Homeಪುಸ್ತಕ ವಿಮರ್ಶೆಭ್ರಮೆ ಮತ್ತು ವಾಸ್ತವಗಳ ನಡುವೆ ಪುಸ್ತಕದ ಆಯ್ದ ಭಾಗ; ಯು.ಜಿ.ಕೃಷ್ಣಮೂರ್ತಿ ರಮಣರನ್ನು ಭೇಟಿಯಾದುದು

ಭ್ರಮೆ ಮತ್ತು ವಾಸ್ತವಗಳ ನಡುವೆ ಪುಸ್ತಕದ ಆಯ್ದ ಭಾಗ; ಯು.ಜಿ.ಕೃಷ್ಣಮೂರ್ತಿ ರಮಣರನ್ನು ಭೇಟಿಯಾದುದು

- Advertisement -
- Advertisement -

1939ರಲ್ಲಿ ಇದೇ ಕೋಣೆಯಲ್ಲೆಲ್ಲೋ ಕುಳಿತು ರಮಣರಿಗೆ ಯು.ಜಿ.ಕೃಷ್ಣಮೂರ್ತಿಯು ಕೇಳಿದ ಕೆಲವು ಆಧ್ಯಾತ್ಮಿಕ ಪ್ರಶ್ನೆಗಳು ಇಂದು ದಂತಕಥೆಯಂತೆ ಚಾಲ್ತಿಯಲ್ಲಿವೆ. ಆಗಲೇ ಅನೇಕ ವರ್ಷಗಳ ಸಾಧನೆ, ಧ್ಯಾನ ಮತ್ತು ಆಧ್ಯಾತ್ಮಿಕ ಅನುಭವಗಳನ್ನು ಪಡೆದಿದ್ದ ಯುಜಿಗೆ ಮೂಲಭೂತವಾಗಿ ತನ್ನಲ್ಲೇನೂ ಬದಲಾವಣೆ ಆಗಿಲ್ಲದಿರುವುದು ನೋವಿನ ಸಂಗತಿಯಾಗಿತ್ತು. ಎಲ್ಲಾ ಬಗೆಯ ಆಧ್ಯಾತ್ಮ ಸಾಧನೆಗಳ, ಮಾರ್ಗಗಳ ಬಗೆಗೆ ಅನುಮಾನ ಹೊಂದಿದ್ದ ಯುಜಿ ಒಂದು ಬಗೆಯ ನಾಸ್ತಿಕನಾಗಿ ಪರಿವರ್ತಿತರಾಗಿದ್ದರು.

ಆಗ ರಮಣರಿಗೆ 60 ವರ್ಷ, ಯುಜಿಗೆ 21 ವರ್ಷ ವಯಸ್ಸು. ಯುಜಿ ರಮಣರನ್ನು ಭೇಟಿಯಾದ ದಿನ ರಮಣರು ಇದೇ ಮಂಚದ ಮೇಲೆ ತಮ್ಮ ಕಾಲುಗಳನ್ನು ಮಡಚಿಕೊಂಡು ಕುಳಿತಿದ್ದರು. ಸೊಂಟದ ಮೇಲಿನ ತುಂಡು ಬಟ್ಟೆ ಬಿಟ್ಟರೆ, ಅವರ ದೇಹದ ಮೇಲೆ ಬೇರಾವುದೇ ಬಟ್ಟೆಗಳಿರಲಿಲ್ಲ. ಕ್ಷೌರ ಮಾಡಿಸಿದ ಬಿಳಿದಾದ ಕೂದಲುಗಳ ತಲೆ, ಬಿಳಿದಾದ ಕುರುಚಲು ಗಡ್ಡ, ವಿಶಾಲವಾದ ಕಿಟಕಿಯಿಂದ ಬರುತ್ತಿದ್ದ ಬಿಸಿಲಿಗೆ ಹೊಳೆಯುವ ತಾಮ್ರದ ಮೈಬಣ್ಣ. ತೊಡೆಗಳ ಮೇಲೆ ಈಳಿಗೆ ಮಣೆ ಇರಿಸಿಕೊಂಡು ನಿಧಾನಕ್ಕೆ ತರಕಾರಿಯನ್ನು ಹೆಚ್ಚುತ್ತಿದ್ದರು ರಮಣರು. ಆಗಾಗ ಕತ್ತೆತ್ತಿ ಕಿಟಕಿಯ ಹೊರಗೆ ಕಾಣುವ ಹಸಿರು ಬಯಲ ಕಡೆಗೆ ನಿಟ್ಟಿಸುತ್ತಾ, ಸುತ್ತಲೂ ಸುಮ್ಮನೊಮ್ಮೆ ನೋಡುತ್ತಾ ತಮ್ಮ ಕೆಲಸದಲ್ಲಿ ತಾವು ಮಗ್ನರಾಗಿದ್ದರು. ಅಲ್ಲಿದ್ದ ಇತರ ಎಲ್ಲರೂ ಗಾಢವಾದ ಮೌನದಲ್ಲಿದ್ದು, ಈ ಶಾಂತಸಾಗರದಲ್ಲಿ ಧ್ಯಾನಸ್ಥರಾಗಿರುವುದೇ ಧನ್ಯತೆ ಎಂಬಂತೆ ಕುಳಿತಿದ್ದರು.

