಲರ ಜೊತೆಗೆ ಹಿಂದುಳಿದ ಸಮುದಾಯಗಳ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಯಿತು. ಅಂದಿನಿಂದಲೂ ವಿವಿಧ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗದು ಎಂಬ ಕಟುಸತ್ಯವನ್ನು ಈ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ವಾಸ್ತವವು ಎಲ್ಲಾ ರಾಜಕೀಯ ಪಕ್ಷಗಳಿಗೂ ಮನದಟ್ಟು ಮಾಡಿಸಿವೆ. ಬಿಜೆಪಿಯಲ್ಲೂ, ಜಗದೀಶ್ ಶೆಟ್ಟರ್ ಕ್ಯಾಬಿನೆಟ್‍ನಲ್ಲಿ, ಸದಾನಂದ ಗೌಡರನ್ನು ಇಳಿಸಿದ ಕಾರಣಕ್ಕೆ ಒಕ್ಕಲಿಗರನ್ನು ಸಮಾಧಾನಪಡಿಸಲು ಆರ್.ಅಶೋಕ್‍ರನ್ನು ಮಾತ್ರ ಉಪಮುಖ್ಯಮಂತ್ರಿ ಮಾಡಲಿಲ್ಲ; ಕೆ.ಎಸ್.ಈಶ್ವರಪ್ಪನವರನ್ನೂ ಡಿಸಿಎಂ ಮಾಡಬೇಕಾಯಿತು.
ಇವೆಲ್ಲವೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿವೆ. ಅದನ್ನೂ ದಾಟಿ ದಲಿತ ಸಮುದಾಯವನ್ನು ‘ಹೇಗೂ ನಮ್ಮ ಹಿಂದೆ ಬರುವವರು’ ಎಂದು ಕಾಂಗ್ರೆಸ್ ಪಕ್ಷವೂ ಭಾವಿಸಲು ಸಾಧ್ಯವಿಲ್ಲ, ಉಳಿದ ಪಕ್ಷಗಳೂ ದಲಿತರನ್ನು ಒಡೆಯಲೋ ಅಥವಾ ಓಲೈಕೆ ಮಾಡಲೋ ಏನಾದರೂ ಮಾಡುತ್ತಲೇ ಬಂದಿವೆ. ಸಿದ್ದರಾಮಯ್ಯನವರು ಮುಂದಿಡಲು ಪ್ರಯತ್ನಿಸಿದ ಅಹಿಂದ ಧ್ರುವೀಕರಣದ ಸಮೀಕರಣಕ್ಕೆ ಈ ಚುನಾವಣೆಯಲ್ಲಿ ಕ್ಷೇತ್ರವಾರು ಫಲಿತಾಂಶದಲ್ಲಿ ಸೋಲುಂಟಾಗಿದ್ದು ವಾಸ್ತವ. ಹೀಗಿದ್ದರೂ ಎಲ್ಲರಿಗಿಂತ ಹೆಚ್ಚು ಮತ ಗಳಿಸಿದ್ದು ಮಾತ್ರವಲ್ಲದೇ, ಹಿಂದಿನೆರಡು ಚುನಾವಣೆಗಳಿಗಿಂತ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಲೂ ಈ ಧ್ರುವೀಕರಣ ನೆರವಾಗಿದೆ ಎಂಬ ವಾಸ್ತವವನ್ನೂ ಮರೆಯಲಾಗದು.
