Homeಅಂಕಣಗಳುಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

- Advertisement -
- Advertisement -

ಶಿವಮೊಗ್ಗದಲ್ಲಿ ಫೆಬ್ರವರಿ 20ರಂದು ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಆ ನಗರವನ್ನು ಒಂದು ದಿನದ ಉದ್ವಿಘ್ನತೆಗೆ ದೂಡಿತ್ತು. ಈ ಕೊಲೆಯ ತನಿಖೆಯಾಗುವ ಮೊದಲೇ ಅದರ ಸುತ್ತ ಸುತ್ತಿಕೊಂಡ ಸುದ್ದಿಗಳಿಂದ ಮರುದಿನ ಕೋಮುಗಲಭೆಯ ವಾತಾವರಣ ದಟ್ಟವಾಯಿತು. ಮುಖ್ಯವಾಗಿ ಬಹುಸಂಖ್ಯಾತ ಕೋಮಿನವರು ಅಲ್ಪಸಂಖ್ಯಾತ ಕೋಮಿನವರಿಗೆ ಸೇರಿದ ಮನೆಗಳು, ಅಂಗಡಿ ಮುಂಗಟ್ಟುಗಳ ಮೇಲೆ ಪೊಲೀಸರ ಎದುರಿನಲ್ಲೇ ಕಲ್ಲು ತೂರಾಟ ನಡೆಸಿದ ಡಿಸ್ಟರ್ಬಿಂಗ್ ವಿಡಿಯೋಗಳು ಹರಿದಾಡಿದವು. ಅದಕ್ಕೆ ಪ್ರತಿಕ್ರಿಯೆಯಾಗಿ ಕೂಡ ಕಲ್ಲು ತೂರಾಟಗಳೂ ನಡೆದವು. 22ರಂದು ನಿಷೇಧಾಜ್ಞೆಯಿಂದಾಗಿ ಶಿವಮೊಗ್ಗದಲ್ಲಿ ಶಾಂತಿ ನೆಲೆಸಿದೆ. ಒಂದು ಕಡೆ ಆಳುವ ಪಕ್ಷದ ನೇತಾರರ-ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಗಳು-ನಡೆಗಳು ಈ ಉದ್ವಿಘ್ನತೆಯನ್ನು ಪ್ರಚೋದಿಸುವಂತೆ ಇದ್ದರೆ, ಅಂತಹವರನ್ನು ತರಾಟೆಗೆ ತೆಗೆದುಕೊಂಡು ಶಾಂತಿಪಾಲನೆಗಾಗಿ ತಮ್ಮ ವರದಿಗಾರಿಕೆಯ ಕೆಲಸ ಮಾಡಬೇಕಿದ್ದ ಸುದ್ದಿ ಚಾನೆಲ್‌ಗಳು (ಅವುಗಳ ಆಂಕರ್‌ಗಳು), ಎಷ್ಟೋ ಆನ್‌ಲೈನ್ ಸುದ್ದಿತಾಣಗಳು ಗಲಭೆಯನ್ನು ಪ್ರಚೋದಿಸುವಂತೆ ಕೆಲಸ ಮಾಡುತ್ತಿದ್ದವು.

ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಕೇಳುತ್ತಿದ್ದ ಪ್ರಶ್ನೆ ಹೀಗಿತ್ತು: ’ಈ ಸರ್ಕಾರದವರು ಸುಮ್ಮನೆ ಬಿಡೋದಿಲ್ಲ ಅನ್ನುವ ಭಯ ಬೇಡ್ವಾ ಅವರಿಗೆ (ಕೊಲೆಗಾರರಿಗೆ)’ ಅನ್ನುವ ರೀತಿಯಲ್ಲಿ. ಈ ಕೊಲೆಯಿಂದ ಆತನಿಗೆ ನೋವಾಗಿರುವುದಕ್ಕಿಂತಲೂ, ಹರ್ಷ ಕುಟುಂಬದ ನೋವನ್ನು ಹಂಚಿಕೊಳ್ಳುವುದಕ್ಕಿಂತಲೂ, ಅವರ ನೋವಿಗೆ ಸಾಂತ್ವನ ನುಡಿಯುವುದಕ್ಕಿಂತಲೂ, ಈ ಕೊಲೆ ತನಿಖೆಯಾಗಬೇಕು ಎನ್ನುವ ಕಾಳಜಿಗಿಂತಲೂ ಒಂದು ಪಕ್ಷದ ’ರಾಜಕೀಯ’ದ ಘಾಟು ಆ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಕಲ್ಲು ತೂರಾಟದ ಬಗ್ಗೆ ಮಾತನಾಡುವಾಗ ’ಹಸಿರು ಧ್ವಜವನ್ನು ಪ್ರದರ್ಶಿಸಿ ಕಲ್ಲು ತೂರಾಟ ನಡೆಸಿದರು’ ಎಂಬುದನ್ನು ಒತ್ತಿಒತ್ತಿ ಹೇಳುವ ಮೂಲಕ ಒಂದು ಕೋಮಿನ ವಿರುದ್ಧ ವಿಷ ಕಕ್ಕುವ ಧಾಟಿ ವ್ಯಕ್ತವಾಗುತ್ತಿತ್ತು. ಇನ್ನು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ ಮಂತ್ರಿಗಳಿಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಗೃಹ ಮಂತ್ರಿಗಳಿಗೆ ಕೇಳುವ ಪ್ರಶ್ನೆಗಳು ಕೂಡ ಶಾಂತಿಯನ್ನು ಬಯಸುವಂತವಾಗಿರಲಿಲ್ಲ. ಇಂತಹ ಅಪದ್ಧಗಳ ವಿರುದ್ಧ ಮಾತನಾಡುತ್ತಲೇ ಇರುವಂತೆ ಪದೇಪದೇ ಅವುಗಳ ಬಗ್ಗೆ ಹೇಳುತ್ತಿರುವಂತೆ ಮಾಧ್ಯಮಗಳು ಇನ್ನೂ ಅಧಃಪತನದ ದಾರಿ ಹಿಡಿಯುತ್ತಿರುವುದು ಕಳವಳಕಾರಿಯಾಗಿದೆ.

ಫೆಬ್ರವರಿ ಮೊದಲ ವಾರದಿಂದಲೇ ಆರಂಭವಾಗಿರುವ, ಸಂಘ ಪರಿವಾರ ಉತ್ಪಾದಿಸಿರುವ ಹಿಜಾಬ್ ವಿವಾದದಲ್ಲಿ ಕೆಲವು ಪತ್ರಕರ್ತರು ಪೋಲಿ ಪೋಕರಿಗಳಂತೆ ನಡೆದುಕೊಂಡಿದ್ದು ಪ್ರಜ್ಞಾವಂತ ನಾಗರಿಕ ಸಮುದಾಯ ತಲೆತಗ್ಗಿಸುವ ಸಂಗತಿಯಾಗಿತ್ತು. ಸಣ್ಣ ವಯಸ್ಸಿನ ವಿದ್ಯಾರ್ಥಿನಿಯನ್ನು ಅಟ್ಟಾಡಿಸಿಕೊಂಡು ಹೋಗಿ ವಿಡಿಯೋ ಚಿತ್ರೀಕರಿಸುವ ದೃಶ್ಯಗಳು ಮನುಕುಲಕ್ಕೇ ಕಪ್ಪುಚುಕ್ಕೆಯಂತಿದ್ದವು. ಇನ್ನು ಹಿಜಾಬ್ ಸಂಬಂಧವಾಗಿ ಮುಸ್ಲಿಮರ ಮೇಲೆ ದ್ವೇಷದ ಮಾತುಗಳನ್ನು ಎಗ್ಗಿಲ್ಲದೆ ಉಗುಳಿದ ಟಿವಿ ಆಂಕರ್‌ಗಳಂತೂ ಮಾನವ ಸಂತತಿಗೆ ಕಳಂಕ ತರುವಂತೆ ನಡೆದುಕೊಂಡರು. ಇಂತಹ ಸಮಯದಲ್ಲಿ ಒಂದಷ್ಟು ಪ್ರಶ್ನೆಗಳನ್ನು ಎಲ್ಲರೂ ಕೇಳಿಕೊಳ್ಳಲೇಬೇಕಾದ ಪರಿಸ್ಥಿತಿ ಒದಗಿದೆ.