ಕಲ್ಲಿನ ನೆಲದ ಮೇಲೆ ಕುಳಿತ ಯು.ಜಿ ಕೃಷ್ಣಮೂರ್ತಿಯ ಮನಸಿನಲ್ಲಿ ’ಇವರು ನನಗೆ ಹೇಗೆ ಸಹಾಯ ಮಾಡಬಲ್ಲರು’ ಎಂಬ ಆಲೋಚನೆ ಹಾಗೆಯೇ ಹಾದು ಹೋಗುತ್ತಿತ್ತು. ಕೊನೆಗೊಮ್ಮೆ ಸಂತ ರಮಣರು ತಲೆಯೆತ್ತಿ ಇವರನ್ನು ನೋಡಿದರು. ಇಬ್ಬರ ಕಣ್ಣುಗಳು ಕೆಲಕ್ಷಣ ಸಂಧಿಸಿದವು. ಯು.ಜಿ ಕೃಷ್ಣಮೂರ್ತಿಯು ಕೇಳಿದರು “ಮೋಕ್ಷ ಅನ್ನುವುದು ಇದೆಯಾ?” ರಮಣರ ಉತ್ತರವು ಸಕಾರಾತ್ಮಕವಾಗಿತ್ತು.

“ಕೆಲವೊಮ್ಮೆ ನಾವು ಸ್ವತಂತ್ರರೂ ಮತ್ತೆ ಕೆಲವೊಮ್ಮೆ ಬಂಧಿಗಳೂ ಆಗಿರಲು ಸಾಧ್ಯವೇ?”

“ಒಂದು, ನೀವು ಸ್ವತಂತ್ರರಾಗಿರಬಹುದು ಅಥವಾ ನೀವು ಎಂದೆಂದಿಗೂ ಸ್ವತಂತ್ರರಾಗಲು ಸಾಧ್ಯವಿಲ್ಲ”

“ಇದರಲ್ಲೇನಾದರೂ ಹಂತಗಳಿವೆಯಾ?”

“ಇಲ್ಲ, ಯಾವುದೇ ಹಂತಗಳಿಲ್ಲ, ಒಂದೋ ನೀವಲ್ಲಿ ತಲುಪಿರುತ್ತೀರಿ, ಇಲ್ಲ ತಲುಪಿರುವುದಿಲ್ಲ. ಅಷ್ಟೇ”

“ನೀವು ಅದನ್ನು ನನಗೆ ಕೊಡಬಹುದೇ?”