ಹೀಗಾಗಿ ಚುನಾವಣೆಯ ಫಲಿತಾಂಶದ ಹೊತ್ತಿನ ಸಣ್ಣ ಶಾಕ್‍ನಿಂದ ಅಹಿಂದ ಸಮುದಾಯವು ಚೇತರಿಸಿಕೊಂಡು, ತನ್ನ ಅಸ್ತಿತ್ವವನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಆರಂಭಿಸಿದೆ. ಸತೀಶ್ ಜಾರಕಿಹೊಳಿಯವರಿಗೂ, ಇತರ ಶೋಷಿತ ಸಮುದಾಯಗಳ ಹಿನ್ನೆಲೆಯ ನಾಯಕರಿಗೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣವನ್ನೂ ಇಟ್ಟುಕೊಂಡು ಜೂನ್ 19ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಜನಾಗ್ರಹ ಸಮಾವೇಶವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿ ನಡೆಯಬೇಕಿದ್ದ ಕಾರ್ಯಕ್ರಮ ಅದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯಗಳಿಗೂ ಅವಕಾಶ ಇರಬೇಕು. ಶೋಷಿತ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಇರಬೇಕು. ಆದರೆ, ಅದು ತಿರುವುಮುರುವಾಗುತ್ತಿದೆ ಎನಿಸಿದಾಗ, ದನಿಯೆತ್ತದೇ ಇದ್ದರೆ, ಅಂತಹ ಸಮುದಾಯಗಳಿನ್ನೂ ದನಿಯನ್ನು ಪಡೆದುಕೊಂಡಿಲ್ಲ ಎಂದಾಗುತ್ತದೆ. ಅದರರ್ಥ ಯಾವ ದೇವರಾಜ ಅರಸರನ್ನು ಅಥವಾ ಸಿದ್ದರಾಮಯ್ಯನವರನ್ನು ಕೊಂಡಾಡಲಾಗುತ್ತಿದೆಯೋ, ಅವರ ಪ್ರಯತ್ನಗಳೇ ವಿಫಲವಾದವು ಎನಿಸಿಬಿಡುತ್ತದೆ. ಕಾರ್ಯಕ್ರಮದ ಆಯೋಜಕರು ಜಾರಕಿಹೊಳಿಯವರ ದೊಡ್ಡ ಫೋಟೋವನ್ನು ಬ್ಯಾನರ್‍ನಲ್ಲಿ ಹಾಕಿ ಸಂದೇಶದ ವೈಶಾಲ್ಯತೆಯನ್ನು ಕುಗ್ಗಿಸಿದರು ಎಂಬುದನ್ನು ಬಿಟ್ಟರೆ, ಅವರುಗಳ ಮಾತುಗಳು ಸಾಮಾಜಿಕ ನ್ಯಾಯದ ಕುರಿತಂತೆಯೇ ಇದ್ದವು.
ಆದರೆ, ಹಿಂದುಳಿದ ವರ್ಗಗಳ ರಾಜಕಾರಣವು ಈಚಿನ ದಿನಗಳಲ್ಲಿ ಎದುರಿಸುತ್ತಿರುವ ಕೊರತೆ ಈ ಪ್ರಯತ್ನದಲ್ಲೂ ಎದ್ದು ಕಂಡಿತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಶಕ್ತಿ ಪ್ರದರ್ಶನವನ್ನಾಗಿ ನೋಡಲಾಗುತ್ತದೆ. ಮಾಧ್ಯಮಗಳು ಇದನ್ನೂ ಹಾಗೆ ಬಿಂಬಿಸಲು ಪ್ರಯತ್ನಿಸಿದ್ದವು, ಅದರಲ್ಲೂ ಜಾರಕಿಹೊಳಿಯವರ ಪರವಾಗಿ, ಅವರೇ ಸಂಘಟಿಸುತ್ತಿರುವ ಕಾರ್ಯಕ್ರಮವೆಂಬಂತೆ ಬಿಂಬಿಸಲು ಹೊರಟಿದ್ದವು. ಅದು ಸತ್ಯವಾಗಿರಲಿಲ್ಲ. ಆದರೆ, ಕಾರ್ಯಕ್ರಮ ಕೊಡಬಯಸಿದ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಲು ಆಯೋಜಕರು ಹೆಚ್ಚಿನ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿತ್ತು.
ಈಗಾಗಲೇ ರಾಜಕೀಯ ಎಚ್ಚರವನ್ನು ಪಡೆದುಕೊಂಡಿರುವ ಸಮುದಾಯಗಳು ಗುಟುರು ಹಾಕುವುದಾದರೆ, ಅದನ್ನು ಬಲವಾಗಿಯೇ ಮಾಡಬೇಕು. ಇಲ್ಲವಾದರೆ, ಅದು ‘ಪರ್ಯಾಯ ರಾಜಕಾರಣ’ದ ಅರೆಬೆಂದ ಪ್ರಯತ್ನಗಳನ್ನು ಮಾಡಿದ ಹಲವರ ‘ಸದುದ್ದೇಶದ ಆದರೆ, ಅತ್ಯಂತ ದುರ್ಬಲ’ ನಗೆಪಾಟಲಿನ ಕಾರ್ಯಕ್ರಮಗಳಾಗಿ ಕೊನೆಗೊಳ್ಳುವ ಸಾಧ್ಯತೆ ಇರುತ್ತದೆ.
