ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಈಶ್ವರಪ್ಪನವರನ್ನು ಸದ್ಯಕ್ಕೆ ಸಚಿವ ಸಂಪುಟದಲ್ಲಿ ಇರುತ್ತಾರೆ. ಪ್ರಾಥಮಿಕ ತನಿಖೆ ಆರಂಭವಾಗಿದೆ. ತನಿಖೆಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈ ಹಿಂದೆಯೇ ಹೇಳಿದಂತೆ ಯಾರ ಮೇಲೆಯೂ ಈ ಕೂಡಲೇ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಪ್ರಾಥಮಿಕ ತನಿಖೆ ಆರಂಭವಾಗಿದ್ದು ಅದರ ಫಲಿತಾಂಶದ ಮೇಲೆಷ್ಟೆ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
ಈಶ್ವರಪ್ಪನವರ ರಾಜೀನಾಮೆಗೆ ಬಿಜೆಪಿ ಹೈಕಮಾಂಡ್ ಒತ್ತಡ ಹೇರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೈಕಮಾಂಡ್ಗೆ ಪ್ರಕರಣದ ಕುರಿತು ಮಾಹಿತಿ ನೀಡಿದ್ದೇವೆ. ಆದರೆ ಹೈಕಮಾಂಡ್ ಯಾವುದೇ ಸಲಹೆ-ಸೂಚನೆ ನೀಡಿಲ್ಲ, ನನ್ನ ಮೆಲೆ ಯಾವುದೇ ಒತ್ತಡವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಲು ಸಾಧ್ಯ. ನಂತರವಷ್ಟೇ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ 40% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿರುವುದರ ಬಗ್ಗೆ ಗುತ್ತಿಗೆದಾರ ಸಂಘದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವೆಲ್ಲವೂ ಆಧಾರರಹಿತ ಆರೋಪಗಳಾಗಿವೆ. ಭ್ರಷ್ಟಾಚಾರ ನಡೆದುದ್ದರ ಬಗ್ಗೆ ದಾಖಲೆ ಒದಗಿಸಿದರೆ ನಾವು ತನಿಖೆಗೆ ಸಿದ್ದ” ಎಂದಿದ್ದಾರೆ.
ಕಾಂಗ್ರೆಸ್ ಅವಧಿಯಲ್ಲಿಯೇ ಹೆಚ್ಚಿನ ಭ್ರಷ್ಟಾಚಾರಗಳು ನಡೆದಿವೆ. ಹಾಗಾಗಿ ಸಂತೋಷ್ ಸಾವನ್ನು ಇಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮೃತ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ
ಇನ್ನೊಂದೆಡೆ ಬೆಳಗಾವಿಯಲ್ಲಿ ಮೃತ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ನೆರವೇರಿದೆ. ಆರಂಭದಲ್ಲಿ ಬಿಜೆಪಿಯ ಹಿರಿಯ ಮುಖಂಡರು ಸ್ಥಳಕ್ಕೆ ಆಗಮಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಸಂಬಂಧಿಗಳು ಪಟ್ಟು ಹಿಡಿದಿದ್ದರು. ಸಚಿವ ಈಶ್ವರಪ್ಪನ ರಾಜೀನಾಮೆ ಪಡೆದು ಬಂಧಿಸಬೇಕೆಂದು ಆಗ್ರಹಿಸಿದ್ದರು. ನಂತರ ಕಾಂಗ್ರೆಸ್ ಮುಖಂಡರಾದ ಅದಿವೇಶ್ ಇಟಗಿ ಮಾತನಾಡಿ ಸಂಬಂಧಿಗಳನ್ನು ಸಮಾಧಾನ ಪಡಿಸಿದರು. ನಂತರ ಅಂತ್ಯಕ್ರಿಯೆ ಜರುಗಿದೆ.
ಇದನ್ನೂ ಓದಿ: Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತು



ಹೈಕಮಾಂಡ್ ಆಗಿರುವ ಎಲ್ಲಾರೂ ಒಂದೊಲ್ಲ ಒಂದು ಪ್ರಕರಣಗಳಲ್ಲಿ ಭಾಗಿಯಾಗಿರುವವರು ಅದಕ್ಕಾಗಿ ಒತ್ತಡ ಹಾಕಿಲ್ಲ ಏಕೆಂದರೆ ನಾವು ಮಾಡಿದ್ದು ಅವನು ಮಾಡಿದ್ದಾನೆಂದು ಸುಮ್ಮನೆ ಇದ್ದಾರೆ