“ನಾನು ಕೊಡಬಲ್ಲೆ, ಆದರೆ ನೀನು ಪಡೆದುಕೊಳ್ಳಬಲ್ಲೆಯಾ?”2

“ನೀನು ಪಡೆದುಕೊಳ್ಳಬಲ್ಲೆಯಾ?” ಹೀಗೆ ಹಿಂದೆಂದೂ, ಯಾವ ಗುರುವೂ ಉತ್ತರಿಸಿರಲಿಲ್ಲ. ಈ ಮರುಪ್ರಶ್ನೆಯು ಯುಜಿಗೆ ಸಿಡಿಲಿನಂತೆ ಅಪ್ಪಳಿಸಿತು. ಹಿಂದೆ ಯುಜಿ ಭೇಟಿ ಮಾಡಿದ್ದ ಇತರೆ ಗುರುಗಳೆಲ್ಲಾ, ಇನ್ನಷ್ಟು ಕಾಲ ಗಾಢ ಸಾಧನೆ ಮಾಡಿದ ನಂತರ ಮುಕ್ತಿ ಸಿಗಬಹುದೆಂದು ನುಡಿದಿದ್ದರು. ಇದುವರೆಗೂ ಯುಜಿ ಅನೇಕ ವಿಧದ ಕಠಿಣತಮ ಸಾಧನೆಗಳಲ್ಲಿ ತೊಡಗಿಸಿಕೊಂಡಿದ್ದು, ಕೆಲವು ಆಧ್ಯಾತ್ಮಿಕ ಅವಸ್ಥೆಗಳನ್ನೂ ಅನುಭವಿಸಿದ್ದರು.

ಆದರೂ ಅನೇಕ ಪ್ರಶ್ನೆಗಳು, ಅನುಮಾನಗಳು ಹಾಗೆಯೇ ಉಳಿದಿದ್ದವು. ರಮಣರು ಕೊಟ್ಟ ಉತ್ತರದಿಂದ ಯುಜಿಗೆ ತನ್ನ ಪ್ರಶ್ನೆಗೆ ತಾನೇ ಉತ್ತರಗಳನ್ನು, ಅದು ಹೇಗೆಯೇ ಇರಲಿ ತನಗೆ ತಾನೇ ಕಂಡುಕೊಳ್ಳಬೇಕೆಂಬುದು ಸ್ಪಷ್ಟವಾಯಿತು. ಹೀಗೆ ತನ್ನ ಸ್ವಂತ ಕಾಲುಗಳ ಮೇಲೆ ತಾನು ನಿಲ್ಲಬೇಕೆಂಬುದನ್ನು ರಮಣರು ಕಲಿಸಿದ್ದರು. ’ನಾನೀಗ ನನ್ನ ದಾರಿ ಹಿಡಿದು ಸಾಗಬೇಕು’ ಎಂದು ಯುಜಿ ನಿರ್ಧರಿಸಿದ್ದರು. “ನಾವೆ, ದೋಣಿ, ದಿಕ್ಸೂಚಿಗಳಿಲ್ಲದೆಯೇ ಯಾರೂ ಕಂಡಿರದ ಸಮುದ್ರದ ಮೇಲೆ ಪ್ರಯಾಣ ಮಾಡುವಂತೆ ಇತ್ತು. ನಾನೇ ಆ ಸ್ಥಿತಿಯನ್ನು ಸ್ವತಃ ಅರಿಯಬೇಕೆಂದು ಅರಿವಾಗಿತ್ತು”. ಹಾಗೆಯೇ ಇಪ್ಪತ್ತೆಂಟು ವರ್ಷಗಳ ನಂತರ ಯುಜಿಗೆ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆತ ದಿನ, ಹುಡುಕಾಟ ಪೂರ್ತಿಯಾಗಿ ನಿಂತ ದಿನ ಕೂಡ ಬಂತು. ಅದೊಂದು ರೋಚಕ ಕಥೆಯಾಗಿದ್ದರೂ, ಈಗ ಬೇಡ. ಈಗ ಹೇಳುತ್ತಿರುವ ಕಥೆಯ ಹಾದಿ ತಪ್ಪಿಹೋಗಬಾರದಲ್ಲ, ಅಲ್ಲಿಗೆ ಮತ್ತೊಮ್ಮೆ ಬರುತ್ತೇನೆ.