ಇಂತಹ ಮತಿಭ್ರಷ್ಟ ಮಾಧ್ಯಮಗಳು ಇಂದು ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಬದಲು ಅವುಗಳ ಜೊತೆಗೆ ಶಾಮೀಲಾಗಿ ತಾವೇ ಉಪ ಅಧಿಕಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಆಳುವ ಪ್ರಭುತ್ವಗಳ ಅಂಕೆಯಲ್ಲಿದ್ದರೆ ಸಾಕು, ಯಾವುದೇ ನೀತಿಸಂಹಿತೆಯನ್ನು ಅನುಸರಿಸದೆ ಮನಸೋ ಇಚ್ಛ ಕಾರ್ಯನಿರ್ವಹಿಸುವ ಸ್ವೇಚ್ಚಾಕೇಂದ್ರಗಳಾಗಿವೆ. ಇದರ ಜೊತೆಗೆ, ಒಂದು ಮಾಧ್ಯಮವನ್ನು ಮತ್ತೊಂದು ಮಾಧ್ಯಮ (ಮುಖ್ಯವಾಹಿನಿಗಳಲ್ಲಿ ಮುಖ್ಯವಾಗಿ) ಪ್ರಶ್ನಿಸದ ಅಲಿಖಿತ ನಿಯಮ ಇಂದಿಗೂ ಜಾರಿಯಲ್ಲಿದೆ. ಈ ಸಮಯದಲ್ಲಿ ಇಂತಹ ಮರಿ ಅಧಿಕಾರ ಕೇಂದ್ರಗಳಿಗೆ ಮೂಗುದಾರ ಹಾಕಿ ಸರಿದಾರಿಗೆ ತರುವುದು ನಾಗರಿಕ ಸಮಾಜದ ಕೆಲಸವಾಗಿದೆ. ಅದಕ್ಕಾಗಿ ಇಂದು ಎಷ್ಟೋ ಟೂಲ್‌ಗಳು ಲಭ್ಯವಿವೆ. ಇಂದು ಸ್ವತಂತ್ರ ಯುಟ್ಯೂಬರ್‌ಗಳು ಲಕ್ಷಾಂತರ ಜನರನ್ನು ತಲುಪಬಹುದಾಗಿದೆ. ಯುಪಿ ಚುನಾವಣೆಯ ಸಮಯದಲ್ಲಿ ಮುಖ್ಯವಾಹಿನಿ ಮಾಧ್ಯಮಗಳನ್ನು ಮೀರಿಸುವಂತಹ ಯುಟ್ಯೂಬರ್‌ಗಳು ತಮ್ಮ ದಿಟ್ಟ ಪಾರದರ್ಶಕ ವರದಿಗಾರಿಕೆಯಿಂದ ಅವುಗಳಿಗೆ ’ಥ್ರೆಟ್’ ಆಗಿ ಪರಿಣಮಿಸಿದ್ದಾರೆ. ಮುಖ್ಯವಾಹಿನಿ ಮಾಧ್ಯಮಗಳ ಆರ್ಥಿಕ ಸಂಪನ್ಮೂಲಗಳಿಗೆ ಈ ಯುಟ್ಯೂಬರ್‌ಗಳು ಹೊಡೆತ ನೀಡಿಲ್ಲವಾದರೂ, ಅವರ ವಿಷಪೂರಿತ ಪ್ರೊಪೊಗಾಂಡವನ್ನು ತಳಕಮಳಕ ಮಾಡಿ ನಿಜದರ್ಶನ ಮಾಡಿಸಲು ಸಫಲವಾಗುತ್ತಿದ್ದಾರೆ. ಕನ್ನಡದಲ್ಲಿಯೂ ಅಲ್ಲಲ್ಲಿ ಇಂತಹ ಕೆಲವು ಪ್ರಯತ್ನಗಳು ಆಗಿದ್ದರೂ ಅವು ಇನ್ನೂ ಹಲವು ಪಟ್ಟು ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಅಂತಹ ದೊಡ್ಡ ಪಡೆಯನ್ನು ಸೃಷ್ಟಿಸುವತ್ತ ಜನಪರ ಸಂಘಟನೆಗಳು ಆಸ್ತೆ ವಹಿಸಬೇಕಿದೆ.