ಶಕ್ತಿ ಪ್ರದರ್ಶನದ ಉದ್ದೇಶ ಇಲ್ಲದಿದ್ದಾಗ, ಇಡೀ ಶೋಷಿತ ಸಮುದಾಯಗಳ ಇಶ್ಯೂವನ್ನು ಸಮರ್ಥವಾಗಿ ಮುಂದಿಡುವ ಪ್ರಯತ್ನವಾದರೂ ಬೇಕಾಗುತ್ತದೆ. ಉದಾಹರಣೆಗೆ ಎರಡೂ ಪಕ್ಷಗಳು ಸೇರಿ ರೂಪಿಸಲು ಪ್ರಯತ್ನಿಸುತ್ತಿರುವ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿ ಅಹಿಂದ ಸಮುದಾಯದ ಕಾರ್ಯಸೂಚಿ ಹೇಗೆ ಬರಬೇಕೆಂದು ಮುಂದಿಡುವ ಪ್ರಯತ್ನ ಮಾಡಬಹುದಿತ್ತು. ಸಿದ್ದರಾಮಯ್ಯನವರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆಗನುಗುಣವಾಗಿ ಬಜೆಟ್ ಮೀಸಲಿರಿಸಿ ತಂದ ಕಾಯ್ದೆ ಹಾಗೂ ನಿಯಮಗಳನ್ನು ನಿಜಕ್ಕೂ ಅನುಷ್ಠಾನಗೊಳಿಸುವ ‘ಕ್ರಿಯಾಯೋಜನೆ’ (ಂಛಿಣioಟಿ ಠಿಟಚಿಟಿ) ತಯಾರಾಗಿಯೇ ಇಲ್ಲ. ಅಂಥದ್ದನ್ನು ವಿಶೇಷ ಪ್ರತಿನಿಧಿಗಳುಳ್ಳ ಸಮಾವೇಶದಲ್ಲಿ ಮಂಡನೆ ಮಾಡುವುದು ಮಾತ್ರವಲ್ಲದೇ, ಅದನ್ನು ಅನುಷ್ಠಾನಕ್ಕೆ ತರದೇ ಇರಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಸೃಷ್ಟಿ ಮಾಡಲು ಬೇಕಾದ ಆಂದೋಲನ ಹಾಗೂ ಲಾಬಿ ಎರಡೂ ಇಂದಿನ ತುರ್ತಾಗಿದೆ.
ಯಾರೇ ಅಧಿಕಾರಕ್ಕೆ ಬಂದರೂ, ದಮನಿತ ಸಮುದಾಯಗಳನ್ನು ನಿರ್ಲಕ್ಷಿಸಲಾಗದಂತೆ ಆಂದೋಲನ ರೂಪಿಸುವ ಕೌಶಲವನ್ನು ದುರ್ಬಲರು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಕೆಲವು ನಾಯಕರುಗಳಷ್ಟೇ ಬಲಿಷ್ಠರಾಗುವ ಬದಲು ಇಡೀ ಸಮುದಾಯ ಪ್ರಬಲವಾಗಬೇಕು. ದಲಿತ ಚಳವಳಿಯು ಇದನ್ನು ಮೊದಲ ದಶಕದಲ್ಲಿ ಸಮರ್ಥವಾಗಿ ಮಾಡಿತು. ನಂತರದಲ್ಲಿ ಇಡೀ ಚಳವಳಿಯ ಲಾಭವನ್ನು, ತಾವು ಸಚಿವರಾಗಲು ರಾಜಕಾರಣಿಗಳು ಬಳಸಿಕೊಂಡರು. ಭವಿಷ್ಯದಲ್ಲಿ ಹಾಗಾಗದಂತೆ, ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣವನ್ನು ಸಾಧಿಸುವಂತಹ ಚಳವಳಿಗಳು ಮುನ್ನೆಲೆಗೆ ಬರಬೇಕು. ಇವೇ ರಾಜಕೀಯವಾಗಿ ಸಂಘಟಿತಗೊಳ್ಳಬೇಕಾದ ಅರಿವನ್ನೂ ರೂಪಿಸಬಲ್ಲವು. ಈ ಸಮಾವೇಶವನ್ನು ಒಂದು ಮುನ್ನುಡಿಯೆಂದಷ್ಟೇ ಭಾವಿಸಿ, ದೂರಗಾಮಿ ಮುನ್ನೋಟದೊಂದಿಗೆ ‘ಆಂದೋಲನದ ಕ್ರಿಯಾಯೋಜನೆ’ ರೂಪಿಸಬೇಕಾದದ್ದು ಇಂದಿನ ತುರ್ತು.

– ಸಂಪಾದಕ ಮಂಡಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...