* * * * *

ಭಾರತದ ಸಂತರ ಕಥೆಗಳಲ್ಲೆಲ್ಲಾ ರಮಣರ ಕಥೆ ಬಹಳ ವಿಶೇಷವಾದುದು. ಬಹುತೇಕ ಸಂತರ ಜೀವನದಲ್ಲಿ ವಿವಿಧ ಹಂತಗಳಾದ ಅನ್ವೇಷಣೆ, ಸಾಧನೆ, ಮಾಯೆ ಕಳೆಯುವುದು, ಸಾವಿನ ಅನುಭವಕ್ಕೆ ಒಳಗಾಗುವುದು ಮೊದಲಾದ ಅನುಭವಗಳನ್ನು ಪಡೆದು ಮೋಕ್ಷ ಪಡೆದ ಬಗೆಗೆ ತಿಳಿದು ಬರುತ್ತದೆ. ರಮಣರು ಬಾಲ್ಯದಲ್ಲಿ ಸಾವಿನ ಸನಿಹದ ಅನುಭವಕ್ಕೆ ಒಳಗಾದದ್ದು ಇದೆಯಾದರೂ, ಅವರಲ್ಲಿ ಮೊದಲಿಗೆ ಯಾವುದೇ ಬಗೆಯ ಆಧ್ಯಾತ್ಮಿಕ ಹುಡುಕಾಟ, ಸಾಧನೆ, ಪ್ರಜ್ಞಾಪೂರ್ವಕ ಅನ್ವೇಷಣೆಗಳು ಇರಲಿಲ್ಲ. ಯಾವುದೇ ಹಾದಿಯ ಬಾಗಿಲು ಬಡಿಯಲಿಲ್ಲ. ಅಥವಾ ಯಾವುದೇ ಹಾದಿಗಳು ಇದ್ದುದು ಸಹ ಅವರಿಗೆ ಆಗ ತಿಳಿದಿರಲಿಲ್ಲ. ಆದರೂ ಬಾಗಿಲು ತಾನೇ ತೆರೆದುಕೊಂಡಿತು, ಮತ್ತು ರಮಣರು ನೇರವಾಗಿ ನಡೆದುಕೊಂಡು ಹೋಗಿಬಿಟ್ಟರು. ಕೇಳದೆಯೆ ಅವರಿಗೆ ಎಲ್ಲವೂ ದೊರಕಿತ್ತು.

ಆತ್ಮನನ್ನು ಸೂಚನೆಗಳ ಮೂಲಕ ಪಡೆಯಲಾಗುವುದಿಲ್ಲ
ಬುದ್ಧಿಯ ಮೂಲಕ, ಕಲಿಕೆಯ ಮೂಲಕವೂ ಪಡೆಯಲಾಗುವುದಿಲ್ಲ
ಆತ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೋ ಅವರು ಮಾತ್ರ ಆತ್ಮನನ್ನು ಹೊಂದುತ್ತಾರೆ
ಅವರಿಗೆ ಮಾತ್ರ ಆತ್ಮ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ.