ಇದು ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳ ಪಾಡಾದರೆ, ಅಳಿಸಿ ಹಾಕಲು ಸುಲಭವಾಗಿರದಂತಹ ಪ್ರಿಂಟ್ ಮಾಧ್ಯಮವೂ ದ್ವೇಷವನ್ನು, ಸುಳ್ಳುಗಳನ್ನು ಹರಡುವುದರಿಂದ ಹೊರತಾಗೇನೂ ಉಳಿದಿಲ್ಲ. ಕೆಲವೇ ದಿನಗಳ ಹಿಂದೆ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ರಾಯಚೂರಿನ ಕೋರ್ಟ್ ಒಂದರಲ್ಲಿ ಬಾಬಾಸಾಹೇಬರ ಫೋಟೋವನ್ನು ತೆರವುಗೊಳಿಸಿದ ಪ್ರಕರಣದಲ್ಲಿ, ಆ ವಿವಾದಕ್ಕೆ ಕಾರಣವಾಗಿದ್ದ ನ್ಯಾಯಾಧೀಶರ ಮೇಲೆ ಕ್ರಮ ತೆಗೆದುಕೊಳ್ಳದೆ ಇದ್ದದ್ದಕ್ಕೆ ಅಂಬೇಡ್ಕರ್‌ವಾದಿ ಸಂಘಟನೆಗಳು ಒಂದುಗೂಡಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದವು. ಹಲವು ವರ್ಷಗಳಿಂದ ’ವಿಶ್ವಾಸಾರ್ಹ’ ಎಂದು ನಂಬಿಕೊಂಡಿದ್ದ ದಿನಪತ್ರಿಕೆಗಳು ಕೂಡ ಈ ಪ್ರತಿಭಟನೆಯನ್ನು ಉಪೇಕ್ಷೆ ಮಾಡಿದವು. ಇನ್ನೂ ಕೆಲವು ಪತ್ರಿಕೆಗಳು ಪ್ರತಿಭಟನೆಯ ಕಾರಣವನ್ನು ಮರೆಮಾಚಿ ಪ್ರತಿಭಟನೆಯ ದಿನದ ಟ್ರಾಫಿಕ್ ವರ್ಣನೆಗೆ ನಿಂತವು! ಬೆರಳೆಣಿಕೆಯ ಡಿಜಿಟಲ್ ಮಾಧ್ಯಮಗಳಷ್ಟೇ ಈ ಪ್ರತಿಭಟನೆಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿದ್ದು.

ಇನ್ನೂ ಕೆಲವು ದಿನಗಳ ಹಿಂದಕ್ಕೆ ಹೋದರೆ, ಇತ್ತೀಚೆಗೆ ವಿಶ್ವವಾಣಿ ಎಂಬ ಕನ್ನಡ ದಿನಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಯ್ತು. ಮೆಡಿಕಲ್ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ರೋಸ್ಟರ್ ಪದ್ಧತಿಯ ಪ್ರಕಾರ ನೀಡಲಾಗುವ ಮೀಸಲಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೋ ಅಥವಾ ಮೀಸಲಾತಿಯ ಬಗ್ಗೆ ಶೋಷಕ ಜಾತಿಯ ಸಮುದಾಯಗಳ ಅಸಹನೆಯ ವಾದದ ಗಿಳಿಪಾಠ ಒಪ್ಪಿಸುವುದಕ್ಕಾಗಿಯೋ, ಗಗನ್ ಎಂಬ ವ್ಯಕ್ತಿ ಮಾಡಿದ್ದ ಒಂದು ವಿಡಿಯೋ ಆಧರಿಸಿ, ಯಾವುದೇ ರೀತಿಯ ಪರಿಶೀಲನೆ ಮಾಡದೆ ಉತ್ಪಾದಿಸಿದ್ದ ವರದಿ ಅದು. ಅದರಲ್ಲಿ ಈ ಗಗನ್ ಎಂಬ ವ್ಯಕ್ತಿ ನೀಟ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದರೂ, ಆತನಿಗೆ ಗದಗದ ಸರ್ಕಾರಿ ಕಾಲೇಜಿನಲ್ಲಿ ಅನೆಸ್ತೇಶಿಯಾ ವಿಭಾಗಕ್ಕೆ ಸೀಟು ದೊರಕುತ್ತಿಲ್ಲ ಎಂದು ವರದಿಯಾಗಿತ್ತು. ವರದಿಯಲ್ಲಿ ಹತ್ತಾರು ಸುಳ್ಳುಗಳು ಮತ್ತು ತಪ್ಪುಗಳು ಇದ್ದವು. ಆತ ಮೊದಲ ರ್‍ಯಾಂಕ್ ಪಡೆದದ್ದು ಮುಖಕ್ಕೆ ಹೊಡೆಯುವ ಸುಳ್ಳಾಗಿತ್ತು. ರೋಸ್ಟರ್ ಪದ್ಧತಿಯ ಪ್ರಕಾರ ಹಂಚುವ ಸೀಟುಗಳು ರೊಟೇಟ್ ಆಗುವುದರಿಂದ ಈ ವರ್ಷ ಗದಗಿನ ಕಾಲೇಜಿನಲ್ಲಿ ಅನಸ್ತೇಶಿಯಾ ವಿಭಾಗದ ಸೀಟುಗಳು ಕೆಲವು ವರ್ಗಗಳಿಗೆ ಮೀಸಲಾಗಿದ್ದರೂ, ಅವು ಮುಂದಿನ ವರ್ಷಗಳಲ್ಲಿ ಸಾಮಾನ್ಯ ವರ್ಗಗಳಿಗೆ ತೆರೆದುಕೊಳ್ಳುತ್ತವೆ. ಈ ವರ್ಷ ಬೇರೆ ಇತರ ಕಾಲೇಜಿನಲ್ಲಿ ಅರವಳಿಕೆ ಮದ್ದಿನ ವಿಭಾಗದ ಸೀಟುಗಳು ಸಾಮಾನ್ಯ ವರ್ಗಕ್ಕೆ ಲಭ್ಯವಿರುತ್ತವೆ. ಸಾಮಾನ್ಯ ವರ್ಗದ ಮೊದಲ ರ್‍ಯಾಂಕ್ ವಿದ್ಯಾರ್ಥಿಗೆ ಈ ವಿಭಾಗದಲ್ಲಿ ಸೀಟು ಸಿಗುವುದೇ ಕಷ್ಟ ಎಂಬಂತೆ ನರೆಟಿವ್ ಕಟ್ಟುವುದು ಪರೋಕ್ಷವಾದ ಸುಳ್ಳಾಗಿತ್ತು!