* * * * *

ಮತ್ತೊಂದು ವಿಚಾರವೇನೆಂದರೆ ರಮಣರ ಕಥೆಯಲ್ಲಿ (1879-1949) ಅವರ ಜಾತಕದಲ್ಲೆಲ್ಲೂ ಮುಂದೆ ಮಹಾನ್ ವ್ಯಕ್ತಿಯಾಗುತ್ತಾರೆಂದು ಬರೆದುದನ್ನು ಕಾಣಲು ಸಿಗುವುದಿಲ್ಲ. ಅಥವಾ ಅವರ ತಂದೆ ತಾಯಿಗಳ ಬಳಿ ಯಾವುದೋ ಅಜ್ಞಾತ ಸಾಧು ಬಂದು ನಿಮ್ಮ ಮಗ ಬೆಳೆದು ಆಧ್ಯಾತ್ಮಿಕ ಗುರುವಾಗುತ್ತಾನೆಂದು ಭವಿಷ್ಯವನ್ನೇನೂ ನುಡಿದಿರುವುದಿಲ್ಲ. 1896ರಲ್ಲಿ ಜುಲೈ 17ರಂದು, ತನ್ನ ಹದಿನಾರನೆಯ ವಯಸಿನಲ್ಲಿ ಸಾವಿನ ಸನಿಹದ ಅನುಭವ ಆಗುವ ತನಕ ಆತನು ಎಲ್ಲಾ ಸಾಮಾನ್ಯ ಬಾಲಕರಂತೆಯೇ ಇದ್ದುದನ್ನು ನಾವು ಕಾಣುತ್ತೇವೆ. ಆ ಅನುಭವವು ಆತನನ್ನು ತಿರುವಣ್ಣಾಮಲೆಯ ಅರುಣಾಚಲಂ ಬೆಟ್ಟದ ಕಡೆಗೆ ಪಯಣಿಸುವಂತೆ ಮಾಡಿತು. ಇಲ್ಲಿಗೆ ಬಂದ ನಂತರವೂ ರಮಣನಿಗೆ ಸಾವಿನ ಸನಿಹದ ಅನುಭವಗಳು ಅನೇಕ ಸಲ ಉಂಟಾಗಿ ಅವರ ದೇಹ ಒಂದು ಸಹಜ ಸ್ಥಿತಿಗೆ ತಲುಪುವಂತೆ ಆಯಿತು.

ಅರುಣಾಚಲಂಗೆ ಬಂದ ಮೊದಲ ಕೆಲವು ದಿನಗಳು ರಮಣ ಉಳಿದುಕೊಂಡಿದ್ದು ದೇವಸ್ಥಾನದಲ್ಲಿನ ಸಾವಿರ ಕಂಬಗಳ ಪ್ರಾಂಗಣದಲ್ಲಿ. ನಂತರ, ದೇವಾಲಯದ ಕೆಳಗಿರುವ ಗುಹೆಯಾದ ಪಾತಾಳಲಿಂಗಂನಲ್ಲಿ ಆರು ವಾರಗಳ ಕಾಲ ತಂಗಿದನು. ಅಲ್ಲಿಯೇ ಗಾಢ ಸಮಾಧಿಯಲ್ಲಿದ್ದ ರಮಣನಿಗೆ ಗುಹೆಯಲ್ಲಿದ್ದ ವಿಷಜಂತುಗಳು ಕಚ್ಚಿದ್ದು ಸಹ ಅರಿವಿಗೆ ಬರಲಿಲ್ಲ. ಇದನ್ನು ಗಮನಿಸಿದ ಕೆಲವರು ಆತನನ್ನು ಅಲ್ಲಿಂದ ಬಲವಂತವಾಗಿ ಹೊರಗೆ ತಂದು ಉಪಚರಿಸಬೇಕಾಯಿತು. ನಂತರ ಕೆಲಕಾಲ ಅರುಣಾಚಲ ಬೆಟ್ಟದ ಅಲ್ಲಲ್ಲಿ ವಾಸಿಸುತ್ತಾ ಸಮಾಧಿಗೆ ಒಳಗಾಗುತ್ತಾ ಇದ್ದ ರಮಣರು ಕೊನೆಗೆ 1921ರಲ್ಲಿ ಕೆಳಗೆ ಬಂದು ನೆಲೆಸಿದರು. ಅಲ್ಲಿಂದಲೇ ತಮ್ಮ ಬೋಧನೆಗಳನ್ನು ಹರಡಿದರು. ಇದೇ ಸ್ಥಳ ಈಗಿರುವ ರಮಣಾಶ್ರಮ.

ಇಲ್ಲಿ ಮತ್ತೊಂದು ಆಸಕ್ತಿಯ ವಿಷಯವೆಂದರೆ ರಮಣರಿಗೆ ತಾವಿದ್ದ ಸ್ಥಿತಿಯ ಕುರಿತು
ಯಾವುದೇ ಬಗೆಯ ಕಲ್ಪನೆಯೂ ಇರಲಿಲ್ಲ. ಅವರು ಯಾವುದೇ ಗ್ರಂಥಗಳನ್ನೋ, ಉಪನಿಷತ್ತುಗಳನ್ನೋ ಆಗಲಿ ಓದಿರಲಿಲ್ಲ. ಹದಿನಾರನೆಯ ವಯಸಿನಲ್ಲಿ ’ಪೆರಿಯಪುರಾಣಂ’ನ ಕೆಲವು ಭಾಗಗಳನ್ನೂ, ಬೈಬಲ್‌ನ ಕೆಲವು ಅಧ್ಯಾಯಗಳನ್ನು ಮತ್ತು ’ತೇವರಂ’ನ ಕೆಲವು ಭಾಗಗಳನ್ನು ಮಾತ್ರ ಓದಿದ್ದರು. ಅವರಿಗೆ ಹಿಂದೂ ಧರ್ಮದ ಪರಿಕಲ್ಪನೆಗಳಾದ ಬ್ರಹ್ಮ, ಆತ್ಮ, ಸತ್-ಚಿತ್-ಆನಂದ, ಸಮಾಧಿ, ಸಹಜ ಮೊದಲಾದ ಯಾವುದರ ಪರಿಚಯವೂ ಇರಲಿಲ್ಲ. ನಂತರದಲ್ಲಿ ಕೆಲವು ಸಂಸ್ಕೃತ ಪಂಡಿತರ ಜೊತೆಗೆ ಮಾತನಾಡುವಾಗ ’ರಿಭು ಗೀತ’ವನ್ನು ಓದಿದ ನಂತರ ಇವುಗಳಲ್ಲಿ ವಿವರಿಸಿರುವ ಅನೇಕ ವಿಷಯಗಳು, ಸ್ಥಿತಿಗಳು ತಾನು ಈಗಾಗಲೇ ಅನುಭವಿಸಿರುವ ಸಂಗತಿಗಳಾಗಿವೆ ಎಂಬುದನ್ನು ಅರಿತರು.

ಆಗಿನಿಂದ ರಮಣರು ತಮ್ಮ ಸ್ಥಿತಿ ಮತ್ತು ಅನುಭವಗಳ ಕುರಿತು ಮಾತನಾಡಲು ಈ ಪಠ್ಯಗಳ ಉದಾಹರಣೆಗಳನ್ನು ಬಳಸಿಕೊಂಡು ಆಧ್ಯಾತ್ಮಿಕ ಸಂಗತಿಗಳ ಕುರಿತು ಚರ್ಚಿಸಲು ಸಹ ಪ್ರಾರಂಭಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಜಿಡ್ಡು ಕೃಷ್ಣಮೂರ್ತಿ ಮತ್ತು ನಂತರದಲ್ಲಿ ಯುಜಿ ಕೃಷ್ಣಮೂರ್ತಿ, ಇಬ್ಬರಿಗೂ ಹಿಂದೂ ಮತ್ತು ಇತರೆ ಧರ್ಮಗಳ ಕುರಿತು ಆಳವಾದ ಜ್ಞಾನವಿದ್ದಾಗಲೂ ಸಹ ತಾವು ನಡೆಸುವ ಯಾವುದೇ ಚರ್ಚೆಗಳಲ್ಲಿ, ಭಾಷಣಗಳಲ್ಲಿ ಹಿಂದೂ ಅಥವಾ ಬೌದ್ಧ ಧರ್ಮಕ್ಕೆ ಸೇರಿದ ಯಾವುದೇ ಬಗೆಯ ಆಧ್ಯಾತ್ಮಿಕ ಪರಿಭಾಷೆಯನ್ನು ಬಳಸುವುದನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುತ್ತಿದ್ದರು. ಯುಜಿಯಂತೂ ಭಾರತೀಯ ತತ್ವಶಾಸ್ತ್ರದ ವಿದ್ಯಾರ್ಥಿಯಾಗಿ ಬಹಳ ಅಧ್ಯಯನ ನಡೆಸಿದ್ದವರೇ.