ಇಂತಹ ಸುಳ್ಳುಗಳನ್ನು ಕೆಲವೇಕೆಲವು ಡಿಜಿಟಲ್ ಮಾಧ್ಯಮಗಳು ಬಯಲಿಗೆಳೆದಾಗ, ಹಲವು ಓದುಗರು ಪ್ರಶ್ನಿಸಿದಾಗ ತಪ್ಪಿಗೆ ವಿಷಾದ ಕೂಡ ವ್ಯಕ್ತಪಡಿಸದೆ, ಓದುಗರ ಕ್ಷಮೆ ಕೋರದೆ ಮತ್ತೇನೋ ಸಬೂಬು ಕೊಟ್ಟಿತು ಆ ಪತ್ರಿಕೆ. ಇಂತಹ ಸುಳ್ಳುಗಳು ಒಂದು ಪತ್ರಿಕೆಯಲ್ಲಿ ಪ್ರಕಟವಾದಾಗ, ಅನ್ಯ ಪತ್ರಿಕೆಗಳು ಅದರ ಬಗ್ಗೆ ಮೌನ ವಹಿಸುವುದು ಅಥವಾ ಬೇರೆ ಮಾಧ್ಯಮಗಳ ಉಸಾಬರಿ ನನಗೇಕೆ ಎಂದು ತೆಪ್ಪಗಿರುವುದು ಇಂತಹ ಅಪರಾಧಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡಿದಂತಲ್ಲವೇ? ಇಂತಹವನ್ನು ಪ್ರಶ್ನಿಸಲು ಪ್ರಾರಂಭಿಸಿದರೆ, ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ವರದಿಗಳ ಬಗ್ಗೆ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳುವ ನವಸಂಪ್ರದಾಯಕ್ಕೆ ನಾಂದಿ ಹಾಡಬಹುದಲ್ಲವೇ? ಅಥವಾ ಆ ಹೊಣೆಗಾರಿಕೆಯೇ ಬೇಡವಾಗಿದೆಯೇ ಇಂದಿನ ಮಾಧ್ಯಮಗಳಿಗೆ?

ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ವಿಷವನ್ನು ಕಕ್ಕಿ ಯುದ್ಧಗಳಿಗೆ, ನರಮೇಧಗಳಿಗೆ, ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿರುವ, ಇವುಗಳನ್ನು ಪ್ರತಿಪಾದಿಸಿ ಕಾರ್ಯಾಚರಣೆಗೆ ಇಳಿಯುವವರ ನಡೆಗಳ ಬಗ್ಗೆ ಜನರ ಸಮ್ಮತಿಯನ್ನು ಉತ್ಪಾದಿಸಲು ನೇರವಾಗಿ ಕಾರಣವಾಗಿರುವ ಮಾಧ್ಯಮಗಳನನ್ನು ಜಗತ್ತು ಸಾಕಷ್ಟು ಕಂಡಿದೆ. ಇನ್ನು ಈ ಮಾಧ್ಯಮಗಳ ನಡೆಗಳನ್ನು ಪ್ರಶ್ನಿಸಿ ಅವುಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಅವುಗಳ ದಾರಿಗಳನ್ನು ತಿದ್ದಿ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.


ಇದನ್ನೂ ಓದಿ: ಆದೇಶ ಅರಿಯದೆ ಮಕ್ಕಳ ಮೇಲೆ ಮಾಧ್ಯಮಗಳ ಸವಾರಿ: ಅಧಿಕಾರಿಗಳ ಬೇಸರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...