ಈಗ ಬರುವ ಬಹು ಮುಖ್ಯವಾದ ಪ್ರಶ್ನೆಯೆಂದರೆ; ರಮಣರು ಹಿಂದೂ ಧಾರ್ಮಿಕತೆಯ ಪರಿಭಾಷೆಯನ್ನು ಬಳಸದೇ ಇದ್ದಿದ್ದರೆ ಏನಾಗುತ್ತಿತ್ತು? ಇದನ್ನು ಊಹಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಈ ಪರಿಭಾಷೆಯನ್ನು ಬಳಸಿದ ಕಾರಣಕ್ಕಾಗಿಯೇ ರಮಣರನ್ನು ಸಾಂಪ್ರದಾಯಿಕವಾದ ಭಾರತೀಯ ಆಧ್ಯಾತ್ಮಿಕ ಸಂತ ಪರಂಪರೆಯೊಳಗೆ ಸೇರಿಸಿಕೊಳ್ಳಲಾಯಿತು. ಮತ್ತಿದು ಯಾವ ಮಟ್ಟಕ್ಕೆ ಹೋಯಿತೆಂದರೆ ರಮಣರ ಬೋಧನೆಗಳು ಸಹ ಸಂಪ್ರದಾಯವಾದಿಗಳ ಸುಪರ್ದಿಗೆ ಸೇರಿದವು.

ಹಾಗಿದ್ದರೂ ಹಿಂದೂ ತಾತ್ವಿಕತೆಯ ಪರಿಭಾಷೆಯ ಚೌಕಟ್ಟಿನೊಳಗೆ ಸೇರದ ಅನೇಕ ನುಡಿಗಟ್ಟುಗಳನ್ನು ರಮಣರು ತಮ್ಮ ಹಲವಾರು ಉಪದೇಶಗಳಲ್ಲಿ, ಬೋಧನೆಗಳಲ್ಲಿ ಬಳಸಿದ್ದು ಅವು ನೇರ ಮತ್ತು ಸರಳವಾಗಿವೆ. ವಿಷಯದ ಹೃದಯಕ್ಕೆ ನೇರವಾಗಿ ನುಗ್ಗುತ್ತವೆ. ಅವು ಸಾಧನೆಯ ಕುರಿತದ್ದಾಗಿರಬಹುದು, ಮನಸ್ಸಿನ ಸ್ವರೂಪದ ಕುರಿತಾಗಿರಬಹುದು, ಜಿಜ್ಞಾಸೆ, ಜ್ಞಾನದ ಲಭ್ಯತೆ ಮೊದಲಾದ ಯಾವುದರ ಕುರಿತೂ ಸಹ ಇರಬಹುದು.

(ಬರಹಗಾರ ಚಿಂತಕ ಮುಕುಂದ ರಾವ್ ಅವರ ’ಬಿಟ್ವೀನ್ ದ ಸರ್ಪೆಂಟ್ ಅಂಡ್ ದ ರೋಪ್’ ಪುಸ್ತಕದ ಅನುವಾದ ’ಭ್ರಮೆ ಮತ್ತು ವಾಸ್ತವಗಳ ನಡುವೆ’ – ಆಶ್ರಮಗಳು, ಅವತಾರಗಳು, ಸಂಪ್ರದಾಯಗಳು, ಜ್ಞಾನಿಗಳು, ಕಪಟಿಗಳು. ಸಂತೋಷ್ ನಾಯಕ್ ಆರ್ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದ ’ಶ್ರೀ ರಮಣ ಮಹರ್ಷಿ’ ಅಧ್ಯಾಯದಿಂದ ಈ ಭಾಗವನ್ನು ಆಯ್ದು ಪ್ರಕಟಿಸಲಾಗಿದೆ.)


ಇದನ್ನೂ ಓದಿ: ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...